ಜಗ್ಗೇಶ್- ಗುರುಪ್ರಸಾದ್ ಜೋಡಿಯ 'ರಂಗನಾಯಕ'ನ ಕಥೆ ಏನಾಯ್ತು?
ನವರಸನಾಯಕ ಜಗ್ಗೇಶ್ ಮತ್ತು 'ಮಠ' ಗುರುಪ್ರಸಾದ್ ಜೋಡಿಯ ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಗತಿ ಸಿನಿಮಾ ಅಭಿಮಾನಿಗಳಲ್ಲಿ ಕಚಗುಳಿ ಮೂಡಿಸಿತ್ತು. ಈ ಜೋಡಿಯ ಸಿನಿಮಾ ಎಂದರೆ ಮನರಂಜನೆ ಖಚಿತ ಎಂದು ನಿರೀಕ್ಷಿಸಲಾಗಿತ್ತು. ಅದಕ್ಕೆ ತಕ್ಕಂತೆ ಟೀಸರ್ ಕೂಡ ಚರ್ಚೆಗೆ ಒಳಗಾಗಿತ್ತು.
'ಮಠ' ಮತ್ತು 'ಎದ್ದೇಳು ಮಂಜುನಾಥ'ದಂತಹ ಸತತ ಎರಡು ಯಶಸ್ವಿ ಚಿತ್ರಗಳನ್ನು ನೀಡಿದ್ದ ಜಗ್ಗೇಶ್ - ಗುರುಪ್ರಸಾದ್ ಜೋಡಿ ಮನಸ್ತಾಪದಿಂದ ದೂರವಾಗಿತ್ತು. 'ರಂಗನಾಯಕ' ಚಿತ್ರದ ಮೂಲಕ ಈ ಕಾಂಬಿನೇಷನ್ ಮತ್ತೆ ಒಂದಾಗಿರುವುದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಕಳೆದ ಅಕ್ಟೋಬರ್ನಲ್ಲಿಯೇ ಅದರ ಟೀಸರ್ ಕೂಡ ಹೊರಬಂದಿತ್ತು. ಯಕ್ಷಗಾನದ ಥೀಮ್ನಲ್ಲಿ ಇದ್ದ ಟೀಸರ್ ವಿವಾದವನ್ನೂ ಸೃಷ್ಟಿಸಿತ್ತು.

ರಂಗನಾಯಕ ಏನಾಯಿತು?
ಆದರೆ ನಂತರ ಇದುವರೆಗೂ 'ರಂಗನಾಯಕ' ಏನಾಯಿತು ಎಂಬ ಬಗ್ಗೆ ಸುದ್ದಿ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟ ಜಗ್ಗೇಶ್ ಕೂಡ ಅದರ ಬಗ್ಗೆ ಯಾವ ಮಾಹಿತಿಯನ್ನೂ ಹಂಚಿಕೊಂಡಿರಲಿಲ್ಲ. ಚಿತ್ರತಂಡವೂ ಮತ್ತೆ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಅದರ ಸುತ್ತ ಅನುಮಾನಗಳು ವ್ಯಕ್ತವಾಗಿದ್ದವು.

ಟೀಸರ್ ಬಳಿಕ ಸುದ್ದಿ ಇಲ್ಲ
ಟೀಸರ್ ಬಿಡುಗಡೆಯಾದ ಕೆಲವು ದಿನಗಳ ಬಳಿಕ ಚಿತ್ರ ನಿಂತು ಹೋಗಿದೆ ಎನ್ನಲಾಗಿತ್ತು. ನಿರ್ದೇಶಕ ಗುರುಪ್ರಸಾದ್ ಕೂಡ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಹಾಗಾಗಿ ಏನೋ ಸಮಸ್ಯೆ ಉದ್ಭವಿಸಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಹೊಗೇನಕಲ್ನಲ್ಲಿ ಗುರುಪ್ರಸಾದ್
ಆದರೆ ಈ ವದಂತಿಗಳೆಲ್ಲ ಊಹಾಪೋಹಗಳಷ್ಟೇ ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. 'ರಂಗನಾಯಕ'ನ ಕಥೆ ಸಂಪೂರ್ಣಗೊಂಡಿದೆ. ನಿರ್ದೇಶಕ ಗುರುಪ್ರಸಾದ್ ಅವರು ಹೊಗೇನಕಲ್ ಜಲಪಾತದ ಬಳಿಯಲ್ಲಿನ ತೋಟವೊಂದರಲ್ಲಿ ಕುಳಿತು ಚಿತ್ರಕಥೆ ಹಾಗೂ ಸಂಭಾಷಣೆ ರಚಿಸುವುದರಲ್ಲಿ ಮಗ್ನರಾಗಿದ್ದಾರಂತೆ.

ಕುಂಬಳಗೋಡಿನ ಸೆಟ್ನಲ್ಲಿ ಚಿತ್ರೀಕರಣ
ಕುಂಬಳಗೋಡು ಬಳಿ ಸೆಟ್ ಹಾಕಿ ಚಿತ್ರೀಕರಣ ನಡೆಸಲು ಚಿತ್ರತಂಡ ಉದ್ದೇಶಿಸಿದೆ. 'ಪುಷ್ಪಕ ವಿಮಾನ' ಚಿತ್ರವನ್ನು ಕೂಡ ಈ ನಿರ್ಮಾಣ ಸಂಸ್ಥೆ ಇಲ್ಲಿ ಸೆಟ್ ಹಾಕಿಯೇ ಚಿತ್ರೀಕರಿಸಿತ್ತು. ಹಾಗಾಗಿ ಅವರಿಗೆ ಅದು ಅದೃಷ್ಟದ ಜಾಗ ಎನಿಸಿದೆ.

ಏಪ್ರಿಲ್ 2ರಿಂದ ಚಿತ್ರ ಆರಂಭ
ಸಿನಿಮಾ ನಿಂತು ಹೋಗಿಲ್ಲ. ಬದಲಾಗಿ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್ಪೆಕ್ಟರ್ ವಿಕ್ರಂ' ಚಿತ್ರದ ನಿರ್ಮಾಣ ಕಾರ್ಯದಲ್ಲಿ ಹೆಚ್ಚು ಬಿಜಿಯಾಗಿದ್ದೇವೆ. ಹೀಗಾಗಿ 'ರಂಗನಾಯಕ' ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಏಪ್ರಿಲ್ 2ರಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ನಂತರ ಒಂದು ವಾರದಲ್ಲಿ ಮತ್ತೊಂದು ಟೀಸರ್ ಬಿಡುಗಡೆ ಮಾಡಲಾಗುವುದು. 150ಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ ಇರಲಿದ್ದಾರೆ. ಹೀಗಾಗಿ ಬಜೆಟ್ ಗಾತ್ರವೂ ಹೆಚ್ಚಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.


Click it and Unblock the Notifications











