ಚಿತ್ರ ವಿಮರ್ಶೆ: ತಿರುಪತಿ ಎಕ್ಸ್ ಪ್ರೆಸ್ ಪ್ರೇಕ್ಷಕರಿಗೆ ಸಮ್ಮತಿ
ಸುಮಂತ್ ಅವರ ಈ ಹಿಂದಿನ 'ದಿಲ್ ವಾಲಾ' ಚಿತ್ರಕ್ಕೆ ಹೋಲಿಸಿದರೆ ಅವರು ಅಭಿನಯದಲ್ಲಿ ಸಾಕಷ್ಟು ಸುಧಾರಿಸಿರುವುದನ್ನು 'ತಿರುಪತಿ ಎಕ್ಸ್ ಪ್ರೆಸ್' ಚಿತ್ರದಲ್ಲಿ ಕಾಣಬಹುದು. ಚಿತ್ರದ ಶೀರ್ಷಿಕೆಗೆ ತಕ್ಕಂತೆ ಎಕ್ಸ್ ಪ್ರೆಸ್ ವೇಗದಲ್ಲಿ ಕಥೆ ಸಾಗುತ್ತದೆ.
ಚಿತ್ರದಲ್ಲಿ ಥ್ರಿಲ್, ರೊಮಾನ್ಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಸಮಪ್ರಮಾಣದಲ್ಲಿ ಬೆರೆತಿರುವ ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್ ಚಿತ್ರವಿದು. ಪಿ.ಕುಮಾರ್ ಅವರು ತೆಲುಗಿನ ಯಶಸ್ವಿ 'ವೆಂಕಟಾದ್ರಿ ಎಕ್ಸ್ ಪ್ರೆಸ್' ಚಿತ್ರವನ್ನು ಕನ್ನಡ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಅಲ್ಲಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ. [ದಿಲ್ ವಾಲಾ ಚಿತ್ರ ವಿಮರ್ಶೆ]
ಶ್ರೀನಿವಾಸ್ ರಾವ್ (ಅಶೋಕ್) ಒಬ್ಬ ನಿವೃತ್ತ ಹೆಡ್ ಮಾಸ್ಟರ್. ಮನೆಯಲ್ಲಿ ತುಂಬಾ ಕಟ್ಟುನಿಟ್ಟು. ಶ್ರೀಕೃಷ್ಣನು ಶಿಶುಪಾಲನ ನೂರು ತಪ್ಪುಗಳು ಕ್ಷಮಿಸುವಂತೆ ಇವರು ಮನೆಯರಿಗೆ ಕೇವಲ ನೂರು ತಪ್ಪುಗಳನ್ನು ಮಾಡಲು ಅವಕಾಶ ಕೊಟ್ಟಿರುತ್ತಾರೆ.
ಸೆಂಚುರಿ ಬಾರಿಸಲು ಇನ್ನೊಂದೇ ತಪ್ಪು
ಯಾರ್ಯಾರು ಎಷ್ಟೆಷ್ಟು ತಪ್ಪುಗಳನ್ನು ಮಾಡಿದ್ದಾರೆ ಎಂಬ ಪಟ್ಟಿಯೂ ಅವರ ಬಳಿ ಇರುತ್ತದೆ. ನೂರು ತಪ್ಪು ಮಾಡಿರುವವರನ್ನು ಯಾವುದೇ ಮುಲಾಜಿಲ್ಲದೆ ಮನೆಯಿಂದ ಹೊರ ಹಾಕುವಷ್ಟು ಶಿಸ್ತಿನ ಮನುಷ್ಯ ಶ್ರೀನಿವಾಸ್ ರಾವ್. ತನ್ನ ಕೊನೆಯ ಮಗ ಸುಮಂತ್ (ಸುಮಂತ್ ಶೈಲೇಂದ್ರಬಾಬು) ತೊಂಬತ್ತೊಂಬತ್ತು ತಪ್ಪುಗಳನ್ನು ಮಾಡಿರುತ್ತಾನೆ.
ರೈಲಿನಲ್ಲಿ ತಿರುಪತಿಗೆ ಸಾಗುವ ಕಥೆ
ಇನ್ನೊಂದು ತಪ್ಪು ಮಾಡಿದರೆ ಮನೆಯಿಂದ ಹೊರಗೆ ಹಾಕುವ ಪರಿಸ್ಥಿತಿಯಲ್ಲಿರುತ್ತಾನೆ. ತಿರುಪತಿಯಲ್ಲಿ ನಿಶ್ವಯವಾಗಿರುವ ತನ್ನ ಅಣ್ಣನ ಮದುವೆಗೆ ಇವರೆಲ್ಲಾ ಹೋಗುವುದು ತಿರುಪತಿ ಎಕ್ಸ್ ಪ್ರೆಸ್ ರೈಲಿನಲ್ಲಿ. ಅಲ್ಲಿಗೆ ಹೋಗುವಷ್ಟರಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದೇ ಚಿತ್ರದ ಕಥಾ ಕಹಾನಿ.
ಅಲ್ಲಲ್ಲಿ ಹೊರಳುತ್ತಾ, ನಿಲ್ಲುತ್ತಾ, ಬಳುಕುತ್ತಾ
ತಿರುಪತಿ ಎಕ್ಸ್ ಪ್ರೆಸ್ ರೈಲು ಸಾಗಿದಂತೆ ಕಥೆಯೂ ಅಲ್ಲಲ್ಲಿ ಹೊರಳುತ್ತಾ, ನಿಲ್ಲುತ್ತಾ, ಬಳುಕುತ್ತಾ ಸಾಗುತ್ತದೆ. ಆದರೆ ಎಲ್ಲೂ ಹಳಿ ತಪ್ಪಲ್ಲ. ಹೆಚ್ಚು ಹೊತ್ತು ಪ್ರೇಕ್ಷಕರನ್ನು ಸತಾಯಿಸದೆ ಜಾಲಿಯಾಗಿ ತಿರುಪತಿ ತಲುಪಿಸುತ್ತದೆ. ಒಟ್ಟಾರೆಯಾಗಿ ತಿರುಪತಿ ತಲುಪಿದಷ್ಟೇ ಮಂದಹಾಸ ಪ್ರೇಕ್ಷಕರ ಮುಖದಲ್ಲೂ ಮೂಡುತ್ತದೆ.
ಗ್ಲಾಮರ್ ಜೊತೆಗೆ ಅಭಿನಯ ಕೃತಿ 'ಬಂಧ'
ಚಿತ್ರದಲ್ಲಿ ಗ್ಲಾಮರ್ ಜೊತೆಗೆ ಅಭಿನಯದಲ್ಲೂ ಗಮನಸೆಳೆಯುತ್ತಾರೆ ಕೃತಿ ಕರಬಂಧ. ಪ್ರಾರ್ಥನಾ ಆಗಿ ಅವರ ಪಾತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಸುಮಂತ್ ಅವರು ಫೈಟ್ ಗಳಲ್ಲಿ ಮಿಂಚುವುದರ ಜೊತೆಗೆ ಅಭಿನಯದಲ್ಲೂ ಸಾಕಷ್ಟು ಸುಧಾರಿಸಿದ್ದಾರೆ.
ಕಾಮಿಡಿಗೆ ಹೆಚ್ಚಿನ ಒತ್ತು ಕೊಡಲಾಗಿದೆ
ಚಿತ್ರದ ಗಮನಾರ್ಹ ಅಂಶಗಳಲ್ಲಿ ಕಾಮಿಡಿಗೆ ಹೆಚ್ಚಿನ ಅಂಕ ಸಲ್ಲುತ್ತದೆ. ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಬುಲೆಟ್ ಪ್ರಕಾಶ್ ಕಾಮಿಡಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ನೀಡಲಾಗಿದೆ. ಉಳಿದಂತೆ ಅಶೋಕ್, ಸುಮಿತ್ರಾ, ನೀನಾಸಂ ಅಶ್ವಥ್ ಅವರು ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.
ಅರ್ಜುನ್ ಜನ್ಯ ಸಂಗೀತದ ಇಂಪು
ಅರ್ಜುನ್ ಜನ್ಯ ಸಂಗೀತದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರುವ "ನಾನು ರೈಟಾ ಇಲ್ಲಾ ರಾಂಗಾ" ಹಾಗೂ "ಉಸಿರೇ ಉಸಿರೇ ವಂದಿಸು" ಹಾಡುಗಳು ಇಂಪಾಗಿದ್ದು ಮೇಕಿಂಗ್ ಸಹ ಗಮನಸೆಳೆಯುತ್ತದೆ.
ಇನ್ನು ತಿರುಪತಿಗೆ ಹೊರಡಲು ತಡ ಯಾಕೆ?
ಇದೊಂದು ಕಂಪ್ಲೀಟ್ ಫ್ಯಾಮಿಲಿ ಪ್ಯಾಕೇಜ್ ಚಿತ್ರ. ಎಲ್ಲೂ ಬೋರು ಹೊಡಿಸಲ್ಲ. ಕಾಮಿಡಿ ಬಯಸುವವರು, ಮನರಂಜನೆ ನಿರೀಕ್ಷಿಸುವವರಿಗೆ ಖಂಡಿತ ನಿರಾಸೆಪಡಿಸಲ್ಲ 'ತಿರುಪತಿ ಎಕ್ಸ್ ಪ್ರೆಸ್'. ಇನ್ನು ತಡ ಯಾಕೆ 'ತಿರುಪತಿ'ಗೆ ಟಿಕೆಟ್ ಬುಕ್ ಮಾಡಿ.


Click it and Unblock the Notifications











