'ಥುನಿವು' ರಿಲೀಸ್ ಸಂಭ್ರಮಾಚರಣೆ ವೇಳೆ ನಟ ಅಜಿತ್ ಅಭಿಮಾನಿ ದುರಂತ ಸಾವು
ಕಾಲಿವುಡ್ ಥಿಯೇಟರ್ಗಳ ಅಂಗಳದಲ್ಲಿ 3 ದಿನ ಮೊದಲೇ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದಾರೆ. ಥಲಾ ಅಜಿತ್ ನಟನೆಯ 'ಥುನಿವು' ಹಾಗೂ ದಳಪತಿ ವಿಜಯ್ ನಟನೆಯ 'ವಾರಿಸು' ಸಿನಿಮಾಗಳು ಬಿಡುಗಡೆ ಆಗಿ ಧೂಳೆಬ್ಬಿಸಿವೆ. ಅಜತ್ ಹಾಗೂ ವಿಜಯ್ ಇಬ್ಬರ ಫ್ಯಾನ್ಸ್ ವಾರ್ ಗೊತ್ತೇಯಿದೆ. ಹಾಗಾಗಿ ಥಿಯೇಟರ್ಗಳ ಅಂಗಳದಲ್ಲಿ ಫ್ಯಾನ್ಸ್ ಆರ್ಭಟ ಜೋರಾಗಿದೆ. ಆದರೆ ಥಿಯೇಟರ್ ಅಂಗಳದಲ್ಲಿ ನಡೆದ ಅವಘಡದಲ್ಲಿ ಅಜಿತ್ ಅಭಿಮಾನಿಯೊಬ್ಬ ಕೊನೆಯುಸಿರೆಳೆದಿದ್ದಾನೆ.
ತಮಿಳು ನಟ ಅಜಿತ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಥಲಾ ಸಿನಿಮಾ ರಿಲೀಸ್ ಆಗಿ ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳ ಹಂಗಾಮ ಮುಗಿಲು ಮುಟ್ಟುತ್ತದೆ. 'ಥುನಿವು' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಮಧ್ಯರಾತ್ರಿ ಒಂದು ಘಂಟೆಗೆ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಅಜಿತ್ ಕ್ರೇಜ್ಗೆ ತಕ್ಕಂತೆ ಅಭಿಮಾನಿಗಳು ರಾತ್ರಿಯೆಲ್ಲಾ ನಿದ್ದೆ ಬಿಟ್ಟು ಸಿನಿಮಾ ನೋಡಿದ್ದಾರೆ. ಥಿಯೇಟರ್ಗಳ ಅಂಗಳದಲ್ಲಿ ಸಂಭ್ರಮಿಸಿದ್ದಾರೆ. ಇದೇ ರೀತಿ ಸಿನಿಮಾ ನೋಡಲು ಬಂದಿದ್ದ ಭರತ್ ಕುಮಾರ್(19) ಎಂಬ ಅಜಿತ್ ಅಭಿಮಾನಿ ಸ್ನೇಹಿತರ ಜೊತೆ ಚೆನ್ನೈನ ಕೋಯಂಬೆಡ್ ರೋಹಿಣಿ ಥಿಯೇಟರ್ನಲ್ಲಿ ಸಿನಿಮಾ ನೋಡಲು ಬಂದಿದ್ದ.
'ಥುನಿವು' ಸಿನಿಮಾ ಪ್ರದ್ರಶನ್ ಮುಗಿದ ಮೇಲೆ ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳು ನೆಚ್ಚಿನ ನಟನಿಗೆ ಜೈಕಾರ ಹಾಕುತ್ತಾ ಸಂಭ್ರಮಿಸಿದ್ದಾರೆ. ಅಭಿಮಾನಿಗಳು ಏಕಾಏಕಿ ರಸ್ತೆಗೆ ಇಳಿದಿದ್ದರಿಂದ ಟ್ರಾಫಿಕ್ ಜಾಮ್ ಆಗಿದೆ. ಬಹಳ ಉತ್ಸಾಹದಲ್ಲಿದ್ದ ಭರತ್, ನಿಧಾನವಾಗಿ ಚಲಿಸುತ್ತಿದ್ದ ಲಾರಿ ಟ್ರಕ್ ಮೇಲೆ ಏರಿದ್ದಾನೆ. ಅದರ ಮೇಲೆ ನಿಂತು ಅಜಿತ್ ಅಜಿತ್ ಎಂದು ಕೂಗುತ್ತಾ ಕುಣಿಯಲು ಆರಂಭಿಸಿದ್ದಾನೆ. ಈ ವೇಳೆ ಆಯತಪ್ಪಿ ಲಾರಿ ಮೇಲಿನಿಂದ ಕೆಳಗೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಚಿಕಿತ್ಸೆ ಫಲಕಾರಿ ಆಗದೇ ಭರತ್ ಕೊನೆಯುಸಿರೆಳೆದಿದ್ದಾನೆ.

ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಭರತ್ ಹೀಗೆ ದುರಂತ ಅಂತ್ಯ ಕಂಡಿದ್ದು ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಆಘಾತ ತಂದಿದೆ. ಕೆಲಸಕ್ಕೆ ಹೋಗುತ್ತೀನಿ ಎಂದು ಹೇಳಿ ಹೋದವನು ಸಿನಿಮಾ ನೋಡಲು ಹೋಗಿದ್ದಾನೆ. ನಂತರ ಹೀಗೆ ಆಗಿದೆ. ನಮಗೆ ಮೊದಲು ಸಣ್ಣ ಪೆಟ್ಟಾಗಿದೆ ಬನ್ನಿ ಎಂದು ಫೋನ್ ಮಾಡಿ ಕರೆದರು. ಆಸ್ಪತ್ರೆಗೆ ಹೋಗಿ ನೋಡಿದ್ದರೆ ಶಾಕ್ ಆಗಿತ್ತು. ಅಭಿಮಾನ ಇರಲಿ. ಆದರೆ ಈ ರೀತಿ ಮಾಡಲು ಹೋಗಬೇಡಿ. ನಿಮ್ಮ ಪ್ರಾಣ ಮುಖ್ಯ ಅದನ್ನು ಮೊದಲು ನೋಡಿಕೊಳ್ಳಿ. ಬೇಕಿದ್ದರೆ ಎಲ್ಲಾ ಹುಡುಗರ ಕಾಲಿಗೆ ಬೀಳುತ್ತೇನೆ. ನಿಮ್ಮ ಜೀವ ಮುಖ್ಯ ಅದನ್ನು ನೋಡಿಕೊಳ್ಳಿ ಎಂದು ಮೃತ ಭರತ್ ಚಿಕ್ಕಮ್ಮ ಮಾಧ್ಯಮಗಳಿಗೆ ಹೇಳಿದ್ದಾರೆ.

ಹೆಚ್. ವಿನೋದ್ ನಿರ್ದೇಶನದ ಆಕ್ಷನ್ ಎಂಟರ್ಟೈನರ್ ಸಿನಿಮಾ 'ಥುನಿವು' ಸಖತ್ ಸದ್ದು ಮಾಡ್ತಿದೆ. ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದ್ದು, ಸಂಕ್ರಾಂತಿ ಸಂಭ್ರಮದಲ್ಲಿ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಆಗುವ ನಿರೀಕ್ಷೆಯಿದೆ. ಬೋನಿ ಕಪೂರ್ ನಿರ್ಮಾಣದ ಈ ಚಿತ್ರದಲ್ಲಿ ಮಂಜು ವಾರಿಯರ್, ಸಮುದ್ರ ಖನಿ, ಪಾವನಿ ರೆಡ್ಡಿ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.


Click it and Unblock the Notifications