ಶಂಕರ್ಗೆ ಸೆಡ್ಡು ಹೊಡೆದ ರವಿಚಂದ್ರನ್: ಒಂದೇ ಚಿತ್ರವನ್ನು ಇಬ್ಬರು ರಿಮೇಕ್?
ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಮತ್ತು ನಿರ್ಮಾಪಕ ಆಸ್ಕರ್ ರವಿಚಂದ್ರನ್ ನಡುವಿನ ರಿಮೇಕ್ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆ ಶಂಕರ್ ಸಿನಿಮಾ ಮಾಡ್ತಿದ್ದು, ಇದು ತಮಿಳಿನ ಹಿಟ್ ಚಿತ್ರ 'ಅನ್ನಿಯನ್' ರಿಮೇಕ್ ಎಂದು ಹೇಳಿಕೊಂಡಿದ್ದಾರೆ.
ಇದೀಗ, ನಾನು ಕೂಡ 'ಅನ್ನಿಯನ್' ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡುತ್ತೇನೆ ಎಂದು ಮೂಲ ನಿರ್ಮಾಪಕ ಆಸ್ಕರ್ ರವಿಚಂದ್ರನ್ ಘೋಷಿಸಿದ್ದಾರೆ. ಇದು ನಿರ್ದೇಶಕ ಶಂಕರ್ಗೆ ದೊಡ್ಡ ತಲೆನೋವು ತಂದಿದೆ.
''ಎಲ್ಲರೂ ನಾನು ದುಡ್ಡಿಗಾಗಿ ಬೇಡಿಕೆಯಿಟ್ಟಿದ್ದೇನೆ ಎಂದು ಹೇಳುತ್ತಿದ್ದಾರೆ. ನಾನು ಯಾವತ್ತೂ ದುಡ್ಡು ಕೇಳಿಲ್ಲ. ಏಕಂದ್ರೆ ಇದು ನನ್ನ ಆಸ್ತಿ. ಡಿಸೆಂಬರ್ ತಿಂಗಳಿಗೂ ಮುಂಚೆ ನಾನು ಅನ್ನಿಯನ್ ಹಿಂದಿ ರಿಮೇಕ್ ಚಿತ್ರವನ್ನು ಬಹಳ ಅದ್ಧೂರಿಯಾಗಿ ಪ್ರಕಟಿಸುತ್ತೇನೆ'' ಎಂದು ನಿರ್ಮಾಪಕ ರವಿಚಂದ್ರನ್ ಮಾಹಿತಿ ನೀಡಿದ್ದಾರೆ. ಮುಂದೆ ಓದಿ....

ಒಂದೇ ಚಿತ್ರ, ಎರಡು ರಿಮೇಕ್!
ಶಂಕರ್ ಮತ್ತು ರಣ್ವೀರ್ ಸಿಂಗ್ ಕಾಂಬಿನೇಷನ್ನಲ್ಲಿ ಅನ್ನಿಯನ್ ರಿಮೇಕ್ ಚಿತ್ರ ಘೋಷಣೆಯಾಗಿದೆ. ಇದರ ಬೆನ್ನಲ್ಲೆ ತಮಿಳಿನ ಅನ್ನಿಯನ್ ಸಿನಿಮಾದ ಮೂಲ ನಿರ್ಮಾಪಕ ಆಸ್ಕರ್ ರವಿಚಂದ್ರನ್, ನಾನು ಕೂಡ ಹಿಂದಿಯಲ್ಲಿ ಅನ್ನಿಯನ್ ರಿಮೇಕ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಈಗ ಒಂದೇ ಚಿತ್ರದ ಬಗ್ಗೆ ಎರಡು ರಿಮೇಕ್ ಪ್ರಕಟಿಸಿದಂತೆ ಆಯಿತು. ಆಸ್ಕರ್ ರವಿಚಂದ್ರನ್ ಅವರ ಈ ನಿರ್ಧಾರ ಈಗ ಗೊಂದಲ ಸೃಷ್ಟಿಸಿದ್ದು, ಅನ್ನಿಯನ್ ರಿಮೇಕ್ ಯಾರ ಪಾಲು ಆಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ರಿಮೇಕ್ ಹಕ್ಕು ಯಾರಿಗಿದೆ?
ಒಂದು ಭಾಷೆಯಲ್ಲಿ ತಯಾರಾದ ಚಿತ್ರವನ್ನು ಬೇರೆಯೊಂದು ಭಾಷೆಗೆ ರಿಮೇಕ್ ಮಾಡಬೇಕಾದರೆ ಮೂಲ ನಿರ್ಮಾಪಕರಿಂದ ಹಕ್ಕು ಖರೀದಿಸಬೇಕು. ಹಾಗ್ನೋಡಿದ್ರೆ, ಅನ್ನಿಯನ್ ಚಿತ್ರದ ರಿಮೇಕ್ ಹಕ್ಕು ಆಸ್ಕರ್ ರವಿಚಂದ್ರನ್ ಬಳಿ ಇದೆ. ಈ ಕಡೆ ಅನ್ನಿಯನ್ ಚಿತ್ರಕ್ಕೆ ಕಥೆ ಮಾಡಿರುವುದು ಶಂಕರ್. ಹಾಗಾಗಿ, ಈ ಕಥೆಯನ್ನು ಸ್ಫೂರ್ತಿಯಾಗಿರಿಸಿಕೊಂಡು ಹಿಂದಿಯಲ್ಲಿ ಸಿನಿಮಾ ಮಾಡ್ತೇನೆ ಎಂದು ಹೇಳಿದ್ದಾರೆ. ಈ ಚಿತ್ರದ ರಿಮೇಕ್ ಮೇಲೆ ಯಾರಿಗೆ ನಿಜವಾದ ಹಕ್ಕಿದೆ ಎನ್ನುವುದು ನಿರ್ಮಾಪಕ ಹಾಗೂ ನಿರ್ದೇಶಕ ಸಂಘ ನಿರ್ಧರಿಸಬೇಕಿದೆ.

ನ್ಯಾಯಾಲಯದ ಮೊರೆ ಹೋದ ರವಿಚಂದ್ರನ್
ಅನ್ನಿಯನ್ ರಿಮೇಕ್ ಸಂಬಂಧ ಆಸ್ಕರ್ ರವಿಚಂದ್ರನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಿಂದಿ ರಿಮೇಕ್ ನಿರ್ಮಿಸಲು ಮುಂದಾಗಿರುವ ಜಯಂತಿಲಾಲ್ ಗಡಾ ವಿರುದ್ಧ ಕೋರ್ಟ್ನಲ್ಲಿ ದೂರು ನೀಡಿದ್ದು, ಕಾಪಿರೈಟ್ ಕಾಯಿದೆ ಅಡಿ ಚಿತ್ರಕ್ಕೆ ನಿರ್ಬಂಧ ಹೇರುವಂತೆ ಮನವಿ ಮಾಡಿದ್ದಾರೆ. ಜೊತೆಗೆ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಎಸ್ಐಎಫ್ಸಿಸಿ) ದೂರು ನೀಡಿದ್ದಾರೆ. "SIFCC, ನನಗೆ ಬೆಂಬಲ ನೀಡುತ್ತಿದೆ. ಮುಂಬೈನಲ್ಲಿ ಚಲನಚಿತ್ರ ಸಂಘದ ಜೊತೆ ಮಾತನಾಡಿರುವುದರಿಂದ ಸ್ವಲ್ಪ ಸಮಯ ಕಾಯುವಂತೆ ಹೇಳಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕೆ ನಿರ್ಮಾಪಕರು ಶಂಕರ್ ಅಲ್ಲ. ನನ್ನ ಜೊತೆ ಮಾತನಾಡಬೇಕಿರುವುದು ನಿರ್ಮಾಪಕ ಜಯಂತಿಲಾಲ್ ಗಡಾಜಿ'' ಎಂದು ರವಿಚಂದ್ರನ್ ತಿಳಿಸಿದ್ದರು.

ಕಥೆ-ಚಿತ್ರಕಥೆ ನನ್ನದು ಎಂದ ಶಂಕರ್
ಆಸ್ಕರ್ ರವಿಚಂದ್ರನ್ ಆರೋಪಕ್ಕೆ ಈ ಹಿಂದೆಯೇ ಸ್ಪಷ್ಟನೆ ಕೊಟ್ಟಿದ್ದ ಶಂಕರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು. ''ಆಸ್ಕರ್ ರವಿಚಂದ್ರನ್ ಅವರು ಹೇಳಿರುವಂತೆ ಅನ್ನಿಯನ್ ಕಥೆ ಸುಜಾತ ಅವರದ್ದಲ್ಲ, ಅವರು ಕೇವಲ ಸಂಭಾಷಣೆ ಮಾತ್ರ ಬರೆದಿದ್ದಾರೆ. ಆ ಚಿತ್ರದ ಕಥೆ-ಚಿತ್ರಕಥೆ ನನ್ನದು. ಟೈಟಲ್ ಕಾರ್ಡ್ನಲ್ಲಿ ಕಥೆ-ಚಿತ್ರಕಥೆ-ನಿರ್ದೇಶಕ ಶಂಕರ್ ಎಂದು ಬರುತ್ತದೆ. ಸುಜಾತ ಅವರು ಕೇವಲ ಸಂಭಾಷಣೆ ಮಾತ್ರ ಮಾಡಿರುವುದು. ಅವರು ಮಾಡಿದ ಕೆಲಸಗಳಿಗೆ ತಕ್ಕ ಗೌರವ ಕೊಡಲಾಗಿದೆ. ಚಿತ್ರದ ಇತರೆ ಯಾವುದೇ ಕೆಲಸಗಳಲ್ಲಿಯೂ ಅವರ ಪಾತ್ರವಿಲ್ಲ. ಅನ್ನಿಯನ್ ಸಿನಿಮಾ ಆಧರಿಸಿ ಇನ್ನೊಂದು ಕಥೆ ರಚಿಸುವ ಹಕ್ಕು ನನಗಿದೆ. ಅದಕ್ಕೆ ವಿರೋಧ ವ್ಯಕ್ತಪಡಿಸುವುದಕ್ಕೆ ಯಾವುದೇ ಅಧಿಕಾರ ಇಲ್ಲ. ಅನ್ನಿಯನ್ ರಿಮೇಕ್ ಮಾಡುವ ಹಕ್ಕು ನಿಮಗೆ ಅಥವಾ ನಿಮ್ಮ ಘಟಕಕ್ಕೆ ಇಲ್ಲ. ಏಕೆಂದರೆ ಹಕ್ಕುಗಳನ್ನು ನಿಮಗೆ ಲಿಖಿತವಾಗಿ ನೀಡಿಲ್ಲ. ಸ್ಕ್ರಿಪ್ಟ್ ನಿಮ್ಮೊಂದಿಗೆ ಇದೆ ಎಂದು ಪ್ರತಿಪಾದಿಸಲು ಯಾವುದೇ ಆಧಾರಗಳಿಲ್ಲ'' ಎಂದು ಶಂಕರ್ ತಿರುಗೇಟು ಕೊಟ್ಟಿದ್ದರು.


Click it and Unblock the Notifications











