ಥಿಯೇಟರ್ನಲ್ಲಿ 100ರಷ್ಟು ಅನುಮತಿ: ನಟಿ ಖುಷ್ಬೂ ಟ್ವೀಟ್ ವಿರುದ್ಧ ಟೀಕೆ
ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ನೂತನವಾಗಿ ಜಾರಿ ಮಾಡಿರುವ ಆದೇಶದಂತೆ ಇನ್ಮುಂದೆ ಸಿನಿಮಾ ಥಿಯೇಟರ್ನಲ್ಲಿ 100ರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡಬಹುದು ಎಂದು ತಿಳಿಸಿದೆ.
ತಮಿಳುನಾಡು ಸರ್ಕಾರದ ಈ ನಿರ್ಧಾರದ ಕುರಿತು ಪರ-ವಿರೋಧದ ಚರ್ಚೆ ಆರಂಭವಾಗಿದೆ. ಕೊರೊನಾ ಭೀತಿ ಇನ್ನು ಕಡಿಮೆಯಾಗಿಲ್ಲ, ಈ ನಡುವೆ ಬ್ರಿಟನ್ನಿಂದ ಹೊಸ ರೂಪದಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ, ಇಂತಹ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿ ಜನ ಸೇರಲು ಅವಕಾಶ ಕೊಟ್ಟಿರುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.
ಈ ಚರ್ಚೆ ಬಗ್ಗೆ ಬಿಜೆಪಿ ಕಾರ್ಯಕರ್ತೆ ಹಾಗೂ ಸಿನಿಮಾ ನಟಿ ಖುಷ್ಬೂ ಸಹ ಪ್ರತಿಕ್ರಿಯೆ ನೀಡಿದ್ದು, ಅವರ ಟ್ವೀಟ್ಗೂ ಟೀಕೆ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ, ಖುಷ್ಬೂ ಮಾಡಿದ ಟ್ವೀಟ್ ಏನು? ಮುಂದೆ ಓದಿ....

ಚಿಂತೆ ಇದ್ದರೆ ನೀವು ಚಿತ್ರಮಂದಿರಕ್ಕೆ ಹೋಗಬೇಡಿ
''ಚಿತ್ರಮಂದಿರದಲ್ಲಿ ಶೇಕಡಾ 100ರಷ್ಟು ಅನುಮತಿ ನೀಡಿರುವ ಬಗ್ಗೆ ಅಸಮಾಧಾನ ಹೊಂದಿರುವವರಿಗೆ ನನ್ನದೊಂದು ಸಂದೇಶ. ನಿಮಗೆ ಚಿಂತೆ ಇದ್ದರೆ ನೀವು ಹೋಗಬೇಡಿ. ನಿಮ್ಮ ಭಯ ಅರ್ಥವಾಗುವಂತಹದ್ದೇ. ಇಲ್ಲಿ ಯಾರು ನಿಮ್ಮನ್ನು ಒತ್ತಾಯಿಸುತ್ತಿಲ್ಲ'' ಎಂದು ಖುಷ್ಬೂ ಹೇಳಿದ್ದಾರೆ.

ಖುಷ್ಬೂ ಟ್ವೀಟ್ ವಿರುದ್ಧ ಟೀಕೆ
ಖುಷ್ಬೂ ಅವರ ಈ ಟ್ವೀಟ್ಗೆ ಟೀಕೆ ವ್ಯಕ್ತವಾಗಿದ್ದು ಹಲವರು ಖಂಡಿಸಿದ್ದಾರೆ. ''ಸಿನಿಮಾ ಇಂಡಸ್ಟ್ರಿಯವರು ಸ್ವಾರ್ಥಿ. ಈಗಾಗಲೇ ಒಂದು ವರ್ಷ ಸುಮ್ಮನೆ ಇದ್ರಿ. ಔಷಧ ಬರುತ್ತಿರುವ ಸಮಯದಲ್ಲಿ ಇನ್ನೆರಡು ತಿಂಗಳು ಕಾದರೆ ಏನು ಸಮಸ್ಯೆ. ಹಾಗ್ನೋಡಿದ್ರೆ ಸಿನಿಮಾ ರಿಲೀಸ್ ಮಾಡಲು ಒಟಿಟಿ ಇವೆ. ಒಂದು ವೇಳೆ ನಿಮ್ಮ ನೆರೆಹೊರೆಯವರು ಥಿಯೇಟರ್ಗೆ ಹೋಗಿ ಕೊರೊನಾ ಅಂಟಿಸಿಕೊಂಡು ಬಂದರೆ ನಿಮಗೂ ಅದು ಸಮಸ್ಯೆ ತರುತ್ತೆ'' ಎಂದು ತಿರುಗೇಟು ನೀಡಿದ್ದಾರೆ.

ಬೇರೆ ಸ್ಥಳಗಳಿಗೂ ಇದೇ ಹೇಳಿ ಮೇಡಂ!
''ನೀವು ನಿಜವೇ ಆಗಿದ್ದರೇ, ರೆಸ್ಟೋರೆಂಟ್ಗಳು, ಪೂಜಾ ಸ್ಥಳಗಳು ಹಾಗೂ ಸಾರ್ವಜನಿಕವಾಗಿ ಉಪಯೋಗವಾಗುವ ಎಲ್ಲದರ ಬಗ್ಗೆಯೂ ಇದನ್ನೇ ಹೇಳಬಹುದು. ಕೇವಲ ಸಿನಿಮಾ ಹಾಲ್ ಬಗ್ಗೆ ಮಾತ್ರವೇಕೆ?'' ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ.

ಸೋಂಕು ವೇಗವಾಗಿ ಹರಡಿದರೆ ಯಾರು ಹೊಣೆ?
''ಒಂದು ವೇಳೆ ಹೊಸ ರೂಪದ ಕೊರೊನಾ ವೈರಸ್ ವೇಗವಾಗಿ ಹರಡಿದರೆ ಅದಕ್ಕೆ ಯಾರು ಹೊಣೆ? ಸೋಂಕಿತ ವ್ಯಕ್ತಿಗಳೇ ತಮ್ಮ ಕುಟುಂಬಗಳಿಗೆ ಆಧಾರವಾಗಿದ್ದರೆ ನೀವು ಅವರನ್ನು ನೋಡಿಕೊಳ್ಳುತ್ತೀರಾ...? ಎಂದು ಕೆಲವರು ಕೇಳಿದ್ದಾರೆ.

ಮತ್ತೆ ಲಾಕ್ಡೌನ್ ಏಕೆ?
''ಹಾಗಾದ್ರೆ ಈ ಲಾಕ್ಡೌನ್ ಏಕೆ? ಎಲ್ಲಾ ಸ್ಥಳಗಳನ್ನು ಯಾವುದೇ ನಿರ್ಬಂಧಗಳಿಲ್ಲದೆ ಸಂಪೂರ್ಣವಾಗಿ ತೆರೆಯಿರಿ. ಜನರೇ ನಿರ್ಧರಿಸಲಿ. ಚಿತ್ರಮಂದಿರಗಳಿಗೆ ಮಾತ್ರ ಈ ಪಕ್ಷಪಾತ ಏಕೆ?'' ಎಂದು ಕೆಲವರು ಕಿಡಿಕಾರಿದ್ದಾರೆ.

ಮಾಸ್ಟರ್ ಸಿನಿಮಾ ಬಿಡುಗಡೆ
ತಮಿಳು ನಟ ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಜನವರಿ 13 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆ ಖುದ್ದು ವಿಜಯ್ ಅವರೇ ತಮಿಳುನಾಡು ಸಿಎಂ ಬಳಿಕ ಥಿಯೇಟರ್ಗಳಲ್ಲಿ 100ರಷ್ಟು ಅನುಮತಿ ನೀಡಿ ಎಂದು ಮನವಿ ಮಾಡಿದ್ದರು ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೆ ಸರ್ಕಾರ ಈ ನಿರ್ಧಾರ ಪ್ರಕಟಿಸಿರುವುದು ನಿಜಕ್ಕೂ ಅಚ್ಚರಿ ಉಂಟು ಮಾಡಿದೆ. ಇದೆಲ್ಲದರ ನಡುವೆ ತಮಿಳುನಾಡು ಸರ್ಕಾರದ ಆದೇಶವನ್ನು ಸಿನಿಮಾಮಂದಿ ಸ್ವಾಗತಿಸಿದ್ದಾರೆ. ಕರ್ನಾಟಕದಲ್ಲೂ ಇಂತಹ ನಡೆ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











