'ಅಯೋಧ್ಯೆ' ರಾಮಮಂದಿರ ಮಾದರಿಯಲ್ಲಿ 'ವಿಷ್ಣು ಪುಣ್ಯಭೂಮಿ' ನಿರ್ಮಾಣವಾಗುತ್ತಾ ?
ಡಾ ವಿಷ್ಣುವರ್ಧನ್ ಸ್ಮಾರಕ ಬೆಂಗಳೂರಿನಲ್ಲೇ ಆಗಬೇಕು ಎನ್ನುವ ಕೂಗು ಸಿ.ಎಂ.ಸಿದ್ಧರಾಮಯ್ಯನವರನ್ನು ಮುಟ್ಟಿದೆ. ಇತ್ತೀಚಿಗಷ್ಟೆ ನಟ ಕಿಚ್ಚ ಸುದೀಪ್ ಹಾಗೂ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟೂಡಿಯೊದಲ್ಲೇ ಪುಣ್ಯಭೂಮಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಎಂದು ಮನವಿ ಪತ್ರವನ್ನು ನೀಡಿದ್ದಾರೆ. ಸ್ಮಾರಕ ಮೈಸೂರಿನಲ್ಲೇ ಆಗಲಿ ಆದರೆ ಇದನ್ನು ಪುಣ್ಯಭೂಮಿ ಆಗಿ ಮಾಡಿಕೊಳ್ಳಲು ಸ್ಥಳ ನೀಡಿ ಎಂದು ಕೇಳಿದ್ದರು.
ಮನವಿ ಪತ್ರ ನೀಡಿದ ನಂತರ ನಟ ಕಿಚ್ಚ ಸುದೀಪ್ ಮತ್ತು ವಿಷ್ಣು ಅಭಿಮಾನಿಗಳು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಸಹಾಯವಿಲ್ಲದೇ ತಾವೇ ಮುಂದಾಳತ್ವವನ್ನು ವಹಿಸಿಕೊಂಡು ಎಲ್ಲಾ ಕೆಲಸವನ್ನು ನೋಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಹಾಗಾದರೆ ವಿಷ್ಣು ಪುಣ್ಯಭೂಮಿ ಹೇಗೆ ನಿರ್ಮಾಣವಾಗುತ್ತದೆ. ಲಕ್ಷಾಂತರ ರೂಪಾಯಿ ಹಣವನ್ನು ಯಾರು ಖರ್ಚು ಮಾಡುತ್ತಾರೆ? ಇವೆಲ್ಲವೂ ಈಗಾಗಲೇ ಪ್ಲಾನ್ ಆಗಿದೆ. ಹೇಗಿದೆ ಆ ರೂಪುರೇಷೆ ಎಂಬುದು ಮುಂದಿದೆ ಓದಿ...

ಪುಣ್ಯಭೂಮಿ ನಿರ್ಮಾಣಕ್ಕೆ ನಿಂತ ಕಿಚ್ಚ ಸುದೀಪ್
ಅಭಿಮಾನಿಯ ಅಭಿಮಾನಿ ನಾನು ಎಂದು ಕರೆಸಿಕೊಂಡಿರುವ ಕಿಚ್ಚ ಸುದೀಪ್ ತಾನು ಒಬ್ಬ ಅಭಿಮಾನಿಯಾಗಿ ತನ್ನ ನೆಚ್ಚಿನ ನಟನ ಪುಣ್ಯಭೂಮಿ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ಸಿ.ಎಂ.ಸಿದ್ಧರಾಮಯ್ಯರ ಬಳಿ ಈ ವಿಚಾರ ಮಾತನಾಡಿರುವ ಕಿಚ್ಚ ಸುದೀಪ್ ಈಗಾಗಲೇ ಪುಣ್ಯಭೂಮಿ ಹೇಗಿರಬೇಕು ಎನ್ನುವ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ.

ಭೂಮಿ ಖರೀದಿ ಮಾಡಿ ಪುಣ್ಯಭೂಮಿ ನಿರ್ಮಾಣ
ಅಭಿಮಾನ್ ಸ್ಟುಡಿಯೋದಲ್ಲಿ ಸ್ಥಳ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿರುವುದರ ಜೊತೆಗೆ ತಾವೇ ಹಣ ಹಾಕಿ ಅಲ್ಲಿಯ ಭೂಮಿ ಖರೀದಿ ಮಾಡುವ ಚಿಂತನೆಯಲ್ಲಿದ್ದಾರೆ ವಿಷ್ಣು ಅಭಿಮಾನಿಗಳು. ವಿಷ್ಣು ಅಭಿಮಾನಿಗಳ ಆಶಯಕ್ಕೆ ಸುದೀಪ್ ಬೆಂಬಲವಾಗಿ ನಿಂತಿದ್ದಾರೆ.

ಒಂದೇ ಸ್ಥಳದಲ್ಲಿ ಇಬ್ಬರ ಪುಣ್ಯಭೂಮಿಯ ಕೆಲಸ
ಅಭಿಮಾನ್ ಸ್ಟುಡಿಯೋದಲ್ಲಿ ನಟ ಬಾಲಕೃಷ್ಣ ಅವರ ಸಮಾಧಿಗೆ ಚಿಕ್ಕ ಸ್ಮಾರಕ ಕಟ್ಟಿಕೊಟ್ಟಿರುವುದು ಸುದೀಪ್. ಈಗ ಅದೇ ಸ್ಥಳದಲ್ಲಿರುವ ವಿಷ್ಣುವರ್ಧನ್ ಅವರ ಪುಣ್ಯಭೂಮಿಯ ನಿರ್ಮಾಣಕ್ಕೂ ಮುಂದಾಳತ್ವವನ್ನು ವಹಿಸಿಕೊಂಡಿರೋದು ಸಹ ಸುದೀಪ್ ಅನ್ನೋದು ವಿಶೇಷ.

'ಅಯೋಧ್ಯೆ' ರೀತಿಯಲ್ಲಿ ವಿಷ್ಣು ಪುಣ್ಯಭೂಮಿ ನಿರ್ಮಾಣ
ವಿಷ್ಣು ಪುಣ್ಯಭೂಮಿ ನಿರ್ಮಾಣಕ್ಕಾಗಿ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಸೇರಿ ಹೊಸ ಯೋಜನೆಯನ್ನು ರೂಪಿಸಿದ್ದಾರೆ. ಪ್ರತಿ ಅಭಿಮಾನಿಯೂ ಪುಣ್ಯಭೂಮಿ ನಿರ್ಮಾಣದ ಸಂದರ್ಭದಲ್ಲಿ ಇಟ್ಟಿಗೆ, ಸಿಮೆಂಟ್, ಮರಳು ಹೀಗೆ ಅಗತ್ಯ ವಸ್ತುಗಳನ್ನು ನೀಡಬಹುದಾಗಿದೆ.

ಇತಿಹಾಸ ಸೇರಲಿದೆ ವಿಷ್ಣು ಪುಣ್ಯಭೂಮಿ
ಅಭಿಮಾನಿಗಳಿಂದ ಮರಳು, ಇಟ್ಟಿಗೆ, ಸಿಮೆಂಟ್ ಇನ್ನೂ ಅಗತ್ಯ ವಸ್ತುಗಳನ್ನು ಸೇರಿಸಿ ನಟನೊಬ್ಬನ ಪುಣ್ಯಭೂಮಿ ನಿರ್ಮಾಣ ಮಾಡುತ್ತಿರುವುದು ಇದೇ ಮೊದಲು. ವಿಷ್ಣುವರ್ಧನ್ ರನ್ನ ಪ್ರೀತಿ ಮಾಡುವ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರೆಲ್ಲರೂ ಪುಣ್ಯಭೂಮಿಯ ನಿರ್ಮಾಣದಲ್ಲಿ ಪಾಲುದಾರರಾಗಲಿ ಎನ್ನುವ ಉದ್ದೇಶದಿಂದ ಈ ಯೋಜನೆ ಹಾಕಿಕೊಳ್ಳಲಾಗಿದೆ. ಆದಷ್ಟು ಬೇಗ ಜಾಗ ಸಿಕ್ಕರೆ ಹೊಸ ವರ್ಷಕ್ಕೆ ಪುಣ್ಯಭೂಮಿ ಕೆಲಸ ಶುರುವಾಗಲಿದೆ.


Click it and Unblock the Notifications











