ಅಕ್ಟೋಬರ್ 25-2021 ಸೂಪರ್ ಸ್ಟಾರ್ ರಜನಿಕಾಂತ್ ಬಾಳಲ್ಲಿ ಪ್ರಮುಖ ದಿನ!
ನಟ ರಜನಿಕಾಂತ್ ಭಾರತೀಯ ಸಿನಿಮಾ ರಂಗ ಕಂಡ ಮೇರು ನಟ. ರಜನಿಕಾಂತ್ ದಶಕಗಳ ಕಾಲ ಸಿನಿಮಾ ರಂಗವನ್ನು ಅಕ್ಷರಶಃ ಆಳಿದ್ದಾರೆ. ಈಗಲೂ ಆಳುತ್ತಾ ಇದ್ದಾರೆ. ರಜನಿ ಸಿನಿಮಾಗಳಿಗೆ ವಿಶ್ವಾದ್ಯಂತ ಪ್ರೇಕ್ಷಕರಿದ್ದಾರೆ. ಬರಿ ಅವರ ಸಿನಿಮಾಗಳಿಗೆ ಮಾತ್ರವಲ್ಲ, ಬದಲಿಗೆ ರಜನಿ ಅಂದ್ರೆ ದೇವರಂತೆ ಪೂಜೆ ಮಾಡುವ ಅಪ್ಪಟ್ಟ ಅಭಿಮಾನಿಗಳು ಇದ್ದಾರೆ. ಕಲೆಯನ್ನು ಆರಾಧಿಸುವ ರಜನಿಕಾಂತ್ ಅವರನ್ನು ಆರಾಧಿಸುವ ಸಹಸ್ರಾರು ಜನರು ಇದ್ದಾರೆ. ಹಾಗಾಗಿಯೇ ನಟ ರಜನಿಕಾಂತ್ಗೆ ಇರುವ ವರ್ಚಸ್ಸು ಒಂದಿಷ್ಟು ಕಡಿಮೆ ಆಗಿಲ್ಲ. ರಜನಿಕಾಂತ್ ಬದುಕಲ್ಲಿ ನಾಳೆ ಅಂದರೆ ಅಕ್ಟೋಬರ್ 25-2021 ತುಂಬಾ ಪ್ರಮುಖ ದಿನ. ಈ ವಿಚಾರವನ್ನು ಸ್ವತಃ ರಜನಿಕಾಂತ್ ಟ್ವೀಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.
ಎರಡು ಕಾರಣಗಳಿಂದ ನಾಳೆ ನನಗೆ ತುಂಬಾ ಮುಖ್ಯವಾದ ದಿನ ಎಂದು ಬರೆಯುವ ಮೂಲಕ ರಜನಿಕಾಂತ್ ಕುತೂಹಲ ಮೂಡಿಸಿದ್ದಾರೆ. ಜೊತೆಗೆ ಯಾವ ಕಾರಣ ಅನ್ನುವುದನ್ನು ರಜನಿಕಾಂತ್ ಟ್ವಿಟ್ಟರ್ನಲ್ಲೆ ಬಹಿರಂಗ ಪಡಿಸಿದ್ದಾರೆ. ಮೊದಲನೆಯದಾಗಿ ರಜನಿಕಾಂತ್ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಸ್ವೀಕಾರ ವಿಚಾರದ ಬಗ್ಗೆ ಬರೆದುಕೊಂಡಿದ್ದಾರೆ. "ನಾಳೆ ನಾನು ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಸ್ವೀಕಾರ ಮಾಡುತ್ತಾ ಇದ್ದೇನೆ. ಜನರ ಪ್ರೀತಿ ಮತ್ತು ಸಹಕಾರದಿಂದ ಭಾರತೀಯ ಸರ್ಕಾರ ನನಗೆ ಪ್ರಶಸ್ತಿ ನೀಡುತ್ತಿದೆ". ಎಂದು ರಜನಿ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ 2021ರ ಏಪ್ರಿಲ್ನಲ್ಲಿ ರಜನಿಕಾಂತ್ಗೆ ದಾದಾಸಾಹೇಬ್ ಪ್ರಶಸ್ತಿ ಪ್ರಕಟ ಮಾಡಿದ್ದರು. ಆದ್ರೆ ಕೊರೊನಾ ಕಾರಣಕ್ಕೆ ಪ್ರಶಸ್ತಿ ಪ್ರದಾನ ಕೊಂಚ ತಡವಾಗಿದೆ.
ಈ ಬಗ್ಗೆ ಚೆನ್ನೈನ ಮಾಧ್ಯಮಗಳನ್ನು ಕುರಿತು ರಜನಿಕಾಂತ್ ಮಾತನಾಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ತಮ್ಮ ಗುರು ಕೆ.ಬಾಲಚಂದರ್ ಈ ಸಮಯದಲ್ಲಿ ಇಲ್ಲದೆ ಇರುವುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಯಾಕೆಂದರೆ ರಜನಿಕಾಂತ್ ತಮ್ಮ ಮೊದಲ ಸಿನಿಮಾ ಪಯಣವನ್ನ ಆರಂಭಿಸಿದ್ದು "ಅಪೂರ್ವ ಸಂಗಮ" ಚಿತ್ರದ ಮೂಲಕ ನಿರ್ದೇಶಕ ಕೆ.ಬಾಲಚಂದರ್ ಜೊತೆಗೆ. ನಾಳೆ ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಜನಿಕಾಂತ್ ಕೂಡ ಹಾಜರಾಗಿ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.

ರಜನಿಕಾಂತ್ ಸತತ 40 ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯ ಆಗಿದ್ದಾರೆ. ಈಗಲೂ ರಜನಿಕಾಂತ್ ಸಿನಿಮಾ ಮಾಡುತ್ತಿದ್ದಾರೆ ಅಂದ್ರೆ, ಎಲ್ಲಿಲ್ಲದ ಕ್ರೇಜ್ ಹುಟ್ಟಿಕೊಳ್ಳುತ್ತದೆ. ರಜನಿ ಕಾಲದಿಂದ ಹಿಡಿದು ಈಗಿನ ಮಕ್ಕಳಿಗೂ ರಜನಿಕಾಂತ್ ಇಷ್ಟ ಆಗಿ ಬಿಡ್ತಾರೆ. ಚಿತ್ರರಂಗಕ್ಕೆ ರಜನಿ ಕೊಟ್ಟ ಕೊಡುಗೆ ಇಂದು ಅವರಿಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ತಂದು ಕೊಟ್ಟಿದೆ.

ಮಗಳ ಪ್ರಯತ್ನಕ್ಕೆ ರಜಿನಿಕಾಂತ್ ಸಾಥ್!
ಟ್ವಿಟ್ಟರ್ ನಲ್ಲಿ ರಜನಿಕಾಂತ್ ಮತ್ತೊಂದು ವಿಚಾರವನ್ನು ಹಂಚಿಕೊಂಡಿದ್ದಾರೆ. ರಜನಿಕಾಂತ್ ಮಗಳು ಸೌಂದರ್ಯ ವಿಷಗನ್ ಹೊಸ ಆ್ಯಪ್ ಮೂಲಕ ಹೊಸ ಹೆಜ್ಜೆ ಇಡುತ್ತಿದ್ದಾರೆ. ಈ ಆ್ಯಪ್ ನಾಳೆ ರಜನಿಕಾಂತ್ ಲಾಂಚ್ ಮಾಡುತ್ತಿದ್ದಾರೆ. ಈ ಆ್ಯಪ್ ಮೂಲಕ ನಿಮ್ಮ ಅನಿಸಿಕೆ, ಸಂದೇಶ, ಶುಭಾಶಯ ಎಲ್ಲವನ್ನೂ ಹಂಚಿಕೊಳ್ಳ ಬಹುದು ಎಂದು ರಜನಿಕಾಂತ್ ಟ್ವಿಟ್ಟರ್ ಪತ್ರದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











