ಪುನೀತ್ ಅಗಲಿಕೆ ಸಹಿಸಲು ಆಗುತ್ತಿಲ್ಲ: ಅಪ್ಪು ಸಮಾಧಿ ಬಳಿ ತಮಿಳು ನಟ ಸೂರ್ಯ ಹೇಳಿಕೆ
ಪುನೀತ್ ರಾಜ್ಕುಮಾರ್ ಹಠಾತ್ ನಿಧನ ಇಡೀ ದಕ್ಷಿಣ ಭಾರತೀಯ ಚಿತ್ರರಂಗವನ್ನೇ ಕಂಗಾಲು ಮಾಡಿದೆ. ಅಪ್ಪು ಅಗಲಿದ ದಿನದಿಂದ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ತಾರೆಯರು ಸಮಾಧಿಗೆ ಭೇಟಿ ನೀಡಿ ಗೌರವ ಸೂಚಿಸುತ್ತಿದ್ದಾರೆ. ಶಿವ ಕಾರ್ತೀಕೇಯ, ವಿಶಾಲ್, ರಾಮ್ ಚರಣ್ ಸೇರಿದಂತೆ ತೆಲುಗು ತಮಿಳು ಚಿತ್ರರಂಗದ ನಟರು ಪುನೀತ್ ಮನೆಗೆ ಹಾಗೂ ಸಮಾಧಿ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.
ಇಂದು( ನವೆಂಬರ್ 5)ರಂದು ತಮಿಳಿನ ಸೂರರೈ ಪೋಟ್ರು ಖ್ಯಾತಿಯ ನಟ ಸೂರ್ಯ ಪುನೀತ್ ಸಮಾಧಿಗೆ ಭೇಟಿ ನೀಡಿದ್ದಾರೆ. ಶಿವಣ್ಣನ ಜೊತೆ ಪುನೀತ್ ರಾಜ್ಕುಮಾರ್ ಸಮಾಧಿಗೆ ಬಂದಿದ್ದ ಸೂರ್ಯ ಭಾವುಕರಾಗಿದ್ದರು. ಇದೇ ವೇಳೆ ಅಪ್ಪು ಅಭಿಮಾನಿಗಳಿಗೆ, ಕುಟುಂಬಕ್ಕೆ ಹಾಗೂ ಕನ್ನಡಿಗರಿಗೆ ಸಮಾಧಾನದ ಮಾತುಗಳನ್ನು ಆಡಿದ್ದಾರೆ.

ಪುನೀತ್ ಅಗಲಿಕೆ ಸಹಿಸಲು ಆಗಲ್ಲ
ಪುನೀತ್ ರಾಜ್ಕುಮಾರ್ ಸಮಾಧಿಗೆ ನಟ ಸೂರ್ಯ ಭೇಟಿ ನೀಡಿದ್ದಾರೆ. ಈ ವೇಳೆ "ಪುನೀತ್ ರಾಜ್ಕುಮಾರ್ ಅಗಲಿಕೆಯನ್ನು ಸಹಿಸಲು ಸಾಧ್ಯವಿಲ್ಲ. ನನಗೆ ನಾಲ್ಕು ತಿಂಗಳಿದ್ದಾಗ, ಅಪ್ಪುಗೆ ಏಳು ತಿಂಗಳು. ಅವರ ಎಲ್ಲಾ ಫೋಟೋಗಳಲ್ಲೂ ಸದಾ ನಗುತ್ತಲೇ ಇರುತ್ತಿದ್ದರು. ಪುನೀತ್ ರಾಜ್ಕುಮಾರ್ ಯಾವಾಗಲೂ ನಮ್ಮ ಹೃದಯಗಳಲ್ಲಿ ಸದಾ ಇರುತ್ತಾರೆ. ಯಾವಾಗಲೂ ನಗುತ್ತಲೇ ಇರುತ್ತಾರೆ." ಅಂತ ನಟ ಸೂರ್ಯ ಭಾವುಕರಾಗಿದ್ದಾರೆ.

ಅಣ್ಣಾವ್ರೇ ನನಗೆ ಮಾದರಿ
ಡಾ. ರಾಜ್ಕುಮಾರ್ ಅವರನ್ನು ನೋಡಿ ಬೆಳೆದಿದ್ದೇನೆ. ಅಣ್ಣಾವ್ರ ನನಗೆ ಮಾದರಿಯಾಗಿದ್ದರು. ಅವರಂತೆ ಪುನೀತ್ ರಾಜ್ಕುಮಾರ್ ಕೂಡ ಅದೆಷ್ಟೋ ಮಂದಿಗೆ ಮಾದರಿಯಾಗಿದ್ದಾರೆ. ಅಪ್ಪು ಮಾಡಿದ ಸಮಾಜ ಮುಖಿ ಕೆಲಸಗಳನ್ನು ಕೇಳಿದ್ದೇನೆ. ಹೀಗಾಗಿ ಇಂತಹ ದುಃಖದ ಸಂದರ್ಭದಲ್ಲಿ ಎಲ್ಲಾ ಕನ್ನಡಿಗರಿಗೂ ನಾನು ಏನು ಹೇಳಬೇಕು ಎಂಬುದೇ ತೋಚುತ್ತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಪುನೀತ್ ರಾಜ್ಕುಮಾರ್ ಕುಟುಂಬಕ್ಕೆ ಧೈರ್ಯ ನೀಡಲಿ" ಎನ್ನುವಾಗ ಸೂರ್ಯ ಗದ್ಗದಿತರಾಗಿದ್ದರು.

ಸಮಾಧಿ ಬಳಿಕ ಪುನೀತ್ ಮನೆಗೆ ಭೇಟಿ
ಪುನೀತ್ ರಾಜ್ಕುಮಾರ್ ಸಮಾಧಿಯಿಂದ ಕಣ್ಣೀರು ಹಾಕಿತ್ತಾ ಶಿವಣ್ಣನ ಜೊತೆ ಸೂರ್ಯ ತೆರಳಿದ್ದರು. ಸಮಾಧಿ ಬಳಿಕ ಸೂರ್ಯ ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ಪುನೀತ್ ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನದ ಮಾತುಗಳನ್ನು ಹೇಳಿ ಹೊರಟಿದ್ದಾರೆ.

ಅಪ್ಪು ಸೂರ್ಯ ಮರೆಯಲಾಗದ ಸ್ನೇಹ
ಪುನೀತ್ ರಾಜ್ಕುಮಾರ್ ಹಾಗೂ ಸೂರ್ಯ ಅವರ ಸ್ನೇಹಿ ಇಂದು ನಿನ್ನೆಯದಲ್ಲ. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಹುಟ್ಟಿಕೊಂಡಿದ್ದೂ ಅಲ್ಲ. ಡಾ. ರಾಜ್ಕುಮಾರ್ ಅವರ ಕಾಲದಿಂದಲೇ ಎರಡೂ ಕುಟುಂಬಕ್ಕೂ ಅನ್ಯೋನ್ಯದ ಸಂಬಂಧವಿದೆ. ಹೀಗಾಗಿ ಸೂರ್ಯ ಹಾಗೂ ಪುನೀತ್ ರಾಜ್ಕುಮಾರ್ ಬಾಲ್ಯದಿಂದಲೇ ಸ್ನೇಹಿತರಾಗಿದ್ದರು. ಹಿಂದೊಮ್ಮೆ ಸೂರ್ಯ ತಮ್ಮ ತಮಿಳು ಸಿನಿಮಾ ಅಂಜಾನ್ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಪುನೀತ್ ರಾಜ್ಕುಮಾರ್ಗೆ ಆಹ್ವಾನ ನೀಡಿದ್ದರು. ಕಮಲ್ ಹಾಸನ್ ವಿಶೇಷ ಅತಿಥಿಯಾಗಿ ಆಗಮಿಸಿದ್ರೆ, ಪುನೀತ್ ಆಡಿಯೋ ಲಾಂಚ್ ಮಾಡಲು ಆಹ್ವಾನ ಕೊಟ್ಟಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.

ಅಪ್ಪು ಸಮಾಧಿಗೆ ಭೇಟಿ ನೀಡಲು ಅವಕಾಶ
ತಮಿಳು ನಟ ಸೂರ್ಯ ಪುನೀತ್ ರಾಜ್ಕುಮಾರ್ ಮನೆಗೆ ಭೇಟಿ ನೀಡಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಕಳೆದ ಎರಡು ದಿನಗಳಿಂದ ಅಪ್ಪು ಸಮಾಧಿಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ. ಮತ್ತೆ ಕೆಲವೆಡೆ ಪುನೀತ್ ರಾಜ್ಕುಮಾರ್ ಸಾವನ್ನು ಅರಗಿಸಿಕೊಳ್ಳಲಾಗದೆ ನೊಂದು ಆತ್ಮಹತ್ಯೆಗೂ ಶರಣಾಗುತ್ತಾರೆ. ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಇಬ್ಬರೂ ಆತ್ಮಹತ್ಯೆಗೆ ಶರಣಾಗದಿರುವಂತೆ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











