ಹಿಂಸಾಚಾರಕ್ಕೆ ಪ್ರಚೋದನೆ ಆರೋಪ: ಅನುಷ್ಕಾ ಶರ್ಮಾಗೆ ಕೋರ್ಟ್ ನೋಟಿಸ್
'ಪಾತಾಳ್ ಲೋಕ್' ವೆಬ್ ಸೀರೀಸ್ನಲ್ಲಿ ಜಾತಿ ಅವಹೇಳನೆ ಮತ್ತು ಅನುಮತಿಯಿಲ್ಲದೆ ಫೋಟೊ ಬಳಕೆಯ ಪ್ರಕರಣಗಳಿಂದ ಈಗಾಗಲೇ ಸಂಕಷ್ಟಕ್ಕೆ ಒಳಗಾಗಿರುವ ನಿರ್ಮಾಪಕಿ ಅನುಷ್ಕಾ ಶರ್ಮಾ, ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
'ಪಾತಾಳ್ ಲೋಕ್' ವೆಬ್ ಸೀರೀಸ್ನಲ್ಲಿ ಸಿಖ್ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ದೂರಿನ ಅನ್ವಯ ಅನುಷ್ಕಾ ಶರ್ಮಾ ಹಾಗೂ ಅಮೆಜಾನ್ ಪ್ರೈಂ ವಿಡಿಯೋಸ್ ಸಂಸ್ಥೆಗೆ ಸೋಮವಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಅವರ ನೇತೃತ್ವದ ನ್ಯಾಯಪೀಠವು ಯೂನಿಯನ್ ಆಫ್ ಇಂಡಿಯಾ ಹಾಗೂ 15 ಇತರೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಮುಂದೆ ಓದಿ...

ಸಂಘರ್ಷಕ್ಕೆ ಪ್ರಚೋದನೆ
'ಪಾತಾಳ್ ಲೋಕ್' ವೆಬ್ ಸೀರೀಸ್ನ ಮೂರನೇ ಕಂತು 'ಎ ಹಿಸ್ಟರಿ ಆಫ್ ವಯಲೆನ್ಸ್' ಪಂಜಾಬ್ನ ಹಳ್ಳಿಯೊಂದರ ಕಥೆ ಹೊಂದಿದೆ. ಇದರಲ್ಲಿ ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ಮತ್ತು ಹಗೆತನದಿಂದ ಕೋಮು ಸೌಹಾರ್ದತೆ ಕದಡುವ ಸಲುವಾಗಿ ಹಾಗೂ ಜಾತಿ ಆಧಾರಿತ ಸಂಘರ್ಷಗಳು ನಡೆಯಬೇಕು ಎಂಬ ಉದ್ದೇಶದಿಂದ ಎರಡು ಸಮುದಾಯಗಳನ್ನು ಕೆಟ್ಟ ರೀತಿಯಲ್ಲಿ ಚಿತ್ರಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಗುರ್ದೀಪಿಂದರ್ ಸಿಂಗ್ ಧಿಲ್ಲೋನ್ ಆರೋಪಿಸಿದ್ದಾರೆ.

ವೆಬ್ ಸೀರೀಸ್ ನಿಷೇಧಿಸಿ
ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿರುವುದರಿಂದ ಈ ವೆಬ್ ಸೀರೀಸ್ಅನ್ನು ನಿಷೇಧಿಸಬೇಕು ಎಂದು ಅಕಾಲಿದಳದ ಮಾಜಿ ಶಾಸಕ ಹಾಗೂ ದೆಹಲಿ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿ ಅಧ್ಯಕ್ಷ ಮಂಜಿಂದರ್ ಸಿಂಗ್ ಸಿರ್ಸಾ ಟ್ವೀಟ್ ಮಾಡಿದ್ದರು.

ಅತ್ಯಾಚಾರಿಗಳಂತೆ ಚಿತ್ರಿಸಲಾಗಿದೆ
ವೆಬ್ ಸೀರೀಸ್ನಲ್ಲಿನ ಅತ್ಯಾಚಾರ ದೃಶ್ಯಗಳ ಕುರಿತು ಹರಿಹಾಯ್ದಿರುವ ಅವರು, 'ಸಿಖ್ಖರು ಮಹಿಳೆಯರ ರಕ್ಷಕರು. ಇಡೀ ಜಗತ್ತು ಸಿಖ್ಖರನ್ನು ಅವರ ಸೇವೆ ಮತ್ತು ಮಾನವೀಯತೆಯಿಂದ ಗುರುತಿಸುತ್ತಿದೆ. ಆದರೆ ಸಿಖ್ಖರನ್ನು ಅತ್ಯಾಚಾರಿಗಳು ಎಂದು ತೋರಿಸುತ್ತಿರುವ ಅನುಷ್ಕಾ ಶರ್ಮಾ ಮತ್ತು ಪ್ರೈಮ್ ವಿಡಿಯೋಸ್ಗೆ ನಾಚಿಕೆಯಾಗಬೇಕು' ಎಂದು ಹೇಳಿದ್ದಾರೆ.

ಹಲವು ವಿವಾದಗಳಲ್ಲಿ ವೆಬ್ ಸೀರೀಸ್
ಅನುಷ್ಕಾ ಶರ್ಮಾ ನಿರ್ಮಾಣದ ಈ ವೆಬ್ ಸೀರೀಸ್ ಆರಂಭವಾದ ಸಂದರ್ಭದಿಂದಲೂ ಅನೇಕ ವಿವಾದಗಳಲ್ಲಿ ಸಿಲುಕಿದೆ. ದೇವರ ಚಿತ್ರದ ಎದುರು ಗೋಮಾಂಸ ಭಕ್ಷಿಸುವುದು, ಹಿಂದೂ ಫೋಬಿಯಾಕ್ಕೆ ಪ್ರಚೋದನೆ ನೀಡುವುದು, ದಲಿತರ ಹತ್ಯೆ ಮತ್ತು ಜನಾಂಗೀಯ ದ್ವೇಷದಂತಹ ಸೂಕ್ಷ್ಮ ಸಂಗತಿಗಳನ್ನು ವೈಭವೀಕರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.


Click it and Unblock the Notifications











