Krithi Shetty: ಕಾಲಿವುಡ್ನಲ್ಲಿ ಸೂರ್ಯ ಜೊತೆ ಅದೃಷ್ಟ ಪರೀಕ್ಷೆಗೆ ನಿಂತ ಕೃತಿ ಶೆಟ್ಟಿ!
'ಉಪ್ಪೆನ' ಸಿನಿಮಾ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡವರು ನಟಿ ಕೃತಿ ಶೆಟ್ಟಿ . ಈ ಸಿನಿಮಾ ತೆರೆಕಂಡ ನಂತರದಲ್ಲಿ ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರು ನಿರ್ವಹಿಸಿದ್ದ ಬೇಬಮ್ಮ ಪಾತ್ರ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು.
ಹೀರೊಯಿನ್ ಆಗಿ ಕಾಣಿಸಿಕೊಂಡ ಮೊದಲ ಸಿನಿಮಾ ಹಿಟ್ ಆದ ನಂತರದಲ್ಲಿ ಸಾಲು ಸಾಲು ಆಫರ್ಗಳು ಬರೋದು ಸಾಮಾನ್ಯ. ಅದೇ ರೀತಿ, ಕೃತಿ ಶೆಟ್ಟಿಗೆ ಹಲವು ಸಿನಿಮಾ ಆಫರ್ಗಳು ಬಂದಿವೆ. ಸದ್ಯ, ಅವರ ಕೈಯಲ್ಲಿ ಬರೋಬ್ಬರಿ ಐದು ಚಿತ್ರಗಳಿವೆ.
ಕೇವಲ 18ನೇ ವಯಸ್ಸಿನಲ್ಲಿ ಕೃತಿ ಸ್ಟಾರ್ ನಟಿ ಆಗಿದ್ದಾರೆ. ಅವರ ಖ್ಯಾತಿ ನಿತ್ಯ ಹೆಚ್ಚುತ್ತಲೇ ಇದೆ. ಇದೀಗ ಮತ್ತೊಂದು ಸ್ಟಾರ್ ನಟನ ಸಿನಿಮಾಗೆ ನಟಿ ಕೃತಿ ಶೆಟ್ಟಿ ಆಯ್ಕೆಯಾಗಿದ್ದಾರೆ.

'ಉಪ್ಪೆನ' ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ
2019ರಲ್ಲಿ ತೆರೆಗೆ ಬಂದ ಬಾಲಿವುಡ್ನ 'ಸೂಪರ್ 30' ಸಿನಿಮಾದಲ್ಲಿ ಕೃತಿ ಶೆಟ್ಟಿ ಚೈಲ್ಡ್ ಆರ್ಟಿಸ್ಟ್ ಆಗಿ ನಟಿಸಿದ್ದರು. ನಂತರ 'ಉಪ್ಪೆನ' ಸಿನಿಮಾದಲ್ಲಿ ಹೀರೊಯಿನ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ಅವರ ಸ್ಮೈಲ್, ನಟನೆ ಎಲ್ಲರಿಗೂ ಇಷ್ಟವಾಗಿತ್ತು. ಹೀಗಾಗಿ, ಅವರ ಹಿಂಬಾಲಕರ ಸಂಖ್ಯೆ ಕೂಡ ಇದೀಗ ದೊಡ್ಡದಾಗಿದೆ. 'ಉಪ್ಪೆನ' ಸಿನಿಮಾ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೃತಿ ಶೆಟ್ಟಿ ಕೈಯಲ್ಲಿ ಈಗ ಏನಿಲ್ಲ ಎಂದರೂ 5-6 ಸಿನಿಮಾಗಳಿದೆ. ಇದರ ಬೆನ್ನಲ್ಲೆ ಸ್ಟಾರ್ ನಟನ ಸಿನಿಮಾಗೆ ಕೃತಿ ಆಯ್ಕೆ ಆಗಿದ್ದಾರೆ.

ನಟಿ ಕೃತಿ ಶೆಟ್ಟಿ ಕೂಡ ಚಿತ್ರತಂಡ ಸೇರ್ಪಡೆ
ತಮಿಳು ಖ್ಯಾತ ನಿರ್ದೇಶಕರಾದ ಬಾಲಾ ಅವರ ಮುಂದಿನ ಸಿನಿಮಾದಲ್ಲಿ ನಟ ಸೂರ್ಯ ನಾಯಕರಾಗಿದ್ದಾರೆ. ತಾತ್ಕಾಲಿಕವಾಗಿ 'ಸೂರ್ಯ41' ಎಂಬ ಟೈಟಲ್ ಅನ್ನು ಇಡಲಾಗಿದ್ದು, ಸೂರ್ಯ ಕೆರಿಯರ್ನಲ್ಲೇ ಇದೊಂದು ಬಹು ನಿರೀಕ್ಷಿತ ಸಿನಿಮಾವಾಗಿ ಮೂಡಿಬರಲಿದೆ. ಸೂರ್ಯ ಮತ್ತು ನಿರ್ದೇಶಕ ಬಾಲ 20 ವರ್ಷಗಳ ನಂತರ ಇದೀಗ ಮತ್ತೆ ಪರಸ್ಪರ ಒಂದಾಗುತ್ತಿದ್ದಾರೆ. 'ಸೂರ್ಯ41' ಚಿತ್ರದ ಶೂಟಿಂಗ್ ಇನ್ನೇನು ಆರಂಭವಾಗಲಿದ್ದು, ಒಬ್ಬೊಬ್ಬರಾಗೆ ಕಲಾವಿದರು ಚಿತ್ರತಂಡ ಸೇರಿಕೊಳ್ಳುತ್ತಿದ್ದಾರೆ. ನಟಿ ಕೃತಿ ಶೆಟ್ಟಿ ಕೂಡ ಚಿತ್ರತಂಡ ಸೇರ್ಪಡೆಯಾಗಿದ್ದು, ಅಧಿಕೃತವಾಗಿ ಈ ಚಿತ್ರದ ನಾಯಕಿಯಾಗಿದ್ದಾರೆ ಕೃತಿ.

ಅಧಿಕೃತವಾಗಿ ಟ್ವಟ್ಟರ್ನಲ್ಲಿ ಮಾಹಿತಿ
ಈ ಹಿಂದೆ ಚಿತ್ರ ಸೆಟ್ಟೇರಿದಾಗ ಸೂರ್ಯನಿಗೆ ನಾಯಕಿ ಯಾರಾಗಬಹುದು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದರು. ಇದೀಗ ಸುದ್ದಿ ಹೊರಬೀಳುತ್ತಿದ್ದಂತೆ ಫ್ಯಾನ್ಸ್ ಖುಷ್ ಆಗಿದ್ದಾರೆ. ಕೃತಿ ಮತ್ತು ಸೂರ್ಯ ಜೋಡಿ ಹೇಗೆ ವರ್ಕ್ಔಟ್ ಆಗುತ್ತೆ ಅನ್ನೋದನ್ನು ನೋಡಲು ಕಾತುರರಾಗಿದ್ದಾರೆ. 2ಡಿ ಎಂಟರ್ಟೈನ್ಮೆಂಟ್ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದು, ಅಧಿಕೃತವಾಗಿ ಟ್ವಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಸೂರ್ಯ 41 ಚಿತ್ರಕ್ಕೆ ಸೌಂದರ್ಯವತಿ ಹಾಗೂ ಪ್ರತಿಭಾವಂತೆಯಾಗಿರುವ ಕೀರ್ತಿ ಶೆಟ್ಟಿ ಅವರನ್ನು ಸ್ವಾಗತಿಸಲು ನಮಗೆ ಸಂತೋಷವಾಗಿದೆ!" ಎಂದು ಟ್ವೀಟ್ ಮಾಡಿದ್ದಾರೆ.

ಕನ್ಯಾಕುಮಾರಿಯಲ್ಲಿ ಚಿತ್ರದ ಶೂಟಿಂಗ್ ಆರಂಭ
'ಸೂರ್ಯ41' ಚಿತ್ರವು ಇಂದಿನಿಂದ ಶೂಟಿಂಗ್ ಆರಂಭಿಸಿದ್ದು, ಕನ್ಯಾಕುಮಾರಿಯಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಿದೆ. ಕನ್ಯಾಕುಮಾರಿಯಲ್ಲಿ ಹಳ್ಳಿ ಸೆಟ್ ಅನ್ನು ನಿರ್ಮಾಣ ಮಾಡಲಾಗಿದ್ದು, ಇನ್ನು ಒಂದು ವಾರಗಳ ಕಾಲ ಅಲ್ಲೇ ಚಿತ್ರೀಕರಣ ನಡೆಯಲಿದೆ. ಇನ್ನು 'ಸೂರ್ಯ41' ಸಿನಿಮಾದಲ್ಲಿ ಸೂರ್ಯ ಅವರದ್ದು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಒಂದು ಪಾತ್ರದಲ್ಲಿ ಸಾಮಾನ್ಯನಾಗಿ ಕಾಣಿಸಿಕೊಳ್ಳಲಿರುವ ಸೂರ್ಯ ಮತ್ತೊಂದು ಪಾತ್ರದಲ್ಲಿ ಕಿವುಡನಾಗಿ ಮತ್ತು ಮೂಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ.

ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ
ನಟ ಸೂರ್ಯ ಮತ್ತು ನಿರ್ದೇಶಕ ಬಾಲಾ 'ನಂದ' (2001) ಮತ್ತು 'ಪಿತಾಮಗನ್' (2003) ಸಿನಿಮಾಗಳ ಹಿಟ್ನ ನಂತರ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಮತ್ತೆ ಎರೆಡು ಪ್ರಮುಖ ಪಾತ್ರ ಇರಲಿದ್ದು ಆ ಪಾತ್ರಕ್ಕಾಗಿ ನಟಿ ಕೀರ್ತಿ ಸುರೇಶ್ ಮತ್ತು ಅಥರ್ವ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು 'ಸೂರ್ಯ41' ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.


Click it and Unblock the Notifications











