ರಜನೀಕಾಂತ್ ಅಲ್ಲ, ವಿಜಯ್ ತಮಿಳಿನ ಸೂಪರ್ ಸ್ಟಾರ್ ಎಂದ ರಾಜಕಾರಣಿ!
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಯಾರೆಂದರೆ ಎಲ್ಲರೂ ಹೇಳುತ್ತಾರೆ ಅದು ರಜನೀಕಾಂತ್ ಎಂದು. ಕರ್ನಾಟಕ ಮೂಲದ ಈ ನಟ ತಮಿಳುನಾಡಿನಲ್ಲಿ ಸೃಷ್ಟಿಸಿರುವ ಅಬ್ಬರ ಸಾಮಾನ್ಯದ್ದಲ್ಲ. ತಮಿಳುನಾಡಿಗೆ ಮಾತ್ರವಲ್ಲ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ರಜನೀಕಾಂತ್.
ಆದರೆ ತಮಿಳುನಾಡಿನ ರಾಜಕಾರಣಿಯೊಬ್ಬ ಇದೀಗ ರಜನೀಕಾಂತ್ ಮೇಲೆ ಹಾಗೂ ರಜನಿಯ ಅಭಿಮಾನಿಗಳ ಮೇಲೆ ಹರಿಹಾಯ್ದಿದ್ದು, ತಮಿಳುನಾಡಿನ ಸೂಪರ್ ಸ್ಟಾರ್ ರಜನೀಕಾಂತ್ ಅಲ್ಲ ವಿಜಯ್ ಎಂದಿದ್ದಾರೆ.
ಆಗಿದ್ದಿಷ್ಟು, ಪತ್ರಕರ್ತನೊಬ್ಬ ರಜನೀಕಾಂತ್ ಅವರನ್ನು ಮಾಜಿ ಸೂಪರ್ ಸ್ಟಾರ್ ಎಂದು ಸಂಭೋಧಿಸಿದ್ದಾರೆ. ಇದರಿಂದ ಬೇಸರಗೊಂಡಿದ್ದ ಕೆಲವು ರಜನೀಕಾಂತ್ ಅಭಿಮಾನಿಗಳು ಪತ್ರಕರ್ತನಿಗೆ ಮುತ್ತಿಗೆ ಹಾಕಿ ಜಗಳ ಮಾಡಿದ್ದರು. ಇದನ್ನು ಖಂಡಿಸಿ ನಾಮ್ ತಮಿಳರ್ ಪಕ್ಷದ ಮುಖಂಡ ಸೀಮನ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.

ವಿಜಯ್ ನಿಜವಾದ ಸೂಪರ್ ಸ್ಟಾರ್ ಎಂದಿದ್ದ ಬಿಸ್ಮಿ
ತಮಿಳು ಸಿನಿಮಾ ವರದಿಗಾರ ಬಿಸ್ಮಿ, ''ವಿಜಯ್ ನಿಜವಾದ ಸೂಪರ್ಸ್ಟಾರ್, ರಜನೀಕಾಂತ್ ಮಾಜಿ ಸೂಪರ್ಸ್ಟಾರ್. ದಿಲ್ ರಾಜುಗೆ ಅದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಅದು ಎಲ್ಲರಿಗೂ ಗೊತ್ತಿರುವುದೇ ವಿಜಯ್ ಅನ್ನು ತಮಿಳಿನ ಜನರು ಹೃದಯದಲ್ಲಿ ಇರಿಸಿ ಪೂಜಿಸುತ್ತಿದ್ದಾರೆ'' ಎಂದಿದ್ದರು. ಇದು ರಜನೀಕಾಂತ್ ಅಭಿಮಾನಿಗಳಿಗೆ ಸಿಟ್ಟು ತರಿಸಿತ್ತು. ಬಿಸ್ಮಿ ಕಚೇರಿಗೆ ತೆರಳಿದ ಕೆಲವು ಅಭಿಮಾನಿಗಳು ಅವರೊಟ್ಟಿಗೆ ವಾಗ್ವಾದ ನಡೆಸಿದ್ದಾರೆ. ಆದರೆ ವಾಗ್ವಾದವು ಸೌಹಾರ್ದಯುತವಾಗಿಯೇ ನಡೆದಿದೆ ಎನ್ನಲಾಗುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ರಜನೀಕಾಂತ್ ಅಭಿಮಾನಿಗಳು ಬಿಸ್ಮಿ ಜೊತೆಗೆ ನಗುತ್ತಲೇ ಸೆಲ್ಫಿ ಸಹ ತೆಗೆದು ಹಂಚಿಕೊಂಡಿದ್ದಾರೆ.

ಸೂಪರ್ ಸ್ಟಾರ್ ಪಟ್ಟ ಶಾಶ್ವತವಲ್ಲ: ಸೀಮನ್
ಆದರೆ 'ನಾಮ್ ತಮಿಳರ್' ಪಕ್ಷದ ಸೀಮನ್ ಈ ಘಟನೆಯನ್ನು ಖಂಡಿಸಿದ್ದು, ರಜನೀಕಾಂತ್ ಅನ್ನು ಮಾಜಿ ಸೂಪರ್ ಸ್ಟಾರ್ ಎಂದ ಪತ್ರಕರ್ತನನ್ನು ವಿಜಯ್ ಅಭಿಮಾನಿಗಳು ಬೆದರಿಸಿದ್ದಾರೆ ಎಂದಿದ್ದಾರೆ. ಮುಂದುವರೆದು, ತಮಿಳಿನ ಉಚ್ಛ ನಚ್ಚರಿತ್ತಮ್ (ಸೂಪರ್ ಸ್ಟಾರ್) ಪಟ್ಟ ಯಾರಿಗೂ ಶಾಶ್ವತ ಬಿರುದು ಅಲ್ಲ. ಕಾಲಗಳು, ಜನರೇಷನ್ ಬದಲಾದಂತೆ ಅದೂ ಬದಲಾಗುತ್ತಾ ಬಂದಿದೆ. ನಟರ ಸಿನಿಮಾಗಳನ್ನು ಜನರು ಸ್ವೀಕರಿಸುವ ರೀತಿ, ಅವರು ತೋರಿಸುವ ಪ್ರೀತಿಯನ್ನು ಆಧರಿಸಿ ಈ ಪಟ್ಟ ಒಬ್ಬರಿಂದ ಒಬ್ಬರಿಗೆ ಬದಲಾಗುತ್ತಿರುತ್ತದೆ'' ಎಂದಿದ್ದಾರೆ.

ಈವರೆಗೆ ಮೂವರು ಸೂಪರ್ಸ್ಟಾರ್ಗಳಾಗಿದ್ದಾರೆ
ಮೊದಲಿಗೆ ತ್ಯಾಗರಾಜ ಭಾಗವತರು ಸೂಪರ್ ಸ್ಟಾರ್ ಆಗಿದ್ದರು. ಆ ನಂತರ ಎಂಜಿಆರ್ ಸೂಪರ್ ಸ್ಟಾರ್ ಆದರು. ಆ ಬಳಿಕ ಎಂಜಿಆರ್ ರಾಜಕೀಯದಲ್ಲಿ ಮೆರೆಯಬೇಕಾದರೆ ಸಹ ರಜನೀಕಾಂತ್ ಸೂಪರ್ ಸ್ಟಾರ್ ಆದರು. ಆದರೆ ಈಗಿನ ಯುವಕರು ವಿಜಯ್ ಅವರನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ರಜನೀಕಾಂತ್ ಅಭಿಮಾನಿಗಳು ಇದನ್ನು ಒಪ್ಪಿಕೊಳ್ಳಬೇಕು. ಸಿನಿಮಾ ವರದಿಗಾರನ ಕಚೇರಿಗೆ ನುಗ್ಗಿ ಅವರಿಗೆ ಬೆದರಿಕೆ ಹಾಕುವುದು ಒಪ್ಪತಕ್ಕುದಲ್ಲ'' ಎಂದಿದ್ದಾರೆ ಸೀಮನ್.

ರಜನೀಕಾಂತ್ ಇದನ್ನು ಒಪ್ಪುವುದಿಲ್ಲ: ಸೀಮನ್
''ಈ ರೀತಿಯಾಗಿ ಪತ್ರಕರ್ತರ ಮನೆಗೆ ಅನುಮತಿ ಇಲ್ಲದೆ ನುಗ್ಗಿ ದಾಂಧಲೆ ಎಬ್ಬಿಸಿರುವುದು ಸರಿಯಲ್ಲ. ಸ್ವತಃ ರಜನೀಕಾಂತ್ ಅವರೇ ಇದನ್ನು ಒಪ್ಪುವುದಿಲ್ಲ. ಹಾಗಾಗಿ ದಯವಿಟ್ಟು ರಜನೀಕಾಂತ್ ಅಭಿಮಾನಿಗಳು ಈ ರೀತಿಯ ಅನವಶ್ಯಕ ಜಗಳಗಳಲ್ಲಿ ಸಿಲುಕಿಕೊಳ್ಳದಿರಿ. ರಜನೀಕಾಂತ್ ಅಭಿಮಾನಿಗಳು ಬುದ್ಧಿವಂತರು, ಬೌಧ್ಧಿಕವಾಗಿ ಪ್ರೌಢರು ಎಂಬ ಹೆಸರಿದೆ ಅದಕ್ಕೆ ತಕ್ಕಂತೆ ವರ್ತಿಸಿ'' ಎಂದಿದ್ದಾರೆ ಸೀಮನ್.


Click it and Unblock the Notifications











