ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಚಿನ್ನದ ನಾಣ್ಯ ಗೆಲ್ಲಿ!
ಚಿನ್ನದ ನಾಣ್ಯ ಗೆಲ್ಲುವ ಆಸೆಯಿದೆಯೇ ಹಾಗಿದ್ದರೆ ಚಿತ್ರಮಂದಿರದಲ್ಲಿ ಕನ್ನಡ ಸಿನಿಮಾ ನೋಡಿ! ಹೌದು ಹೀಗೊಂದು ಆಫರ್ ಅನ್ನು ಇತ್ತೀಚೆಗೆ ಬಿಡುಗಡೆ ಆದ ಕನ್ನಡ ಸಿನಿಮಾ ಒಂದು ನೀಡಿದೆ.
ಕಳೆದ ವಾರ ಬಿಡುಗಡೆ ಆದ 'ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸ್ಬುಟ್ಟ' ಸಿನಿಮಾದ ತಂಡವು ಹೀಗೊಂದು ಆಫರ್ ಕೊಟ್ಟಿದ್ದು, ನಿರ್ದಿಷ್ಟ ಚಿತ್ರಮಂದಿರದಲ್ಲಿ ತಮ್ಮ ಸಿನಿಮಾ ನೋಡಿದವರಿಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಿದ್ದಾರೆ.
ಮಾಗಡಿ ರಸ್ತೆಯ ವೀರೇಶ್ ಚಿತ್ರ ಮಂದಿರದಲ್ಲಿ 'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡ್ಸ್ಬುಟ್ಟ' ಚಿತ್ರ ವೀಕ್ಷಿಸಿದವರಿಗೆ ಉಚಿತವಾಗಿ ಬಂಗಾರದ ನಾಣ್ಯವನ್ನು ಕೊಡುವುದಾಗಿ ಸಿನಿಮಾದ ನಿರ್ಮಾಪಕರಾದ ರೆಡ್ ಅಂಡ್ ವೈಟ್ ಸೆವೆನ್ ರಾಜ್ ಘೋಷಿಸಿದ್ದಾರೆ.

ಚಿನ್ನದ ನಾಣ್ಯ ಉಡುಗೊರೆಯಾಗಿ ನೀಡುವ ಕೊಡುಗೆ ಪ್ರತಿ ಪ್ರದರ್ಶನಕ್ಕೂ ಅನ್ವಯಿಸಲಿದೆ. ಒಂದು ಪ್ರದರ್ಶನದಲ್ಲಿ ಎಷ್ಟು ಜನ ಸಿನಿಮಾ ನೋಡುತ್ತಾರೋ ಅವರಲ್ಲಿ ಒಬ್ಬರನ್ನು ಲಕ್ಕಿ ಡಿಪ್ ಮೂಲಕ ಆರಿಸಿ ಅವರಿಗೆ ಅರ್ಧ ಗ್ರಾಂ ಚಿನ್ನದ ನಾಣ್ಯವನ್ನು ಬಹುಮಾನವಾಗಿ ಕೊಡಲಿದ್ದಾರೆ.
ಆಸ್ಕರ್ ಕೃಷ್ಣ ನಿರ್ದೇಶಿಸಿ, ಅವರೊಂದಿಗೆ ಲೋಕೇಂದ್ರ ಸೂರ್ಯ ನಾಯಕ ನಟರಾಗಿ ಅಭಿನಯಿಸಿರುವ "ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ" ಚಿತ್ರವು ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸಿನ ಖುಷಿಯಲ್ಲಿ ನಿರ್ಮಾಪಕ ಸೆವೆನ್ ರಾಜ್ ರವರು ಈ ಕೊಡುಗೆಯನ್ನು ನೀಡಲು ಮುಂದಾಗಿದ್ದಾರೆ ಎಂದು ಚಿತ್ರತಂಡವು ಇತ್ತೀಚೆಗೆ ನಿನ್ನೆ (ಸೆಪ್ಟೆಂಬರ್ 20) ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದೆ.
ಚಿನ್ನದ ನಾಣ್ಯ ನೀಡುವ ಕೊಡುಗೆಯು ಇಂದು ಅಂದರೆ ಸೆಪ್ಟೆಂಬರ್ 21 ರಿಂದ ವೀರೇಶ್ ಚಿತ್ರಮಂದಿರದಲ್ಲಿ 'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ' ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಮಾತ್ರ ಅನ್ವಯಿಸಲಿದೆ.
'ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ' ಸಿನಿಮಾವನ್ನು ಆಸ್ಕರ್ ಕೃಷ್ಣ ನಿರ್ದೇಶಿಸಿ ನಟಿಸಿದ್ದಾರೆ. ಸಿನಿಮಾದಲ್ಲಿ ಲೋಕೇಂದ್ರ ಸೂರ್ಯ, ಸೆವೆನ್ ರಾಜ್, ಗೌರಿ ನಾಯರ್, ಆಸ್ಕರ್ ಕೃಷ್ಣ ಇನ್ನೂ ಕೆಲವರು ನಟಿಸಿದ್ದಾರೆ.


Click it and Unblock the Notifications











