'ದಾಸ್ವಾಳ' ಚಿತ್ರ ವಿಮರ್ಶೆ: ಬಾಡಿ ಹೋದ ಹೂವು
'ಪ್ರೇಮ್ ಅಡ್ಡ' (2012) ಚಿತ್ರದ ಬಳಿಕ ನಿರ್ದೇಶಕ ಪ್ರೇಮ್ ಪ್ರೇಕ್ಷಕರ ಮುಂದೆ 'ದಾಸ್ವಾಳ' ಹಿಡಿದು ಬಂದಿರುವ ಚಿತ್ರವಿದು. ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲಿನಲ್ಲಿ ಟೂರಿಸ್ಟ್ ಗೈಡ್ ಆಗಿ ಕೆಲಸ ಮಾಡುವ ಸತ್ಯ (ಪ್ರೇಮ್) ಹಾಗೂ ರಂಗ (ರಂಗಾಯಣ ರಘು) ನಡುವೆ ಸುತ್ತುವ ಕಥೆ ಇದು.
ಗುರುಪ್ರಸಾದ್ ಅವರ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಂತೆ ಇಲ್ಲೂ ಭಿನ್ನ ಹಿನ್ನೆಲೆಯ ಎಲ್ಲರನ್ನೂ ಒಟ್ಟು ಮಾಡುವ ಕಥೆ ಇದೆ. ಅದನ್ನು ಎಂ.ಎಸ್.ರಮೇಶ್ ತಮ್ಮದೇ ಆದ ಶೈಲಿಯಲ್ಲಿ ಹೇಳಿದ್ದಾರೆ. ಇಲ್ಲಿನ ಚಿತ್ರದ ನಾಯಕನೂ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಕನವರಿಸುವವನು.
ವಿಕಲಚೇತನ ವಿಜಯ್ ಅಚಾನಕ್ ಆಗಿ ಸತ್ಯ ಮತ್ತು ರಂಗನಿಗೆ ಸಿಗುತ್ತಾನೆ. ಚಿತ್ರಕಲೆ ಬಗ್ಗೆ ಎಲ್ಲಿಲ್ಲದ ಆಸಕ್ತಿ ಇರುವ ಅವನನ್ನು ಮನೆಗೆ ಕರೆತರುತ್ತಾರೆ. ಅವನ ಜೊತೆ ಬಲವಂತವಾಗಿ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟಿದ್ದ ಹಳ್ಳಿ ಹುಡುಗಿ; ಮನೆಯಿಂದ ಹೊರ ತಳ್ಳಲ್ಪಟ್ಟ ಸಂಗೀತಗಾರ; ತನ್ನ ಕುಟುಂಬದಿಂದ ಬೇರ್ಪಟ್ಟ ಮಹಿಳ; ಹೀಗೆ ಎಲ್ಲರೂ ಸೇರಿಕೊಂಡು ಮನೆಯೊಂದು ನಿರಾಶ್ರಿತರ ತಾಣವಾಗಿರುತ್ತದೆ.
ತನ್ನ ತಮ್ಮನನ್ನು ಮದುವೆಯಾಗಲು ಒತ್ತಾಯಿಸುವ ಮಲತಾಯಿಯಿಂದ ತಪ್ಪಿಸಿಕೊಂಡು ಬಂದ ಐಶ್ವರ್ಯಾ (ಅಕ್ಷರಾ ಮೆನನ್) ಸಹ ಈ ಕ್ಯಾಂಪ್ ನಲ್ಲಿರುತ್ತಾಳೆ. ಕಥೆ ಹೀಗೆ ಸಾಗುತ್ತಿರಬೇಕಾದರೆ ಮಾನಸಿಕ ವಿಕಲಚೇತನಳಾಗಿರುವ ಐಶ್ವರ್ಯಾರ ಪ್ರೀತಿಯಲ್ಲಿ ಸತ್ಯ ಬೀಳುತ್ತಾನೆ. ಸತ್ಯನಿಗೆ ಐಶ್ವರ್ಯಾ ಸಿಗುತ್ತಾಳಾ? ಎಲ್ಲರೂ ಅವರವರ ಮನೆ ತಲುಪುತ್ತಾರಾ ಎಂಬುದೇ ಚಿತ್ರದ ಕಥಾಹಂದರ.
ಆಕ್ಷನ್ ಸನ್ನಿವೇಶಗಳಲ್ಲಿ ಪ್ರೇಮ್ ವಿಫಲ
ಜೋಗಿ, ಜೋಗಯ್ಯ,ಕಲಾಸಿಪಾಳ್ಯದಂತಹ ಆಕ್ಷನ್ ಚಿತ್ರಗಳನ್ನು ನಿರ್ದೇಶಿಸಿದ್ದ ಪ್ರೇಮ್ ಇಲ್ಲಿ ಆಕ್ಷನ್ ಸನ್ನಿವೇಶಗಳಲ್ಲಿ ವಿಫಲರಾಗಿದ್ದಾರೆ. ಅವರು ಮತ್ತೆ ಆಕ್ಷನ್ ಕಟ್ ಹೇಳುವಂತಹ ಕಾಲ ಬಂದಿದೆ.
ಚಿತ್ರದ ನಾಯಕಿ ಅಕ್ಷರಾ ಅಭಿನಯದಲ್ಲಿ ಡಲ್
ಚಿತ್ರದ ನಾಯಕಿ ಅಕ್ಷರಾ ಮೆನನ್ ಅವರು ಕ್ಯೂಟ್ ಆಗಿ ಕಾಣಿಸಿದ್ದಾರೆ. ಆದರೆ ನಟನೆ ವಿಚಾರದಲ್ಲಿ ಅಷ್ಟಷ್ಟು ಮಾತ್ರವೇ. ಪ್ರೇಮ್ ಹಾಗೂ ಅಕ್ಷರಾ ನಡುವಿನ ಆನ್ ಸ್ಕ್ರೀನ್ ಕೆಮಿಸ್ಟ್ರಿ ವರ್ಕ್ಸ್ ಔಟ್ ಅಗಿಲ್ಲ.
ಗಮನಸೆಳೆಯುವ ರಂಗಾಯಣ ರಘು
ಈ ಚಿತ್ರದ ಪ್ರಮುಖ ಆಕರ್ಷಣೆ ಗಮನಸೆಳೆಯುವ ನಟ ಎಂದರೆ ರಂಗಾಯಣ ರಘು. ಅವರ ಕಾಮಿಡಿ ಟೈಮಿಂಗ್, ಲೈವ್ಲಿ ಅಭಿನಯ ಚಿತ್ರಕ್ಕೆ ಹೊಸ ಕಳೆ ತಂದಿದೆ.
ಪೋಷಕ ಪಾತ್ರಗಳಲ್ಲಿ ಯಾರ್ಯಾರು?
ಪೋಷಕ ಪಾತ್ರಗಳಲ್ಲಿ ಹೇಮಾ ಚೌದರಿ, ಅವಿನಾಶ್, ಅಚ್ಯುತ ಕುಮಾರ್, ಶೋಭಾರಾಜ್, ಪುಷ್ಪ ಸ್ವಾಮಿ ಮುಂತಾದವರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಚಿತ್ರದ ಸಂಗೀತ ಹೇಗಿದೆ?
ಗುರುಕಿರಣ್ ಅವರ ಹಿನ್ನೆಲೆ ಸಂಗೀತ ಗಮನಸೆಳೆಯುತ್ತದೆ. ಉಳಿದಂತೆ ಜಾನಪದ ಮಿಶ್ರಿತ ಹಾಡುಗಳು ಇಂಪಾಗಿವೆ.
ಎಂಎಸ್ ರಮೇಶ್ ಅವರ ಡೈರೆಕ್ಷನ್ ಹೇಗಿದೆ?
ನಿರ್ದೇಶಕ ಎಂಎಸ್ ರಮೇಶ್ ಅವರು ಚಿತ್ರಕಥೆ ಹಾಗೂ ನಾಯಕನ ನಟನ ಆಯ್ಕೆಯಲ್ಲಿ ಎಡವಿದ್ದಾರೆ ಎಂದೇ ಹೇಳಬೇಕು. ಆದರೆ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಸನ್ನಿವೇಶಗಳಲ್ಲಿ ಆಪ್ಯಾಯತೆ ಇದೆ.
ಚಿತ್ರದ ಬಗ್ಗೆ ಕೊನೆಯ ಮಾತು
ದಾಸ್ವಾಳ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿಲ್ಲ. ಪ್ರೇಮ್ ಅವರು ನಟನೆ ಬಿಟ್ಟು ನಿರ್ದೇಶನ ಮಾಡುವುದೇ ಒಳಿತು ಅನ್ನಿಸುತ್ತದೆ. ನಟನೆಗಿಂತಲೂ ನಿರ್ದೇಶನದಲ್ಲೇ ಅವರು ಬೆಟರ್ ಅನ್ನಿಸುತ್ತದೆ.


Click it and Unblock the Notifications











