'ಸೂರರೈ ಪೊಟ್ರು' ನೈಜತೆಗೆ ದೂರ ಎಂದವರಿಗೆ ಕ್ಯಾಪ್ಟನ್ ಗೋಪಿನಾಥ್ ಉತ್ತರ
ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ 'ಸೂರರೈ ಪೊಟ್ರು' ಸಿನಿಮಾ ಭಾರಿ ಯಶಸ್ಸು ಗಳಿಸಿದೆ. ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿಬರುತ್ತಿವೆ.
Recommended Video
ಆದರೆ ಜೊತೆ-ಜೊತೆಗೆ 'ಸೂರರೈ ಪೊಟ್ರು' ಸಿನಿಮಾವು ನೈಜತೆಯಿಂದ ದೂರವಿದೆ ಎಂಬ ಟೀಕೆಯೂ ಎದ್ದಿದೆ. ಮನರಂಜನಾತ್ಮಕ ಸಿನಿಮಾಕ್ಕಾಗಿ ಸಾಕಷ್ಟು ಅಂಶಗಳನ್ನು ತಿರುಚಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಸಿನಿಮಾದ ನೈಜತೆ ಬಗ್ಗೆ ಎದ್ದಿರುವ ಟೀಕೆಗೆ ಸ್ವತಃ ಕ್ಯಾಪ್ಟನ್ ಗೋಪಿನಾಥ್ ಅವರು ಉತ್ತರ ನೀಡಿದ್ದು, 'ನೈಜ ಸಂಗತಿ ಹಾಗೂ ನನ್ನ ಪುಸ್ತಕ 'ಸಿಂಪ್ಲಿ ಫ್ಲೈ' ಗೆ ಸಿನಿಮಾದ ಕತೆ ಪೂರಕವಾಗಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಅವರಿಗೆ ನಾನು ಹೇಳುವುದೆಂದರೆ, 'ಸಿನಿಮೀಯ ಪರಿಣಾಮಕ್ಕಾಗಿ ಕಾಲ್ಪನಿಕವಾಗಿ ಸಿನಿಮಾ ಚಿತ್ರೀಕರಿಸಲಾಗಿದೆ. ಆದರೆ ಕಾಲ್ಪನಿಕತೆ ಮೀರಿದ ಸಂದೇಶ ಸಿನಿಮಾದಲ್ಲಿದೆ' ಎಂದಿದ್ದಾರೆ.

ವಾಸ್ತವವನ್ನೇ ತೋರಿಸಿದ್ದಿದ್ದರೆ ಸಾಕ್ಷ್ಯಚಿತ್ರವಾಗಿರುತ್ತಿತ್ತು: ಗೋಪಿನಾಥ್
ಸಂಪೂರ್ಣವಾಗಿ ವಾಸ್ತವವಾಗಿ ಸಿನಿಮಾ ಮಾಡಿದ್ದರೆ ಅದು ಸಿನಿಮಾ ಎನಿಸಿಕೊಳ್ಳುತ್ತಿರಲಿಲ್ಲ ಬದಲಿಗೆ ಸಾಕ್ಷ್ಯಚಿತ್ರವಾಗಿರುತ್ತಿತ್ತು. ನಾಯಕನನ್ನು ಸಾಧಕನಂತೆ ತೋರಿಸಲಾಗಿದೆ. ನಾಯಕ ಗೆಲ್ಲಲು ಪತ್ನಿ, ಗೆಳೆಯರು ಎಲ್ಲರ ಸಹಾಯ ಬೇಕು ಎಂಬುದನ್ನು ಹೇಳಲಾಗಿದೆ. ನಾಯಕನಿಗಿಂತಲೂ ಸುತ್ತಲಿರುವವರೇ ಹೆಚ್ಚು ತ್ಯಾಗ ಮಾಡಬೇಕಾಗುತ್ತದೆ' ಎಂದು ಸಹ ತೋರಿಸಲಾಗಿದೆ ಎಂದಿದ್ದಾರೆ ಗೋಪಿನಾಥ್.

'ಪತ್ನಿ ತನ್ನ ಕನಸುಗಳನ್ನು ತ್ಯಾಗ ಮಾಡುವ ಅವಶ್ಯಕತೆ ಇಲ್ಲ'
'ಪತಿಯ ಕನಸುಗಳಿಗಾಗಿ ಪತ್ನಿ ತನ್ನ ಕನಸುಗಳನ್ನು ತ್ಯಾಗ ಮಾಡದೆ, ಸ್ವಾಭಿಮಾನ ಉಳಿಸಿಕೊಂಡು ಪತಿಗೆ ಬೆಂಬಲವಾಗಿ ನಿಲ್ಲಬಹುದು. ಪತಿ ಕುಗ್ಗಿದಾಗ ಆತನಿಗೆ ಚೈತನ್ಯ ನೀಡಬಹುದು, ಎಂಬುದನ್ನು ನಟಿ ಅಪರ್ಣಾ ಪಾತ್ರದ ಮೂಲಕ ನಿರ್ದೇಶಕಿ ಚೆನ್ನಾಗಿ ತೋರಿಸಿದ್ದಾರೆ' ಎಂದಿದ್ದಾರೆ ಗೋಪಿನಾಥ್.

ಶ್ರಮಕ್ಕೆ ಪ್ರತಿಫಲ ಇದ್ದೇ ಇದೆ ಎಂಬುದನ್ನು ತೋರಿಸಲಾಗಿದೆ
ಪ್ರತಿಬಾರಿ ಬಿದ್ದಾಗಲೂ ನಾನು ಸೋತೆ ಎಂದುಕೊಳ್ಳದೆ ಪುನಃ ಪ್ರಯತ್ನದಲ್ಲಿ ನಿರತವಾಗಬೇಕು. 'ನಾನು ಸೋತಿದ್ದೇನೆ, ವಿಫಲನಾಗಿಲ್ಲ' ಸಮಾಜದಲ್ಲಿ ಒಳ್ಳೆಯ ಜನರಿಗೆ, ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದನ್ನು ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ. ಆ ಕಾರ್ಯವನ್ನು ಸೂರ್ಯಾ ಚೆನ್ನಾಗಿ ಮಾಡಿದ್ದಾರೆ' ಎಂದಿದ್ದಾರೆ ಗೋಪಿನಾಥ್.

ಸುಧಾ ಕೊಂಗರ ನಿರ್ದೇಶನ
ಕ್ಯಾಪ್ಟನ್ ಗೋಪಿನಾಥ್ ಅವರು ಕಡಿಮೆ ದರದ ವಿಮಾನ ಯಾನ ಏರ್ ಡೆಕ್ಕನ್ ಅನ್ನು ಕಟ್ಟಿದ ಕತೆಯನ್ನು ಆಧರಿಸಿ 'ಸೂರರೈ ಪೊಟ್ರು' ಸಿನಿಮಾವನ್ನು ನಿರ್ದೇಶಕಿ ಸುಧಾ ಕೊಂಗರ ನಿರ್ದೇಶಿಸಿದ್ದಾರೆ. ನಟ ಸೂರ್ಯಾ ಮತ್ತು ಅಪರ್ಣಾ ಬಾಲಮುರಳಿ, ಪರೇಶ್ ರಾವಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











