ತಮಿಳುನಾಡು ಚುನಾವಣೆ: ಬಿಜೆಪಿಯತ್ತ ನಟ ಅರ್ಜುನ್ ಸರ್ಜಾ ಚಿತ್ತ?
ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ಸ್ಟಾರ್ಗಳ ಪಾತ್ರ ಪ್ರಮುಖವಾಗಿ ಗಮನ ಸೆಳೆದಿರುವ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲೂ ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಣೆಯಾಗುತ್ತಿದ್ದಂತೆ ದ್ರಾವಿಡರ ನಾಡಲ್ಲಿ ರಾಜಕೀಯ ಬೆಳವಣಿಗೆ ಗರಿಗೆದರಿದೆ.
ಎಂಜಿಆರ್, ಜಯಲಲಿತಾ, ಕರುಣಾನಿಧಿ ನಂತರ ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್, ಖುಷ್ಬೂ ಹೀಗೆ ಅನೇಕರು ರಾಜಕೀಯದಲ್ಲಿ ಭವಿಷ್ಯ ಕಂಡುಕೊಂಡಿದ್ದಾರೆ. ಇದೀಗ, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರಾಜಕೀಯವಾಗಿ ಸಕ್ರಿಯರಾಗುವ ಸೂಚನೆ ನೀಡಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರ ಭೇಟಿ ಕುತೂಹಲ ಮೂಡಿಸಿದೆ. ಮುಂದೆ ಓದಿ...

ಕೇಂದ್ರ ಸಚಿವರನ್ನು ಭೇಟಿ ಮಾಡಿದ ಅರ್ಜುನ್ ಸರ್ಜಾ?
ಗೃಹ ಖಾತೆ ರಾಜ್ಯ ಸಚಿವರಾಗಿರುವ ಜಿ ಕಿಶನ್ ರೆಡ್ಡಿ ಇಂದು ಚೆನ್ನೈಗೆ ಆಗಮಿಸಿದ್ದರು. ಈ ವೇಳೆ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಸಹ ಇದ್ದರು. ಈ ಭೇಟಿ ಸಹಜವಾಗಿ ಕುತೂಹಲ ಮೂಡಿಸಿದೆ.

ಬಿಜೆಪಿ ಸೇರಲಿದ್ದಾರೆ ಸರ್ಜಾ?
ತಮಿಳುನಾಡು ವಿಧಾನಸಭೆ ಚುನಾವಣೆಯ ಸನಿಹದಲ್ಲಿ ಅರ್ಜುನ್ ಸರ್ಜಾ ಹಾಗೂ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷರ ಭೇಟಿ ಸಹಜವಾಗಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅರ್ಜುನ್ ಸರ್ಜಾ ಅವರು ಕಮಲದ ಕೈ ಹಿಡಿಯಲಿದ್ದಾರಾ, ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ತಮಿಳುನಾಡಿನಲ್ಲಿ ಅಸ್ತಿತ್ವಕ್ಕಾಗಿ ಕಮಲ ಪ್ಲಾನ್?
ಜಯಲಲಿತಾ ಮತ್ತು ಕರುಣಾನಿಧಿ ಎಂಬ ಇಬ್ಬರು ದಿಗ್ಗಜ ರಾಜಕಾರಣಿಗಳು ತಮಿಳುನಾಡಿನಲ್ಲಿ ಕಮಲ ಅರಳಲು ಬಿಟ್ಟಿರಲಿಲ್ಲ. ಈಗ ಈ ಇಬ್ಬರ ಅನುಪಸ್ಥಿತಿಯಲ್ಲಿ ಹೇಗಾದರೂ ಮಾಡಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಾಗಬೇಕು ಅಥವಾ ಸರ್ಕಾರದ ಮೇಲೆ ಹಿಡಿತ ಸಾಧಿಸಬೇಕು ಎಂಬ ಮೆಗಾ ಪ್ಲಾನ್ ಮಾಡಿದೆ. ಈಗಾಗಲೇ ತಮಿಳುನಾಡು ರಾಜಕೀಯದಲ್ಲಿ ಬಿಜೆಪಿ ಪಾಲಿಗೆ ಖುಷ್ಬೂ ಸ್ಟಾರ್ ರಾಜಕಾರಣಿಯಾಗಿದ್ದಾರೆ. ಈಗ ಅರ್ಜುನ್ ಸರ್ಜಾ ಕೈ ಜೋಡಿಸಿದರೆ ಮತ್ತಷ್ಟು ಬಲ ಬರಲಿದೆ ಎಂಬ ಆಲೋಚನೆ ಇದ್ದಂತಿದೆ. ಆದರೆ, ಅರ್ಜುನ್ ಸರ್ಜಾ ಅವರ ನಿಲುವು ಏನಾಗಿದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

ಎಐಡಿಎಂಕೆ ಜೊತೆ ಬಿಜೆಪಿ ಮೈತ್ರಿ
2021ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಎಐಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿದೆ. ಜಯಲಲಿತಾ ಮತ್ತು ಕರುಣಾನಿಧಿ ನಿಧನದ ನಂತರ ಮೊದಲ ಬಾರಿ ಚುನಾವಣೆ ಎದುರಿಸುತ್ತಿರುವ ತಮಿಳುನಾಡಿನ ಮೇಲೆ ಇಡೀ ದೇಶದ ಗಮನ ಇದೆ. ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದೆ.


Click it and Unblock the Notifications











