ಪತ್ರಕರ್ತರಿಗೆ ಹೆದರಿ ಮಹೂರ್ತದಂದು ನಾಯಕ ನಾಪತ್ತೆ

ಹುಲಿ ಎಲ್ಲಿ ಹೋಯ್ತು ಎಂದು ನಿರ್ದೇಶಕ ಮತ್ತು ನಿರ್ಮಾಪಕ ಹುಡುಕಿಕೊಂಡು ಓಡಾಡುತ್ತಿದ್ದರೆ ವಿನೋದ್ ಪ್ರಭಾಕರ್ ಮಾತ್ರ ಪತ್ರಕರ್ತರಿಗೆ ಹೆದರಿ ಇಲಿಯಂತೆ ಬಿಲ ಸೇರಿಕೊಂಡಿದ್ದು ತಮಾಷೆಯಾಗಿತ್ತು.
ಮೊನ್ನೆ ಮೊನೆ ತಾನೇ ಗಜೇಂದ್ರ ಎಂಬ ಸಿನಿಮಾಕ್ಕೆ ಮಹೂರ್ತ ನೆರವೇರಿತ್ತು. ಅದಕ್ಕೂ ವಿನೋದ್ ಪ್ರಭಾಕರ್ ಅವರೇ ನಾಯಕ. ಅದು ಚಿತ್ರೀಕರಣದಲ್ಲಿರುವಾಗಲೇ ವಿನೋದ್ ಗೆ ಮರಿ ಟೈಗರ್ ಸಿನಿಮಾದಲ್ಲಿ ಅವಕಾಶ ಬಂದಿದೆ.
ಪಿ ಎನ್ ಸತ್ಯಾ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಗೆ ಜೋಡಿಯಾಗಿ ಕಾಣಿಸಿಕೊಂಡಿರುವುದು ತೇಜು. ಈ ಹುಡುಗಿ ದರ್ಶನ್ ಅಭಿನಯದ ಚಿಂಗಾರಿ ಚಿತ್ರದಲ್ಲಿ ನಾಯಕಿಯ ಗೆಳತಿಯಾಗಿ ಕಾಣಿಸಿಕೊಂಡಿದ್ದರು.
ಮರಿ ಟೈಗರ್ ಮೂಲಕ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ತೇಜುಗೆ ಲಭ್ಯವಾಗಿದೆ. ಈ ಚಿತ್ರದ ಕುರಿತಾಗಿ ಮಾಹಿತಿ ಹಂಚಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಾಯಕನೇ ಗೈರು ಹಾಜರಾಗಿ ಮರಿ ಟೈಗರ್ ಚಿತ್ರತಂಡಕ್ಕೆ ಇರಿಸುಮುರಿಸು ಉಂಟಾಗಿದ್ದು ಮಹೂರ್ತದ ದಿನ ನಡೆದ ದುರಂತ.
ಗಜೇಂದ್ರ ಮಹೂರ್ತದಲ್ಲಿ ನಾರ್ಮಲ್ಲಾಗಿಯೇ ತನ್ನ ಭಾವನೆಗಳನ್ನು ಪತ್ರಕರ್ತರ ಜೊತೆ ಹಂಚಿಕೊಂಡಿದ್ದ ವಿನೋದ್, ಮರಿ ಟೈಗರ್ ಪತ್ರಿಕಾಗೋಷ್ಠಿ ಸಮಯದಲ್ಲಿ ಮಾತ್ರ ನಾಪತ್ತೆಯಾಗಿದ್ದರು.
ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಾ, ಟಿವಿ ಸಂದರ್ಶನಗಳಿಗೆ ಮೈಕು ಹಿಡಿದುಕೊಂಡು ಓಡಾಡುತ್ತಿದ್ದ ವಿನೋದ್, ಮುದ್ರಣ ಮಾಧ್ಯಮದ ಪತ್ರಕರ್ತರ ಎದುರು ಬರಲು ಮಾತ್ರ ಒಪ್ಪದೇ ತಲೆ ತಪ್ಪಿಸಿಕೊಂಡು ನಾಪತ್ತೆಯಾದರು. ಇದು ನೆರೆದಿದ್ದ ಪತ್ರಕರತ್ರಲ್ಲೂ ಸೋಜಿಗ ಉಂಟು ಮಾಡಿತ್ತು.
ಚಿತ್ರತಂಡ ನಮ್ಮ ನಾಯಕನಟ ಈಗ ಬರುತ್ತಾರೆ ಆಗ ಬರುತ್ತಾರೆ ಎಂದು ಕಾಲ ತಳ್ಳಿದರೂ ಕೊನೆಗೂ ವಿನೋದ್ ಪ್ರಭಾಕರ್ ಬರಲೇ ಇಲ್ಲ. ಯಾಕೆ ಹೀಗೆ ಪತ್ರಕರದರೆದು ಬರಲು ವಿನೋದ್ ನುಣುಚಿ ಕೊಳ್ಳುತ್ತಿದ್ದಾರೆ ಎಂಬುದು ಕೊನೆಗೂ ಗೊತ್ತಾಗಲಿಲ್ಲ.
ಈಗೊಂದು ನಾಲ್ಕು ತಿಂಗಳ ಹಿಂದೆ ವಿನೋದ್ ವಿವಾಹಿತ ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ವಿರಿಸಿಕೊಂಡಿದ್ದರ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು.
ಸ್ವತಃ ಆ ಮಹಿಳೆಯ ಗಂಡನೇ ಈ ಆರೋಪ ಮಾಡಿ ಕೆಲವೊಂದು ಸಾಕ್ಷ್ಯಗಳನ್ನು ಮಾಧ್ಯಮದ ಮುಂದೆ ಹಿಡಿದಿದ್ದ. ಈ ಕುರಿತಾಗಿ ಎಲ್ಲಿ ಪತ್ರಕರ್ತರು ತನ್ನನ್ನು ಬೆಂಡೆತ್ತುತ್ತಾರೊ ಎಂಬ ಆತಂಕದಲ್ಲಿ ಮರಿ ಟೈಗರ್ ಬಿಲ ಸೇರಿತು ಎಂಬುದಾಗಿ ಕೆಲವರು ಗುಸುಗುಸು ಹಬ್ಬಿಸಿದರು. ಅದು ನಿಜವೋ ಸುಳ್ಳೋ ಎಂದು ಹೇಳಿಕೊಳ್ಳಲು ಕೊನೆಗೂ ವಿನೋದ್ ಪ್ರಭಾಕರ್ ಬರಲೇ ಇಲ್ಲ.
ನಿರ್ಮಾಪಕ ಮಾತ್ರ ಹುಳಿ ತಿಂದವರಂತೆ ಮುಖ ಮಾಡ್ಕೊಂಡು ಓಡಾಡುತ್ತಿದ್ದದ್ದು ಕರುಣಾಜನಕವಾಗಿತ್ತು.


Click it and Unblock the Notifications











