'ಕರ್ವ' ವಿಮರ್ಶೆ: ರಾಜ ಬಂಗಲೆ ರಹಸ್ಯ ನೋಡಿ, ಭಯಪಡಿ!
ಕೋಟ್ಯಾಂತರ ರೂಪಾಯಿ ದುಡ್ಡಿನ ಆಸೆಗೋಸ್ಕರ ಹೀಗೂ ಮಾಡುತ್ತಾರಾ? ಅನ್ನೋ ಅನುಮಾನ ನಿಮಗೆ 'ಕರ್ವ' ಚಿತ್ರ ನೋಡಿದ ಮೇಲೆ ಮೂಡುತ್ತದೆ. ದುಡ್ಡಿಗೋಸ್ಕರ ಒಡಹುಟ್ಟಿದ ಅಣ್ಣನೇ ತನ್ನ ತಂಗಿಯನ್ನು ಪ್ಲ್ಯಾನ್ ಮಾಡಿ ಕಿಡ್ನ್ಯಾಪ್ ಮಾಡಿಸೋದು ಹೇಗೆ ಅನ್ನೋದನ್ನ ನೋಡಬೇಕಾದರೆ 'ಕರ್ವ' ಚಿತ್ರ ನೋಡಿ.
'6-5=2' ಸಿನಿಮಾ ಮಾಡಿದ್ದ ಚಿತ್ರತಂಡದವರೇ ಮಾಡಿರುವ ಸಿನಿಮಾ ಅಂತ ಕುತೂಹಲ ಇಟ್ಟುಕೊಂಡು ಚಿತ್ರಮಂದಿರಕ್ಕೆ ದೌಡಾಯಿಸುವ ಸಿನಿಪ್ರೇಕ್ಷಕರಿಗೆ 'ಕರ್ವ' ಚಿತ್ರ ಖಂಡಿತ ಮೋಸ ಮಾಡಲ್ಲ. ಅಷ್ಟಕ್ಕೂ 'ಕರ್ವ' ಚಿತ್ರದಲ್ಲಿ ದೆವ್ವ ಇದೆಯಾ? ಇಲ್ವೋ? ಅದನ್ನು ನಾವು ಹೇಳುವ ಬದಲು ನೀವೇ ಚಿತ್ರಮಂದಿರದಲ್ಲಿ ಕುಳಿತು ನೋಡಿದರೆ ಚೆಂದ. ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ..[ಗಟ್ಟಿ ಗುಂಡಿಗೆ ಇದ್ರೆ ಈ ವಾರ 'ಕರ್ವ' ಚಿತ್ರ ನೋಡಿರಿ.!]
'ಕರ್ವ' ಕಥಾಹಂದರ
ಶ್ರೀಮಂತ ಉದ್ಯಮಿ ರಘು (ದೇವರಾಜ್) ಅವರಿಗೆ ಇಬ್ಬರು ಮಕ್ಕಳು ತಿಲಕ್ (ತಿಲಕ್ ಶೇಖರ್) ಮತ್ತು ಅಮೃತಾ (ಅನಿಶಾ ಅಂಬ್ರೋಸ್). ತಿಲಕ್ ಗೆ ರೋಹಿತ್, (ಆರ್.ಜೆ ರೋಹಿತ್) ಸಂಜನಾ (ಅನು ಪೂವಮ್ಮ) ಮತ್ತು ಚಂದ್ರು (ವಿಜಯ್ ಚೆಂಡೂರು) ಎಂಬ ಮೂವರು ಬೆಸ್ಟ್ ಫ್ರೆಂಡ್ಸ್. ಇವರು ಮೂವರು ತಮ್ಮ ಗೆಳೆಯ ತಿಲಕ್ ಗೆ ಹಣದ ಸಹಾಯ ಮಾಡಲು ಹೋಗಿ ದೆವ್ವದ ಕೈಯಲ್ಲಿ ಚಿಂದಿ ಚಿತ್ರಾನ್ನ ಆಗುತ್ತಾರೆ.[ಬರೋಬ್ಬರಿ 83 ಕಥೆ ರಿಜೆಕ್ಟ್ ಮಾಡಿದ ಆ ಖ್ಯಾತ ನಿರ್ಮಾಪಕ ಯಾರು?]
ಅಸಲಿ ಕಥೆ ಏನು?
ಜೂಜಾಡಿ, ಬೆಟ್ ಕಟಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಬರಿಗೈಯಲ್ಲಿ ವಾಪಸಾಗುವ ತಿಲಕ್ ಗೆ ಹಣಕ್ಕಾಗಿ ದಂಧೆಕೋರರು ಕರೆ ಮಾಡಿ ತೊಂದರೆ ಕೊಡುತ್ತಾರೆ. ಇದು ತನ್ನ ತಂದೆ ರಘು (ದೇವರಾಜ್) ಗೆ ತಿಳಿದರೆ ಎಡವಟ್ಟು ಎಂದು ತಿಲಕ್ ಸ್ನೇಹಿತರ ಮೊರೆ ಹೋಗುತ್ತಾನೆ. ಅವರು ಅವನಿಗೆ ಕಿಡ್ನ್ಯಾಪ್ ಐಡಿಯಾ ಕೊಡುತ್ತಾರೆ.
ಕಿಡ್ನ್ಯಾಪ್ ನಲ್ಲಿ ಟ್ವಿಸ್ಟ್
ರೋಹಿತ್, ಸಂಜನಾ ಮತ್ತು ಚಂದು ಸೇರಿ ಒಬ್ಬರು ಮುಖ್ಯ ವ್ಯಕ್ತಿಯನ್ನೇ ಕಿಡ್ನ್ಯಾಪ್ ಮಾಡುತ್ತಾರೆ (ಅವರು ಯಾರು ಅನ್ನೋದನ್ನು ಚಿತ್ರಮಂದಿರದಲ್ಲೇ ನೋಡಿ). ತದನಂತರ ದೇವರಾಜ್ ಗೆ 10 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡುತ್ತಾರೆ. ಈ ಕಿಡ್ನ್ಯಾಪ್ ಗೂ ಉದ್ಯಮಿ ದೇವರಾಜ್ ಗೂ ಏನು ಸಂಬಂಧ? ಅನ್ನೋದು ಅಸಲಿ ಕಥೆ.
ಅಷ್ಟಕ್ಕೂ ದೆವ್ವ ಇದೆಯಾ?
ಕಿಡ್ನ್ಯಾಪ್ ಮಾಡಿ ದುಡ್ಡಿನ ಹಿಂದೆ ಓಡುವ ಈ ನಾಲ್ಕು ಜನ ಫ್ರೆಂಡ್ಸ್ ದೆವ್ವದ ವಾಸಸ್ಥಾನವಾಗಿರುವ 'ರಾಜ ಬಂಗಲೆ'ಯಲ್ಲಿ ಹೇಗೆ ಸಿಕ್ಕಿ ಬೀಳುತ್ತಾರೆ. ಇವರಿಗೂ ದೆವ್ವಕ್ಕೂ ಏನು ಸಂಬಂಧ?. ಅಷ್ಟಕ್ಕೂ 'ರಾಜ ಬಂಗಲೆ'ಯಲ್ಲಿ ದೆವ್ವ ಇದೆಯಾ? ಅನ್ನೋ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಚಿತ್ರಮಂದಿರದಲ್ಲೇ ಕಂಡುಕೊಳ್ಳಿ.
ಏನಿದು 'ಕರ್ವ'
'ಪುನರಪಿ ಜನನಂ, ಪುನರಪಿ ಮರಣಂ' ಎನ್ನುವಂತೆ ಬದುಕಿದ್ದಾಗ ಆಸೆ ತೀರದೆ ಸತ್ತು, ಆಮೇಲೆ ಎಲ್ಲೂ ಮುಕ್ತಿ ಸಿಗದೆ ಅಲೆದಾಡುತ್ತಿರುವ 'ಆತ್ಮ'ವೇ 'ಕರ್ವ'.[ಎಲ್ಲಾ ಓಕೆ, 'ಕರ್ವ' ಶೀರ್ಷಿಕೆ ಯಾಕೆ? ಅದರ ಅರ್ಥ ನಿಮಗೆ ಗೊತ್ತಾ?]
ಪಾತ್ರಧಾರಿಗಳ ನಟನೆ ಹೇಗಿತ್ತು?
ಚಿತ್ರದಲ್ಲಿರುವ ಎಲ್ಲರೂ ಮುಖ್ಯ ಪಾತ್ರಧಾರಿಗಳೇ, ಎಲ್ಲರಿಗೂ ಸಮಾನ ಅವಕಾಶ ಇತ್ತು. ಅದರಲ್ಲೂ ವಿಜಯ್ ಚೆಂಡೂರು ಅವರು ಆ ಭಯದ ವಾತಾವರಣದಲ್ಲಿಯೂ ಕಾಮಿಡಿ ಮಾಡುವ ರೀತಿ ಮಾತ್ರ ಕಣ್ಣು ಬಾಯಿ ಬಿಟ್ಟು ನೋಡುತ್ತಿರುವ ಪ್ರೇಕ್ಷಕರ ಮೊಗದಲ್ಲಿಯೂ ಸಣ್ಣಗೆ ನಗು ತರಿಸುತ್ತಾರೆ. ಜೊತೆಗೆ ಕನ್ನಡ ಸ್ಟಾರ್ ನಟರ ಧ್ವನಿಯನ್ನು ವಿಜಯ್ ಅವರು ಚೆನ್ನಾಗಿ ಅನುಕರಣೆ ಮಾಡಿದ್ದಾರೆ.
ನಟ ತಿಲಕ್ ಮತ್ತು ಆರ್ ಜೆ ರೋಹಿತ್ ನಟನೆ
ಇಡೀ ಚಿತ್ರದಲ್ಲಿ ಎಲ್ಲಾ ಸನ್ನಿವೇಶಗಳಲ್ಲೂ ರೋಹಿತ್ ನಟನೆ ಅದ್ಭುತ ಎನಿಸುತ್ತದೆ. ನೀವು ಊಹಿಸಿರದ ಪಾತ್ರವನ್ನು ರೋಹಿತ್ ವಹಿಸಿರುತ್ತಾರೆ. ಒಟ್ನಲ್ಲಿ ನಟ ರೋಹಿತ್ ಅವರು ಒಂಥರಾ ಸೈಲೆಂಟ್ ಕಿಲ್ಲರ್ ಆಗಿ ಪ್ರೇಕ್ಷಕರಿಗೆ ಇಷ್ಟವಾದರೆ, ತಿಲಕ್ ಅವರು ಎಂದಿನಂತೆ ತಮ್ಮ ಸ್ಟೈಲಿಷ್ ನಟನೆಯಿಂದ ಪ್ರೇಕ್ಷಕರ ಮನಗೆಲ್ಲುತ್ತಾರೆ.[ರಾಕ್ ಸ್ಟಾರ್ ರೋಹಿತ್ 'ಕರ್ವ' ಹೀರೋ ಗುರು]
ಪೂನಂ ಸಿಂಗಾರ್
ಸುದೀಪ್ ಅವರ 'ವಾಲಿ' ಚಿತ್ರದಲ್ಲಿ ನಟಿಸಿದ್ದ ನಟಿ ಪೂನಂ ಸಿಂಗಾರ್ ಅವರಿಗೆ ಚಿಕ್ಕದಾದ ಪಾತ್ರವಾದರೂ ಚೊಕ್ಕವಾಗಿ ನಿರ್ವಹಿಸಿದ್ದಾರೆ. ಆದರೆ ಇಡೀ ಸಿನಿಮಾದ ಕೇಂದ್ರ ಬಿಂದು ಮಾತ್ರ ಇವರೇ ಆಗಿರುತ್ತಾರೆ. ಮಾತ್ರವಲ್ಲದೇ ಇಡೀ ಕಥೆ ಇವರನ್ನೇ ಅವಲಂಬಿಸಿರುತ್ತದೆ.['ಕರ್ವ' ಚಿತ್ರದಲ್ಲಿ 'ವಾಲಿ' ಬೆಡಗಿ ಪೂನಂ ಸಿಂಗಾರ್.!]
ನಟಿ ಅನು ಪೂವಮ್ಮ, ಅನಿಶಾ ನಟನೆ
ನಟಿ ಅನು ಪೂವಮ್ಮ ಅವರು ಎಷ್ಟು ಬೇಕು ಅಷ್ಟೇ ಅಭಿನಯ ನೀಡಿದ್ದಾರೆ. ದೆವ್ವದ ಮುಖಾ-ಮುಖಿ ಆಗುವಾಗ ಹಾಗೂ ಭಯಗೊಳ್ಳುವ ಸಂದರ್ಭದಲ್ಲಿ ಸಹಜ ಅಭಿನಯ ನೀಡಿದ್ದಾರೆ. ಇನ್ನು ಅನಿಶಾ ಅವರು ಮಾತ್ರ ಅಸಮಾನ್ಯ ನಟನೆ ನೀಡಿ ಎಲ್ಲರ ಮೆಚ್ಚುಗೆ ಪಡೆಯುತ್ತಾರೆ. ಚಿತ್ರದಲ್ಲಿ ತನ್ನ ಅಣ್ಣ ತಿಲಕ್ ಗೆ ಚಳ್ಳೆಹಣ್ಣು ತಿನ್ನಿಸಿದಂತೆ ಪ್ರೇಕ್ಷಕರಿಗೂ ಅನಿಶಾ ಅವರು ಚಳ್ಳೆಹಣ್ಣು ತಿನ್ನಿಸಿದ್ದಾರೆ.
'ಹೀಗೂ ಉಂಟೆ' ನಾರಾಯಣ ಸ್ವಾಮಿ?
'ರಾಜ ಬಂಗಲೆ'ಯಲ್ಲಿರುವ ದೆವ್ವದ ಬಗ್ಗೆ ರಿಸರ್ಚ್ ಮಾಡಲು ಟಿವಿ9 ತಂಡದೊಂದಿಗೆ ಹೊರಡುವ ನಾರಾಯಣ ಸ್ವಾಮಿ ಅವರು ನ್ಯೂಸ್ ಚಾನೆಲ್ ಹೇಗೆ ಕಾಣಿಸಿಕೊಳ್ಳುತ್ತಾರೋ ಹಾಗೆ ಕಾಣಿಸಿಕೊಂಡಿದ್ದಾರೆ. ಸಿನಿಮಾಗೂ ಅಲ್ಲಿಗೂ ಅಂತಹ ವ್ಯತ್ಯಾಸ ಏನೂ ಇಲ್ಲ. ಕೊಟ್ಟಿದ್ದನ್ನು ನೀಟಾಗಿ ಪ್ರೆಸೆಂಟ್ ಮಾಡಿದ್ದಾರೆ.[ಬ್ರೇಕಿಂಗ್ ನ್ಯೂಸ್; 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!']
ಸಂಗೀತ
ಅಬ್ಬರದ ಸಂಗೀತಗಳಿಲ್ಲ, ರೋಮ್ಯಾಂಟಿಕ್ ಹಾಡು-ಡ್ಯಾನ್ಸ್ ಗೆ ಜಾಗವೇ ಇಲ್ಲ, ಏನೇ ಇದ್ರೂ ಬರೀ ಕತ್ತಲಲ್ಲಿ ಗೆಜ್ಜೆ ಸದ್ದು ಮತ್ತು ಹೆಣ್ಣಿನ ಅಳುವ ಸದ್ದು ಅಷ್ಟೇ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರು ಹಿನ್ನಲೆ ಹಾಗೂ ಚಿತ್ರದ ಸನ್ನಿವೇಶಗಳಿಗೆ ತಕ್ಕಂತೆ ಮ್ಯೂಸಿಕ್ ಕಂಪೋಸ್ ಮಾಡಿ ಮೆಚ್ಚುಗೆ ಪಡೆಯುತ್ತಾರೆ.
ಛಾಯಾಗ್ರಹಣ
ಕ್ಯಾಮರಾ ಮೆನ್ ಮೋಹನ್ ಅವರ ಕೈ ಚಳಕದಲ್ಲಿ ಚಿತ್ರದ ಎಲ್ಲಾ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ. ಕತ್ತಲು-ಬೆಳಕಿನ ಆಟದಲ್ಲಿ ದೆವ್ವದ ಆಟವನ್ನು ಮೋಹನ್ ಅವರು ತುಂಬಾ ಚೆನ್ನಾಗಿ ಸೆರೆಹಿಡಿದ್ದಾರೆ. ಆದರೂ ಇನ್ನೂ ಕೊಂಚ ಪರ್ಫೆಕ್ಷನ್ ಇದ್ದಿದ್ದರೆ ಸಿನಿಮಾ ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು.
ಪ್ಲಸ್-ಮೈನಸ್ ಏನು?
ಏನಾಗುತ್ತಿದೆ? ಅಂತ ಯೋಚನೆ ಮಾಡಲು ಕೂಡ ಪುರುಸೊತ್ತು ಕೊಡದೇ ಚಿತ್ರವನ್ನು ಕೊನೆ ಹಂತದವರೆಗೂ ಕೊಂಡೊಯ್ಯುವಲ್ಲಿ ನಿರ್ದೇಶಕ ನವನೀತ್ ಅವರು ಯಶಸ್ವಿಯಾಗಿದ್ದಾರೆ. ಚಿತ್ರದ ಫಸ್ಟ್ ಹಾಫ್ ಕೊಂಚ ಬೋರೆನಿಸಿದರೂ ಸೆಕೆಂಡ್ ಹಾಫ್ ಗೆ ಬಂದಾಗ ಒಂದಕ್ಕೊಂದು ಲಿಂಕ್ ಆಗುವಾಗ ಎಲ್ಲವೂ ಸ್ವಲ್ಪ ಸ್ವಲ್ಪ ಅರ್ಥವಾಗುತ್ತದೆ. ಫಸ್ಟ್ ಹಾಫ್ ಮತ್ತು ಸೆಕೆಂಡ್ ಹಾಫ್ ಗೆ ಲಿಂಕ್ ಮಾಡಿಕೊಳ್ಳಲು ಸಮಾಧಾನದಿಂದ ಚಿತ್ರದ ಕೊನೆಯ ಹಂತದವರೆಗೂ ಪ್ರೇಕ್ಷಕರು ಕಾಯಬೇಕು.
ಕೊನೆಯ ಮಾತು?
'6-5=2' ಚಿತ್ರ ನೋಡಿದಾಗ ನಿಮಗೆ ಸಾಕ್ಷ್ಯಚಿತ್ರ ನೋಡುತ್ತಿದ್ದಂತೆ ಅನಿಸಿದ್ದರೆ, 'ಕರ್ವ' ಚಿತ್ರದಲ್ಲಿ ಆ ಫೀಲ್ ಬರೋದಿಲ್ಲ. ಇಷ್ಟರವರೆಗೆ ಬಂದ ದೆವ್ವದ ಚಿತ್ರಗಳ ಸಾಲಿಗೆ ಕರ್ವ ಖಂಡಿತ ಸೇರೋದಿಲ್ಲ. ಬಹಳ ವಿಭಿನ್ನವಾಗಿ ಮಾಡಿರುವ ಈ ಸಿನಿಮಾ ಕೊನೆಯವರೆಗೂ ಕುತೂಹಲದಿಂದ ಕೊಂಡೊಯ್ಯುತ್ತದೆ. 'ಕರ್ವ' ಖಂಡಿತ ನೋಡಬಹುದಾದ ಚಿತ್ರ. ದೆವ್ವದ ಬಗ್ಗೆ ತುಂಬಾ ಭಯ ಇರುವವರು ರಾತ್ರಿ ನೋಡದೇ ಇದ್ದರೆ ಒಳ್ಳೆಯದು.


Click it and Unblock the Notifications











