ಪುನೀತ್ ಅಭಿನಯದ ಯಾರೇ ಕೂಗಾಡಲಿ ವಿಮರ್ಶೆ
ಒಂದೇ ರೀತಿಯ ಚಿತ್ರಗಳನ್ನು ನೋಡಿ ನೋಡಿ ಬೇಸತ್ತವರು, ಅದೇ ಪ್ರೀತಿ ಪ್ರೇಮ ಪ್ರಯಣ ಬದನೆಕಾಯಿ ಎಂದು ಗೊಣಗುವವರು, ಒಂಚೂರು ಡಿಫರೆಂಟ್ ಕಥೆ ಇದ್ರೆ ಹೇಳ್ರಪ್ಪಾ ಎಂದು ಹಂಬಲಿಸುವವರು ನಿಸ್ಸಂದೇಹವಾಗಿ ನೋಡಬಹುದಾದ ಚಿತ್ರ 'ಯಾರೇ ಕೂಗಾಡಲಿ'.
ಮಠ ಗುರು ಪ್ರಸಾದ ಆಣಿಮುತ್ತುಗಳು
ತಮ್ಮದೇ ಚಿತ್ರವನ್ನು ಕನ್ನಡಕ್ಕೆ ಸುನಾಯಾಸವಾಗಿ ನಿರ್ದೇಶಕ ಸಮುದ್ರ ಖಣಿ ತಂದಿದ್ದಾರೆ. 'ಮಠ' ಗುರುಪ್ರಸಾದ್ ಅವರ ಸಂಭಾಷಣೆ ಗಮನಸೆಳೆಯುತ್ತದೆ. ಸಂಭಾಷಣೆ ಜೊತೆಗೆ ಮಧ್ಯ್ಯೆ ಮಧ್ಯೆ ಅವರು ಆಣಿಮುತ್ತುಗಳನ್ನು ಸಮರ್ಪಿಸಿದ್ದಾರೆ.
ಮೈನವಿರೇಳಿಸುವ ರವಿವರ್ಮ ಸಾಹಸ
ಚಿತ್ರ ತಾಂತ್ರಿಕವಾಗಿಯೂ ಪ್ರೌಢವಾಗಿದೆ. ಸುಕುಮಾರ್ ಅವರ ಸುಂದರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಅಬ್ಬರವಿಲ್ಲದ ಇಂಪಾದ ಸಂಗೀತ, ಮೈನವಿರೇಳಿಸುವ ರವಿವರ್ಮ ಅವರ ಸಾಹಸ ಸಂಯೋಜನೆ ಚಿತ್ರದ ಇನ್ನೊಂದು ಆಕರ್ಷಣೆಯಾಗಿ ನಿಲ್ಲುತ್ತದೆ.
ಇದೊಂದು ಅವಿಭಕ್ತ ಕುಟುಂಬದ ಕಥೆ
ಇದೊಂದು ಅವಿಭಕ್ತ ಕುಟುಂಬವೊಂದ ಸುತ್ತ ಸುತ್ತುವ ಕಥೆ. ಕುಮಾರ್ ಗೆ (ಪುನೀತ್) ಹುಚ್ಚ ಎಂದು ಪಟ್ಟ ಕಟ್ಟಿ ಆಸ್ತಿಯನ್ನು ಕಬಳಿಸುವ ಪ್ರಯತ್ನ ನಡೆಯುತ್ತದೆ. ಆದರೆ ಆತ ಅವರಿಂದ ತಪ್ಪಿಸಿಕೊಂಡು ಬಂದು ಹೊಸ ಜೀವನ ಶುರು ಮಾಡುತ್ತಾನೆ. ಆದರೂ ಬಿಡುವುದಿಲ್ಲ ಅವರ ಸಂಬಂಧಿಕರು. ಹುಚ್ಚಾಸ್ಪತ್ರೆಯಲ್ಲಿರುವ ಬಹುತೇಕ ಹುಚ್ಚರೆಲ್ಲಾ ನಿಜವಾಗಿ ಹುಚ್ಚರಲ್ಲ. ನಂಬಿಕೆ ದ್ರೋಹಕ್ಕೆ ಒಳಗಾದ, ತನ್ನವರೇ ತನಗೆ ಮುಳ್ಳಾಗಿ ಹಿರಿದಾಗ, ಪ್ರೀತಿ ಪ್ರೇಮ ಅನುರಾಗ ಅನುಕಂಪ ದೂರವಾಗಿ ಇಲ್ಲಿಗೆ ಬಂದವರು. ಇನ್ಯಾವುದೋ ದುರುದ್ದೇಶಕ್ಕೆ ಹುಚ್ಚ ಎಂದು ಹಣೆಪಟ್ಟಿ ಕಟ್ಟಿ ಅವರನ್ನು ಇಲ್ಲಿಗೆ ತಂದುಹಾಕಿದವರು ಎಂಬುದು ಚಿತ್ರದ ಕಥಾಸಾರ.
ಪುನೀತ್ ಯೋಗಿ ಜೋಡಿ ಮಜಾ ನೋಡಿ
ಪುನೀತ್ ಗೆ ಸಾಥ್ ನೀಡುವ ನಟರಾಜನಾಗಿ ಯೋಗೀಶ್ ಒಂದಷ್ಟು ಮಾರ್ಕ್ಸ್ ಹೊಡೆದುಕೊಳ್ಳುತ್ತಾರೆ. 'ಲೂಸ್ ಮಾದ' ಎಂಬ ಮುದ್ರೆಯನ್ನು ಯೋಗೀಶ್ ಕೊಂಚ ಕೊಂಚವಾಗಿ ಅಳಿಸಿಕೊಳ್ಳುತ್ತಿದ್ದಾರೆ ಅನ್ನಿಸುತ್ತದೆ. ಚಿತ್ರದಿಂದ ಚಿತ್ರಕ್ಕೆ ಅವರು ಭಿನ್ನ ಪಾತ್ರಗಳನ್ನು ಪೋಷಿಸುತ್ತಿರುವುದೇ ಇದಕ್ಕೆ ಕಾರಣ.
ಜಗಳಗಂಟಿ ಪಾತ್ರದಲ್ಲಿ ಭಾವನಾ
ಇನ್ನು ಚಿತ್ರದ ನಾಯಕಿ ಭಾವನಾ ಅವರು ಆರಂಭದಲ್ಲಿ ಜಗಳಗಂಟಿಯಂತಿದ್ದರೂ ಸೆಕೆಂಡ್ ಆಫ್ ಗೆ ಬರುತ್ತಿದ್ದಂತೆ ಸಾಫ್ಟ್ ಆಗಿ ಬದಲಾಗುತ್ತದೆ. ಸಿಂಧು ಲೋಕನಾಥ್, ನಿವೇದಿತಾ (ಅವ್ವ ಖ್ಯಾತಿಯ), ರವಿಶಂಕರ್, ಮಾಳವಿಕಾ, ಗಿರೀಶ್ ಕಾರ್ನಾಡ್ ಅವರು ಗಮನಸೆಳೆಯುತ್ತಾರೆ.
ಮನರಂಜನೆ ಖಚಿತ ಸಂದೇಶ ಉಚಿತ
ತಮಿಳಿನ 'ಪೊರಾಲಿ' ಚಿತ್ರವನ್ನು ನೋಡಿದವರಿಗೆ ಈ ಚಿತ್ರ ಹೊಸದಾಗಿ ಏನೂ ಕಾಣುವುದಿಲ್ಲ. ಆದರೆ ಪುನೀತ್ ಪ್ರೌಢ ಅಭಿನಯ, ಆಪ್ತವೆನಿಸುವ ಕಥೆ ಚಿತ್ರವನ್ನು ಮತ್ತೊಮ್ಮೆ ನೋಡಬೇಕು ಅನ್ನಿಸುತ್ತದೆ. ಕೊನೆಯದಾಗಿ ಚಿತ್ರದ ಬಗ್ಗೆ ಹೇಳಬೇಕೆಂದರೆ ಮನರಂಜನೆ ಖಚಿತ, ಸಂದೇಶ ಉಚಿತ.
ಒಂದು ರೀತಿ ಅವರಿಗೂ ಈ ಪ್ರೀತಿ ಪ್ರೇಮ ಪ್ರಣಯ, ಹೊಡಿ ಬಡಿ, ಮರಸುತ್ತುವ ಆಟ ಬೇಜಾರಾಗಿತ್ತು ಎನ್ನಿಸುತ್ತದೆ. ಅದಕ್ಕಾಗಿಯೋ ಏನೋ ರೀಮೇಕ್ ಆದರೂ ಪರ್ವಾಗಿಲ್ಲ ಕಥೆ ಡಿಫರೆಂಟ್ ಆಗಿರಲಿ ಎಂದು ತಮ್ಮ ಅಭಿಮಾನಿಗಳಿಗೆ ಊಟದ ಜೊತೆಗೆ ತಾಂಬೂಲವನ್ನೂ ಕೊಟ್ಟಿದ್ದಾರೆ.
ನಿರ್ದೇಶನ: ಪಿ ಸಮುದ್ರ ಖಣಿ
ನಿರ್ಮಾಪಕರು: ಪಾರ್ವತಮ್ಮ ರಾಜ್ ಕುಮಾರ್
ಸಂಗೀತ: ವಿ ಹರಿಕೃಷ್ಣ
ಛಾಯಾಗ್ರಹಣ: ಸುಕುಮಾರ್
ಚಿತ್ರದ ಒಟ್ಟು ಬಜೆಟ್: ರು.9.8 ಕೋಟಿ
ತಾರಾಗಣ: ಪುನೀತ್ ರಾಜ್ ಕುಮಾರ್, ಭಾವನಾ, ಯೋಗೀಶ್, ಸಿಂಧು ಲೋಕನಾಥ್, ನಿವೇದಿತಾ, ರವಿಶಂಕರ್, ಮಾಳವಿಕಾ, ಗಿರೀಶ್ ಕಾರ್ನಾಡ್ ಮುಂತಾದವರು.


Click it and Unblock the Notifications











