ಪಶು ವೈದ್ಯರೊಬ್ಬರು ನಿರ್ದೇಶಕ ಯೋಗರಾಜ್ ಭಟ್ ಕೆನ್ನೆಗೆ ಬಾರಿಸಿದ್ದೇಕೆ?
ಯೋಗರಾಜ್ ಭಟ್ ಈ ಬಾರಿ ನಿರ್ದೇಶನದ ಬದಲು ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಟೀನೇಜ್ ಸ್ಟೋರಿಯನ್ನು ಪ್ರೇಕ್ಷಕರಿಗೆ ತೋರಿಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅದುವೇ 'ಪದವಿ ಪೂರ್ವ'. ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಸುಂದರವಾದ ಕಥೆಯನ್ನು ಸಿನಿಪ್ರಿಯರ ಮುಂದಿಡುತ್ತಿದ್ದಾರೆ.
'ಪದವಿ ಪೂರ್ವ' ಸಿನಿಮಾವನ್ನು ಯೋಗರಾಜ್ ನಿರ್ದೇಶನ ಮಾಡಿಲ್ಲ. ಈ ಟೀನೇಜ್ ಲವ್ ಸ್ಟೋರಿಗೆ ಆಕ್ಷನ್ ಕಟ್ ಹೇಳಿದ್ದು, ಹರಿಪ್ರಕಾಶ್ ಜಯಣ್ಣ. ಡಿಸೆಂಬರ್ 30ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ಈಗಾಗಲೇ ಭಟ್ಟರು ವೀಕ್ಷಿಸಿದ್ದಾರೆ. ಅವರಿಗೆ ಸಿನಿಮಾ ಫುಲ್ ಖುಷಿ ಕೊಟ್ಟಿದೆ.
'ಪದವಿ ಪೂರ್ವ' ಸಿನಿಮಾ ಯೋಗರಾಜ್ ಭಟ್ರನ್ನು ಅವರ ಪಿಯುಸಿ ದಿನಗಳಿಗೆ ಕರೆದುಕೊಂಡು ಹೋಗಿದೆ. ಈ ವೇಳೆ ಅವರು ಹುಡುಗಾಟಗಳು ನೆನಪಾಗಿವೆ. ಕಾಲೇಜಿನಲ್ಲಿ ಮಾಡಿದ ತೀಟೆಗಳು ನೆನಪಾಗಿವೆ. ಇದೇ ವೇಳೆ ಪಶು ವೈದ್ಯರಿಂದ ಅವರ ಸಗಣಿ ಕೈಯಲ್ಲೇ ಕೆನ್ನೆಗೆ ಹೊಡೆಸಿಕೊಂಡ ಘಟನೆನೂ ನೆನಪಿಗೆ ಬಂದಿದೆ. ಆ ಘಟನೆಯನ್ನು ಮತ್ತೆ ಸ್ವಾರಸ್ಯಕರವಾಗಿ ಹೇಳಿಕೊಂಡಿದ್ದಾರೆ. ಅದನ್ನು ತಿಳಿಯಲು ಮುಂದೆ ಓದಿ.

ಪಶು ವೈದ್ಯರಿಂದ ಕೆನ್ನೆಗೆ ಬಾರಿಸಿಕೊಂಡಿದ್ದೇಕೆ?
"ನನಗೆ ಎಲ್ಲಾ ಗೊತ್ತಿದೆ ಅಂತ ಆ ವಯಸ್ಸಿನಲ್ಲಿ ಅಂದುಕೊಂಡಿರುತ್ತಾನೆ. ಆದರೆ, ಏನೂ ಗೊತ್ತಿಲ್ಲ ಅಂತ ಬದುಕು ಹೇಳುತ್ತಿರುತ್ತೆ. ಅಕ್ಕಿಹೊಳ್ಳಿ ಅಂತ ಒಬ್ಬರು ಪಶು ವೈದ್ಯರು. ಅವರಿಗೆ ಒಬ್ಬರು ಕಾಂಪೌಂಡರ್ ಇದ್ದರು. ಅವರು ಹಸು, ಕರುಗೆ ಹುಷಾರಿಲ್ಲ ಅಂದರೆ, ಅದರ ಹೊಟ್ಟೆನೆಲ್ಲಾ ಟಚ್ ಮಾಡಿ, ಹಿಂದಗಡೆಯಿಂದ ಕೈ ಹಾಕಿ, ಹೊಟ್ಟೆ ಬಾವು ಯಾಕೆ ಬರುತ್ತೆ ಅಂತ ಹೇಳುತ್ತಿದ್ದರು. ನಾನು ಆಗ ಮೊದಲ ಪಿಯುಸಿ ಓದುತ್ತಿದ್ದೆ. ನಾನು ಅಲ್ಲಿ ನಿಂತಿದ್ದೆ. ನಮ್ಮ ಮನೆ ಹಸು ಹೊಟ್ಟೆ ಊದಿಕೊಂಡಿತ್ತು. ತುಂಬಾನೇ ಚೆಕ್ ಮಾಡುತ್ತಿದ್ದರು. ಸಾಹೇಬ್ರೆ ಕೈ ಹಾಕ ಬದಲು ತಲೆನೇ ಹಾಕಿ ನೋಡುವುದಕ್ಕೆ ಆಗುವುದಿಲ್ಲವೇ ಅಂತ ಕೇಳಿದ್ದೆ. ತೆಗೆದು ಸಗಣಿ ಕೈಯಲ್ಲೊಂದು ಏಟು ಹಾಕಿದ್ದರು. ಈಗ ಯಾರೋ ಎಷ್ಟೋ ಹೊತ್ತಲ್ಲಿ ಹೊಡೀತಾರೆ ಅನ್ನೋ ಫೀಲೀಂಗ್ ಕೊಟ್ಟವರು ಅವರೇ. ಇವತ್ತಿಗೂ ಅಂದಿನ ಘಟನೆಗಳು ನೆನಪಾಗುತ್ತವೆ." ಎಂದು ಅಂದಿನ ಘಟನೆಯನ್ನು ಯೋಗರಾಜ್ ಭಟ್ಟರು ನೆನೆಸಿಕೊಂಡಿದ್ದಾರೆ.

'ಪದವಿ ಪೂರ್ವ' ಸಿನಿಮಾದಲ್ಲಿ ಏನೇನಿದೆ?
"ಮೊನ್ನೆ 'ಪದವಿ ಪೂರ್ವ' ಸಿನಿಮಾವನ್ನು ನೋಡಿದೆ. ಶುರುವಾದಾಗಿನಿಂದ ಇದೂವರೆಗೂ ಏನೋ ಮಾಡುತ್ತಿದ್ದಾರೆ ಅಂತ ಅನಿಸುತ್ತಿತ್ತು. ಅರ್ಜುನ್ ಜನ್ಯ ಜೊತೆ ಸೇರಿಕೊಂಡು ಹಾಡುಗಳನ್ನು ಮಾಡುವಾಗಲೂ ಇವೆಲ್ಲಾ ಹೇಗೆ ಬರುತ್ತೆ? ಹೇಗೆ ಕಾಣುತ್ತೆ ಸಿನಿಮಾ? ಅನ್ನೋ ತರಾನೇ ಇತ್ತು ಮನಸ್ಸಲ್ಲಿ. 2 ಗಂಟೆ 10 ನಿಮಿಷಗಳ ಕಾಲ ಸಿನಿಮಾ ನೋಡಿದಾಗ ಏನೋ ಒಂದು ಬೆಳಕು. ಎಮೋಷನಲಿ ಭಾರ ಆಯ್ತು. ನಾನು ನನ್ನ ಪಿಯುಸಿ ದಿನಗಳಿಗೆ ಹೋದೆ. ಸಿನಿಮಾ ಏನೋ ಒಂದನ್ನು ಕೊಡಬೇಕು ಅನ್ನೋದನ್ನು ವಿಶೇಷವಾಗಿ ಕಟ್ಟಿಕೊಟ್ಟಿದೆ ತಂಡ."

ಹೊಸ ಪ್ರತಿಭೆಯ ಟ್ಯಾಲೆಂಟ್ ಹೇಗಿದೆ?
"ನಾಯಕ ನಟ ಪೃಥ್ವಿ ಭವಿಷ್ಯದಲ್ಲಿ ತುಂಬಾ ಸಿನಿಮಾಗಳನ್ನು ಮಾಡಬಲ್ಲೆ ನಾನು ಅನ್ನೋದನ್ನು ಆತನ ಕಣ್ಣು ಮತ್ತು ಧ್ವನಿ ಹೇಳುತ್ತೆ. ಆತನ ರೂಪ ಕೂಡ ಹೇಳುತ್ತೆ. ತುಂಬಾ ಸರಿಯಾದ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾನೆ. 19-20ನೇ ವಯಸ್ಸಿನಲ್ಲಿ ಅವರ ತಲೆಗೆ ಏನನ್ನು ಬಿತ್ತುತ್ತೇವೋ ಅದೇ ಮುಂದೆ ದೊಡ್ಡ ಮರವಾಗಿ ಬೆಳೆಯುತ್ತೆ. ತುಂಬಾ ದಿನ ನಾಯಕನಾಗಿ ನಿಲ್ಲಬಲ್ಲ ನಟ. ಈ ದಾವಣಗೆರೆ ಹೈದ." ಎನ್ನುತ್ತಾರೆ ಯೋಗರಾಜ್ ಭಟ್.

'ಇಂದು ಬೆಳೆದು ನಿಂತವರೆಲ್ಲಾ ಹೊಸಬರೇ ಆಗಿದ್ದರು'
" ಯಾರೇ ಆಗಿರಲಿ ತುಂಬಾ ನಂಬಬೇಕಿರೋದು ಹೊಸಬರನ್ನು. ಯಾಕಂದ್ರೆ, ಇವತ್ತು ಬೆಳೆದು ನಿಂತವರೆಲ್ಲಾ ಒಂದು ಕಾಲದಲ್ಲಿ ಹೊಸಬರೇ ಆಗಿದ್ದರು. ಅವರಿಗೆ ಅವತ್ತು ಯಾರೋ ಕೈ ಹಿಡಿದಿರುತ್ತಾರೆ. ಅಂದು ಅವರು ತೋರಿಸಿದ ಒಂದು ಟ್ಯಾಲೆಂಟ್ ಎಲ್ಲರಿಗೂ ಇಷ್ಟ ಆಗಿರುತ್ತೆ. ಆಮೇಲೆ ಬೆಳೆದು ಎಲ್ಲರೂ ದೊಡ್ಡವರಾಗುವುದು. ಹೊಸಬರಲ್ಲೇ ಹೊಸದೇನು ಹುಟ್ಟುವುದಕ್ಕೆ ಸಾಧ್ಯ. ಹಾಗೇ ತುಂಬಾ ಬೆಳೆದಿರೋ ನಟ ಬಂದು ಹೊಸದೇನನ್ನೋ ಮಾಡುವುದಕ್ಕೆ ಸಾಧ್ಯವಿಲ್ಲ." ಎಂದು ಹೊಸಬರ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


Click it and Unblock the Notifications











