ತೆರಿಗೆ ವಿನಾಯಿತಿ ಕೇಳಿದ ನಟ ಧನುಷ್ಗೆ ತಪರಾಕಿ ಹಾಕಿದ ಹೈಕೋರ್ಟ್
ತಮಿಳಿನ ಖ್ಯಾತ ನಟ ಧನುಷ್ ತಮ್ಮ ಅತ್ಯುತ್ತಮ ಸಿನಿಮಾಗಳ ಮೂಲಕ ಸಿನಿಮಾ ಪ್ರೇಮಿಗಳಿಂದ, ವಿಮರ್ಶಕರಿಂದ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ನಟ ಧನುಷ್ಗೆ ಮದ್ರಾಸ್ ಹೈಕೋರ್ಟ್ ಛೀಮಾರಿ ಹಾಕಿದೆ. ವಿದೇಶದಿಂದ ಆಮದು ಮಾಡಿಕೊಂಡ ಕಾರಿಗೆ ತೆರಿಗೆ ವಿನಾಯಿತಿ ಕೇಳಿದ್ದಕ್ಕಾಗಿ ಧನುಷ್ಗೆ ನ್ಯಾಯಾಲಯವು ಛೀಮಾರಿ ಹಾಕಿದ್ದು ಧನುಷ್ ನಿಜಾಯಿತಿಯನ್ನೇ ಪ್ರಶ್ನೆ ಮಾಡಿದೆ.
2015 ರಲ್ಲಿ ನಟ ಧನುಷ್ ವಿದೇಶಿದಿಂದ ಭಾರಿ ದುಬಾರಿ ರೋಲ್ಸ್ ರಾಯ್ಸ್ ಕಾರನ್ನು ಆಮದು ಮಾಡಿಕೊಂಡಿದ್ದರು. ಅದಕ್ಕೆ ಹೇರಲಾಗುವ ತೆರಿಗೆಯಿಂದ ವಿನಾಯಿತಿ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಹೂಡಿದ್ದರು. ಇದೀಗ ಆ ಅರ್ಜಿಯು ವಿಚಾರಣೆಗೆ ಬಂದಿದ್ದು ಇತ್ತೀಚೆಗೆ ನಡೆದ ಕೆಲವು ಘಟನೆಗಳಿಂದ ಎಚ್ಚೆತ್ತುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂಪಡೆಯಲು ಧನುಷ್ ಯತ್ನಿಸಿದ್ದಾರೆ. ಆದರೆ ಇದಕ್ಕೆ ಮದ್ರಾಸ್ ಹೈಕೋರ್ಟ್ ಒಪ್ಪಿಗೆ ನೀಡಿಲ್ಲ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಾಗ ಧನುಷ್ ಪರ ವಕೀಲರು, ಧನುಷ್ ಈಗಾಗಲೇ 50% ತೆರಿಗೆ ಪಾವತಿಸಿದ್ದು ಇನ್ನುಳಿದ ತೆರಿಗೆ ಪಾವತಿಸಲು ಅವರು ತಯಾರಿದ್ದಾರೆ. ಹಾಗಾಗಿ 2015 ರಲ್ಲಿ ತೆರಿಗೆ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆಯಲು ಅನುಮತಿ ನೀಡಬೇಕು ಎಂದು ಕೋರಿದ್ದರು. ಆದರೆ ಇದಕ್ಕೆ ಮದ್ರಾಸ್ ಹೈಕೋರ್ಟ್ ಅವಕಾಶ ನೀಡಿಲ್ಲ.

2018ರಲ್ಲಿಯೇ ಏಕೆ ತೆರಿಗೆ ಪಾವತಿಸಲಿಲ್ಲ: ಹೈಕೋರ್ಟ್ ಪ್ರಶ್ನೆ
''ಧನುಷ್ಗೆ ನಿಜಕ್ಕೂ ಕಾಳಜಿ ಇದ್ದಿದ್ದರೆ ಆತನ ಉದ್ದೇಶ ಒಳ್ಳೆಯದಾಗಿದ್ದಿದ್ದರೆ ಆತ 2018ರಲ್ಲಿ ಸುಪ್ರೀಂಕೋರ್ಟ್ ಈ ಪ್ರಕರಣವಾಗಿ ಆದೇಶ ನೀಡಿದಾಗಲೇ ಏಕೆ ತೆರಿಗೆ ಪಾವತಿಸಿ ಅರ್ಜಿ ವಾಪಸ್ಸು ಪಡೆಯಲಿಲ್ಲ. ಈಗ ತೆರಿಗೆ ಪಾವತಿಸುತ್ತೇನೆ ಎಂದು ಬಂದಿರುವುದಕ್ಕೆ ಕಾರಣವೇನು? ಅರ್ಜಿ ವಾಪಸ್ಸು ಪಡೆಯಲು ಆತುರವೇಕೆ? ಎಂದು ಮದ್ರಾಸ್ ಹೈಕೋರ್ಟ್ ಪ್ರಶ್ನೆ ಮಾಡಿದೆ.

''ತೆರಿಗೆದಾರರ ಹಣದಿಂದ ನಿರ್ಮಾಣವಾದ ರಸ್ತೆ ಮೇರೆ ಕಾರು ಚಲಾಯಿಸುತ್ತೀರಿ''
''ನೀವು (ಧನುಷ್) ಐಶಾರಾಮಿ ಕಾರನ್ನು ರಸ್ತೆಯ ಮೇಲೆ ಚಲಾಯಿಸಲಿದ್ದೀರಿ. ಆ ರಸ್ತೆಯನ್ನು ತೆರಿಗೆ ಪಾವತಿ ಮಾಡಿರುವವರ ಹಣದಿಂದ ನಿರ್ಮಿಸಲಾಗಿದೆ. ಹಾಲು ಮಾರುವವನು, ದಿನಗೂಲಿ ಕಾರ್ಮಿಕರು ಸಹ ತೆರಿಗೆ ಪಾವತಿಸುತ್ತಿದ್ದಾರೆ. ದೇಶದ ಪ್ರತಿಯೊಬ್ಬ ನಾಗರೀಕ ಪೆಟ್ರೋಲ್ ಹಾಕಿಸಿಕೊಂಡಾಗಲೆಲ್ಲ ಇಂತಿಷ್ಟೆಂದು ತೆರಿಗೆ ಕಟ್ಟುತ್ತಿದ್ದಾನೆ. ಆದರೆ ನೀವು ತೆರಿಗೆ ವಿನಾಯಿತಿಗೆ ಕೇಳುತ್ತಿದ್ದೀರ. ಇಂಥಹಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಾನು ನನ್ನ ಸೇವಾ ಅನುಭವದಲ್ಲಿ ನೋಡಿರಲಿಲ್ಲ'' ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎಂ.ಸುಬ್ರಹ್ಮಣಿಯನ್ ಹೇಳಿದರು.

''ವೆಕ್ಸಾಷಿಯಸ್ ಲಿಟಿಗೇಶನ್ ಆಕ್ಟ್' ಬಗ್ಗೆ ನಿಮಗೆ ಗೊತ್ತೆ?''
'ವೆಕ್ಸಾಷಿಯಸ್ ಲಿಟಿಗೇಶನ್ ಆಕ್ಟ್' (ನ್ಯಾಯಾಲಯದ ಸಮಯ ವ್ಯರ್ಥ ಮಾಡುವುದನ್ನು ತಡೆಯುವ ಕಾಯ್ದೆ) ಬಗ್ಗೆ ನಿಮಗೆ ಗೊತ್ತಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದ ನ್ಯಾಯಮೂರ್ತಿಗಳು. ಇಂಥಹಾ ಬೇಜವಾಬ್ದಾರಿಯುತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಂದಾಗಿ ನ್ಯಾಯಾಲಯದಲ್ಲಿ ಬಾಕಿ ಇರುವ ನಿಜವಾದ ಪ್ರಕರಣಗಳ ಮೇಲೆ ನ್ಯಾಯಾಲಯವು ಸೂಕ್ತವಾಗಿ ಗಮನ ಹರಿಸಿ ನ್ಯಾಯದಾನ ಮಾಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು ನ್ಯಾಯಮೂರ್ತಿ.

ತೆರಿಗೆ ಅಧಿಕಾರಿಯನ್ನು ನ್ಯಾಯಾಲಯಕ್ಕೆ ಕರೆಸಿ ಲೆಕ್ಕಾಚಾರ
ಕೂಡಲೇ ತೆರಿಗೆ ಅಧಿಕಾರಿಯನ್ನು ನ್ಯಾಯಾಲಯಕ್ಕೆ ಕರೆಸಿ 2015ರಿಂದ ಇಲ್ಲಿಯವರೆಗೆ ಧನುಷ್ ಎಷ್ಟು ತೆರಿಗೆ ಪಾವತಿಸಬೇಕು, ಅದಕ್ಕೆ ಆಗುವ ಹೆಚ್ಚುವರಿ ಶುಲ್ಕ ಅಥವಾ ದಂಡಗಳೆಷ್ಟು ಎಂದು ಲೆಕ್ಕಾಚಾರಿ ಹಾಕಿ ನ್ಯಾಯಾಲಯಕ್ಕೆ ತಿಳಿಸಬೇಕು. ಇದೆಲ್ಲವೂ ಆದ ಬಳಿಕವೇ ನಾನು ಈ ಪ್ರಕರಣದಲ್ಲಿ ಆದೇಶ ನೀಡುತ್ತೇನೆ'' ಎಂದು ಸಿಟ್ಟಿನಿಂದ ನ್ಯಾಯಮೂರ್ತಿಗಳು ಹೇಳಿದ್ದಾರೆ.

ವಿಜಯ್ಗೆ ತಪರಾಕಿ ಹಾಕಿದ್ದ ಹೈಕೋರ್ಟ್
ಕೆಲವು ದಿನಗಳ ಹಿಂದಷ್ಟೆ ತಮಿಳಿನ ಮತ್ತೊಬ್ಬ ನಟ ವಿಜಯ್ಗೂ ನ್ಯಾಯಾಲಯ ಇದೇ ರೀತಿ ತಪರಾಕಿ ಹಾಕಿತ್ತು. ವಿಜಯ್ ಸಹ 2012ರಲ್ಲಿ ಖರೀದಿಸಿದ ತಮ್ಮ ರೋಲ್ಸ್ ರಾಯ್ಸ್ ಕಾರಿಗೆ ತೆರಿಗೆ ವಿನಾಯಿತಿ ಬೇಕೆಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಆದರೆ ಇದನ್ನು ನಿರಾಕರಿಸಿದ ನ್ಯಾಯಾಲಯವು ವಿಜಯ್ಗೆ ಕಟು ಮಾತುಗಳಲ್ಲಿ ತಪರಾಕಿ ಹಾಕಿದ್ದಲ್ಲದೆ ದಂಡವನ್ನು ಸಹ ಪಾವತಿಸುವಂತೆ ಆದೇಶ ನೀಡಿತು. 'ರೀಲ್ ಹೀರೋಗಳು ನಿಜ ಜೀವನದಲ್ಲಿ ಹೀರೋಗಳಂತೆ ವರ್ತಿಸಲಿ' ಎಂದು ಖಾರವಾಗಿಯೇ ವಿಜಯ್ ಬಗ್ಗೆ ನ್ಯಾಯಮೂರ್ತಿಗಳು ಹೇಳಿದ್ದರು.


Click it and Unblock the Notifications











