Don't Miss!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- News ‘ಮೋದಿಯನ್ನು ಬಾಯಿಗೆ ಬಂದ ಹಾಗೆ ಬೈದ ದೇವೇಗೌಡ್ರು ಈಗ ಅಪ್ಪಿಕೊಳ್ಳುವುದು ಎಂದರೆ ಏನರ್ಥ?’
- Lifestyle ಹೌಸ್ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Automobiles ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರೀಕರಣದ ವೇಳೆ ಕುದುರೆ ಸಾವು: ಎಫ್ಐಆರ್ ದಾಖಲು
ಚಿತ್ರೀಕರಣಗಳಲ್ಲಿ ಕತೆಗೆ ಅನುಸಾರವಾಗಿ ನಾಯಿ, ಕುದುರೆ ಇನ್ನಿತರ ಪ್ರಾಣಿಗಳನ್ನು ಬಳಕೆ ಮಾಡುವುದು ಸಾಮಾನ್ಯ. ಮನುಷ್ಯರ ಜೀವಕ್ಕೆ ಅಪಾಯವಾಗದಂತೆ ತೆಗೆದುಕೊಳ್ಳುವ ಮುಂಜಾಗೃತೆಗಳನ್ನು ಪ್ರಾಣಿಗಳ ಬಗ್ಗೆಯೂ ತೆಗೆದುಕೊಳ್ಳಬೇಕಾದುದು ಚಿತ್ರತಂಡ ಕರ್ತವ್ಯವಾಗಿರುತ್ತದೆ. ಆದರೆ ಕೆಲವೊಮ್ಮೆ ಚಿತ್ರೀಕರಣದ ಸಂದರ್ಭದಲ್ಲಿ ಪ್ರಾಣಿಗಳ ಜೀವಕ್ಕೆ ಕುತ್ತಾಗಿಬಿಡುತ್ತದೆ.
ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡುತ್ತಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಚಿತ್ರೀಕರಣದ ವೇಳೆ ಕುದುರೆಯೊಂದು ಅಸುನೀಗಿದೆ. ಈ ಬಗ್ಗೆ ಹೈದರಾಬಾದ್ ಪೊಲೀಸರು ಕುದುರೆಯ ಮಾಲೀಕ, ಚಿತ್ರತಂಡ ಹಾಗೂ ನಿರ್ಮಾಣ ಸಂಸ್ಥೆ ಅವರನ್ನು ಆರೋಪಿಯನ್ನಾಗಿಸಿ ಎಫ್ಐಆರ್ ದಾಖಲಿಸಿದ್ದಾರೆ.
'ಪೊನ್ನಿಯಿನ್ ಸೆಲ್ವಂ' ಚಿತ್ರೀಕರಣ ಸೆಟ್ನಲ್ಲಿ ಕುದುರೆಯೊಂದು ಸಾವನ್ನಪ್ಪಿರುವ ವಿಷಯದ ಕುರಿತು ಪ್ರಾಣಿಗಳ ಹಕ್ಕಿಗಾಗಿ ಕೆಲಸ ಮಾಡುವ ಪೇಟಾವು ದೂರು ನೀಡಿದೆ. ಅನಿಮನ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾವು ಹೈದರಾಬಾದ್ನ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಸೆಟ್ನಲ್ಲಿ ಕುದುರೆ ಸಾವನ್ನಪ್ಪಿರುವ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೇಳಿದ್ದಾರೆ. ಅಲ್ಲದೆ ತಪ್ಪಿತಸ್ಥರಿಗೆ ಸೂಕ್ತವಾದ ಶಿಕ್ಷೆ ಆಗುವಂತೆ ನೋಡಿಕೊಳ್ಳುವಂತೆ ವಿಶೇಷ ಮನವಿಯನ್ನೂ ಅನಿಮನ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಮಾಡಿದೆ.
ಹೈದರಾಬಾದ್ ಪೊಲೀಸರು ಹಲವು ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ಪೇಟಾವು, ಘಟನೆಯ ವಿಡಿಯೋ ದಾಖಲೆ ನೀಡಿದವರಿಗೆ 25,000 ಬಹುಮಾನವನ್ನು ಘೋಷಿಸಿದೆ. ವಿಡಿಯೋ ಸಿಕ್ಕರೆ ತಪ್ಪಿತಸ್ಥರನ್ನು ಗುರುತಿಸುವುದು ಸುಲಭವಾಗುತ್ತದೆ ಎಂದು ಪೇಟಾ ಈ ಕಾರ್ಯ ಮಾಡಿದೆ.
ಮುಖಾ-ಮುಖಿ ಯುದ್ಧದ ದೃಶ್ಯವನ್ನು ಚಿತ್ರೀಕರಣ ಮಾಡುವ ವೇಳೆ ಕುದುರೆಯೊಂದು ಕೆಳಗೆ ಬಿದ್ದು ಪೆಟ್ಟಾಗಿ ಜೀವತೆತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟು ತನಿಖೆ ಆಗಬೇಕಿದೆ. ಪೇಟಾ ಹೇಳಿರುವಂತೆ, ''ಸುಸ್ತಾದ ಕುದುರೆಗಳನ್ನು ಸತತವಾಗಿ ಬಿಸಿಲಿನಲ್ಲಿ ಚಿತ್ರೀಕರಣದಲ್ಲಿ ಬಳಸಿಕೊಂಡ ಕಾರಣ ಡಿಹೈಡ್ರೇಷನ್ನಿಂದ ಕುದುರೆ ಸತ್ತಿದೆ ಎಂದಿದೆ. ಈ ಬಗ್ಗೆ ಅನಾಮಿಕ ವ್ಯಕ್ತಿಯೊಬ್ಬ (ವಿಷಲ್ ಬ್ಲೋವರ್) ಪೇಟಾಗೆ ಮಾಹಿತಿ ನೀಡಿದ್ದಾನೆ ಎಂದು ಹೇಳಿದೆ ಸಂಸ್ಥೆ.
ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪೇಟಾದ ಭಾರತೀಯ ವಿಭಾಗದ ಮುಖ್ಯಸ್ಥೆ ಖುಷ್ಬು ಗುಪ್ತಾ, ''ಸಿಜಿಐ ಮತ್ತು ಇತರೆ ತಂತ್ರಜ್ಞಾನ ಇಷ್ಟೋಂದು ಅಭಿವೃದ್ಧಿ ಆಗಿರುವಾಗ ಮೂಕ ಪ್ರಾಣಿಗಳನ್ನು ಸೆಟ್ಗೆ ಎಳೆದು ತಂದು ಯುದ್ಧದ ದೃಶ್ಯಗಳಲ್ಲಿ ನಟಿಸುವಂತೆ ಮಾಡಿ ಅವುಗಳನ್ನು ಸುಸ್ತಾಗಿಸಿ ಕೊಲ್ಲುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ'' ಎಂದಿದ್ದಾರೆ.
''ಮುಂದಾಲೋಚನೆ ಉಳ್ಳ, ಸಿನಿಮಾ ಪ್ರೇಮವುಳ್ಳ ಯಾವ ನಿರ್ದೇಶಕನೂ ಸಹ ಮೂಕ ಪ್ರಾಣಿಗಳನ್ನು ಗಲಾಟೆ ತುಂಬಿರುವ ಚಿತ್ರೀಕರಣ ಸೆಟ್ಗೆ ಪ್ರಾಣಿಗಳನ್ನು ಎಳೆದು ತಂದು ಅವನ್ನು ನಟಿಸುವಂತೆ ಒತ್ತಾಯ ಮಾಡುವುದಿಲ್ಲ. ಪ್ರಾಣಿಗಳ ಮೇಲೆ ಮಾಡಲಾಗುತ್ತಿರುವ ಈ ಕ್ರೂರತೆಯನ್ನು ನಿಲ್ಲಿಸಿ ಸಿಜಿಐ ಹಾಗೂ ಇನ್ನಿತರೆ ತಂತ್ರಜ್ಞಾನಗಳ ಕಡೆ ಹೊರಳಿಕೊಳ್ಳಬೇಕು ಎಂದು ನಾವು ನಿರ್ದೇಶಕ ಮಣಿರತ್ನಂ ಅವರಲ್ಲಿ ಮನವಿ ಮಾಡುತ್ತೇವೆ'' ಎಂದಿದ್ದಾರೆ ಖುಷ್ಬು ಗುಪ್ತಾ.
ಸಿನಿಮಾದಲ್ಲಿ ಪ್ರಾಣಿಗಳನ್ನು ಬಳಸಲು ಸಾಕಷ್ಟು ಕಠಿಣವಾದ ನಿಯಮಗಳಿವೆ. ಹಾಗಾಗಿ ಹಲವು ನಿರ್ದೇಶಕರು ಪ್ರಾಣಿಗಳನ್ನು ಬಳಸುವ ಬದಲಿಗೆ ಸಿಜಿಐ ಅಥವಾ ಇನ್ನಾವುದೇ ಗ್ರಾಫಿಕ್ಸ್ ಬಳಕೆ ಮಾಡುತ್ತಾರೆ. ಆದರೆ 'ಪೊನ್ನಿಯಿನ್ ಸೆಲ್ವಂ' ಐತಿಹಾಸಿಕ, ಪೌರಾಣಿಕ ಕತೆಯುಳ್ಳ ಸಿನಿಮಾ ಆಗಿದ್ದು ಚೋಳರ ಕಾಲದ ಈ ಕತೆಯಲ್ಲಿ ಯುದ್ಧದ ಸನ್ನಿವೇಶಗಳು ಸಾಕಷ್ಟಿವೆ. ಹಾಗಾಗಿ ಕುದುರೆಗಳನ್ನು ಬಳಸಲಾಗಿದೆ.
'ಪೊನ್ನಿಯಿನ್ ಸೆಲ್ವಂ' ಸಿನಿಮಾವನ್ನು ಮಣಿರತ್ನಂ ನಿರ್ದೇಶನ ಮಾಡಿದ್ದು, ಭಾರತದ ಅತಿ ಹೆಚ್ಚಿನ ಬಜೆಟ್ನ ಸಿನಿಮಾಗಳಲ್ಲಿ ಇದು ಸಹ ಒಂದಾಗಿದೆ. ಸಿನಿಮಾದಲ್ಲಿ ಐಶ್ವರ್ಯಾ ರೈ, ಚಿಯಾನ್ ವಿಕ್ರಂ, ಸೂರ್ಯ ಸಹೋದರ ಕಾರ್ತಿ, ತ್ರಿಶಾ, ಜಯಂ ರವಿ, ಪ್ರಕಾಶ್ ರೈ, ವಿಕ್ರಮ್ ಪ್ರಭು, ಐಶ್ವರ್ಯಾ ಲಕ್ಷ್ಮಿ, ಶರತ್ ಕುಮಾರ್, ಕಿಶೋರ್ ಇನ್ನೂ ಹಲವು ಪ್ರಮುಖ ನಟರು ನಟಿಸಿದ್ದಾರೆ. ಸಿನಿಮಾವನ್ನು ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ ಸಂಸ್ಥೆ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಮಣಿರತ್ನಂ ಸಹ ನಿರ್ಮಾಪಕರಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ಆರಂಭವಾಗಲಿದೆ.