ವಿಮರ್ಶೆ: ಅಲ್ಲಲ್ಲಿ ನಿಂತು ಮುಂದೆ ಸಾಗುವ 'ರಾಜರಥ'
ಒಂದು ಬಸ್.. ಅದರಲ್ಲಿ ಹಲವು ಪ್ರಯಾಣಿಕರು.. ಎಲ್ಲರ ಹಿನ್ನಲೆ ಬೇರೆ ಬೇರೆ, ಆದರೆ ಹೊರಟಿರುವ ದಾರಿ ಒಂದೇ. ಪ್ರಯಾಣದಲ್ಲಿ ಪ್ರೀತಿ ಹಾಗೂ ನಗುವಿನ ಟಾನಿಕ್ ಕೊಟ್ಟು ಕೊನೆಗೆ ಶಾಂತಿಯ ಮಂತ್ರ ಜಪ ಮಾಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.
'ರಾಜರಥ'ದಲ್ಲಿ ಪ್ರಯಾಣ
'ರಾಜರಥ' ಎಂಬ ಹೈಟೆಕ್ ಬಸ್ ನಲ್ಲಿ ಚೆನ್ನೈಗೆ ಹೊರಟಿರುವ ಪ್ರಯಾಣಿಕರ ಕಥೆಯೇ ಈ ಸಿನಿಮಾ. ಬಸ್ ನಲ್ಲಿ ಪ್ರಯಾಣ ಬೆಳೆಸುವವರ ಪರಿಚಯ ಒಂದೆಡೆ ಆದರೆ, ಇದ್ದಕ್ಕಿದ್ದಂತೆ ಭುಗಿಲೇಳುವ ಹಿಂಸಾಚಾರದ ಹಿನ್ನಲೆ ಇನ್ನೊಂದು ಕಡೆ. ಹಿಂಸಾಚಾರದಲ್ಲಿ ಪ್ರಯಾಣಿಕರು ಸೇಫ್ ಆಗ್ತಾರಾ, ಇಲ್ವಾ ಅನ್ನೋದೇ ಕ್ಲೈಮ್ಯಾಕ್ಸ್.
ಅಣ್ಣ-ತಮ್ಮನ ಕಥೆ
ಆಗಷ್ಟೇ ಇಂಜಿನಿಯರಿಂಗ್ ಮುಗಿಸಿ ಚೆನ್ನೈಗೆ ಹೋಗುತ್ತಿರುವ ಅಭಿ (ನಿರೂಪ್ ಭಂಡಾರಿ) ಗೆ 'ರಾಜರಥ' ಬಸ್ ನಲ್ಲಿ ಸಿಗುವುದು ಮೇಘ (ಅವಂತಿಕಾ ಶೆಟ್ಟಿ). ಅಭಿಗೆ ಮೇಘ ಮೇಲೆ ಪ್ರೀತಿ. ಆದ್ರೆ ಮೇಘಗೆ.? ಇದು ತಮ್ಮ ಅಭಿ ಪ್ರೇಮ್ ಕಹಾನಿಯಾದರೆ ಅಣ್ಣ ವಿಶ್ವ (ಆರ್ಯ) ಕಥೆಯೇ ಬೇರೆ. ಆ ಕಥೆಯನ್ನ ತಿಳಿದುಕೊಳ್ಳಲು ನೀವು ಥಿಯೇಟರ್ ನಲ್ಲಿ ಸಿನಿಮಾ ನೋಡಿ...
ಪರ್ಫಾಮೆನ್ಸ್ ಹೇಗಿದೆ.?
ಲವ್ವರ್ ಬಾಯ್ ಪಾತ್ರದಲ್ಲಿ ನಿರೂಪ್ ಭಂಡಾರಿ ನಟನೆ ಚೆನ್ನಾಗಿದೆ. ಆಗಾಗ ಡಾ.ರಾಜ್ ಶೈಲಿಯಲ್ಲಿ ಡೈಲಾಗ್ ಹೊಡೆಯುವ ನಿರೂಪ್ ಭಂಡಾರಿ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸುತ್ತಾರೆ. ಇನ್ನೂ ಮೇಘ ಪಾತ್ರಧಾರಿ ಅವಂತಿಕಾ ಶೆಟ್ಟಿ ಬಬ್ಲಿಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕೆಮಿಸ್ಟ್ರಿ 'ರಾಜರಥ'ದಲ್ಲಿ ವರ್ಕೌಟ್ ಆಗಿದೆ.
ಗಮನ ಸೆಳೆಯುವ ಆರ್ಯ
ಹೋರಾಟಗಾರ ವಿಶ್ವ ಪಾತ್ರದಲ್ಲಿ ಆರ್ಯ ಗಮನ ಸೆಳೆಯುತ್ತಾರೆ. ತೆರೆಮೇಲೆ ಗಂಭೀರವಾಗಿ ಕಾಣಿಸಿಕೊಂಡಿರುವ ಆರ್ಯ, ತಮಿಳು ನಟನಾಗಿದ್ದರೂ ಕನ್ನಡ ಸಂಭಾಷಣೆಯ ಲಿಪ್ ಸಿಂಕ್ ಮಿಸ್ ಮಾಡಿಲ್ಲ.
ಉಳಿದವರ ನಟನೆ ಹೇಗಿದೆ.?
ಪ್ರಯಾಣದ ನಡುವೆ ಒಂದು ಬ್ರೇಕ್ ನೀಡಲು ಬರುವುದು ರವಿಶಂಕರ್ 'ಅಂಕಲ್'. ಆಗಾಗ 'ಭಯ' ಆಯ್ತಾ ಅಂತ ಕೇಳುವ ರವಿಶಂಕರ್, ಒಂದೆರಡು ಡೈಲಾಗ್ ಗಳಿಂದ ನಗು ತರಿಸುತ್ತಾರೆ. ನಟಿ ಶ್ರುತಿ ಹರಿಹರನ್ ಹೀಗೆ ಬಂದು ಹಾಗೆ ಹೋಗ್ತಾರೆ. ವಿನಯ ಪ್ರಸಾದ್ ಸೇರಿದಂತೆ ಪ್ರಯಾಣಿಕರ ಪಾತ್ರಧಾರಿಗಳು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಕಥೆಯಲ್ಲಿ ಗಟ್ಟಿತನ ಬೇಕಿತ್ತು
ಎರಡು ಕಥೆಗಳನ್ನ ಪ್ಯಾರಲೆಲ್ ಆಗಿ ಹೇಳಿರುವ ನಿರ್ದೇಶಕರು, ಅದಕ್ಕಾಗಿ ಪುನೀತ್ ರಾಜ್ ಕುಮಾರ್ ಅವರ ದನಿ ಬಳಸಿಕೊಂಡಿರುವ ರೀತಿ ಮೆಚ್ಚುವಂಥದ್ದು. ಚಿತ್ರದ ನಿರೂಪಣೆ ಶೈಲಿ ಚೆನ್ನಾಗಿದೆ. ಆದ್ರೆ, ಕಥೆಯಲ್ಲಿ ಕೊಂಚ ಗಟ್ಟಿತನ ಇದ್ದು, ಸಿನಿಮಾ ವೇಗವಾಗಿ ಸಾಗಿದ್ರೆ 'ರಾಜರಥ'ದಲ್ಲಿ ಮತ್ತೆ ಮತ್ತೆ ಪ್ರಯಾಣ ಮಾಡಬಹುದಿತ್ತು.
ಪ್ಲಸ್ ಪಾಯಿಂಟ್ಸ್
'ರಾಜರಥ' ಸಿನಿಮಾ ನೋಡಲು ಮುಖ್ಯ ಕಾರಣ ಛಾಯಾಗ್ರಹಣ. ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ ಕಣ್ಣಿಗೆ ಕಟ್ಟುವಂತಿದೆ. ಲೋಕೇಷನ್ಸ್ ಕಣ್ಣು ಕೋರೈಸುವಂತಿದೆ. ಅನೂಪ್ ಭಂಡಾರಿ ಸಂಗೀತ ಸಂಯೋಜಿಸಿರುವ ಹಾಡುಗಳು ತಲೆದೂಗುವಂತಿವೆ. ಅಜನೀಶ್ ಲೋಕನಾಥ್ ಬ್ಯಾಕ್ ಗ್ರೌಂಡ್ ಸ್ಕೋರ್ ಓಕೆ.
ಮೈನಸ್ ಪಾಯಿಂಟ್ಸ್
ಚಿತ್ರಕಥೆ ನಿಧಾನಗತಿಯಲ್ಲಿ ಸಾಗುತ್ತದೆ. ಕಥೆಯಲ್ಲಿ ಅಂತಹ ರೋಚಕ ತಿರುವುಗಳಿಲ್ಲ. ಸಂಕಲನ ಇನ್ನೂ ಚುರುಕಾಗಿರಬೇಕಿತ್ತು.
ಫೈನಲ್ ಸ್ಟೇಟ್ ಮೆಂಟ್
'ರಾಜರಥ' ಸಿನಿಮಾದಲ್ಲಿ ಮನರಂಜನೆ ಜೊತೆಗೆ ಉತ್ತಮ ಸಂದೇಶ ಕೂಡ ಇದೆ. ಕೀಳುಮಟ್ಟದ ರಾಜಕೀಯದಿಂದಾಗಿ ಅಮಾಯಕರು ಬಲಿಯಾಗುತ್ತಿರುವ ಇಂದಿನ ಸಮಾಜದಲ್ಲಿ ಹಿಂಸೆಗೆ ಹಿಂಸೆಯೇ ಉತ್ತರ ಅಲ್ಲ ಎಂಬ ಸಂದೇಶ 'ರಾಜರಥ' ಚಿತ್ರದಲ್ಲಿದೆ. ಭಂಡಾರಿ ಸಹೋದರರ 'ರಾಜರಥ' ಸಿನಿಮಾ ಒಮ್ಮೆ ನೋಡಬಹುದು.


Click it and Unblock the Notifications











