ರಾಷ್ಟ್ರಪ್ರಶಸ್ತಿ ವಾಪಸ್: ಕಮಲ್ ಹಾಸನ್ ಹೇಳಿದ್ದೇನು?
"ನಾನು ನನಗೆ ಬಂದಿರುವ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂದಿರುಗಿಸಲು ಬಿಲ್ ಕುಲ್ ಒಪ್ಪುವುದಿಲ್ಲ" ಎಂದು ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ನುಡಿದಿದ್ದಾರೆ.
ಇಡೀ ಭಾರತದಾದ್ಯಂತ ಕೆಲವು ಸಾಹಿತಿಗಳು ಮತ್ತು ಕಲಾವಿದರು ಆರಂಭಿಸಿರುವ ಅಸಹಿಷ್ಣುತೆ ವಿರೋಧಿ ಚಳವಳಿಗೆ ಸೇರಲು ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರು ನಿರಾಕರಿಸಿದ್ದಾರೆ.
ಕಲಾವಿದರು ಮತ್ತು ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ಹಿಂತಿರುಗಿಸುತ್ತಿರುವುದಕ್ಕೆ ನನ್ನ ಸಂಪೂರ್ಣ ವಿರೋಧವಿದೆ. ನಾನು ಆ ಚಳವಳಿಯ ಭಾಗವಾಗಲು ಇಷ್ಟಪಡುವುದಿಲ್ಲ. ಭಾರತ ದೇಶ ಯಾವಾಗಲೂ ಅಸಹಿಷ್ಣುತೆಯನ್ನು ಸಹಿಸುತ್ತಾ ಬಂದಿದೆ. ನಾವು ಅದರ ವಿರುದ್ದ ಬೌದ್ಧಿಕವಾಗಿ ಹೋರಾಡಬೇಕಿದೆ ಎಂದು ಬಹುಭಾಷಾ ನಟ ಕಮಲ್ ಹಾಸನ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.[ಕಮಲ್ ಹಾಸನ್ ಅಭಿನಯದ ಉತ್ತಮ ವಿಲನ್ ಚಿತ್ರವಿಮರ್ಶೆ]
ಪ್ರಶಸ್ತಿಗಳನ್ನು ಹಿಂದಿರುಗಿಸುವುದು ನಿರರ್ಥಕ ಪ್ರಯತ್ನ. ಅಸಹಿಷ್ಣುತೆ ಸಮಸ್ಯೆಯನ್ನು ಚರ್ಚೆ ಮೂಲಕ ಹೋರಾಡಿ ಗೆಲ್ಲಬೇಕು ಎಂದು ಅವರು ಹೇಳಿದ್ದಾರೆ. ಜೊತೆಗೆ ಭಾರತ ದೇಶ ಇಂತಹ ಸಮಸ್ಯೆಗಳನ್ನು ಸ್ವಾತಂತ್ರ್ಯಪೂರ್ವದಿಂದಲೂ ಅನುಭವಿಸುತ್ತಾ ಬಂದಿದೆ, ಅದು ಈಗಲೂ ಕೊನೆಗೊಂಡಿಲ್ಲ, ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಅಸಹಿಷ್ಣುತೆ ಎಂಬುದು ದೇಶವನ್ನು ಬೇರ್ಪಡಿಸುವ ಕೆಲಸವನ್ನು ಮಾಡುತ್ತದೆ. ಹಿಂದೆ ನಮ್ಮ ದೇಶ ಎರಡು ಭಾಗವಾಗಲು ಅದೇ ಕಾರಣವಾಗಿತ್ತು, ಇದೀಗ ಮತ್ತೆ ಅದೇ ಸಮಸ್ಯೆ ಮುಂದುವರಿಯುವುದು ಬೇಡ ಎಂದು ಕಮಲ್ ಹಾಸನ್ ನುಡಿದಿದ್ದಾರೆ.['ನಾಯಗನ್' ಕಮಲ್ ಜೊತೆ ಮಣಿರತ್ನಂ ಹೊಸ ಚಿತ್ರ!]
ಅಂದಹಾಗೆ ನಟ ಕಮಲ್ ಹಾಸನ್ ಅವರು ತಮ್ಮ ಚಿತ್ರಗಳಾದ ವಿಶ್ವಂರೂಪಂ ಮತ್ತು ನಮ್ಮ ಕನ್ನಡದ ನಟ-ನಿರ್ದೇಶಕ ರಮೇಶ್ ಅರವಿಂದ್ ಆಕ್ಷನ್-ಕಟ್ ಹೇಳಿದ್ದ 'ಉತ್ತಮ ವಿಲನ್' ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳಿಂದ ಹಲವಾರು ಟೀಕೆಗಳನ್ನು ಎದುರಿಸಿದ್ದರು. ಜೊತೆಗೆ ಆ ಸಿನಿಮಾಗಳಲ್ಲಿದ್ದ ಕೆಲವು ಅಂಶಗಳ ಬಗ್ಗೆ ಭಾರಿ ವಿವಾದ ಉಂಟಾಗಿತ್ತು.
ತಮಿಳು-ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಹೊಂದಿರುವ ನಟ ಕಮಲ್ ಹಾಸನ್ ಅವರು ನಮ್ಮ ಕನ್ನಡದ ನಟ ರಮೇಶ್ ಅರವಿಂದ್ ಅವರ ಆಪ್ತ ಸ್ನೇಹಿತ. ಮಾತ್ರವಲ್ಲದೇ ಕನ್ನಡದ 'ರಾಮಾ ಶಾಮ ಭಾಮ' ಎಂಬ ಹಾಸ್ಯಮಯ ಚಿತ್ರದಲ್ಲಿ ಇವರು ಕಾಣಿಸಿಕೊಂಡಿದ್ದರು.


Click it and Unblock the Notifications













