ಒತ್ತಡವಿದ್ದರೂ ಅಣ್ಣಾವ್ರು ರಾಜಕೀಯ ಪ್ರವೇಶ ಮಾಡಿಲ್ಲ ಯಾಕೆ?
ದಕ್ಷಿಣ ಭಾರತದಲ್ಲಿ ಸೂಪರ್ಸ್ಟಾರ್ಗಳು ರಾಜಕೀಯಕ್ಕೆ ಧುಮುಕುತ್ತಿದ್ದ ಕಾಲವದು. ತೆಲುಗಿನಲ್ಲಿ ಎನ್ಟಿಆರ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧವಾಗುತ್ತಿತ್ತು. ಇನ್ನೊಂದು ಕಡೆ ತಮಿಳುನಾಡಿನಲ್ಲಿ ಎಂಜಿಆರ್ ರಾಜಕೀಯಕ್ಕೆ ಅದಾಗಲೇ ಎಂಟ್ರಿ ಕೊಟ್ಟಾಗಿತ್ತು. ಈ ಬಾರಿ ಕನ್ನಡದ ಸೂಪರ್ ಸ್ಟಾರ್ ಡಾ.ರಾಜ್ಕುಮಾರ್ ಸರದಿಯಾಗಿತ್ತು. ಇನ್ನೇನು ಡಾ.ರಾಜ್ಕುಮಾರ್ ರಾಜಕೀಯಕ್ಕೆ ಎಂಟ್ರಿ ಕೊಟ್ಟೇ ಬಿಡುತ್ತಾರೆ ಎನ್ನುವಷ್ಟು ಸದ್ದಿಯಾಗಿತ್ತು. ಆದರೆ, ಅಣ್ಣಾವ್ರು ರಾಜಕೀಯ ಪ್ರವೇಶ ಮಾಡಲಿಲ್ಲ.
1978 ಲೋಕಸಭಾ ಉಪಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಇಂದಿರಾ ಗಾಂಧಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದರು. ಚಿಕ್ಕಮಗಳೂರಿನಲ್ಲಿ ಇಂದಿರಾಗಾಂಧಿ ಗೆಲ್ಲಿಸಲು ಕಾಂಗ್ರೆಸ್ನ ಡಿ ಬಿ ಚಂದ್ರೇಗೌಡ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದರು. ತುರ್ತು ಪರಿಸ್ಥಿತಿಯ ಬಳಿಕ ಇಂದಿರಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ತನ್ನ ವರ್ಚಸ್ಸನ್ನು ಕಳೆದುಕೊಂಡಿತ್ತು. ಹೀಗಾಗಿ 1978ರ ಉಪಚುನಾವಣೆ ತುಂಬಾನೇ ಮುಖ್ಯವಾಗಿತ್ತು.
ಈ ಸಂದರ್ಭದಲ್ಲಿ ಇಂದಿರಾ ಗಾಂಧಿಯನ್ನು ಸೋಲು ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದ್ದ ರಾಜಕೀಯ ಪಕ್ಷಗಳಿಗೆ ನೆನಪಾಗಿದ್ದು ಮತ್ಯಾರೂ ಅಲ್ಲ ವರನಟ ಡಾ.ರಾಜ್ಕುಮಾರ್. ಅಕ್ಕ ಪಕ್ಕದ ರಾಜ್ಯಗಳಲ್ಲಿ ಸೂಪರ್ಸ್ಟಾರ್ಗಳ ರಾಜಕೀಯ ಜರ್ನಿ ಆರಂಭ ಆಗಿತ್ತು. ಇಲ್ಲಿ ಇಂದಿರಾ ಗಾಂಧಿ ಎದುರು ಅಣ್ಣಾವ್ರನ್ನು ಚುನಾವಣೆಗೆ ನಿಲ್ಲಿಸಲು ಸಾಕಷ್ಟು ಪ್ರಯತ್ನ ನಡೆದಿತ್ತು. ಆದರೆ, ರಾಜ್ಕುಮಾರ್ ಹಾಗೂ ಪಾರ್ವತಮ್ಮ ರಾಜ್ಕುಮಾರ್ ಯಾರ ಕೈಗೂ ಸಿಗಲೇ ಇಲ್ಲ.

ಅಜ್ಞಾತ ಸ್ಥಳಕ್ಕೆ ತೆರಳಿದ್ದ ರಾಜ್ಕುಮಾರ್
ತುರ್ತು ಪರಿಸ್ಥಿತಿಯ ಬಳಿಕ ಕಾಂಗ್ರೆಸ್ ಸೋಲುಂಡಿತ್ತು. ಜನರಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಎದ್ದಿತ್ತು. ಹೀಗಾಗಿ ದೇಶದಲ್ಲಿ ಮತ್ತೆ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಲು ಪ್ರಯತ್ನ ಪಡುತ್ತಿತ್ತು. ಇತ್ತ ಜನತಾ ಪರಿವಾರ ಮತ್ತು ಇತರೆ ಪಕ್ಷಗಳು ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದರು. ಹೀಗಾಗಿ ಇಂದಿರಾಗಾಂಧಿಗೆ 1978ರ ಉಪಚುನಾವಣೆ ತುಂಬಾನೇ ಮುಖ್ಯ ಆಗಿತ್ತು. ಆದರೆ, ಇಂದಿರಾ ಗಾಂಧಿಯನ್ನು ಸೋಲಿಸಲು ಉಳಿದ ಪಕ್ಷಗಳು ಡಾ,ರಾಜ್ಕುಮಾರ್ರನ್ನು ಕಣಕ್ಕಿಳಿಸಲು ಮುಂದಾಗಿದ್ದರು. ಹೀಗಾಗಿ ರಾಜ್ಕುಮಾರ್ರನ್ನು ಭೇಟಿ ಮಾಡಿ ಒತ್ತಡ ಹೇರುತ್ತಿದ್ದರು. ಈ ಕಾಟ ತಡೆಯಲಾರದೆ ರಾಜ್ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಕೆಲವು ದಿನಗಳ ಕಾಲ ಅಜ್ಞಾತ ಸ್ಥಳಕ್ಕೆ ತೆರಳಿದಿದ್ದರು.

ರಾಜ್ಕುಮಾರ್ಗೆ ರಾಜಕೀಯಕ್ಕೆ ಬರುವ ಆಸೆಯಿತ್ತಾ?
ಡಾ.ರಾಜ್ಕುಮಾರ್ಗೆ ಕೊನೆವರೆಗೂ ರಾಜಕೀಯಕ್ಕೆ ಬರಲೇ ಇಲ್ಲ. ಆದರೆ, ರಾಜಕೀಯಕ್ಕೆ ಪ್ರವೇಶ ಕೊಡಬೇಕು ಅನ್ನುವ ಆಸೆಯಿತ್ತಾ? ಎನ್ನುವ ಪ್ರಶ್ನೆಗೆ ರಾಘವೇಂದ್ರ ರಾಜ್ಕುಮಾರ್ ಕೆಲವು ದಿನಗಳ ಹಿಂದೆ ಆಡಿದ ಮಾತಿನಲ್ಲಿ ಉತ್ತರವಿದೆ ಎನಿಸುತ್ತೆ. ರಾಘಣ್ಣ ಆಗಿನ್ನೂ ಚಿಕ್ಕವರು. ಆದರೂ, ಚುನಾವಣೆಗೆ ಯಾಕೆ ನಿಂತಿಲ್ಲ ಎಂದು ತಂದೆಯನ್ನು ಕೇಳಿದ್ದರು. ಆ ಸಂದರ್ಭದಲ್ಲಿ ಅಣ್ಣಾವ್ರು ಮಗನಿಗೆ ಈ ವಿಷಯವನ್ನು ಹೇಳಿರಲಿಲ್ಲ. ಮಂಡಿ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ವೇಳೆ ಅಣ್ಣಾವ್ರು ಇಂದಿರಾಗಾಂಧಿ ವಿರುದ್ಧ ಯಾಕೆ ಸ್ಪರ್ಧೆಗೆ ಇಳಿದಿಲ್ಲ ಎಂಬ ರಹಸ್ಯವನ್ನು ಹೇಳಿದ್ದರು. " ರಾಜಕೀಯ ಮುಖಂಡರು ನನ್ನನ್ನು ಸ್ಪರ್ಧಿಸಲು ಕೇಳಿದ್ದರ ಹಿಂದೆ ಒಳ್ಳೆಯ ಉದ್ದೇಶವಿದ್ದಿದ್ದರೆ ಖಂಡಿತ ಸ್ಪರ್ಧಿಸುತ್ತಿದ್ದೆ. ಆದರೆ ನನ್ನನ್ನು ಅಸ್ತ್ರದಂತೆ ಬಳಸಲು ಮುಂದಾಗಿದ್ದರು. " ಎಂದು ಹೇಳಿದ್ದರಂತೆ. ಇದನ್ನು ಗಮನಿಸದರೆ, ಒಳ್ಳೆ ಉದ್ದೇಶದಿಂದ ರಾಜಕೀಯಕ್ಕೆ ಕರೆದಿದ್ದರೆ, ರಾಜಕೀಯಕ್ಕೆ ಧುಮುಕುವ ಸಾಧ್ಯತೆ ಇರುತ್ತಿತ್ತು.

ರಾಜಕೀಯ ಪಕ್ಷ ಕಟ್ಟಲು ಒತ್ತಡ
1980ರಲ್ಲಿ ಡಾ.ರಾಜ್ಕುಮಾರ್ ರಾಜಕೀಯಕ್ಕೆ ಬರಬೇಕು ಎಂಬ ಒತ್ತಡವಿತ್ತು. ಯಾಕಂದರೆ, ಅದಾಗಲೇ ಆಂಧ್ರದಲ್ಲಿ ಎನ್ಟಿಆರ್ ಹಾಗೂ ತಮಿಳುನಾಡಿನಲ್ಲಿ ಎಂಜಿಆರ್ ರಾಜಕೀಯ ಪ್ರವೇಶ ಮಾಡಿದ್ದರು. ಹಾಗೇ ಕರ್ನಾಟಕದಲ್ಲೂ ಅಣ್ಣಾವ್ರು ರಾಜಕೀಯ ಪಕ್ಷ ಕಟ್ಟಲೇಬೇಕು ಎಂದು ಒತ್ತಡ ಹಾಕಲಾಗುತ್ತಿತ್ತು. ಆದರೆ, ಡಾ.ರಾಜ್ಕುಮಾರ್ ಆಗಲೂ ಕೂಡ ಮನಸ್ಸು ಮಾಡಲೇ ಇಲ್ಲ.

ನಟನೆ ಮೇಲೆ ಹೆಚ್ಚು ಒಲವು
ಸಾಮಾಜಿಕ ಹೋರಾಟಗಳಲ್ಲಿ ಅಣ್ಣಾವ್ರು ಭಾಗವಹಿಸಿದ್ದರು. ಗೋಕಾಕ್ ಚಳುವಳಿಗೆ ವರನಟನ ಪ್ರವೇಶದಿಂದ ಮತ್ತಷ್ಟು ಶಕ್ತಿ ಬಂದಿತ್ತು. ಡಾ.ರಾಜ್ಕುಮಾರ್ ಚುನಾವಣೆಗೆ ಇಳಿದಿದ್ದರೆ, ಖಂಡಿತಾ ಗೆಲುವು ಸಿಕ್ಕೇ ಸಿಗುತ್ತಿತ್ತು. ಆದರೂ, ಅಭಿಮಾನಿಗಳಿಂದ ದೂರವಿರಲು ಡಾ.ರಾಜ್ಕುಮಾರ್ ಇಷ್ಟಪಟ್ಟಿರಲಿಲ್ಲ. ಈ ಕಾರಣಕ್ಕೆ ಅಭಿಮಾನಿಗಳ ಮನಸ್ಸಿನಲ್ಲಿ ಇಂದಿಗೂ ಡಾ.ರಾಜ್ಕುಮಾರ್ ಅಜರಾಮರಾಗಿಯೇ ಉಳಿದಿದ್ದಾರೆ.


Click it and Unblock the Notifications











