ಬಿಡುಗಡೆ ಆದ 20 ದಿನಕ್ಕೆ ಒಟಿಟಿಗೆ ಬಂದ ರಜನೀಕಾಂತ್ 'ಅಣ್ಣಾತೆ'
ರಜನೀಕಾಂತ್ ಸಿನಿಮಾ ಬಿಡುಗಡೆ ಎಂದರೆ ಅದು ಹಬ್ಬವೇ ಸರಿ. ರಜನೀಕಾಂತ್ ಸಿನಿಮಾ ಬಂತೆಂದರೆ ತಿಂಗಳಾನುಗಟ್ಟಲೆ ಚಿತ್ರಮಂದಿರದ ಮುಂದೆ ಜಾತ್ರೆಯೇ ನೆರೆಯುತ್ತಿತ್ತು. ಕಟ್ಟಿದ ಸ್ಟಾರು, ಕಟೌಟನ್ನು ನೂರು ದಿನಗಳ ವರೆಗೆ ಇಳಿಸುತ್ತಿರಲಿಲ್ಲ.
ಆದರೆ ಈಗ ಹಾಗಿಲ್ಲ. ಎಲ್ಲವೂ ಕಮರ್ಷಿಯಲ್ ಮಯ. ರಜನೀಕಾಂತ್ ನಟನೆಯ 'ಅಣ್ಣಾತೆ' ಸಿನಿಮಾ ಬಿಡುಗಡೆ ಆದ ಕೇವಲ 20 ದಿನಗಳಲ್ಲಿ ಒಟಿಟಿಗೆ ಬಂದಿದೆ. ಒಟಿಟಿ ದೈತ್ಯ ನೆಟ್ಫ್ಲಿಕ್ಸ್ನಲ್ಲಿ ಇಂದಿನಿಂದ 'ಅಣ್ಣಾತೆ' ಪ್ರಸಾರವಾಗುತ್ತಿದೆ.
'ಅಣ್ಣಾತೆ' ಸಿನಿಮಾ ನವೆಂಬರ್ 04 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಗ್ಗೆ ಬಹಳ ಒಳ್ಳೆ ವಿಮರ್ಶೆಗಳು ಬಂದಿರಲಿಲ್ಲವಾದರೂ ಸಿನಿಮಾ ಬಹಳ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಅಷ್ಟರಲ್ಲೆ ಸಿನಿಮಾವನ್ನು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಮಾಡಲಾಗಿದೆ.

ಹಣ ಬಾಚುವ ಅವಕಾಶ ಒಟಿಟಿ!
ಇತ್ತೀಚೆಗೆ ಇದು ಮಾಮೂಲಿ ಅಭ್ಯಾಸವಾಗಿಬಿಟ್ಟಿದೆ. ದೊಡ್ಡ ಸ್ಟಾರ್ ನಟರ ಸಿನಿಮಾವನ್ನು ಮೊದಲೇ ಒಟಿಟಿಗೆ ಬಹಳ ಒಳ್ಳೆಯ ಬೆಲೆಗೆ ಮಾರಾಟ ಮಾಡಿ, ಒಪ್ಪಂದ ಸಹ ಮಾಡಿಕೊಳ್ಳಲಾಗಿರುತ್ತದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆದ ಎರಡು ಅಥವಾ ಮೂರು ವಾರಕ್ಕೆ ಅದು ಒಟಿಟಿಗೆ ಬಂದಿರುತ್ತದೆ. ಚಿತ್ರಮಂದಿರಗಳಲ್ಲಿ ಸಹ ಎರಡು ವಾರ ಸಿನಿಮಾ ಚೆನ್ನಾಗಿ ಓಡಿದರೆ ಸಾಕು ನಿರ್ಮಾಪಕನಿಗೆ ದೊಡ್ಡ ಮಟ್ಟದ ಲಾಭವೇ ಬಂದಿರುತ್ತದೆ. ಹಾಗಾಗಿ ನಿರ್ಮಾಪಕ ಸಹ ಇನ್ನಷ್ಟು ಹಣ ಬಾಚುವ ಒಟಿಟಿ ಅವಕಾಶವನ್ನು ಏಕಾದರೂ ಕೈಚೆಲ್ಲಿಕೊಳ್ಳುತ್ತಾನೆ? ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಸಹ ಬಿಡುಗಡೆ ಆಗಿ ತಿಂಗಳಾಗುವ ಒಳಗೆ ಒಟಿಟಿಗೆ ಬಂದಿತ್ತು. ಪುನೀತ್ ರಾಜ್ಕುಮಾರ್ ನಟನೆಯ 'ಯುವರತ್ನ' ಸಿನಿಮಾದ್ದೂ ಇದೇ ಕತೆ.

ದೊಡ್ಡ ಕಲೆಕ್ಷನ್ ಮಾಡಿದ್ದ 'ಅಣ್ಣಾತೆ' ಸಿನಿಮಾ
ಇನ್ನು 'ಅಣ್ಣಾತೆ' ಸಿನಿಮಾ ಬಿಡುಗಡೆ ಆದ ಮೊದಲ ವಾರವೇ 200 ಕೋಟಿ ಹಣ ಗಳಿಸಿತ್ತು. ಅದಾದ ಬಳಿಕ 12ನೇ ದಿನಕ್ಕೆ 225 ಕೋಟಿ ರುಪಾಯಿಗಳನ್ನು 'ಅಣ್ಣಾತೆ' ಗಳಿಸಿತ್ತು. ಬಳಿಕ 18ನೇ ದಿನಕ್ಕೆ ಸಿನಿಮಾದ ಒಟ್ಟು ಕಲೆಕ್ಷನ್ 234.67 ಕೋಟಿ ರುಪಾಯಿಗಳು. ಅಕ್ಷಯ್ ಕುಮಾರ್ ನಟನೆಯ 'ಸೂರ್ಯವಂಶಿ' ಸಿನಿಮಾ ಎರಡನೇ ವಾರದಲ್ಲಿಯೂ 200 ಕೋಟಿ ಗಳಿಸಲು ಪರದಾಡುತ್ತಿದೆ. ಅಂಥಹುದರಲ್ಲಿ ರಜನೀಕಾಂತ್ ಸಿನಿಮಾ ಕೇವಲ ಒಂದು ವಾರದಲ್ಲಿ 200 ಕೋಟಿ ಹಣ ಗಳಿಸಿತ್ತು.

ಹಲವು ಭಾಷೆಗಳಲ್ಲಿ ವೀಕ್ಷಿಸಲು ಲಭ್ಯವಿದೆ
ಇದೀಗ ನೆಟ್ಫ್ಲಿಕ್ಸ್ನಲ್ಲಿ 'ಅಣ್ಣಾತೆ' ಬಿಡುಗಡೆ ಆಗಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾವನ್ನು ನೋಡಲು ಲಭ್ಯವಿದೆ. 'ಅಣ್ಣಾತೆ' ಸಿನಿಮಾ ಇಷ್ಟು ಬೇಗ ಒಟಿಟಿಗೆ ಬಂದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದ್ದು, ಕೆಲವರು ನಿರ್ಮಾಪಕರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರೆ, ಇನ್ನು ಕೆಲವರು ಪರವಾಗಿ ವಾದಿಸಿದ್ದಾರೆ. ರಜನೀಕಾಂತ್ ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡಿದರಷ್ಟೆ ಚೆಂದ ಎಂದು ಹಲವರು ಹೇಳಿದ್ದಾರೆ. ಆದರೆ ಒಟಿಟಿಗೆ ಬಿಡುಗಡೆ ಮಾಡಿರುವ ಕಾರಣ ಸಿನಿಮಾವು ಜಗತ್ತಿನಾದ್ಯಂತ ಇರುವ ರಜನೀ ಅಭಿಮಾನಿಗಳಿಗೆ ನೋಡಲು ದೊರಕಿದೆ ಎಂದು ಮತ್ತೊಂದು ಬಣ ವಾದಿಸಿದೆ.

ನಯನತಾರಾ-ಕೀರ್ತಿ ಸುರೇಶ್ ಮುಖ್ಯ ಪಾತ್ರದಲ್ಲಿ
'ಅಣ್ಣಾತೆ' ಸಿನಿಮಾವು ಕೌಟುಂಬಿಕ ಕತನ ಹೊಂದಿದ್ದು, ಅಣ್ಣ-ತಂಗಿಯ ನಡುವಿನ ಬಾಂಧವ್ಯ ಹೇಳುವ ಕತೆಯಾಗಿದೆ. ರಜನೀಕಾಂತ್ ತಂಗಿಯಾಗಿ ಕೀರ್ತಿ ಸುರೇಶ್ ನಟಿಸಿದ್ದಾರೆ. ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ವಿಲನ್ಗಳಾಗಿ ಜಗಪತಿ ಬಾಬು, ಪ್ರಕಾಶ್ ರೈ, ಅಭಿಮನ್ಯು ಸಿಂಗ್ ನಟಿಸಿದ್ದಾರೆ. ಹಾಸ್ಯ ನಟ ಬಾಲಾ, ಸೂರಿ ಜೊತೆಗೆ ವಿಶೇಷ ಪಾತ್ರಗಳಲ್ಲಿ ಖುಷ್ಬು ಹಾಗೂ ಮೀನ ಸಹ ಇದ್ದಾರೆ. ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಸನ್ ನೆಟ್ವರ್ಕ್ಸ್ನ ಕಲಾನಿಧಿ ಮಾರನ್.


Click it and Unblock the Notifications











