ಎಲ್ಲಾ ದುಡ್ಡನ್ನೂ ಹಾಕಿದ್ದೇವೆ ನಾಳೆ ಊರಿಗೆ ಹೋಗೋಕೂ ಕಾಸಿಲ್ಲ ಸರ್ ಎಂದ 'ಕಂಬ್ಳಿಹುಳ' ನಟ!
ಕಂಬ್ಳಿಹುಳ ಯುವ ಕಲಾವಿದರ ತಂಡವೊಂದು ತಯಾರಿಸಿರುವ ಹೊಸ ಕನ್ನಡ ಚಿತ್ರ. ಸಿನಿಮಾ ವೀಕ್ಷಿಸಿದ ಪ್ರತಿಯೊಬ್ಬರೂ ಸಹ ಇಂಥ ಚಿತ್ರಗಳಿಗೆ ಬೆಂಬಲ ಬೇಕು, ಓಟಿಟಿಗೆ ಬರುವ ತನಕ ಕಾಯಬೇಡಿ ಆದಷ್ಟು ಬೇಗನೇ ಚಿತ್ರಮಂದಿರಗಳಲ್ಲಿಯೇ ಚಿತ್ರವನ್ನು ವೀಕ್ಷಿಸಿ ಎಂಬ ವಿಮರ್ಶೆಗಳನ್ನು ನೀಡುತ್ತಿದ್ದಾರೆ.
ಹೀಗೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಕಂಬ್ಳಿಹುಳ ಚಿತ್ರ ವೀಕ್ಷಿಸಿದ ಕನ್ನಡ ನಿರ್ದೇಶಕ ಸಿಂಪಲ್ ಸುನಿ ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿ ಯಾರಿಗೆ ಚಿತ್ರ ಇಷ್ಟವಾಗುವುದಿಲ್ಲವೋ ಅವರಿಗೆ ಅರ್ಧ ಟಿಕೆಟ್ ದರವನ್ನು ನಾನೇ ಹಿಂದಿರುಗಿಸುತ್ತೇನೆ ಎಂದು ಚಿತ್ರದ ಕಂಟೆಂಟ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.
ಇನ್ನು ಒಂದೊಳ್ಳೆ ಚಿತ್ರ ಮಾಡಿದ್ದರೂ ಸಹ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂಬ ಬೇಸರದ ನಡುವೆಯೂ ಕಂಬ್ಳಿಹುಳ ಚಿತ್ರತಂಡ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತೊಡಗಿದೆ. ನಿನ್ನೆ ( ನವೆಂಬರ್ 8 ) ಕಂಬ್ಳಿಹುಳ ಚಿತ್ರತಂಡ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು. ಚಿತ್ರ ವೀಕ್ಷಿಸಲು ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ ಹಾಗೂ ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೀಡಿಯಾದವರ ಜೊತೆ ಮಾತನಾಡಿದ ನಟ ಅಂಜನ್ ನಾಗೇಂದ್ರ ಚಿತ್ರದ ಬಗ್ಗೆ ಹಾಗೂ ತಮ್ಮ ಪರಿಸ್ಥಿತಿ ಬಗ್ಗೆ ಮನಬಿಚ್ಚಿ ಮಾತನಾಡಿದರು.

ಮೀಡಿಯಾಗೆ ಧನ್ಯವಾದ ಅರ್ಪಿಸಿದ ಅಂಜನ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಂಜನ್ ನಾಗೇಂದ್ರ ಮೊದಲಿಗೆ ಮೀಡಿಯಾ ಮಿತ್ರರು ನೀಡಿದ ಬೆಂಬಲಕ್ಕೆ ಧನ್ಯವಾದ ತಿಳಿಸಿದರು. ಕೆಲವರು ಮೀಡಿಯಾದವರು ಬೆಂಬಲ ನೀಡಲ್ಲ ಅಂತಾರೆ, ಆದರೆ ನಮ್ಮ ಚಿತ್ರಕ್ಕೆ ಮಾತ್ರ ಮೊದಲು ಬೆಂಬಲಕ್ಕೆ ನಿಂತದ್ದು ಮೀಡಿಯಾದವರು, ಅವರು ಪ್ರತೀ ಹಂತದಲ್ಲೂ ಕೈಬಿಡಲಿಲ್ಲ ಎಂದು ಹೇಳಿಕೆ ನೀಡಿದರು. ಯುಟ್ಯೂಬ್ ಚಾನೆಲ್, ಪ್ರಿಂಟ್ ಮೀಡಿಯಾ, ಸುದ್ದಿ ವಾಹಿನಿಗಳು ಪ್ರತೀ ಒಬ್ಬರೂ ಸಹ ಬೆಂಬಲ ನೀಡಿದರು ಎಂದು ಅಂಜನ್ ಮಾತನಾಡಿದರು.

ಆ ವ್ಯಕ್ತಿ ಇಲ್ಲ ಅಂದಿದ್ರೆ ನಾವೆಲ್ಲಾ ಬಸ್ ಹತ್ತಿ ಮನೆಗೆ ಹೋಗ್ಬೇಕಿತ್ತು
ಮಾತು ಮುಂದುವರಿಸಿದ ಅಂಜನ್ ನಾಗೇಂದ್ರ ನಿರ್ದೇಶಕ ದಯಾನಂಕ್ ಟಿಕೆ ಅವರು ಇಲ್ಲದೇ ಇದ್ದಿದ್ದರೆ ನಾವೆಲ್ಲರೂ ಮೊನ್ನೆನೇ ಬಸ್ ಹತ್ತಿ ಬೆಂಗಳೂರು ಬಿಡಬೇಕಿತ್ತು ಎಂದರು. ಏಕೆಂದರೆ ದಯಾನಂದ್ ಟಿಕೆ ಅವರು ಚಿತ್ರ ವೀಕ್ಷಿಸಿ ನಮಗೆ ಧೈರ್ಯ ತುಂಬಿದ ಕಾರಣ ನಾವು ಇಷ್ಟು ದಿನಗಳ ಕಾಲ ಹೋರಾಡಿದ್ದೇವೆ ಎಂದು ತಿಳಿಸಿದರು.

ನಾನು ಅಪ್ಪು ಫ್ಯಾನ್
ಇನ್ನು ಅಂಜನ್ ನಾಗೇಂದ್ರ ನಾನು ಪುನೀತ್ ರಾಜ್ಕುಮಾರ್ ಅವರ ಅಭಿಮಾನಿ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯವೇ, ಅವರು ಒಳ್ಳೆಯ ಚಿತ್ರಗಳು ಬಂದಾಗ ಗುರುತಿಸಿ ಬೆಂಬಲಿಸುತ್ತಿದ್ದರು, ಆದರೆ ಈಗ ಅವರು ಇಲ್ಲ, ಅವರ ಬದಲಾಗಿ ವಿನಯ್ ರಾಜ್ಕುಮಾರ್ ಬಂದ್ರು ಎಂದು ಭಾವುಕರಾದರು.

ಇದ್ದ ದುಡ್ಡನ್ನೆಲ್ಲಾ ಈ ಶೋಗೆ ಹಾಕಿದ್ದೇವೆ
ಇನ್ನು ತಮ್ಮ ಬಳಿ ಇದ್ದ ದುಡ್ಡನ್ನೆಲ್ಲಾ ಸೇರಿಸಿ ಇದೊಂದು ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದೇವೆ, ಹೇಳಬೇಕೆಂದರೆ ನಾಳೆ ಊರಿಗೆ ಹೋಗಿ ಬರೋಕೂ ನಮ್ಮತ್ರ ಕಾಸಿಲ್ಲ ಸರ್ ಎಂದರು ಅಂಜನ್ ನಾಗೇಂದ್ರ. ಸದ್ಯ ಒಂದೆರಡು ಮಲ್ಟಿಪ್ಲೆಕ್ಸ್ಗಳಲ್ಲಿ ಮಾತ್ರ ಚಿತ್ರ ಉಳಿದಿದ್ದು, ಎಲ್ಲರೂ ಬಂದು ಚಿತ್ರ ವೀಕ್ಷಿಸಿದರೆ ಮಾತ್ರ ನಮ್ಮನ್ನು ನಂಬಿ ಬಂಡವಾಳ ಹೂಡಿದ ನಿರ್ಮಾಪಕರು ಸೇಫ್ ಆಗ್ತಾರೆ ದಯವಿಟ್ಟು ಸಿನಿಮಾ ನೋಡಿ ಎಂದು ಅಂಜನ್ ಮನವಿ ಮಾಡಿಕೊಂಡರು. ಅಷ್ಟೇ ಅಲ್ಲದೇ ಕೆಲವರು ಸರಿಯಾದ ಸಮಯಕ್ಕೆ ಚಿತ್ರಮಂದಿರಕ್ಕೆ ಬರಬೇಕಿತ್ತು, ಮೊದಲೇ ಹೇಳಿದ್ರೆ ನಾವು ಸಹಾಯ ಮಾಡ್ತಿದ್ವಿ ಎಂದರು, ಆದರೆ ಎಲ್ಲವನ್ನೂ ಯೋಚಿಸಿ ಸರಿ ಎನಿಸಿದ ಮೇಲೆಯೇ ನಿರ್ಧಾರ ತೆಗೆದುಕೊಂಡೆವು ಹಾಗೂ ಮೊದಲಿಗೆ ಚಿತ್ರದ ಬಗ್ಗೆ ಹೇಳಿದಾಗ ಯಾರೂ ಸಹ ಸಹಾಯ ಮಾಡಲು ಮುಂದೆ ಬರಲಿಲ್ಲ ಎಂದೂ ಸಹ ಅಂಜನ್ ನಾಗೇಂದ್ರ ಹೇಳಿದರು.


Click it and Unblock the Notifications











