ಆಡಿಯೋ ವೈರಲ್: ಅನಾರೋಗ್ಯ ಪೀಡಿತ ಅಭಿಮಾನಿಗೆ ರಜನಿಕಾಂತ್ ಕರೆ
ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಅಭಿಮಾನಿಯೊಬ್ಬನಿಗೆ ಕರೆ ಮಾಡಿ ಮಾತನಾಡಿ, ಧೈರ್ಯ ತುಂಬಿದ್ದಾರೆ ಸೂಪರ್ ಸ್ಟಾರ್ ರಜನಿಕಾಂತ್.
45 ವರ್ಷಗಳ ಹಿಂದೆ ರಜನಿಕಾಂತ್ ಅಭಿಮಾನಿಗಳ ಬಳಗವನ್ನು ಮೊದಲ ಬಾರಿಗೆ ಸ್ಥಾಪಿಸಿದ್ದ ಮುತ್ತುಮಣಿ ಎಂಬಾತ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆತನಿಗೆ ಕರೆ ಮಾಡಿದ ರಜನಿಕಾಂತ್ ಆತನ ಆರೋಗ್ಯ ವಿಚಾರಿಸಿದ್ದಾರೆ.
ಆತನ ಪತ್ನಿಯೊಂದಿಗೂ ಮಾತನಾಡಿದ ರಜನಿಕಾಂತ್, ಕುಟುಂಬಕ್ಕೆ ಧೈರ್ಯ ಹೇಳಿದ್ದಲ್ಲದೆ, ಆರ್ಥಿಕ ಸಹಾಯದ ಭರವಸೆಯನ್ನೂ ಸಹ ನೀಡಿದ್ದಾರೆ. ರಜನಿಕಾಂತ್, ಕಷ್ಟದಲ್ಲಿರುವ ತಮ್ಮ ಅಭಿಮಾನಿಯೊಂದಿಗೆ ಮಾತನಾಡಿರುವ ಆಡಿಯೋ ಸಖತ್ ವೈರಲ್ ಆಗಿದೆ.

ಕಷ್ಟದಲ್ಲಿದ್ದ ಅಭಿಮಾನಿಗೆ ರಜನಿಕಾಂತ್ ಕರೆ
ಮುತ್ತುಮಣಿಗೆ ಕರೆ ಮಾಡುವ ರಜನಿಕಾಂತ್, ಮೊದಲಿಗೆ ಆತನ ಆರೋಗ್ಯದ ಬಗ್ಗೆ, ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆಯುತ್ತಾರೆ. ಮುತ್ತುಮಣಿ ಬಹುವರ್ಷಗಳಿಂದ ರಜನಿಕಾಂತ್ ಗೆ ಪರಿಚಯ ಇರುವ ಕಾರಣ ಬಹು ಆಪ್ತವಾಗಿಯೇ ಇಬ್ಬರು ಮಾತನಾಡಿದ್ದಾರೆ.

ಶ್ವಾಸಕೋಶದ ಸಮಸ್ಯೆ ಆಗಿದೆ: ಮುತ್ತುಮಣಿ
ತನಗೆ ಶ್ವಾಸಕೋಶದ ಸಮಸ್ಯೆ ಆಗಿದ್ದು, ಶ್ವಾಸಕೋಶದ ಒಳಗೆ ಫಂಗಸ್ ಮಾದರಿ ಆಗಿದ್ದು, ಮದುರೈ ನಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ದಿನವೂ ಪರೀಕ್ಷೆ ಮಾಡುತ್ತಿದ್ದಾರೆ. ಮಾತ್ರೆಗಳನ್ನು ಕೊಡುತ್ತಿದ್ದಾರೆ. ಕೊರೊನಾ ಪರೀಕ್ಷೆ ಮಾಡಿಸಿದರು, ಕೊರೊನಾ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡುತ್ತಾರೆ ಮುತ್ತುಮಣಿ.

ನಿಮ್ಮೊಂದಿಗೆ ಮಾತನಾಡಿ ಹೊಸ ಉತ್ಸಾಹ ಬಂತು: ಮುತ್ತುಮಣಿ
ಕೆಲವು ದಿನಗಳಿಂದ ಬಹಳ ನೋವಿನಲ್ಲಿದ್ದೆ, ಬೇಸರದಲ್ಲಿದ್ದೆ ನೀವು ಕರೆ ಮಾಡಿ ಮಾತನಾಡಿದ್ದು ಹೊಸ ಉತ್ಸಾಹ ಕೊಟ್ಟಿದೆ, ಶಕ್ತಿ ಬಂದಂತಾಗುತ್ತಿದೆ ಎನ್ನುತ್ತಾರೆ ಮುತ್ತುಮಣಿ. ನೀವೇ ನಮಗೆ ಎಲ್ಲಾ ನೀವೇ ಅಪ್ಪ-ಅಮ್ಮ, ದೇವರು ನನಗೆ ನನ್ನ ಕುಟುಂಬಕ್ಕೆ ಎಂದು ಭಾವುಕರಾಗುತ್ತಾರೆ ಮುತ್ತುಮಣಿ.
Recommended Video

ಏನಾದರೂ ಆಗಲಿ ನಾನಿದ್ದೇನೆ ಹೆದರಬೇಡ: ರಜನಿಕಾಂತ್ ಅಭಯ
ಮುತ್ತುಮಣಿಗೆ ಧೈರ್ಯವಾಗಿರುವಂತೆ ಹೇಳುವ ರಜನಿಕಾಂತ್, ನಿನಗೆ ನಿನ್ನ ಕುಟುಂಬಕ್ಕೆ ನಾನಿದ್ದೇನೆ. ಯಾವುದಕ್ಕೂ ಸಹ ಹೆದರಬೇಡ, ನಾನಿದ್ದೇನೆ ಎಂದು ಧೈರ್ಯ ಹೇಳಿದ್ದಾರೆ ರಜನಿಕಾಂತ್. ಮುತ್ತುಮಣಿ ಪತ್ನಿಯೊಂದಿಗೆ ಮಾತನಾಡುವ ರಜನಿಕಾಂತ್ ಅವರಿಗೂ ಧೈರ್ಯ ಹೇಳಿದ್ದಾರೆ. ಈ ಆಡಿಯೋ ಈಗ ಸಖತ್ ವೈರಲ್ ಆಗಿದೆ.


Click it and Unblock the Notifications











