ಅಭಿಮಾನಿಗಳು ಕೊಟ್ಟಿದ್ದನ್ನು ಅವರಿಗೆ ಕೊಡುತ್ತಿದ್ದೇವೆ: ಶಿವರಾಜ್ ಕುಮಾರ್
ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ದೊಡ್ಮನೆ ಕುಟುಂಬದವರು ಇಂದು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ನೆರವೇರಿಸಿದ್ದಾರೆ. ಸಾವಿರಾರು ಮಂದಿ ಅಭಿಮಾನಿಗಳು ಬಂದು ಭೋಜನ ಸವಿದಿದ್ದಾರೆ.
ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡಿದ ಶಿವಣ್ಣ ಮಾಧ್ಯಮಗಳೊಟ್ಟಿಗೆ ಮಾತನಾಡಿ, ''ಅಭಿಮಾನಿಗಳಿಗೆ ಊಟ ಹಾಕಿಸಬೇಕು ಎಂಬ ಆಸೆ ಇತ್ತು. ಆದರೆ ಅದು ಹೀಗೆ ನೆರವೇರುತ್ತಿರುವುದಕ್ಕೆ ಬೇಸರವಾಗುತ್ತಿದೆ. ಅವನ ಆಸೆ ಹೀಗೆ ನೆರವೇರಬೇಕು ಎಂದು ವಿಧಿ ಲಿಖಿತ ಇತ್ತೇನೋ'' ಎಂದರು.
ಸಾವಿರಾರು ಜನರಿಗೆ ಊಟ ಹಾಕಿಸುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ. ''ನಮ್ಮದೇನೂ ಇಲ್ಲ, ಅವರೇ ಕೊಟ್ಟಿದ್ದು ಅದನ್ನು ಅವರಿಗೇ ಕೊಡುತ್ತಿದ್ದೇವೆ. ಕೆರೆಯ ನೀರನ್ನು ಕೆರೆಗೆ ಚೆಲ್ಲುತ್ತಿದ್ದೇವೆ ಅಷ್ಟೇ. ಇದರಲ್ಲಿ ನಮ್ಮದೇನೂ ಇಲ್ಲ. ನಾವು ಇಂದು ಏನಾಗಿದ್ದೇವೆಯೋ ಅದಕ್ಕೆ ಅಭಿಮಾನಿಗಳೇ ಕಾರಣ. ಅವರಿಲ್ಲದೇ ಹೋಗಿದ್ದಿದ್ದರೆ ಅಪ್ಪಾಜಿಯಾಗಲಿ, ನಾನಾಗಲಿ, ಅಪ್ಪುವಾಗಲಿ, ಕನ್ನಡ ಚಿತ್ರರಂಗದ ಯಾವೊಬ್ಬ ನಟನಾಗಲಿ ಇಲ್ಲ'' ಎಂದರು ಶಿವಣ್ಣ.

ಅಪ್ಪು, ಎಂಟು ಕೋಟಿ ಹಣವನ್ನು ಸಾಮಾಜಿಕ ಕಾರ್ಯಗಳಿಗೆಂದೇ ಎಫ್ಡಿ ಮಾಡಿಟ್ಟಿರುವ ವಿಷಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶಿವಣ್ಣ, ''ಈ ವಿಷಯ ನನಗೇ ಗೊತ್ತೇ ಇರಲಿಲ್ಲ. ಯಾವಾಗ ಸಿಕ್ಕಿದರೂ ಸಿನಿಮಾ, ಮನೆ ವಿಷಯ, ಯಾವುದಾದರೂ ಹೊಸ ಕಾರು ತಗೋಂಡಾಗ ಬಂದು ತೋರಿಸುತ್ತಿದ್ದ, ಹೊಸ ವಿಷಯ ಕಲಿತಾಗ ಹೇಳುತ್ತಿದ್ದ. ಆದರೆ ಈ ವಿಷಯ ಎಂದೂ ಹೇಳಿರಲಿಲ್ಲ. ಅಪ್ಪ ಹೇಳುತ್ತಿದ್ದರು ಬಲಗೈಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂದು, ಅಪ್ಪು ಹಾಗೆಯೇ ಬಾಳಿದ. ಅಂಥಹಾ ತಮ್ಮನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ'' ಎಂದರು ಶಿವಣ್ಣ.
ಕಾರ್ಯಕ್ರಮದ ಮಧ್ಯೆ ಅಭಿಮಾನಿಗಳನ್ನುದ್ದೇಶಿಸಿದ ಮಾತನಾಡಿದ ಶಿವರಾಜ್ ಕುಮಾರ್, ''ನನ್ನ ತಮ್ಮನದ್ದು ಹೋಗುವ ವಯಸ್ಸಲ್ಲ. ಆದರೆ ಅಪ್ಪ-ಅಮ್ಮನ ಜೊತೆ ಇರಬೇಕು ಎಂದುಕೊಂಡು ಹೋಗಿಬಿಟ್ಟಿದ್ದಾನೆ. ಇಂಥಹಾ ಸನ್ನಿವೇಶದಲ್ಲಿ ಬಂದು ಊಟ ಮಾಡಬೇಕಲ್ಲ ಎಂದು ನಿಮಗೂ ನೋವಿದೆ. ಆದರೆ ನಮ್ಮದೇ ಕಾರ್ಯಕ್ರಮವೆಂದುಕೊಂಡು ನೀವೆಲ್ಲ ಬಂದಿದ್ದೀರಿ. ನಿಮ್ಮ ಪ್ರೀತಿಗೆ ನಾವೆಲ್ಲ ಎಂದೂ ಋಣಿಯಾಗಿರುತ್ತೀವಿ. ಜೋಗಿ ಪಾತ್ರ ಮಾಡಿಬಿಟ್ಟಿದ್ದೀನಿ, ನಿಮ್ಮ ಪ್ರೀತಿಯನ್ನು ಜೋಳಿಗೆಯಲ್ಲಿಟ್ಟುಕೊಂಡು ಹೃದಯದಲ್ಲಿ ತುಂಬಿಸಿಕೊಳ್ಳುತ್ತೇನೆ'' ಎಂದು ಶಿವರಾಜ್ ಕುಮಾರ್ ಹೇಳಿದರು.

ಅಭಿಮಾನಿಗಳಿಗೆ ಊಟ ಬಡಿಸುವ ಮೂಲಕ ಅನ್ನ ಸಂತರ್ಪಣೆಗೆ ಶಿವರಾಜ್ ಕುಮಾರ್ ಹಾಗೂ ಪುನೀತ್ ಪತ್ನಿ ಅಶ್ವಿನಿ ಚಾಲನೆ ನೀಡಿದರು. ರಾಜ್ಕುಮಾರ್ ಕುಟುಂಬದ ಬಹುತೇಕ ಸದಸ್ಯರು ಹಾಜರಿದ್ದರು. ಶಿವರಾಜ್ ಕುಮಾರ್ ಅವರು ರಕ್ತದಾನ ಸಹ ಮಾಡಿದರು.


Click it and Unblock the Notifications











