ಕಲಾವಿದನ ಕೈಚಳಕ: ಸ್ವರ್ಗದಲ್ಲಿ ಅಣ್ಣಾವ್ರು-ಪುನೀತ್ ರಾಜ್ಕುಮಾರ್ ಕಣ್ಣಾಮುಚ್ಚಾಲೆ ಆಟ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಯೂತ್ ಐಕಾನ್. ಯುವಕರ ಪ್ರೇರಣೆ. ಸದಾ ಒಳ್ಳೆಯದನ್ನೇ ಬಯಸುವ ವ್ಯಕ್ತಿ. ಅಪ್ಪನಂತೆ ಬದುಕಿದ ತಂದೆಗೆ ತಕ್ಕ ಮಗ. ಈ ಕಾರಣಕ್ಕೆ ಪುನೀತ್ ರಾಜ್ಕುಮಾರ್ ಅಂದ್ರೆ ಕನ್ನಡಿಗರಿಗೆ ಬಲು ಪ್ರೀತಿ. ಅಸಂಖ್ಯಾತ ಜನರ ಮನಗೆದ್ದಿದ್ದ ಪುನೀತ್ ರಾಜ್ಕುಮಾರ್ ಹಠಾತ್ ನಿಧನ ಕರ್ನಾಟಕದ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಪುನೀತ್ ರಾಜ್ಕುಮಾರ್ ಇನ್ನಿಲ್ಲ ಅನ್ನುವುದನ್ನು ಅವರ ಅಭಿಮಾನಿಗಳು ಇನ್ನೂ ಒಪ್ಪಿಕೊಳ್ಳಲು ತಯಾರಿಲ್ಲ. ಕರ್ನಾಟಕದ ಮೂಲೆ ಮೂಲೆಯಲ್ಲೂ ಅಪ್ಪುಗೆ ಅಭಿಮಾನಿಗಳು ಭಿನ್ನ ವಿಭಿನ್ನ ರೀತಿಯಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಾರೆ.
ಹಾಗೆಯೇ ಇಲ್ಲೊಬ್ಬ ಕಲಾವಿದ ಸ್ವರ್ಗದಲ್ಲಿರುವ ಅಣ್ಣಾವ್ರೊಂದಿಗೆ ಪುನೀತ್ ರಾಜ್ಕುಮಾರ್ ಕಣ್ಣಾಮುಚ್ಚಾಲೆ ಆಡುವ ಫೋಟೋ ಸೃಷ್ಟಿಸಿದ್ದಾರೆ. ಆ ಫೋಟೋ ಕಂಡು ಅಭಿಮಾನಿಗಳು ಭಾವುಕರಾಗಿದ್ದಾರೆ.
ಕರಣ್ ಆಚಾರ್ಯ ಬೆಂಗಳೂರಿಗೆ ಬಂದ ಕೆಲವೇ ದಿನಗಳಲ್ಲಿ ಸಿನಿಮಾಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಈ ಹಿಂದೆ ರವಿಚಂದ್ರನ್ ಅವರ ರವಿ ಬೋಪಣ್ಣ ಗೆಟಪ್ ಫೋಟೊ ಬಿಡಿಸಿದ್ದರು. ಆ ಫೋಟೊ ನೋಡಿ ಸ್ವತ: ರವಿಚಂದ್ರನ್ ಮೆಚ್ಚುಗೆ ಸೂಚಿಸಿದ್ದರು. ಇದಲ್ಲದೆ ಮುಂದಿನ ನಿಲ್ದಾಣ, ಕಥಾ ಸಂಗಮ ಚಿತ್ರಕ್ಕಾಗಿ ಪುಟ್ಟಣ್ಣ ಕಣಗಾಲ್ ಅವರ ಆನಿಮೇಷನ್ ಚಿತ್ರವನ್ನು ಬಿಡಿಸಿದ್ದರು. ಈಗ ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸುತ್ತಿರುವ ಕಬ್ಜ ಚಿತ್ರದ ಪೋಸ್ಟರ್ ಅನ್ನು ಕೂಡ ಕರಣ್ ಆಚಾರ್ಯ ಅವರೇ ಡಿಸೈನ್ ಮಾಡಿದ್ದಾರೆ.

ಕರಣ್ ಆಚಾರ್ಯ ಕಲ್ಪನೆಯಲ್ಲಿ ಮೂಡಿದ ಫೋಟೋ
ಬೆಂಗಳೂರಿನ ವಿಶ್ಯುಯಲ್ ಆರ್ಟಿಸ್ಟ್ ಕರಣ್ ಆಚಾರ್ಯ ತನ್ನದೇ ಕಲ್ಪನೆಯಲ್ಲಿ ಫೋಟೋ ಸೃಷ್ಟಿಸಿದ್ದಾರೆ. ಈ ಫೋಟೋದಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸ್ವರ್ಗದಲ್ಲಿದ್ದಾರೆ. ಅಲ್ಲೇ ಇರುವ ಅಣ್ಣಾವ್ರ ಕಣ್ಣು ಮುಚ್ಚಿದ್ದಾರೆ. ಬಿಳಿ ವಸ್ತ್ರದಲ್ಲಿ ಅಣ್ಣಾವ್ರ ಕೂತಿದ್ರೆ, ಹಿಂದಿನಿಂದ ಬಂದ ಅಪ್ಪು ಅವರ ಕಣ್ಣು ಮುಚ್ಚಿದ್ದಾರೆ. ಅಪ್ಪು ಹೆಗಲ ಮೇಲೆ ರಾಜಕುಮಾರ ಚಿತ್ರದಲ್ಲಿರುವ ಬಿಳಿ ಪಾರಿವಾಳ. ಅಣ್ಣಾವ್ರ ಮುಂದೆ ಕಸ್ತೂರಿ ನಿವಾಸದ ಪಾರಿವಾಳವಿದೆ. ಸುತ್ತಲೂ ಅದೇ ಶ್ವೇತ ಬಣ್ಣದ ಮೋಡ. ಕರಣ್ ಕಲ್ಪನೆಯಲ್ಲಿ ಮೂಡಿದ ಪೋಟೊವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕರಣ್ ಹಂಚಿಕೊಂಡಿದ್ದಾರೆ. ಸ್ವರ್ಗದಲ್ಲಿ ಅಣ್ಣಾವ್ರ ಜೊತೆ ಅಪ್ಪುವಿನ ಫೋಟೋ ನೋಡುತ್ತಿದ್ದಂತೆ ಪುನೀತ್ ಅಭಿಮಾನಿಗಳು ಭಾವುಕರಾಗಿದ್ದಾರೆ.

ಅಪ್ಪು- ಅಣ್ಣಾವ್ರನ್ನು ಕಂಡು ಅಭಿಮಾನಿಗಳು ಪುಳಕ
ಕರಣ್ ಸೃಷ್ಟಿಸಿದ ಈ ಪೋಟೋಗೆ ಅಭಿಮಾನಿಗಳು ಭೇಷ್ ಅಂದಿದ್ದಾರೆ. 'ಈ ಪೋಟೊ ಎಂದೆಂದಿಗೂ ನೆನಪಿನಲ್ಲಿರುತ್ತೆ. ಇಂತಹದ್ದೊಂದು ಅದ್ಭುತ ಫೋಟೋವನ್ನು ನೀಡಿದ್ದಕ್ಕೆ ಧನ್ಯವಾದ. ಹೀಗೆ ಯಾರೂ ಯೋಚನೆ ಮಾಡಲಿಕ್ಕೂ ಸಾಧ್ಯವಿಲ್ಲ' ಎಂದು ಅಪ್ಪು ಅಭಿಮಾನಿಗಳು ಕರಣ್ ಆಚಾರ್ಯಗೆ ಮೆಚ್ಚುಗೆಯ ಸುರಿಮಳೆಯನ್ನೇ ನೀಡಿದ್ದಾರೆ. ಇದರ ಜೊತೆನೇ ಕೆಲವು ಅಭಿಮಾನಿಗಳು ಕೆಲವು ಸಲಹೆಗಳನ್ನೂ ನೀಡಿದ್ದಾರೆ.

ಜೊತೆಗೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ
ಕರಣ್ ಅಚಾರ್ಯ ಕಲ್ಪನೆಗೆ ಅಪ್ಪು ಅಭಿಮಾನಿಗಳು ಭೇಷ್ ಅಂತಿದ್ದಾರೆ. ಜೊತೆಗೆ ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಪುನೀತ್ ಹಾಗೂ ಅಣ್ಣಾವ್ರ ಜೊತೆಗೆ ಅಮ್ಮ ಪಾರ್ವತಮ್ಮ ರಾಜ್ಕುಮಾರ್ ಕೂಡ ಇರಬೇಕಿತ್ತು. ಅಮ್ಮನ ಫೋಟೋ ಮಿಸ್ ಆಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸ್ವರ್ಗದಲ್ಲಿ ಡಾ.ರಾಜ್ಕುಮಾರ್, ಪಾರ್ವತಮ್ಮ ಹಾಗೂ ಪುನೀತ್ ರಾಜ್ಕುಮಾರ್ ದೀಪಾವಳಿ ಆಚರಣೆ ಮಾಡುತ್ತಿರುವ ಒಂದು ಫೋಟೋ ಮಾಡಿ ಎಂದು ಕೇಳಿಕೊಂಡಿದ್ದಾರೆ.
ಈ ಫೋಟೋ ಸೃಷ್ಟಿಸಿದ ಕಲಾವಿದ ಯಾರು?
2017ರಲ್ಲಿ ಆಂಗ್ರಿ ಹನುಮಾನ್ ಫೋಟೋ ವೈರಲ್ ಆಗಿತ್ತು. ಎಲ್ಲರ ವಾಟ್ಸಾಪ್ ಡಿಪಿ, ಸೋಶಿಯಲ್ ಮೀಡಿಯಾಗಳಲ್ಲಿ ಆಂಗ್ರಿ ಹನುಮಾನ್ ಫೋಟೋನೆ ಹರಿದಾಡಿತ್ತು. ಕಾಸರಗೋಡು ಮೂಲದವರಾದರೂ ಬೆಂಗಳೂರಿನಲ್ಲಿ ನೆಲೆಸಿರೋ ಕರಣ್ ಆಚಾರ್ಯ ಹನುಮಾನ್ ಫೋಟೊ ವೈರಲ್ ಆಗುತ್ತಿದ್ದಂತೆ ಇಂಟರ್ನೆಟ್ ಸೆನ್ಸೇಷನ್ ಆಗಿದ್ದರು. ಈಗ ಸ್ವರ್ಗದಲ್ಲಿರುವ ಅಣ್ಣಾವ್ರ ಹಾಗೂ ಅಪ್ಪುವಿನ ಫೋಟೋ ಸೃಷ್ಟಿಸಿದ ಮತ್ತೆ ಸುದ್ದಿಯಲ್ಲಿದ್ದಾರೆ.


Click it and Unblock the Notifications











