ಅಜಿತ್ ಸಿನಿಮಾ ನಿರ್ದೇಶಕನ ಮೇಲೆ ಅಭಿಮಾನಿಗಳ ಸಿಟ್ಟು! ಹಾಗನ್ನಬಾರದಿತ್ತು!
ಬರೋಬ್ಬರಿ ಎಂಟು ವರ್ಷಗಳ ಬಳಿಕ ತಮಿಳು ಚಿತ್ರರಂಗದಲ್ಲಿ ಬದ್ಧ ಪ್ರತಿಸ್ಪರ್ಧಿಗಳಾದ ಅಜಿತ್ ಹಾಗೂ ವಿಜಯ್ರ ಸಿನಿಮಾಗಳು ಪರಸ್ಪರ ಎದುರಾಗಿವೆ.
ವಿಜಯ್ರ 'ವಾರಿಸು' ಹಾಗೂ ಅಜಿತ್ ನಟನೆಯ 'ತುನಿವು' ಸಿನಿಮಾ ಒಂದೇ ದಿನ ಬಿಡುಗಡೆ ಆಗಲಿದೆ. ವಿಜಯ್ ಹಾಗೂ ಅಜಿತ್ ಅಭಿಮಾನಿಗಳು ಕೆಲ ವರ್ಷಗಳಿಂದಲೂ ಪರಸ್ಪರ ಕಚ್ಚಾಡುತ್ತಲೇ ಬಂದಿದ್ದಾರೆ. ಇದೀಗ ಇಬ್ಬರ ಸಿನಿಮಾಗಳು ಒಂದೇ ದಿನ ತೆರೆಗೆ ಬರುತ್ತಿರುವ ಸಮಯದಲ್ಲಿ ಈ ಕಚ್ಚಾಟ ಇನ್ನೂ ಹೆಚ್ಚಾಗಿದೆ.
'ವಾರಿಸು' ಹಾಗೂ 'ತುಣಿವು' ಸಿನಿಮಾಗಳ ತಂಡದವರು ಅದ್ಧೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಅಜಿತ್ರ 'ತುನಿವು' ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಆ ಸಿನಿಮಾದ ನಿರ್ದೇಶಕ ಹೇಳಿರುವ ಮಾತುಗಳ ಬಗ್ಗೆ ಸ್ವತಃ ಅಜಿತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
'ತುನಿವು' ಸಿನಿಮಾ ನಿರ್ದೇಶನ ಮಾಡಿರುವ ಎಚ್.ವಿನೋದ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಅಭಿಮಾನಿಗಳು ಸುಖಾ ಸುಮ್ಮನೆ ತಮ್ಮ ಮೌಲ್ಯಯುತ ಸಮಯವನ್ನು ಸಿನಿಮಾಕ್ಕಾಗಿ, ಸ್ಟಾರ್ ನಟರಿಗಾಗಿ ವೇಸ್ಟ್ ಮಾಡುತ್ತಾರೆ. ತಮ್ಮ ಸಮಯವನ್ನು ನಟರಿಗಾಗಿ ಅಭಿಮಾನಿಗಳು ಕೊಡುತ್ತಾರೆ. ಆದರೆ ಸ್ಟಾರ್ ನಟರು ಆ ಅಭಿಮಾನಿಗಳಿಗೆ ಏನು ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಹೀರೋ, ನಿರ್ಮಾಣ ಸಂಸ್ಥೆ ಏನು ನೀಡುತ್ತದೆ: ವಿನೋದ್ ಪ್ರಶ್ನೆ
''ಕೋಟ್ಯಂತರ ರುಪಾಯಿ ಹಣ ಖರ್ಚು ಮಾಡಿ ಪ್ರಚಾರ ಮಾಡಿದರೂ ಸಿಗದಷ್ಟು ಪ್ರಚಾರವನ್ನು ಅಭಿಮಾನಿಗಳು ಮಾಡುತ್ತಾರೆ. ಸಾಕಷ್ಟು ಸಮಯವನ್ನು ಅಭಿಮಾನಿಗಳು ಇದಕ್ಕಾಗಿ ಖರ್ಚು ಮಾಡುತ್ತಾರೆ. ನಟರಿಗೆ ಬಿಲ್ಡ್ ಅಪ್ಗಳನ್ನು ನೀಡುತ್ತಾರೆ. ಸಿನಿಮಾಕ್ಕಾಗಿ ಇಷ್ಟೋಂದೆಲ್ಲ ಸಮಯ ಖರ್ಚು ಮಾಡುವ ಅಭಿಮಾನಿಗಳಿಗೆ ಹೀರೋ ಆಗಲಿ ನಿರ್ಮಾಣ ಸಂಸ್ಥೆಯಾಗಲಿ ಏನು ಮಾಡಿದೆ?'' ಎಂದು ವಿನೋದ್ ಪ್ರಶ್ನೆ ಮಾಡಿದ್ದಾರೆ.

ಸಮಯ, ಹಣ ವ್ಯರ್ಥ ಮಾಡಬೇಡಿ: ವಿನೋದ್
''ಯಾವುದೇ ವ್ಯಕ್ತಿಯಾಗಲಿ ಸಿನಿಮಾಕ್ಕಾಗಿ ಹೆಚ್ಚು ಸಮಯ ವ್ಯರ್ಥ ಮಾಡುವ ಅವಶ್ಯಕತೆಯೇ ಇಲ್ಲ. ಟ್ರೈಲರ್ ಬಿಡುಗಡೆ ಆದಾಗ, ಪೋಸ್ಟರ್ ಬಿಡುಗಡೆ ಆದಾಗ ನೋಡಿ ನಿಮಗೆ ಆಸಕ್ತಿ ಎನಿಸಿದರೆ ಸಿನಿಮಾಕ್ಕೆ ಹೋಗಿ. ನಿಮಗೆ ಸಿನಿಮಾ ಇಷ್ಟವಾಯಿತೆಂದರೆ ಇನ್ನೂ ಕೆಲವರಿಗೆ ಹೇಳಿ ಸಾಕು. ಒಂದೊಮ್ಮೆ ಅದೇ ದಿನ ಬಿಡುಗಡೆ ಆದ ಇನ್ನೊಂದು ಸಿನಿಮಾವೂ ಚೆನ್ನಾಗಿದೆ ಎಂದಾದರೆ, ನಿಮ್ಮಲ್ಲಿ ಸಮಯ ಮತ್ತು ಹಣ ಇದ್ದರೆ ಆ ಸಿನಿಮಾಕ್ಕೂ ಹೋಗಿ. ಅದನ್ನು ಬಿಟ್ಟು ಸಿನಿಮಾಕ್ಕಾಗಿ ಅತಿಯಾಗಿ ಸಮಯವನ್ನು, ಹಣವನ್ನು ವ್ಯರ್ಥ ಮಾಡಬೇಡಿ'' ಎಂದಿದ್ದಾರೆ.

ಅಭಿಮಾನಿಗಳ ಅಸಮಾಧಾನ
ಆದರೆ ವಿನೋದ್ ಹೇಳಿಕೆ ಬಗ್ಗೆ ನಟರ ಅಭಿಮಾನಿಗಳು ವಿಶೇಷವಾಗಿ ಅಜಿತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಜಿತ್ ಸಿನಿಮಾ ಬಿಡುಗಡೆ ಸಮಯದಲ್ಲಿ ಅಜಿತ್ ಅಭಿಮಾನಿಗಳು ಸಿನಿಮಾಕ್ಕಾಗಿ ಹೆಚ್ಚು ಸಮಯ ವ್ಯರ್ಥ ಮಾಡದಿದ್ದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಅಜಿತ್ ಸಿನಿಮಾ ಸೋಲಲೆಂದೇ ಈ ನಿರ್ದೇಶಕ ಹೀಗೆ ಹೇಳುತ್ತಿದ್ದಾನೆ ಎಂದು ಸಹ ಕೆಲವರು ಆರೋಪ ಮಾಡಿದ್ದಾರೆ. ಆದರೆ ಇನ್ನು ಕೆಲವು ತಟಸ್ಥ ಸಿನಿಮಾ ಪ್ರೇಮಿಗಳು ವಿನೋದ್ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಎಂಟು ವರ್ಷಗಳ ಬಳಿಕ ಎದುರು-ಬದುರು
ಬರೋಬ್ಬರಿ ಎಂಟು ವರ್ಷದ ಬಳಿಕ ವಿಜಯ್ ಹಾಗೂ ಅಜಿತ್ ಸಿನಿಮಾಗಳು ಒಂದೇ ದಿನ ತೆರೆಗೆ ಬರುತ್ತಿವೆ. ದಿಲ್ ರಾಜು ನಿರ್ಮಿಸಿ, ವಂಶಿ ಪೈಡಪಲ್ಲಿ ನಿರ್ದೇಶಿಸಿರುವ 'ವಾರಿಸು' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ವಿಜಯ್ ಎದುರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ತೆಲುಗು ಆವೃತ್ತಿ ತುಸು ತಡವಾಗಿ ಬಿಡುಗಡೆ ಆಗುತ್ತಿದೆಯಾದರೂ ತಮಿಳು ವರ್ಷನ್ ಜನವರಿ 12 ರಂದೇ ತೆರೆಗೆ ಬರಲಿದೆ. ಇನ್ನು ಅಜಿತ್ ನಟನೆಯ 'ತುನಿವು' ಸಿನಿಮಾ ಸಹ ಅದೇ ದಿನ ಬಿಡುಗಡೆ ಆಗಲಿದ್ದು, ಸಿನಿಮಾವು ಬ್ಯಾಂಕ್ ರಾಬರಿ ಕುರಿತಾದ ಕತೆಯನ್ನು ಒಳಗೊಂಡಿದೆ.


Click it and Unblock the Notifications











