Don't Miss!
- Lifestyle ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- News ಮನೆ ಕೆಲಸ ಮಾಡಿದ ಪತ್ನಿಗೆ ಪತಿಯಿಂದ 76 ಲಕ್ಷ ರೂಪಾಯಿ ಸಂಬಳ
- Automobiles Self-Driving Car: ಭಾರತೀಯರು ಅಸಮಾನ್ಯರು... ಬೊಲೆರೋದಲ್ಲಿ ಭವಿಷ್ಯ ಬದಲಿಸುವ ತಂತ್ರಜ್ಞಾನ!
- Sports Viral look: IPL 2024 ಆರಂಭಕ್ಕೂ ಮುನ್ನ ಸಾಮಾಜಿಕ ತಾಣದಲ್ಲಿ ಸಂಚಲನ ಮೂಡಿಸಿರುವ ವಿರಾಟ್ ಕೊಹ್ಲಿ Trendy look
- Technology Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚಂದ್ರ' ಚಿತ್ರ ವಿಮರ್ಶೆ: ಚೇತೋಹಾರಿ ದೃಶ್ಯಕಾವ್ಯ
ಬಹಳಷ್ಟು ನುರಿತ ಕಲಾವಿದರು, ತಂತ್ರಜ್ಞರನ್ನು ಇಟ್ಟುಕೊಂಡು ರೂಪಾ ಅಯ್ಯರ್ ಅವರು ಒಂದು ಸುಂದರ ದೃಶ್ಯ ಹಾಗೂ ಪ್ರೇಮಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ರಾಜಕುಮಾರಿಯೊಬ್ಬಳ ರಸಕಾವ್ಯವಿದು. ಶ್ರೀಯಾ ಸರನ್ ಅವರಂತೂ ರಾಜಕುಮಾರಿ 'ಚಂದ್ರ' ಪಾತ್ರಕ್ಕೆ ಜೀವ ತುಂಬಿರುವ ಪರಿಯನ್ನು ತೆರೆಯ ಮೇಲೆಯೇ ನೋಡಿ ಕಣ್ತುಂಬಿಕೊಳ್ಳಬೇಕು.
ರಾಜಮನೆತನದ ಇಂದಿನ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಹೇಳುತ್ತಾ ಜೊತೆಜೊತೆಗೆ ಚಂದ್ರಾವತಿಯ ಪ್ರೇಮಯಾನ ಸಾಗುತ್ತದೆ. ರಾಜಮನೆತನದ ಸ್ವಾಭಿಮಾನ, ಹಮ್ಮುಬಿಮ್ಮುಗಳು ಚಂದ್ರಾವತಿಯ ಪ್ರೇಮ ನಿವೇದನೆಗೆ ಸಾಕಷ್ಟು ಅಡೆತಡೆಗಳನ್ನು ಒಡ್ಡಿದರೂ ಕಡೆಗೆ ಪ್ರೇಮಿಗಳು ಒಂದಾಗುತ್ತಾರೆ. ಇದೇ ಚಿತ್ರದ ಒನ್ ಲೈನ್ ಸ್ಟೋರಿ.
ಇನ್ನು ಲವರ್ ಬಾಯ್ ಪಾತ್ರಗಳ ಮೂಲಕ ಹೆಂಗೆಳೆಯರ ಮನಗೆದ್ದಿದ್ದ ಲವ್ಲಿ ಸ್ಟಾರ್ ಪ್ರೇಮ್ ಅವರು ಇಲ್ಲಿ ಸಿಕ್ಸ್ ಪ್ಯಾಕ್ ಖದರ್ ತೋರಿಸಿದ್ದಾರೆ. ಚಿತ್ರದಲ್ಲಿ ಅವರದು ಸಂಗೀತ ಶಿಕ್ಷಕ ಚಂದ್ರಹಾಸನ ಪಾತ್ರ. ಆದರೆ ಪಾಠ ಹೇಳಿಕೊಡುವುದಕ್ಕಿಂತಲೂ ಹೆಚ್ಚಾಗಿ ಸದಾ ಚಂದ್ರಾವತಿಯ ಧ್ಯಾನದಲ್ಲೇ ಕಳೆದುಹೋಗುತ್ತಾರೆ.
ಚಿತ್ರ: ಚಂದ್ರ
ಕಥೆ, ಚಿತ್ರಕಥೆ, ನಿರ್ದೇಶನ, ಸಂಭಾಷಣೆ: ರೂಪಾ ಅಯ್ಯರ್
ನಿರ್ಮಾಣ: ಇಂಡಿಯನ್ ಕ್ಲಾಸಿಕ್ ಆರ್ಟ್ಸ್ ಮತ್ತು ನರಸಿಂಹ ಆರ್ಟ್ಸ್
ಛಾಯಾಗ್ರಹಣ: ಪಿ.ಕೆ.ಎಚ್.ದಾಸ್
ಸಂಗೀತ: ಗೌತಮ್ ಶ್ರೀವತ್ಸ
ಪಾತ್ರವರ್ಗ: ಪ್ರೇಮ್ ಕುಮಾರ್, ಶ್ರೀಯಾ ಸರನ್, ಶ್ರೀನಾಥ್, ಧರ್ಮ, ವಿವೇಕ್ (ಹಾಸ್ಯನಟ), ಗಣೇಶ್ ವೆಂಕಟರಾಮನ್, ಸುಚೇಂದ್ರ ಪ್ರಸಾದ್, ಸುಮಿತ್ರಾ, ಸುಕನ್ಯಾ, ವಿಜಯ್ ಕುಮಾರ್ ಮುಂತಾದವರು.
ಪ್ರೇಮಧಾನ್ಯದಲ್ಲೇ ಕಳೆದು ಹೋಗುವ ಪಾತ್ರಗಳು
ಇನ್ನು ಚಂದ್ರಾವತಿ ಸಹ ಅಷ್ಟೇ ಚಂದ್ರಹಾಸನ ಕನಸಿನಲ್ಲೇ ಕರಗಿಹೋಗುತ್ತಾಳೆ. ಇವರಿಬ್ಬರ ನಡುವಿನ ಗಾಢ ಪ್ರೇಮಕ್ಕೆ ರಾಜಮನೆತನದ ಸ್ವಾಭಿಮಾನ ಅಡ್ಡ ಬರುತ್ತದೆ. ಕಡೆಗೇನಾಗುತ್ತದೆ ಎಂಬ ಕುತೂಹಲದಲ್ಲಿ ಕಥೆ ಸಾಗುತ್ತದೆ.
ಕಣ್ಣಿಗೆ ತಂಪೆರೆಯುವ ಪಿಕೆಎಚ್ ದಾಸ್ ಛಾಯಾಗ್ರಹಣ
ಚಿತ್ರದಲ್ಲಿ ಬರುವ ಕೆಲವು ಪ್ರಣಯಭರಿತ ಸನ್ನಿವೇಶಗಳಲ್ಲಿ ಪ್ರೇಮ್ ಹಾಗೂ ಶ್ರೀಯಾ ಇಬ್ಬರೂ ಮೈಚಳಿ ಬಿಟ್ಟು ಅಭಿನಯಿಸಿರುವ ಪರಿ ಅನನ್ಯ. ಈ ದೃಶ್ಯಗಳಿಗೆ ಮತ್ತಷ್ಟು ಮೆರುಗು ನೀಡಿರುವುದು ಪಿ.ಎಚ್.ಕೆ.ದಾಸ್ ಅವರ ಛಾಯಾಗ್ರಹಣ. ಜೊತೆಗೆ ಹಿತವಾದ ಗೌತಮ್ ಶ್ರೀವತ್ಸ ಅವರ ಹಿನ್ನೆಲೆ ಸಂಗೀತ.
ಗೌತಮ್ ಶ್ರೀವತ್ಸ ಅವರ ಸೊಗಸಾದ ಸಂಗೀತ
ಓಂಕಾರದಲ್ಲಿ ಝೇಂಕಾರ...ನೀ ಸೆಳೆವೆ ಬಿಡದೆ ನನ್ನನು..ಮೌನ ಮೌನದಲಿ ಹಾಡುಗಳು ಕೇಳಲು ಎಷ್ಟು ಸೊಗಸಾಗಿವೆಯೋ ಚಿತ್ರೀಕರಣವೂ ಅಷ್ಟೇ ಸೊಗಸಾಗಿ ಮೂಡಿಬಂದಿದೆ. ಒಮ್ಮೆ ಮಾತ್ರ ಬಂದು ಹೋಗುವ ಪ್ರಾಚೀನ ಯುದ್ಧ ಕಲೆ ಕಳರಿ ಪಯಟ್ಟು ದೃಶ್ಯಗಳು ಇನ್ನೊಂದಿಷ್ಟು ಇರಬೇಕಾಗಿತ್ತು ಅನ್ನಿಸುತ್ತದೆ.
ಪ್ರೇಮಿಗಳಿಬ್ಬರ ಸುತ್ತ ಕಳೆದುಹೋಗುವ ಕಥೆ
ಶ್ರೀನಾಥ್, ಧರ್ಮ, ವಿವೇಕ್ (ಹಾಸ್ಯನಟ), ಗಣೇಶ್ ವೆಂಕಟರಾಮನ್, ಸುಚೇಂದ್ರ ಪ್ರಸಾದ್, ಸುಮಿತ್ರಾ, ಸುಕನ್ಯಾ, ವಿಜಯ್ ಕುಮಾರ್ (ತಮಿಳು ನಟ) ಮುಂತಾದ ಕಲಾವಿದರಿದ್ದರೂ ಬಹುತೇಕ ಕಥೆ ಪ್ರೇಮಿಗಳಿಬ್ಬರ ಸುತ್ತ ಕಳೆದುಹೋಗುತ್ತದೆ.
ಚಿತ್ರದ ಪ್ಲಸ್ ಮತ್ತು ಮೈನಸ್ ಪಾಯಿಂಟ್
ಚಿತ್ರಕಥೆ ರಾಜಕುಮಾರಿ ಚಂದ್ರಾವತಿ ಹಾಗೂ ಚಂದ್ರಹಾಸನ ಬಿಟ್ಟು ಅತ್ತಿತ್ತ ಒಂದಿಂಚೂ ಸುಳಿಯುದಷ್ಟು ಬಿಗಿ ನಿರೂಪಣೆ ಇದೆ. ಇದೇ ಚಿತ್ರದ ಪ್ಲಸ್ ಹಾಗೂ ಮೈನಸ್ ಪಾಯಿಂಟ್ ಎನ್ನಬಹುದು. ಚಿತ್ರದಲ್ಲಿ ಬಳಸಿರುವ ಕಾಸ್ಟ್ಯೂಮ್ಸ್, ಸಂಗೀತ, ದೃಶ್ಯ ವೈಭವದ ಮುಂದೆ ಕಥೆ ಪೇಲವವಾಗಿ ಕಾಣುತ್ತದೆ.
ಎಲ್ಲ ವಿಭಾಗಗಳಲ್ಲೂ ರೂಪಾ ಅಯ್ಯರ್ ಬಿಗಿ ಹಿಡಿತ
ಕಥೆ, ಚಿತ್ರಕಥೆ, ನಿರ್ದೇಶನ, ಪ್ರಸಾಧನ, ಕಲಾ ನಿರ್ದೇಶನ ಹೀಗೆ ರೂಪಾ ಅಯ್ಯರ್ ಎಲ್ಲ ವಿಭಾಗಗಳನ್ನೂ ಚಾಕಚಕ್ಯತೆಯಿಂದ ನಿಭಾಯಿಸಿರುವುದು ಎದ್ದು ಕಾಣುವ ಅಂಶ. ರವಿವರ್ಮ ಅವರ ಸಾಹಸ ಅಗತ್ಯಕ್ಕೆ ತಕ್ಕಂತೆ ಪರಿಮಿತವಾಗಿದೆ.
ಸಿರಿತನಕ್ಕಿಂತ ಪ್ರೀತಿಯೇ ದೊಡ್ಡದು
ತಮ್ಮ ಮಗಳಿಗೆ ರಾಜಮನೆತನದ ಹುಡುಗನೇ ಬೇಕು ಎಂದು ತಂದೆತಾಯಿ ಬಯಸುತ್ತಾರೆ. ಕಡೆಗೆ ಸಿರಿತನಕ್ಕಿಂತ ಮುಖ್ಯ ನಿಜವಾದ ಪ್ರೀತಿಯೇ ದೊಡ್ಡದು ಎಂಬುದು ಚಿತ್ರದ ವಸ್ತು. ಇದಕ್ಕಾಗಿ ರಾಜಮನೆತನದ ಹುಡುಗನನ್ನೇ ತಿರಸ್ಕರಿಸುತ್ತಾಳೆ ಚಂದ್ರಾವತಿ.
ರಾಕಿಂಗ್ ಸ್ಟಾರ್ ಯಶ್ ರಾಕಿಂಗ್ ಸಾಂಗ್
ಇನ್ನು ರಾಕಿಂಗ್ ಸ್ಟಾರ್ ಯಶ್ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಪಾತ್ರ ಆ ಹಾಡಿಗಷ್ಟೇ ಸೀಮಿತವಾಗಿದೆ. ಮೈಸೂರು ದಸರಾ ಸಂದರ್ಭದಲ್ಲಿ ಬರುವ ಹಾಡು ಅದು. ಇಲ್ಲಿ ಯಾರು ಕುಣಿದಿದ್ದರೂ ನಡೆಯುತ್ತಿತ್ತು. ಯಶ್ ಅವರನ್ನು ಬಳಸಿಕೊಂಡು ಈ ಹಾಡಿಗೆ ಒಂದು ಭಿನ್ನ ನೋಟ ನೀಡಲಾಗಿದೆ.
ವಿವೇಕ್ ಅವರ ಹಾಸ್ಯದಲ್ಲಿ ಹೊಸತನವಿಲ್ಲ
ಚಿತ್ರದಲ್ಲಿ ಎಲ್ಲವೂ ಇದೆ. ಮೊದಲರ್ಧಲ್ಲಿರುವ ವೇಗ ದ್ವಿತೀಯಾರ್ಧದಲ್ಲಿಲ್ಲ. ಇನ್ನು ವಿವೇಕ್ ಅವರ ಹಾಸ್ಯದಲ್ಲಿ ಹೊಸತನವಿಲ್ಲ. ಚಿತ್ರದಲ್ಲಿ ಸಾಧು ಕೋಕಿಲ ಪಾತ್ರ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬಂತಿದೆ. ಈ ದೃಶ್ಯ ಪ್ರೇಮಕಾವ್ಯವನ್ನು ನೋಡಿ ಆನಂದಿಸಲು ನಮ್ಮದೇನು ತಕರಾರಿಲ್ಲ.