ರಾಷ್ಟ್ರ ಪ್ರಶಸ್ತಿಯಲ್ಲಿ ಸೂರರೈ ಪೋಟ್ರು ಮೇಲುಗೈ: ಮಕ್ಕಳೊಂದಿಗೆ ಖುಷಿ ಹಂಚಿಕೊಂಡ ಸೂರ್ಯ-ಜ್ಯೋತಿಕಾ
ಚಿತ್ರರಂಗದ ಸಾಧಕರಿಗೆ ಕೊಡಮಾಡುವ ಅತ್ಯುನ್ನತ ಗೌರವ ರಾಷ್ಟ್ರ ಪ್ರಶಸ್ತಿ. ಅತ್ಯುತ್ತಮ ಚಿತ್ರಗಳನ್ನು ಗುರುತಿಸಿ ಕೇಂದ್ರ ಸರ್ಕಾರ ೬೮ನೇ ರಾಷ್ಟ್ರ ಪ್ರಶಸ್ತಿಯ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಘೋಷಣೆ ಮಾಡಿತ್ತು. ನಿನ್ನೆ (ಸೆಪ್ಟೆಂಬರ್ 30) ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದರರಿಗೆ ದೆಹಲಿಯ ವಿಗ್ಯಾನ್ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದ ಕೆಲವು ಭಾಷೆಯ ಕಲಾವಿದರು ಈ ಬಾರಿಯ ರಾಷ್ಟ್ರ ಪ್ರಶಸ್ತಿಗೆ ಪಾತ್ರರಾದರು. ಆದರೆ ಈ ಬಾರಿ ತಮಿಳಿನ ಸೂರರೈ ಪೋಟ್ರು ಚಿತ್ರ ಮೇಲುಗೈ ಸಾಧಿಸಿದೆ. ಬರೋಬ್ಬರಿ ನಾಲ್ಕು ವಿಭಾಗಗಳಲ್ಲಿ ಸೂರರೈ ಪೋಟ್ರು ಚಿತ್ರ ಈ ಬಾರಿಯ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಸೂರರೈ ಪೋಟ್ರು ಚಿತ್ರ ಚಿತ್ರದ ನಟನೆಗಾಗಿ ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಇನ್ನು ಸೂರರೈ ಪೋಟ್ರು ಚಿತ್ರದ ನಾಯಕಿ ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಕಥಾಚಿತ್ರ ಪ್ರಶಸ್ತಿ ಕೂಡ ಸೂರರೈ ಪೋಟ್ರು ಚಿತ್ರಕ್ಕೆ ಬಂದಿದ್ದು, ಅತ್ಯುತ್ತಮ ಚಿತ್ರಕಥೆಗಾಗಿ ಸೂರರೈ ಪೋಟ್ರು ಚಿತ್ರದ ಶಾಲಿನಿ ಉಷಾ ನಾಯರ್ ಹಾಗೂ ಸುಧಾ ಕೊಂಗರು ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡರು.
ನಟಿ ಜ್ಯೋತಿಕಾ ಹಾಗೂ ನಟ ಸೂರ್ಯ ಸಹ ನಿರ್ಮಾಣದಲ್ಲಿ ಮೂಡಿಬಂದ ಸೂರರೈ ಪೋಟ್ರು ಚಿತ್ರ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇನ್ನು ತಾನಾಜಿ ಚಿತ್ರದ ನಾಯಕ ಅಜಯ್ ದೇವಗನ್ ಜೊತೆ ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ ಖುಷಿಯಲ್ಲಿರುವ ನಟ ಸೂರ್ಯ ಹಾಗೂ ಜ್ಯೋತಿಕಾ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿದೆ.
ನಟಿ ಜ್ಯೋತಿಕಾ ಈ ಖುಷಿಯ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ತೆಗೆದ ಫೋಟೋಗಳನ್ನು ಜ್ಯೋತಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇಂತಹ ಗೌರವ ಪಡೆದಿರುವುದಕ್ಕಾಗಿ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.
ಜೊತೆಗೆ ನಮ್ಮ ನಿರ್ಮಾಣದ ಸೂರರೈ ಪೋಟ್ರು ಚಿತ್ರಕ್ಕೆ ಅತಿಹೆಚ್ಚು ರಾಷ್ಟ್ರ ಪ್ರಶಸ್ತಿ ಬಂದಿರುವ ಸಂಭ್ರಮವನ್ನು ಮಕ್ಕಳಾದ ದಿಯಾ ಹಾಗೂ ದೇವ್ ಜೊತೆ ಹಂಚಿಕೊಂಡಿದ್ದಾರೆ. ಈ ವಿಶೇಷ ಕ್ಷಣದ ಫೋಟೋವನ್ನು ಜ್ಯೋತಿಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜ್ಯೋತಿಕಾ ಪೋಸ್ಟ್ ವೈರಲ್ ಆಗುತ್ತಿದ್ದು, ನಟಿ ಜೋತಿ ಹಾಗೂ ನಟ ಸೂರ್ಯ ಅವರ ಅಪಾರ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ರಾಷ್ಟ್ರ ಪಶಸ್ತಿ ಪಡೆದಿರುವುದಕ್ಕಾಗಿ ಅಭಿನಂದನೆ ತಿಳಿಸಿದ್ದಾರೆ.

ಇನ್ನು ಈ ಬಾರಿ ಕನ್ನಡ ಚಿತ್ರರಂಗದ ಸಿನಿಮಾಗಳು ಕೂಡ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿಶಿಷ್ಟವಾದ ಕತೆ ಹೊಂದಿರುವ ಸಾಗರ್ ಪುರಾಣಿಕ್ ನಿರ್ದೇಶನದ ಕಾರ್ತಿಕ್ ಮಹೇಶ್ ಹಾಗೂ ನಿಧಿ ಹೆಗ್ಡೆ ನಟನೆಯ 'ಡೊಳ್ಳು' ಚಿತ್ರ ಹಾಗೂ ದಿವಂಗತನ ನಟ ಸಂಚಾರಿ ವಿಜಯ್ ಅಭಿನಯ 'ತಲೆ ದಂಡ' ಚಿತ್ರ ಹಾಗೂ ಗಿರೀಶ್ ಕಾಸರವಳ್ಳಿ ನಿರ್ದೇಶನದ 'ನಾದದ ನವನೀತ ಡಾ. ಪಿಟಿ ವೆಂಕಟೇಶ್ ಕುಮಾರ್' ಚಿತ್ರಗಳು ಈ ಬಾರಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿವೆ.


Click it and Unblock the Notifications











