ನಾನು ಮಾಡುವ ಎಲ್ಲಾ ಕಾರ್ಯದಲ್ಲೂ ಅಪ್ಪು ಇರುತ್ತಾರೆ: ವಿಜಯ್ ರಾಘವೇಂದ್ರ ಭಾವುಕ ನುಡಿ
ಸ್ಯಾಂಡಲ್ವುಡ್ ನಟ ವಿಜಯ್ ರಾಘವೇಂದ್ರ ಸಿನಿಮಾ ಹಾಗೂ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಎರಡನ್ನೂ ಒಟ್ಟಿಗೆ ನಿಭಾಯಿಸಿಕೊಂಡು ಹೋಗಿರುವ ವಿಜಯ್ ರಾಘವೇಂದ್ರ ಅವರ ಹೊಚ್ಚ ಹೊಸ ಸಿನಿಮಾದ ಬಿಡುಗಡೆ ಸಜ್ಜಾಗಿದೆ. ಅದುವೇ 'ಸಾವಿತ್ರಿ'. ಈ ಸಿನಿಮಾದ ಹಾಡುಗಳನ್ನು ಹಾಗೂ ಟ್ರೈಲರ್ ಅನ್ನು ಪ್ರದರ್ಶನ ಮಾಡಲಾಯಿತು. ಈ ವೇಳೆ ವಿಜಯ್ ರಾಘವೇಂದ್ರ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ.
ವಿಭಿನ್ನ ಕಥಾ ಹಂದರವಿರುವ ಸಿನಿಮಾ 'ಸಾವಿತ್ರಿ' ಎಂದು ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾ ನಾಯಕ ವಿಜಯ್ ರಾಘವೇಂದ್ರ ಕೂಡ ಇದೊಂದು ವಿಭಿನ್ನ ಸಿನಿಮಾ, ಕಥೆ ಎಲ್ಲವೂ ಇಷ್ಟ ಆಗಿದೆ ಎಂದು ಹೇಳಿದ್ದಾರೆ. 'ಸಾವಿತ್ರಿ' ಸಿನಿಮಾ ಮೂಲಕ ಚಿತ್ರತಂಡ ಏನು ಹೇಳುವುದಕ್ಕೆ ಹೊರಟಿದೆ. ವಿಜಯ್ ರಾಘವೇಂದ್ರ ಅಗಲಿದ ಅಪ್ಪು ನೆನೆದು ಹೇಳಿದ್ದೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.
ನಾನು ಮಾಡುವ ಎಲ್ಲಾ ಕಾರ್ಯದಲ್ಲೂ ಅಪ್ಪು ಇರುತ್ತಾರೆ
'ಸಾವಿತ್ರಿ' ಸಿನಿಮಾ ಮೂರು ಹಾಡುಗಳನ್ನು ಹಾಗೂ ಟ್ರೈಲರ್ ಅನ್ನು ತೋರಿಸಲು ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇತ್ತೀಚೆಗೆ ಅಗಲಿದ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. "ನಾನು ಮಾಡುವ ಎಲ್ಲಾ ಕಾರ್ಯದಲ್ಲೂ ಅಪ್ಪು ಇರುತ್ತಾರೆ. ಈ ನೂತನ ವರ್ಷದಲ್ಲಿ ತಮ್ಮನೆಲ್ಲಾ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದೇನೆ. ಎಲ್ಲರಿಗೂ ಶುಭಾಶಯ. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ಮಾಡಿದ ಸಂತೋಷವಿದೆ. ಸದ್ಯದಲ್ಲೇ ಚಿತ್ರ ಬಿಡುಗಡೆ ಆಗಲಿದೆ." ಎಂದು ಪುನೀತ್ ಹಾಗೂ ಸಾವಿತ್ರಿ ಸಿನಿಮಾ ಬಗ್ಗೆ ವಿಜಯ್ ರಾಘವೇಂದ್ರ ತಿಳಿಸಿದ್ದಾರೆ.

ಸಾವಿತ್ರಿ ವಿಜಯ್ ರಾಘವೇಂದ್ರ ನಟನೆ 51ನೇ ಸಿನಿಮಾ
'ಸಾವಿತ್ರಿ' ವಿಜಯರಾಘವೇಂದ್ರ ಅಭಿನಯದ 51ನೇ ಸಿನಿಮಾ. ವಿಭಿನ್ನ ಕಥೆ ಹೊತ್ತು ಬಂದಿರುವ ಚಿತ್ರತಂಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಮುಂದಾಗಿದೆ. "ವಿಜಯ್ ರಾಘವೇಂದ್ರ ಅವರಿಗಿರುವ ಶ್ರದ್ಧೆ ಈಗಲೂ ಮೆಚ್ಚುವಂತಹದ್ದು. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ವಿಜಯ ರಾಘವೇಂದ್ರ ಹಾಗೂ ತಾರಾ ನಮ್ಮ ಚಿತ್ರದಲ್ಲಿ ಅಭಿನಯಿಸಿರುವುದು ನಮ್ಮ ಹೆಮ್ಮೆ. ಇವರೊಂದಿಗೆ ಪ್ರಕಾಶ್ ಬೆಳವಾಡಿ, ಊರ್ವಶಿ ರಾಯ್, ಮಿಮಿಕ್ರಿ ಗೋಪಿ, ನೈಲಾ ಪ್ರಮೋದ್, ಸಂಜು ಬಸಯ್ಯ, ಸ್ವಾತಿ ಮುಂತಾದವರ ತಾರಾಬಳಗ ನಮ್ಮ ಚಿತ್ರದಲ್ಲಿದೆ. ಹೃದಯ ಶಿವ ಬರೆದು, ಮೊದಲ ಬಾರಿಗೆ ಸಂಗೀತ ನೀಡಿರುವ ಹಾಡುಗಳು ಸುಮಧುರವಾಗಿದೆ. ಛಾಯಾಗ್ರಾಹಕ ನಾಗಾರ್ಜುನ ಸೇರಿದಂತೆ ಎಲ್ಲಾ ತಂತ್ರಜ್ಞರ ಕೆಲಸ ಅದ್ಭುತವಾಗಿದೆ." ಎನ್ನುತ್ತಾರೆ ನಿರ್ದೇಶಕ ಎಸ್ ದಿನೇಶ್

ಈ ಸಿನಿಮಾಗೆ ಹೃದಯ ಶಿವ ಸಂಗೀತ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಸಂಗೀತ ನೀಡಿದ್ದು, ಸಾಹಿತಿಯಾಗಿದ್ದವರು ಸಂಗೀತಗಾರನಾಗಿ ಬಡ್ತಿ ಪಡೆದಿದ್ದಾರೆ. "ನಾನು ದಿನೇಶ್ ನಿರ್ದೇಶಿಸಿದ ಮೊದಲ ಸಿನಿಮಾ 'ಉಯ್ಯಾಲೆ'ಗೆ ಸಂಭಾಷಣೆ ಬರೆದಿದ್ದೆ. ಹಾಡು ಬರೆಯುತ್ತಿದ್ದ ನನಗೆ ಸಂಭಾಷಣೆ ಬರೆಯಲು ಮೊದಲು ಅವಾಕಾಶ ನೀಡಿದ್ದರು. ಈಗ 'ಸಾವಿತ್ರಿ' ಸಿನಿಮಾದ ಮೂಲಕ ಸಂಗೀತ ನಿರ್ದೇಶಕನಾಗಿ ಹೊಸಪಯಣ ಆರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದೂವರೆಗೂ ಎಂಟನೂರಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದೇನೆ. ಆದರೆ ಸಂಗೀತ ನೀಡಿರುವುದು ಇದೇ ಮೊದಲು." ಎನ್ನುತ್ತಾರೆ ಹೃದಯಶಿವ.
ಥಿಯೇಟರ್ ಸಿಗದೆ ಹೋದರೆ ಒಟಿಟಿಯಲ್ಲಿ ರಿಲೀಸ್
ಸಾವಿತ್ರಿ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಸಿನಿಮಾ ಉತ್ತಮವಾಗಿ ಮೂಡಿ ಬಂದಿದೆ. ಚಿತ್ರಮಂದಿರಕ್ಕೆ ಶೇ.100 ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿದರೆ ಮಾತ್ರ ಥಿಯೇಟರ್ನಲ್ಲಿ ಬಿಡುಗಡೆ ಮಾಡಲು ನಿರ್ಮಾಪಕ ಪ್ರಶಾಂತ್ ಕುಮಾರ್ ನಿರ್ಧರಿಸಿದ್ದಾರೆ. ಒಂದು ವೇಳೆ ಥಿಯೇಟರ್ ಸಿಗದೆ ಹೋದರೆ, 'ಸಾವಿತ್ರಿ' ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











