ಹಾಸ್ಯದ ಹೊಳೆ ಹರಿಸುವ ತುಳು ’ಚಾಲಿಪೋಲಿಲು’ ಚಿತ್ರವಿಮರ್ಶೆ
ತುಳು ಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದರು ಪ್ರಮುಖ ಭೂಮಿಕೆಯಲ್ಲಿರುವ ಈ ಚಿತ್ರದ ನಿರ್ದೇಶಕರು ವೀರೇಂದ್ರ ಶೆಟ್ಟಿ ಕಾವೂರು. ನಿರ್ದೇಶಕರಿಗೂ ಕೂಡ ಇದು ಮೊದಲ ಪ್ರಯತ್ನವಾಗಿದ್ದು, ಚಿತ್ರವನ್ನು ಹೇಗೆ ತೆರೆಗೆ ತಂದಿದ್ದಾರೆ. ವಿಮರ್ಶೆ ಕೆಳಗಿನಂತಿದೆ:
ಬ್ಯಾನರ್ : ಜಯಕಿರಣ ಫಿಲಂಸ್
ನಿರ್ಮಾಪಕರು : ಪ್ರಕಾಶ್ ಪಾಂಡೇಶ್ವರ್
ಸರ್ಟಿಫಿಕೇಟ್ : ಯು/ಎ
ಚಿತ್ರದ ಅವಧಿ : 143 ನಿಮಿಷ
ಫೋಟೋಗ್ರಾಫಿ : ಉತ್ಪಲ್ ನಾಯನಾರ್
ಸಂಗೀತ: ಮಣಿಕಾಂತ್ ಕದ್ರಿ, ವಿ ಮನೋಹರ್
ನಿರ್ದೇಶನ : ವೀರೇಂದ್ರ ಶೆಟ್ಟಿ ಕಾವೂರು
ತಾರಾಗಣದಲ್ಲಿ : ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸುಂದರ ರೈ ಮಂದಾರ, ರಾಘವೇಂದ್ರ ರೈ, ಪದ್ಮಜಾರಾವ್, ಚೇತನ್ ರೈ ಮಾಣಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಉಮೇಶ್ ಮಿಜಾರ್, ಇತರರು.
ಕಲಿಕೆಯಲ್ಲಿ ಹಿಂದೆ ಉಳಿದವರು, ಶಿಕ್ಷಕರಿಗೆ ತಲೆ ನೋವಾಗುತ್ತಾರೆ. ತುಂಟತನದ ಜತೆಗೆ ಉಪಟಳದಿಂದ ಊರಿಗೇ ಚಾಲಿಪೋಲಿ (ಕೆಲಸಕ್ಕೆ ಬಾರದವರೆಂದು ಅರ್ಥ) ಅನಿಸಿಕೊಳ್ಳುತ್ತಾರೆ. ಗಟ್ಟಿಯಾದ ತ್ರಿಮೂರ್ತಿ ಗೆಳೆಯರ ಗೆಳತನ, ಜೊತೆಯಾಗಿಯೇ ಸಮಾಜದ ಕೆಟ್ಟ ಚಟುವಟಿಕೆಗಳಲ್ಲಿ ಗುರುತಿಸಿಕೊಂಡರೂ, ಜೀವಕ್ಕೆ ಜೀವ ಕೊಡುವವರು ಈ ತ್ರಿಮೂರ್ತಿ ಗೆಳೆಯರು. (ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಸಂದರ್ಶನ)
ಸಂದಿಗ್ಧ ಪರಿಸ್ಥಿತಿಯಲ್ಲಿ ತ್ರಿಮೂರ್ತಿ ಗೆಳೆಯರು
ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಊರಿನ ಜನರಿಂದ ತಿರಸ್ಕಾರಕ್ಕೆ ಒಳಗಾಗುವ ಈ ತ್ರಿಮೂರ್ತಿ ಗೆಳೆಯರು, ಈ ಪರಿಸ್ಥಿತಿಯಿಂದ ಹೇಗೆ ಪಾರಾಗುತ್ತಾರೆ. ಪಾರಾಗಿ, ಮತ್ತೆ ಹೇಗೆ ಉತ್ತಮ ಜೀವನ ಕಂಡುಕೊಳ್ಳುತ್ತಾರೆ ಎನ್ನುವುದೇ 'ಚಾಲಿಪೋಲಿಲು' ಚಿತ್ರದ ಕಥಾಹಂದರ.
ಹಾಸ್ಯದ ಹೊಳೆ ಹರಿಸುವ ಚಿತ್ರ
143 ನಿಮಿಷಗಳ ಕಾಲ ಸಾಗುವ ಚಿತ್ರದುದ್ದಕ್ಕೂ ಹಾಸ್ಯದ ಹೊಳೆಯೇ ಹರಿದಿರುವುದರಿಂದ ಪ್ರೇಕ್ಷಕನಿಗೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಸಾಮಾನ್ಯವಾಗಿ ತುಳು ಚಿತ್ರಗಳಲ್ಲಿ ತುಳು ನಾಟಕದ ಕಲಾವಿದರು ಗುರುತಿಸಿಕೊಂಡಾಗ ಪರದೆಯಲ್ಲಿ ನಾಟಕವನ್ನು ನೋಡಿದ ಅನುಭವ ತುಳು ಅಭಿಮಾನಿಗಳಲ್ಲಿ ಮೂಡುತಿತ್ತು.
ಕೃತಕ ಎನಿಸದ ಕಲಾವಿದರ ನಟನೆ
ಆದರೆ ಈ ಚಿತ್ರ ನೋಡಿ ಬರುವ ಪ್ರೇಕ್ಷಕರಿಗೆ ಎಲ್ಲಿಯೂ ಅಂತಹ ದೃಶ್ಯ ಕಣ್ಣಿಗೆ ಬೀಳುವುದಿಲ್ಲ. ಸಾಮಾನ್ಯವಾಗಿ ಎಲ್ಲರೂ ಮಾತನಾಡುವಂತಹ ತುಳು ಭಾಷೆಯ ಪ್ರಯೋಗ ಚಿತ್ರದಲ್ಲಿ ಕಲಾವಿದರೂ ಮಾಡಿರುವುದರಿಂದ ಎಲ್ಲಿಯೂ ಕಲಾವಿದರ ನಟನೆ ಕೃತಕ ಎಂದು ಅನಿಸುವುದಿಲ್ಲ.
ಐಪಿಎಲ್ ಬೆಟ್ಟಿಂಗ್ ಸಂದೇಶ
ಐಪಿಎಲ್ ಬೆಟ್ಟಿಂಗ್ ಬಗ್ಗೆ ಸಂದೇಶವಿರುವ ಈ ಚಿತ್ರದ ಮೂಲಕ, ತನ್ನ ಮೊದಲ ಪ್ರಯತ್ನದಲ್ಲೇ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಗೆದ್ದಿದ್ದಾರೆ. ಮಣಿಕಾಂತ್ ಕದ್ರಿ ಮತ್ತು ವಿ ಮನೋಹರ್ ಅವರ ಸಂಗೀತ ಮನಸ್ಸಿನಲ್ಲಿ ಉಳಿಯುತ್ತದೆ. ಚಿತ್ರದ ಎಲ್ಲಾ ದೃಶ್ಯಗಳನ್ನು ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ ಕ್ಯಾಮರಾಮ್ಯಾನ್ ಉತ್ಪಲ್ ನಾಯನಾರ್. (ಹಲವು ಪ್ರಥಮಗಳ ಚಾಲಿಪೋಲಿಲು)
ಕೊನೆಗೆ ಚಿತ್ರದ ಬಗ್ಗೆ
ತುಳುರಂಗದ ಹಾಸ್ಯ ಚಕ್ರವರ್ತಿಗಳಾದ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ನವೀನ್ ಪಡೀಲ್ ಪ್ರತಿ ದೃಶ್ಯದಲ್ಲಿ ಕಾಣಿಸಿಕೊಳ್ಳುವುದರಿಂದ ನಗು ಮೊಗದೊಂದಿಗೆ ಚಿತ್ರವನ್ನು ಸಂಪೂರ್ಣ ಸವಿಯಬಹುದಾಗಿದೆ. ಒಟ್ಟಿನಲ್ಲಿ ಇತರ ತುಳು ಚಲನಚಿತ್ರಗಳಿಗಿಂತ ವಿಭಿನ್ನವಾಗಿ ಚಾಲಿಪೋಲಿಲು ಚಿತ್ರ ಮೂಡಿಬಂದಿದೆ.


Click it and Unblock the Notifications











