ನಟಿ ಸುಮಲತಾ ಅಂಬರೀಶ್ ಬಗ್ಗೆ ಹಬ್ಬಿರುವ ಸುದ್ದಿ ನಿಜವೇ.?
ಪತಿ ರೆಬೆಲ್ ಸ್ಟಾರ್ ಅಂಬರೀಶ್ ರಂತೆ ಪತ್ನಿ ಸುಮಲತಾ ಅಂಬರೀಶ್ ಕೂಡ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಅದರಲ್ಲೂ ಸುಮಲತಾ ಮೇಡಂ ಬಿಜೆಪಿ ಸೇರಲಿದ್ದಾರೆ ಅಂತ ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ.
ಇದರ ಜೊತೆಗೆ ಮಂಡ್ಯದ ಗಂಡು ಅಂಬರೀಶ್ ಕೂಡ 'ಕೈ' ಬಿಟ್ಟು ಕಮಲ ಹಿಡಿಯುತ್ತಾರೆ ಎಂಬ ಸುದ್ದಿ ಬೆಳಗಾವಿಯಿಂದ ಬಂದಿದೆ. ಇದೇ ಸುದ್ದಿ ಕುರಿತಾಗಿ ಬಿಜೆಪಿ ನಾಯಕ ಆರ್.ಅಶೋಕ್ ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಕ್ಲಾರಿಟಿ ನೀಡಿದ ಆರ್.ಆಶೋಕ್
ಬೆಳಗಾವಿಯಲ್ಲಿ ಪುಷ್ಕಳ ಭೋಜನ ಸವಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಆರ್.ಅಶೋಕ್, ''ಅಂಬರೀಶ್ ಅವರು ಬಿಜೆಪಿಗೆ ಬರುವುದಾದರೆ ಮುಕ್ತವಾಗಿ ಸ್ವಾಗತಿಸುತ್ತೇವೆ. ಅಂಬರೀಶ್ ಅವರ ಜೊತೆ ಉತ್ತಮ ಸ್ನೇಹವಿದೆ. ಮಾಧ್ಯಮಗಳಲ್ಲಿ ಈ ಸಂಬಂಧ ಸುದ್ದಿ ಬರುತ್ತಿದೆ. ಆದ್ರೆ, ಅವರು ನನ್ನನ್ನು ಭೇಟಿ ಮಾಡಿಲ್ಲ'' ಅಂತ ಸ್ಪಷ್ಟಪಡಿಸಿದರು. [ಸುಮಲತಾ ರಾಜಕೀಯ ಅಖಾಡಕ್ಕೆ, ಗುಸುಗುಸು ಪಿಸುಪಿಸು]

ವಿರೋಧ ಇಲ್ಲ.!
''ಅಂಬರೀಶ್ ಅವರು ಬಿಜೆಪಿಗೆ ಬರುವುದಾದರೆ ನಮ್ಮ ವಿರೋಧವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರಿಂದ ರಾಜೀನಾಮೆ ಪಡೆಯುವ ವೇಳೆ ಅವರ ಜತೆ ಮಾತನಾಡಿಲ್ಲ ಎಂಬ ಬೇಸರ ಅವರಿಗಿದೆ. ಆದರೆ, ಬಿಜೆಪಿಯ ರಾಜ್ಯ ಮುಖಂಡರು ಅವರೊಂದಿಗೆ ಮಾತುಕತೆ ನಡೆಸಿದ್ದಾರೆ'' ಅಂತ ಆರ್.ಅಶೋಕ್ ಹೇಳಿದರು.

ಅಂಬರೀಶ್ ಸೂಕ್ತ
''ಮೈಸೂರು, ಮಂಡ್ಯ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಪ್ರಭಾವಿ ಮುಖಂಡರು ಬೇಕಿದ್ದು, ಅಂಬರೀಶ್ ಸೂಕ್ತ ನಾಯಕರಾಗಿದ್ದಾರೆ'' ಎಂಬ ಅಭಿಪ್ರಾಯವನ್ನು ಆರ್.ಅಶೋಕ್ ವ್ಯಕ್ತಪಡಿಸಿದರು.

ರಾಜಕೀಯಕ್ಕೆ ಧುಮುಕುತ್ತಾರಾ ಸುಮಲತಾ.?
''ಸುಮಲತಾ ಅಂಬರೀಶ್ ಅವರು ಯಶವಂತಪುರದಲ್ಲಿ ಸ್ಪರ್ಧಿಸುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಈ ಬಗ್ಗೆ ಪಕ್ಷದಲ್ಲಿ ಇನ್ನೂ ಚರ್ಚೆಯಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ'' ಎಂದು ಅಶೋಕ್ ಹೇಳಿದರು.

ಇದು ಮೊದಲಲ್ಲ.!
ನಟಿ ಸುಮಲತಾ ಅಂಬರೀಶ್ ಎಂ.ಎಲ್.ಸಿ ಆಗುತ್ತಾರೆ ಎಂಬ ಸುದ್ದಿ ಈ ಹಿಂದೆ ಕೂಡ ಕೇಳಿಬಂದಿತ್ತು.

ಸುಮಲತಾ-ಅಂಬರೀಶ್ ಪ್ರತಿಕ್ರಿಯೆ ನೀಡಿಲ್ಲ
ಅಂಬರೀಷ್ ಅವರು ಸಕ್ರಿಯ ರಾಜಕೀಯದಿಂದ ದೂರಸರಿಯುವ ಮಾತನ್ನಾಡುತ್ತಿರುವುದರಿಂದ ಸುಮಲತಾ ಅಂಬರೀಷ್ ಅವರಿಗೆ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಫರ್ ನೀಡಲು ಬಿಜೆಪಿ ಮುಂದಾಗಿದೆ. ಆದರೆ, ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಅಂಬರೀಶ್ ಅಥವಾ ಸುಮಲತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


Click it and Unblock the Notifications











