ಸಿಂಹಾದ್ರಿ ಚಿತ್ರವಿಮರ್ಶೆ: ನಾಡಿನ ಸಮಸ್ತ ತಂಗಿಯರಿಗೆ ಅರ್ಪಣೆ
ಕೆಲವು ತಿಂಗಳ ಹಿಂದೆ ಬಂದ ತೆಲುಗಿನ ಸಿಂಹಾದ್ರಿ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಸ್ವಮೇಕ್ ಚಿತ್ರವೆಂದು ಹೇಳಿಕೊಳ್ಳಬಹುದು, ಹಾಗಂತ ಚಿತ್ರ ನೋಡಿಸಿಕೊಂಡು ಹೋಗುತ್ತಾ? ಸುಮಾರು ಎರಡು ಮುಕ್ಕಾಲು ಗಂಟೆಯ ಸುದೀರ್ಘ ಪಯಣದ ಚಿತ್ರ ಹೇಗಿದೆ?
ತನ್ನ ಮಾಸ್ ಲುಕ್ಕಿನಿಂದ ಹೊರಬಂದು 'ಬ್ಲ್ಯಾಕ್ ಕೋಬ್ರಾ' ದುನಿಯಾ ವಿಜಯ್ ಸೆಂಟಿಮೆಂಟ್ ಪಾತ್ರವೊಂದರಲ್ಲಿ ನಟಿಸಿರುವ ಚಿತ್ರವಿದು. ಅಣ್ಣತಂಗಿಯರ ಈ ಬಂಧ ಜನುಮ ಜನುಮಗಳ ಅನುಭಂದ ಎನ್ನುವ ಈ ಚಿತ್ರದ ಕಥೆ ಹೊಸದೇನಲ್ಲ. ಆದರೆ ಚಿತ್ರಕಥೆಯಲ್ಲಿ ಏನಾದರೂ ಹೊಸತನವಿದೆಯಾ? ವಿಮರ್ಶೆ ಓದಿ..
ಅದ್ದೂರಿ ಸಾಹಸ ಸನ್ನಿವೇಶದೊಂದಿಗೆ ವಿಜಯ್ ಎಂಟ್ರಿ
ಗೋಕಳ್ಳ ಸಾಗಾಣಿಕೆದಾರರನ್ನು ಸದೆಬಡಿಯುವ ಅದ್ದೂರಿ ಫೈಟ್ ನೊಂದಿಗೆ ತೆರೆ ಮೇಲೆ ಬರುವ ದುನಿಯಾ ವಿಜಯ್ (ಸಿಂಹಾದ್ರಿ) ತನ್ನ ತಂಗಿ ನಂದಿನಿ (ಐಶ್ವರ್ಯ) ಜೊತೆಗೆ ಕಮ್ಮಸಂದ್ರ ಎನ್ನುವ ಹಳ್ಳಿಯಲ್ಲಿ ಹಾಲು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುತ್ತಾನೆ. ಮೊದಲಾರ್ಧದ ತನಕ ಹೆಚ್ಚುಕಮ್ಮಿ ಹಳ್ಳಿಮೇಷ್ಟ್ರು ಚಿತ್ರದಲ್ಲಿ ಪುಟ್ಟ ಹುಡುಗರ ಜೊತೆ ಚೇಷ್ಠೆ ಮಾಡಿಕೊಂಡಿರುವ ಪಾತ್ರವನ್ನು ನೆನಪಿಸುವಂತ ಪಾತ್ರ ನಾಯಕಿಯದ್ದು (ಸೌಂದರ್ಯ). ಆಕೆ ಕೂಡಾ ಅದೇ ಊರಿನಲ್ಲಿ ನೆಲೆಸಿರುತ್ತಾಳೆ.
ನಾಯಕನ ಮನೆ ಸೇರುವ ನಾಯಕಿ
ನನಗೆ ಹಿಂದೆ, ಮುಂದೆ ಯಾರೂ ಇಲ್ಲ ಎಂದು ನಾಯಕಿ ಸಿಂಹಾದ್ರಿಯ ಮನೆ ಸೇರುತ್ತಾಳೆ. ರೌಡಿಯೂಬ್ಬಳಿಗೆ ತಂಗಿ ಮಾಡಿದ ಚಾಲೆಂಜ್ ನಿಂದಾಗಿ ಸಿಂಹಾದ್ರಿ ನಾಯಕಿಯನ್ನು ಮದುವೆಯಾಗುತ್ತಾನೆ. ಇತ್ತ ಸಿಂಹಾದ್ರಿ ತಂದೆ ನೀಡಿದ್ದ ಬಳುವಳಿಯಿಂದ ಆಗರ್ಭ ಶ್ರೀಮಂತನಾಗಿರುವ (ರಮೇಶ್ ಭಟ್, ಪದ್ಮಾವಾಸಂತಿ ದಂಪತಿ) ಮಗನ ಮೇಲೆ ಸಿಂಹಾದ್ರಿ ತಂಗಿಗಿಗೆ ಪ್ರೇಮಾಂಕುರವಾಗುತ್ತದೆ. ಆದರೆ, ತನ್ನ ಮಾವನ ಮಗನನ್ನು ತನ್ನ ಮಗಳ ಜೊತೆ ಮದುವೆ ಮಾಡಿಸಬೇಕು ಎನ್ನುವುದು ಅಳಿಯ ಪ್ರತಾಪ್ ಗೌಡನ (ಸುಚೇಂದ್ರ ಪ್ರಸಾದ್) ಆಸೆಯಾಗಿರುತ್ತದೆ.
ತಂಗಿ ಇಷ್ಟಪಟ್ಟವಳ ಜೊತೆ ಮದುವೆ
ಸಿಂಹಾದ್ರಿ ತಂಗಿ ಇಷ್ಟ ಪಟ್ಟವನ ಜೊತೆಯೇ ಆಕೆಯ ಮದುವೆಯಾಗುತ್ತದೆ. ಮನೆಗೆ ಕಾಲಿಟ್ಟ ಸೊಸೆ ಅಪಶಕುನ ಎಂದು ಅತ್ತೆ ಸಿಂಹಾದ್ರಿ ತಂಗಿಯ ಜೊತೆ ಕೇವಲವಾಗಿ ನಡೆದುಕೊಳ್ಳುತ್ತಾಳೆ. ತಂಗಿಯನ್ನು ನೋಡಲು ಬರುವ ಸಿಂಹಾದ್ರಿಯನ್ನು ಮನೆಗೆ ಕಾಲಿಡದಂತೆ ದೂರವಿಡಲೂ ಪ್ರತಾಪ್ ಗೌಡ ನಂದಿನಿಗೆ ಕಿವಿಯೂದಿರುತ್ತಾನೆ.
ತಂಗಿಯನ್ನು ಸಾಯಿಸಲು ಮುಂದಾಗುವ ವಿಲನ್
ಗರ್ಭಿಣಿಯಾಗಿರುವ ನಂದಿನಿಯನ್ನು ಸಿಲಿಂಡರ್ ಸ್ಪೋಟಿಸುವ ಮೂಲಕ ಸಾಯಿಸಲು ಪ್ರತಾಪ್ ಗೌಡ ಮುಂದಾಗುತ್ತಾನೆ. ಆದರೆ ನಂದಿನಿಯನ್ನು ಸಾಯಿಸಲು ಪ್ರತಾಪ್ ಗೌಡ ಯಶಸ್ವಿಯಾಗುತ್ತಾನಾ, ಅಣ್ಣತಂಗಿ ಮತ್ತೆ ಒಂದಾಗುತ್ತಾರಾ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.
ಕಥೆಯಲ್ಲಿ ಹೊಸತನವಿಲ್ಲ
ಕಥೆಯಲ್ಲಿ ಹೊಸತನವೇನಿಲ್ಲ, ಚಿತ್ರಕಥೆಯಲ್ಲೂ ಹೇಳಿಕೊಳ್ಳುವಂತದ್ದೂ ಏನೂ ಇಲ್ಲ. ದುನಿಯಾ ವಿಜಯ್ ಅಭಿಮಾನಿಗಳು ಉಘೇ.. ಉಘೇ ಅನ್ನುವಂತಹ ಡೈಲಾಗುಗಳಿಗೆ ಚಿತ್ರದಲ್ಲಿ ಬರವಿದೆ. ಐಸ್ ಕ್ಯಾಂಡಿ ತಿನ್ನಿಸ್ತೀನಿ ನಂಬರ್ ಕೊಡೆ, ತಿಂಗಾಳು ಬೆಳಗಿದವೋ ಎನ್ನುವ ರಿಮಿಕ್ಸ್ ಹಾಡು ಚೆನ್ನಾಗಿ ಮೂಡಿಬಂದಿದೆ. ಕೆ ಡಿ ವೆಂಕಟೇಶ್ ಮತ್ತು ಕೌರವ ವೆಂಕಟೇಶ್ ಅವರ ಸಾಹಸ ಸನ್ನಿವೇಶಗಳು ಚೆನ್ನಾಗಿವೆ.
ಕತ್ತರಿ ಪ್ರಯೋಗಿಸಿದ್ದರೆ ಚೆನ್ನಾಗಿರುತ್ತಿತ್ತು
ಸುಮಾರು ಎರಡು ಮುಕ್ಕಾಲು ಗಂಟೆಯ ಈ ಚಿತ್ರ, ದ್ವಿತೀಯಾರ್ಧದಲ್ಲಿ ಅವಶ್ಯಗತೆಯಿಂತ ಜಾಸ್ತಿ ಉದ್ದ ಆಯಿತು ಎಂದನಿಸದೇ ಇರದು. ಜೋ.ನಿ.ಹರ್ಷ ಕೆಲವೊಂದು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸುವುದನ್ನು ಮರೆತಿದ್ದರೋ ಏನೋ, ಗಿರಿ ಅವರ ಕ್ಯಾಮರಾ ವರ್ಕ್ ಓಕೆ. ವಿಲನ್ ಪಾತ್ರದಲ್ಲಿ ನಟಿಸಿದ ಸುಚೇಂದ್ರ ಪ್ರಸಾದ್ ಅವರದ್ದು ಅದ್ಭುತ ನಟನೆ. ರಮೇಶ್ ಭಟ್, ಪದ್ಮಾವಾಸಂತಿ, ಮಳವಳ್ಳಿ ಸಾಯಿಕೃಷ್ಣ, ಕೋಟೆ ಪ್ರಭಾಕರ್ ಅವರದ್ದು ತೂಕದ ನಟನೆ.
ದುನಿಯಾ ವಿಜಯ್
ದುನಿಯಾ ವಿಜಯ್ ಅವರ ನಟನೆಯ ಬಗ್ಗೆ ಕೆಮ್ಮಂಗಿಲ್ಲ. ಚಿತ್ರದುದ್ದಕ್ಕೂ ಅವರ ನಟನೆ ಕ್ಲಾಸಿಗೂ ಸೈ, ಮಾಸಿಗೂ ಸೈ. ಅಣ್ಣ-ತಂಗಿ ಅನುಬಂಧ ಹೊಂದಿರುವ 'ಸಿಂಹಾದ್ರಿ' ಚಿತ್ರವನ್ನ ಒಮ್ಮೆ ನೋಡಬಹುದು. ತಂಗಿ ಪಾತ್ರದಲ್ಲಿ ನಟಿಸಿದ ಐಶ್ವರ್ಯ ಅವರದ್ದು ಉತ್ತಮ ಅಭಿನಯ, ಆದರೆ ಈ ಮಾತು ನಾಯಕಿಗೂ ಹೇಳಿದರೆ ಅತಿಶಯೋಕ್ತಿಯಾಗಬಹುದು.
ದುನಿಯಾ ವಿಜಯ್ ಸಂದರ್ಶನದಲ್ಲಿ
ದುನಿಯಾ ವಿಜಯ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು, ಬ್ಯಾಂಗ್ ಬ್ಯಾಂಗ್ ಹಿಂದಿ ಚಿತ್ರದ ಮುಂದೆ ನಮ್ಮ ಚಿತ್ರ ಸೋತರೆ ನಮ್ಮ ಚಿತ್ರದಲ್ಲಿ ಏನೋ ಕೊರತೆ ಇರಬಹುದೆಂದು. ಹಾಗಾಗಿ, ಈಗ ಈ ಚಿತ್ರದ ಸೋಲು, ಗೆಲುವು ನಾಡಿನ ಸಮಸ್ತ ಅಣ್ಣ ತಂಗಿಯರಿಗೆ ಬಿಟ್ಟ ವಿಚಾರ.


Click it and Unblock the Notifications











