Thalaivii First Review: ಒಂದೇ ಪದದಲ್ಲಿ ಹೇಳುವುದಾದರೆ 'ಪವರ್ಫುಲ್'
ಭಾರಿ ನಿರೀಕ್ಷೆ ಮೂಡಿಸಿರುವ 'ತಲೈವಿ' ಸಿನಿಮಾ ಸೆಪ್ಟೆಂಬರ್ 10 ರಂದು ವರ್ಲ್ಡ್ವೈಡ್ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ಹಾಗೂ ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ನಟಿಸಿರುವುದು ಬಹಳ ಕುತೂಹಲ ಮೂಡಿಸಿದೆ. ಬಿಡುಗಡೆಗೆ ಒಂದೇ ದಿನ ಬಾಕಿಯಿದ್ದು, ಪ್ರಚಾರವೂ ಜೋರಾಗಿದೆ. ಚೆನ್ನೈನ, ಹೈದರಾಬಾದ್ ಹಾಗೂ ಮುಂಬೈ ನಗರಗಳಲ್ಲಿ ತಲೈವಿ ಪ್ರಚಾರ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲೆಡೆಯೂ ಕಂಗನಾ ಗಮನ ಸೆಳೆಯುತ್ತಿದ್ದಾರೆ.
ಸ್ವತಃ ಕಂಗನಾ ರಣಾವತ್ ಅವರೇ ಹೇಳಿಕೊಂಡಿರುವ ಪ್ರಕಾರ, 'ತನ್ನ ಹದಿನೈದು ವರ್ಷದ ವೃತ್ತಿ ಜೀವನದಲ್ಲಿ ಇದು ಬಹಳ ವಿಶೇಷವಾದ ಚಿತ್ರವಾಗಲಿದೆ' ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ತಲೈವಿ ಸಿನಿಮಾ ಅಧಿಕೃತವಾಗಿ ಥಿಯೇಟರ್ನಲ್ಲಿ ರಿಲೀಸ್ ಮಾಡುವುದಕ್ಕೂ ಮುಂಚೆ ಪ್ರೀಮಿಯರ್ ಪ್ರದರ್ಶನ ಕಂಡಿದೆ. ಸಿನಿಮಾ ನೋಡಿದ ಪತ್ರಕರ್ತರು, ವಿಮರ್ಶಕರು ತಲೈವಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಕಂಗನಾ-ಅರವಿಂದ್ ಸ್ವಾಮಿ ನಟನೆಗೆ ಫಿದಾ ಆಗಿದ್ದಾರೆ. ಬಾಲಿವುಡ್ ಇಂಡಸ್ಟ್ರಿಯ ಖ್ಯಾತ ಚಿತ್ರ ವಿಮರ್ಶಕ ತರಣ್ ಆದರ್ಶ್ ಸಹ ತಲೈವಿ ವಿಮರ್ಶೆ ಮಾಡಿದ್ದು, ''ಪವರ್ಫುಲ್'' ಎಂದಿದ್ದಾರೆ. ಮುಂದೆ ಓದಿ....
ತಲೈವಿ 'ಪವರ್ಫುಲ್'
''ಹಿಂದಿಯಲ್ಲಿ ರಿಲೀಸ್ ಆದ ಬಯೋಪಿಕ್ಗಳಲ್ಲಿ ಅತ್ಯಂತ ಶಕ್ತಿಯುತವಾದ ಸಿನಿಮಾ ಇದು. ಗಟ್ಟಿಯಾದ ಭಾವನೆ + ಅದ್ಭುತ ನಾಟಕೀಯ ಸನ್ನಿವೇಶಗಳು + ಕಲಾವಿದರಿಂದ ಅತ್ಯುತ್ತಮ ಪ್ರದರ್ಶನ (ಪ್ರಶಸ್ತಿಗೆ ಅರ್ಹವಾದ ಕಂಗನಾ ರಣಾವತ್ ಮತ್ತು ಅರವಿಂದ್ ಸ್ವಾಮಿ ನಟನೆ) ಪ್ರಮುಖ ಅಂಶಗಳು'' ಎಂದು ತರಣ್ ಆದರ್ಶ್ ವಿಮರ್ಶಿಸಿದ್ದಾರೆ. ಒಂದೇ ಒಂದು ಪದದಲ್ಲಿ ಹೇಳುವುದಾದರೆ 'ಪವರ್ಫುಲ್' ಎಂದಿದ್ದಾರೆ.
ವೃತ್ತಿ ಜೀವನದಲ್ಲಿ ಅತ್ಯುತ್ತಮ
''ಕಂಗನಾ ರಣಾವತ್ ವೃತ್ತಿ ಜೀವನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಚಿತ್ರ. ಖಂಡಿತವಾಗಿಯೂ ಈ ಸಿನಿಮಾ ಪ್ರಶಂಸೆಗೆ ಪಾತ್ರವಾಗಲಿದೆ. ಪ್ರಶಸ್ತಿಯೂ ಲಭ್ಯವಾಗಬಹುದು'' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅರವಿಂದ್ ಸ್ವಾಮಿ ಅದ್ಭುತ
''ತಲೈವಿ ಚಿತ್ರದಲ್ಲಿ ಅರವಿಂದ್ ಸ್ವಾಮಿ ಪಾತ್ರ ಮತ್ತು ಅಭಿನಯ ಅದ್ಭುತ. ಅವರ ನಟನೆಗೆ ಸೂಕ್ತ ಗೌರವ ಸಿಗಬೇಕು. ಅದೇ ರೀತಿ ಹೆಚ್ಚು ಗಮನ ಸೆಳೆಯುವ ಮತ್ತೊಂದು ನಟ ರಾಜ್ ಅರ್ಜುನ್. ಈತ ಕೂಡ ಬಹಳ ಸೊಗಸಾಗಿ ನಟಿಸಿದ್ದಾರೆ. ನಾಸರ್ ಬರುವ ಪ್ರತಿಯೊಂದು ದೃಶ್ಯದಲ್ಲಿ ಮಿಂಚಿದ್ದಾರೆ'' ಎಂದು ತರಣ್ ಟ್ವೀಟ್ ಮಾಡಿದ್ದಾರೆ. ಅರವಿಂದ್ ಸ್ವಾಮಿ ಎಂಜಿಆರ್ ಪಾತ್ರದಲ್ಲಿ ಹಾಗೂ ನಾಸರ್ ಎಂ ಕರುಣಾನಿಧಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಪರಿಣಾಮಕಾರಿ ಸ್ಕ್ರಿಪ್ಟ್
''ಜಯಲಲಿತಾ ಅವರ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಒಳಗೊಂಡಿರುವ ತಲೈವಿ ಸ್ಕ್ರಿಪ್ಟ್ ಬಹಳ ಪರಿಣಾಮಕಾರಿಯಾಗಿ ರಚಿಸುವಲ್ಲಿ ಬರಹಗಾರರಾದ ವಿಜಯೇಂದ್ರ ಪ್ರಸಾದ್ (ಭಜರಂಗಿ ಭಾಯಿಜಾನ್, ಬಾಹುಬಲಿ) ಮತ್ತು ರಜತ್ ಅರೋರಾ ಯಶಸ್ವಿಯಾಗಿದ್ದಾರೆ. ಜಯಲಲಿತಾ ಅವರ ಹೋರಾಟಗಳು, ಅಡೆತಡೆಗಳು, ಆತಂಕಗಳು ಮತ್ತು ಅಂತಿಮವಾಗಿ ವಿಜಯವನ್ನು ಎತ್ತಿ ತೋರಿಸುವ ಆಕರ್ಷಕ, ತೀಕ್ಷ್ಣವಾದ ಚಿತ್ರಕಥೆಯನ್ನು ಹೆಣೆದಿದ್ದಾರೆ'' ಎಂದು ಪ್ರಶಂಸಿಸಿದ್ದಾರೆ.
ಎಲ್ ವಿಜಯ್ ನಿರ್ದೇಶನ
''ವಿಜಯ್ ನಿರ್ದೇಶನ ಅತ್ಯುನ್ನತವಾಗಿದೆ. ಮೊದಲಾರ್ಧ ಪ್ರೇಮಕಥೆಯನ್ನು ಒಳಗೊಂಡಿದ್ದು, ದ್ವಿತೀಯಾರ್ಧ ರಾಜಕೀಯ ಘಟನೆಗಳ ಸುತ್ತ ಬರುತ್ತದೆ. ಪ್ರತಿಯೊಂದನ್ನು ಮನಮುಟ್ಟುವಂತೆ ಸಮತೋಲನವಾಗಿ ತೆರೆಗೆ ತಂದಿದ್ದಾರೆ. ಹಳೆಯ ಸಂದರ್ಭ, ಸನ್ನಿವೇಶಗಳನ್ನು ಮರುಸೃಷ್ಟಿಸುವಲ್ಲಿಯೂ ವಿಶೇಷವಾಗಿ ಗಮನ ಸೆಳೆದಿದ್ದಾರೆ'' ಎಂದು ತರಣ್ ಆದರ್ಶ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಜಯಲಲಿತಾ ಅವರ ಬಯೋಪಿಕ್ ಚಿತ್ರವನ್ನು ಎ ಎಲ್ ವಿಜಯ್ ನಿರ್ದೇಶಿಸಿದ್ದಾರೆ. ವಿಜಯಂದ್ರ ಪ್ರಸಾದ್ ಕಥೆ ಮಾಡಿದ್ದಾರೆ. ವಿಷ್ಣುವರ್ಧನ ಇಂದುರಿ, ಹಿತೇಶ್ ಟಕ್ಕರ್, ತಿರುಮಲ ರೆಡ್ಡಿ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ಜೀ ಸ್ಟುಡಿಯೋಸ್ ವಿತರಣೆಗೆ ಕೈ ಜೋಡಿಸಿದೆ.


Click it and Unblock the Notifications











