'ರಾಜರಥ'ದಲ್ಲಿ ಸವಾರಿ ಮಾಡಿದ ವಿಮರ್ಶಕರ ಅನುಭವ ಹೇಗಿತ್ತು.?
ಭಂಡಾರಿ ಬ್ರದರ್ಸ್ ಕಾಂಬಿನೇಷನ್ ನಲ್ಲಿ ತಯಾರಾಗಿದ್ದ 'ರಾಜರಥ' ಸಿನಿಮಾ ತೆರೆಕಂಡಿದೆ. ಬಹಳ ಕುತೂಹಲದಿಂದ ಕಾಯುತ್ತಿದ್ದ ಪ್ರೇಕ್ಷಕರು ಮೊದಲ ದಿನವೇ ಚಿತ್ರವನ್ನ ನೋಡಿ ಕಣ್ತುಂಬಿಕೊಂಡಿದ್ದಾರೆ.
ರಂಗಿತರಂಗ ಚಿತ್ರದ ನಿರೂಪ್-ಅನೂಪ್ ಜೋಡಿ ರಾಜರಥದಲ್ಲಿ ಬಂದಿದ್ದು, ಅವಂತಿಕಾ ಶೆಟ್ಟಿ, ರವಿಶಂಕರ್, ತಮಿಳು ನಟ ಆರ್ಯ ಹಾಗೂ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ಕೊಟ್ಟಿದ್ದರು.
ಸಿನಿಮಾ ನೋಡಿದ ಅಭಿಮಾನಿ ದೇವರುಗಳು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಇದೀಗ, ರಾಜರಥದಲ್ಲಿ ಸವಾರಿ ಮಾಡಿದ ವಿಮರ್ಶರು ಅನುಭವ ಹೇಗಿತ್ತು .? ಚಿತ್ರದಲ್ಲಿ ಅವರಿಗೆ ಏನಿಷ್ಟು ಆಯ್ತು, ಏನಿಷ್ಟ ಆಗಿಲ್ಲ ಎಂಬುದನ್ನ ಕರ್ನಾಟಕದ ದಿನಪತ್ರಿಕೆಗಳು ಪ್ರಕಟ ಮಾಡಿವೆ. ಮುಂದೆ ಓದಿ....
ಕಷ್ಟದ ದಾರಿ ಸವೆಸುವ ರಥ
''ರಾಜರಥದಲ್ಲಿ ಬಸ್ ಒಂದು ಪ್ರಮುಖ ಪಾತ್ರ. ಒಂದಷ್ಟು ಪ್ರಯಾಣಿಕರು ಚೆನ್ನೈಗೆ ರಾಜರಥವೆಂಬ ಹೈಟೆಕ್ ಬಸ್ನಲ್ಲಿ ಪ್ರಯಾಣ ಮಾಡುವ ಮೂಲಕ ಕಥೆ ಆರಂಭವಾಗುತ್ತದೆ. ರಾಜಕೀಯ, ನೈಜ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನ, ಹಗರಣಗಳು ಮೀಡಿಯಾ ಇವಿಷ್ಟೂ ‘ರಾಜರಥ'ದಲ್ಲಿ ಪ್ರಯಾಣಿಕರ ಜತೆ ತುಂಬಿರುವ ಲಗೇಜ್ ಗಳಾಗಿರುತ್ತವೆ ಆದರೆ ಆ ಲಗೇಜ್ ಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸದೇ, ಪ್ರೇಕ್ಷಕರಿಗೆ ಕನ್ಫ್ಯೂಸ್ ಮಾಡುತ್ತಾರೆ ನಿರ್ದೇಶಕರು. ಸಿನಿಮಾ ಕಥೆ ಮತ್ತು ಚಿತ್ರಕಥೆ ವಿಚಾರದಲ್ಲಿ ಬೇಸರ ಮೂಡಿಸಿದರೂ, ಮೇಕಿಂಗ್ ನಲ್ಲಿ ಹಬ್ಬದಂತೆ ಕಾಣುತ್ತದೆ. ಆರಾಮಾಗಿ, ಸುಖಕರವಾಗಿ ಪ್ರಯಾಣಿಸಬೇಕಾದ ಜರ್ನಿಯಲ್ಲಿ ಚುರುಕಾದ ಸಂಕಲನವಿಲ್ಲದೇ, ಗಟ್ಟಿಯಾದ ಕಥೆಯಿಲ್ಲದೇ ರಾಜರಥ ಸಾಕಷ್ಟು ಹಳ್ಳಕೊಳ್ಳಗಳೊಂದಿಗೆ ಸಾಗುತ್ತ ಕಡೆಗೆ ಕಷ್ಟಪಟ್ಟುಕೊಂಡು ದಡ ಮುಟ್ಟುತ್ತದೆ.'' - ವಿಜಯ ಕರ್ನಾಟಕ
ಗುರಿಯೊಂದು ದಾರಿ ಬೇರೊಂದು
''ನಿರ್ದೇಶಕ ಅನೂಪ್ ಅವರು ಆಯ್ದುಕೊಂಡ ವಸ್ತುವಿಷಯವೂ ಚೆನ್ನಾಗಿದೆ. ಆದರೆ ಹಾದಿ ಕೊಂಚ ತ್ರಾಸದಾಯಕ. ನೇರವಾಗಿ ಹೋಗುವ ಬದಲು ಸುತ್ತಿ ಬಳಸಿ ಸಾಗುತ್ತದೆ ‘ರಾಜರಥ'. ನಿರೂಪ್- ಆವಂತಿಕಾ ಕೆಮಿಸ್ಟ್ರಿಯಲ್ಲಿ ಸೆಳೆಯುವ ಗುಣ ಕಮ್ಮಿಯಾಗಿದೆ. ಭಿನ್ನ ಮ್ಯಾನರಿಸಂ ಮೂಲಕ ರವಿಶಂಕರ್ ಪ್ರೇಕ್ಷಕರ ಮನಸೆಳೆಯಲು ಪ್ರಯತ್ನಿಸಿದರೂ, ಕಥೆಯಲ್ಲಿ ಆ ಪಾತ್ರದ ಅಗತ್ಯತೆ ಏನೆಂಬುದಕ್ಕೆ ಉತ್ತರವಿಲ್ಲ. ತಮಿಳು ನಟ ಆರ್ಯ ಪಾತ್ರಕ್ಕೂ ಹೇಳಿಕೊಳ್ಳುವಂತಹ ತೂಕವಿಲ್ಲ. ಕೆಲವು ದೃಶ್ಯ ಮತ್ತು ಪಾತ್ರಗಳ ಮೂಲಕ ಬೇರೇನನ್ನೋ ಹೇಳಲು ನಿರ್ದೇಶಕರು ಪ್ರಯತ್ನಿಸಿದಂತಿದೆ. ಅದೇನೆಂಬುದನ್ನು ಗ್ರಹಿಸಿ ಅರ್ಥ ಮಾಡಿಕೊಳ್ಳುವ ಪಾಡು ಪ್ರೇಕ್ಷಕರದ್ದು.'' - ವಿಜಯವಾಣಿ
ರಾಜರಥದಲ್ಲಿ ಪ್ರೇಮ ಪಯಣ
'' "ರಾಜರಥ' ಒಂದು ಟ್ರಾವಲ್ ಲವ್ಸ್ಟೋರಿ ಮತ್ತು "ರಾಜರಥ' ಎನ್ನುವುದು ಒಂದು ಬಸ್ಸಿನ ಹೆಸರು. ಅನೂಪ್ ಹಾಗೂ ನಿರೂಪ್ ಇಬ್ಬರಿಗೂ ಇದು "ರಂಗಿತರಂಗ'ಕ್ಕಿಂತ ತದ್ವಿರುದ್ಧವಾದ ಚಿತ್ರ. ಅದು ಗಂಭೀರ ಮತ್ತು ವಿಷಾಧದ ಚಾಯೆಯಲ್ಲಿ ಸಾಗಿದರೆ, ಇಲ್ಲಿ ಚಿತ್ರ ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ಮಜವಾಗಿ ಸಾಗುತ್ತದೆ. ಅನೂಪ್ ಹಾಗೂ ನಿರೂಪ್ ಇಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಆವಂತಿಕಾ ಶೆಟ್ಟಿ ಸಹ ಲವಲವಿಕೆಯಿಂದ ಕಾಣಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ರವಿಶಂಕರ್ ವಿಭಿನ್ನವಾಗಿ ಕಾಣಿಸುತ್ತಾರೆ ಎಂಬುದು ನಿಜ. ಆರ್ಯ ಬಹಳ ಕಷ್ಟಪಟ್ಟು ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಪುನೀತ್ ಈ ಚಿತ್ರದಲ್ಲಿ ಅಭಿನಯಿಸಿಲ್ಲದಿದ್ದರೂ ನಿರೂಪಕರಾಗಿ ಚಿತ್ರದ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರ ಜೊತೆಗೆ ಇರುತ್ತಾರೆ. ಚಿತ್ರವನ್ನು ಮುನ್ನಡೆಸುವುದು ಅವರೇ.'' - ಉದಯವಾಣಿ
‘ರಾಜರಥ’ದ ಪ್ರೀತಿಯ ಪಯಣ
''ರಾಜರಥ'ದ ಮಹತ್ವ ಇರುವುದು ರಾಜಕಾರಣಿಗಳ ಕುತಂತ್ರವನ್ನು ಕಣ್ಣಿಗೆ ಹಿಡಿಯುವುದರಲ್ಲಿ ಮತ್ತು ಸಾಮರಸ್ಯದ ಬದುಕಿನ ಅಗತ್ಯವನ್ನು ಪ್ರತಿಪಾದಿಸುವುದರಲ್ಲಿ. ಅಧಿಕಾರಸ್ಥರ ಷಡ್ಯಂತ್ರದಿಂದ ಜನಸಾಮಾನ್ಯರ ಬದುಕು ಹೇಗೆ ಸಂಕಷ್ಟದ ಕೂಪಕ್ಕೆ ನೂಕಲ್ಪಡುತ್ತದೆ ಎನ್ನುವ ಬಗ್ಗೆಯೂ ನಿರ್ದೇಶಕರು ಹೇಳಿದ್ದಾರೆ. ಪಾತ್ರವರ್ಗದ ಪೈಕಿ ವಿಶೇಷವಾಗಿ ಗಮನ ಸೆಳೆಯುವುದು ನಟರಾದ ರವಿಶಂಕರ್ ಮತ್ತು ಆರ್ಯ. ರಾಜರಥಕ್ಕೆ ನಟ ಪುನೀತ್ ರಾಜ್ಕುಮಾರ್ ಧ್ವನಿ ನೀಡಿದ್ದಾರೆ. ‘ಬೆಂಕಿಯಲ್ಲಿ ಅರಳಿದ ಹೂವು' ಚಿತ್ರದ ‘ಮುಂದೆ ಬನ್ನಿ ಸ್ವಾಮಿ ಮುಂದೆ' ಹಾಡು ವಿಶಿಷ್ಟ ರೀತಿಯಲ್ಲಿ ಬಳಕೆಯಾಗಿದೆ. ಉಳಿದಂತೆ ಯಾವ ಹಾಡುಗಳೂ ಮನಸಿನಲ್ಲಿ ಉಳಿಯುವುದಿಲ್ಲ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಸೊಗಸಾಗಿದೆ'' - ಪ್ರಜಾವಾಣಿ


Click it and Unblock the Notifications











