ವಿಷ್ಣುದಾದ ಅಭಿಮಾನಿಯಿಂದ ಪುಸ್ತಕಲೋಕ: ಸಾಥ್ ಕೊಟ್ಟ ಕಿಚ್ಚ, ರಮೇಶ್ ಅರವಿಂದ್
ಕನ್ನಡ ಸಿನಿಮಾ ನೋಡಲ್ಲ. ಕನ್ನಡ ಮಾತಾಡಲ್ಲ. ಕನ್ನಡ ಪುಸ್ತಕಗಳನ್ನಂತೂ ಓದುವುದೇ ಇಲ್ಲ. ಕನ್ನಡಿಗರೇ ಕನ್ನಡ ಮರೆಯುತ್ತಿದ್ದಾರೆ ಎನ್ನುವುದು ಕನ್ನಡಿಗರೇ ಮಾಡುತ್ತಿರುವ ಆರೋಪ. ಕನ್ನಡದ ಆಸಕ್ತಿ ಬೆಳೆಸಲು, ಕನ್ನಡ ಓದುವ ಹವ್ಯಾಸ ಬೆಳೆಸಲು ವಿನೂತನ ಪ್ರಯತ್ನವೊಂದು ನಡೆಯುತ್ತಿದೆ. ಅದುವೇ 'ವೀರಲೋಕ'.
ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಯೂ ಆಗಿರುವ ವೀರಕಪುತ್ರ ಶ್ರೀನಿವಾಸ್ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಪುಸ್ತಕ ಕ್ಷೇತ್ರದಲ್ಲಿ ಇದೊಂದು ವಿಭಿನ್ನ ಬಗೆಯ ಪ್ರಯತ್ನ ಎನ್ನಬಹುದು. ಕಾಫಿ ಶಾಪ್, ಹೋಟೆಲ್, ರೆಸ್ಟೋರೆಂಟ್, ಔಷಧ ಮಳಿಗೆ, ಆಸ್ಪತ್ರೆ, ಮಾಲ್, ಕಾರ್ಪೊರೇಟ್ ಕಂಪನಿಗಳ ಕಚೇರಿಗಳು ಸೇರಿದಂತೆ ವಿವಿಧೆಡೆ ಕನ್ನಡ ಪುಸ್ತಕಗಳು ದೊರೆಯಬೇಕು ಅನ್ನುವುದು ವೀರಕಪುತ್ರ ಶ್ರೀನಿವಾಸ್ ಅವರ ಆಲೋಚನೆ.
ಈ ಕಾರಣಕ್ಕಾಗಿಯೇ ವೀರಕಪುತ್ರ ಶ್ರೀನಿವಾಸ್ ವೀರಲೋಕ ಪ್ರಕಾಶನ ಎಂಬ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಕನ್ನಡ ಪುಸ್ತಕಗಳ ಓದುಗರಿಗೆ ಉತ್ತಮ ವೇದಿಕೆ ಒದಗಿಸಿ, ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಮುಂದಾಗಿದ್ದಾರೆ.

ಮೊದಲ ಪ್ರಯತ್ನದಲ್ಲಿಯೇ ವೀರಲೋಕ ಪ್ರಕಾಶದಿಂದ ಹತ್ತು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಈ ವಿನೂತನ ಕಾರ್ಯಕ್ರಮಕ್ಕೆ ಕನ್ನಡ ಪುಸ್ತಕಗಳ ರಾಯಭಾರಿಯಾಗಿರುವ ನಟ ರಮೇಶ್ ಅವರಿಂದ್ ಹಾಗೂ ನಟ ಕಿಚ್ಚ ಸುದೀಪ್ ಸಾಥ್ ನೀಡಿದ್ದು, ಹೊಸ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
"ಹೈ ಸ್ಕೂಲ್ ವಿದ್ಯಾಭ್ಯಾಸ ಮಾಡುವ ಸಮಯದಲ್ಲೇ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಪಾತ್ರಕ್ಕಾಗಿ ತಲೆ ಕೂದಲು ತೆಗೆದಿದ್ದೆ. ಹೀಗಾಗಿ ಶಾಲೆಗೆ ಹೋಗುವ ಬದಲು ಗ್ರಂಥಾಲಯಕ್ಕೆ ತೆರಳಿ ಪುಸ್ತಕ ಓದಲು ಶುರುಮಾಡಿದೆ. ಬಳಿಕ ಅದೇ ಹವ್ಯಾಸವಾಯಿತು. ಹಲವು ಪುಸ್ತಕಗಳನ್ನು ಓದಿದ ಪರಿಣಾಮ ನಾನು ಈಗ ಪುಸ್ತಕ ಬರೆಯಲು ಶುರು ಮಾಡಿದ್ದೇನೆ." ಎಂದು ರಮೇಶ್ ಅರವಿಂದ್ ಈ ಸಮಯದಲ್ಲಿ ತಮ್ಮ ಸೀಕ್ರೆಟ್ ರಿವೀಲ್ ಮಾಡಿದ್ದಾರೆ.

"ನಾನು ಜಾಸ್ತಿ ಓದದೆ ಇರುವುದೇ ತುಂಬಾ ಒಳ್ಳೆಯದಾಗಿದೆ. ಯಾಕೆಂದರೆ ಇದರಿಂದ ಹೆಚ್ಚು ಪುಸ್ತಕ ಓದಲು ಸಾಧ್ಯವಾಗದೇ ಇದೀಗ ಹಲವು ಪುಸ್ತಕಗಳನ್ನು ಒಮ್ಮೆಲೇ ಬಿಡುಗಡೆ ಮಾಡಿ ಜೀವನದಲ್ಲಿ ಒಳ್ಳೆ ಕೆಲಸ ಮಾಡಿದ್ದೇನೆ. ಪುಸ್ತಕಗಳನ್ನು ಓದದೇ ಇದ್ದರೂ, ಎಲ್ಲಾ ಬರಹಗಾರರನ್ನು ಹತ್ತಿರವಿಟ್ಟುಕೊಂಡಿದ್ದೇನೆ." ಪುಸ್ತಕಗಳನ್ನು ಲೋಕಾರ್ಪಣೆ ಮಾಡುವ ವೇಳೆ ಹೇಳಿದ್ದಾರೆ.
ಅಂದ್ಹಾಗೆ, ಕನ್ನಡ ಪುಸ್ತಕ ಎಲ್ಲಿ ಬೇಕಾದರೂ ಸಿಗಬೇಕು. ಈ ಕಾರಣಕ್ಕೆ ಮೊದಲ ಹಂತದಲ್ಲಿ 1 ಸಾವಿರ ಪುಸ್ತಕಗಳ ಸ್ಟ್ಯಾಂಡ್ಗಳನ್ನು ಬೆಂಗಳೂರಿನ ಮಾಲ್ಗಳು, ಅಂಗಡಿ ಮಳಿಗೆಗಳಲ್ಲಿ ಇಡುವ ಆಲೋಚನೆ ಇದೆ. ಅಲ್ಲೇ ಪುಸ್ತಕಗಳನ್ನು ಖರೀದಿ ಮಾಡುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಇದರೊಂದಿಗೆ ಕನ್ನಡ ಪುಸ್ತಕಗಳನ್ನು ಪರಿಚಯಿಸಿ ಮಾರಾಟ ಮಾಡುವುದಕ್ಕೂ ಕಾಲ್ ಸೆಂಟರ್ ಸ್ಥಾಪಿಸಲಾಗಿದೆ.
ಮೊದಲ ಹಂತದಲ್ಲಿ 'ಕೈ ಹಿಡಿದು ನೀ ನಡೆಸು ತಂದೆ', 'ಅವರು ಇವರು ದೇವರು', 'ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್', 'ವಿಶ್ವ ಸುಂದರಿ', 'ಸೋಲೆಂಬ ಗೆಲುವು', 'ಮನಿ ಮನಿ ಎಕಾನಮಿ', 'ಆರ್ಟ್ ಆಫ್ ಸಕ್ಸಸ್', 'ನಿಮಗೆಷ್ಟು ಹಣ ಬೇಕು?', 'ಒಳ್ಳೆಯ ಬದುಕಿನ ಸೂತ್ರಗಳು' ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ.


Click it and Unblock the Notifications











