ನಟ ವಿಜಯ್ ಕಚೇರಿ ಬಳಿ ಶವ ಪತ್ತೆ, ಆತಂಕ
ತಮಿಳಿನ ಸ್ಟಾರ್ ನಟ ವಿಜಯ್ ಅವರ ಕಚೇರಿ ಬಳಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ವಿಜಯ್ರ ಮಕ್ಕಳ್ ಇಯಕ್ಕಂನ ಮುಖ್ಯ ಕಚೇರಿಯು ಇಸಿಆರ್ ರಸ್ತೆಯಲ್ಲಿನ ಪೈಯೂರಿನ ಬಂಗಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಕಚೇರಿಯ ಆವರಣದಲ್ಲಿ ಶನಿವಾರ ಬೆಳಿಗ್ಗೆ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ಪ್ರಭಾಕರ್ ಎಂದು ಗುರುತಿಸಲಾಗಿದ್ದು, ಮಧ್ಯವಯಸ್ಕನಾಗಿದ್ದಾನೆ. ಪ್ರಭಾಕರ್, ಅದೇ ಬಂಗಲೆಯಲ್ಲಿ ಕೆಲ ತಿಂಗಳಿಂದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬಂಗಲೆಯನ್ನು ನವೀಕರಿಸಲಾಗುತ್ತಿದ್ದು, ಆತ ಅಲ್ಲಿ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದನಂತೆ. ಕೆಲವು ದಿನಗಳ ಹಿಂದಷ್ಟೆ ತನ್ನ ಊರಿಗೆ ಹೋಗಿ ಕುಟುಂಬವನ್ನು ಭೇಟಿ ಮಾಡಿಕೊಂಡು ಬಂದಿದ್ದ.
ಆದರೆ ನಿನ್ನೆ ಕಂಠಪೂರ್ತಿ ಕುಡಿದಿದ್ದ ಆತ ಪರೋಟ ಖರೀದಿಸಲು ಹಣಕ್ಕಾಗಿ ಜಗಳ ಮಾಡಿದ್ದ. ಅಂತೆಯೇ ಅಲ್ಲಿನ ವ್ಯಕ್ತಿಯೊಬ್ಬ ಆತನಿಗೆ ಹಣ ನೀಡಿದ್ದ. ಆದರೆ ಬೆಳಿಗ್ಗೆ ವೇಳೆಗೆ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಪ್ರಭಾಕರನ ಬಾಯಲ್ಲಿ, ಕೈಯಲ್ಲಿ ಪರೋಠ ಇತ್ತೆಂದು ಸ್ಥಳೀಯರು ಹೇಳಿದ್ದಾರೆ.

ಅತಿಯಾಗಿ ಕುಡಿದ ಹಿನ್ನೆಲೆಯಲ್ಲಿ ಗಟ್ಟಿಯಾದ ಪದಾರ್ಥ ತಿಂದು ಉಸಿರಾಡಲು ಕಷ್ಟವಾಗಿ ಮೃತಪಟ್ಟಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಭಾಕರನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ಖಚಿತ ಕಾರಣ ಗೊತ್ತಾಗಲಿದೆ.
ಇನ್ನು ವಿಜಯ್ರ ಮಕ್ಕಳ್ ಇಯಕ್ಕಂ ಕೇಂದ್ರ ಕಚೇರಿ ಅದೇ ಅಪಾರ್ಟ್ಮೆಂಟ್ನಲ್ಲಿ ಕಾರ್ಯ ನಿರ್ವಸುತ್ತಿದೆ. ಕೆಲವು ತಿಂಗಳ ಹಿಂದೆ ತಮಿಳುನಾಡಿನಲ್ಲಿ ನಡೆದ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಮಕ್ಕಳ್ ಇಯಕ್ಕಂ ಸದಸ್ಯರ ಬೆಂಬಲಿತ ಅಭ್ಯರ್ಥಿಗಳು ಅದ್ಭುತ ವಿಜಯ ಸಾಧಿಸಿದ್ದಾರೆ.
ಮಕ್ಕಳ್ ಇಯಕ್ಕಂ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷವಾಗಿ ಬದಲಾಗುವ ಸಾಧ್ಯತೆ ಇದೆ. ಇದು ವಿಜಯ್ ಅಭಿಮಾನಿಗಳು ಕಟ್ಟಿರುವ ಅಭಿಮಾನಿ ಸಂಘ. ಆದರೆ ಕಳೆದ ಪಂಚಾಯಿತಿ ಮಟ್ಟದ ಚುನಾವಣೆಗಳಲ್ಲಿ ಸ್ಪರ್ಧಿಸಿ ಹಲವು ಸೀಟುಗಳನ್ನು ಗೆದ್ದಿದೆ.


Click it and Unblock the Notifications











