ಆಸ್ತಿ ತೆರಿಗೆ ವಿವಾದ: ಮೌನ ಮುರಿದ ಸೂಪರ್ ಸ್ಟಾರ್ ರಜನಿಕಾಂತ್
ಆಸ್ತಿ ತೆರೆಗೆ ವಿವಾದ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಮೌನ ಮುರಿದಿದ್ದಾರೆ. ಮನವಿ ತಿರಸ್ಕರಿಸಿದ ಬಗ್ಗೆ ಬೇಸರ ಹೊರಹಾಕಿರುವ ರಜನಿಕಾಂತ್, ಮೊದಲೇ ಚೆನ್ನೈ ಕಾರ್ಪೋರೇಷನ್ ನಿಗಮದ ಬಳಿ ಮನವಿ ಮಾಡಿಕೊಳ್ಳಬಹುದಿತ್ತು ಎಂದಿದ್ದಾರೆ.
ಗ್ರೇಟರ್ ಚೆನ್ನೈ ಕಾರ್ಪೋರೇಷನ್ 6.50 ಲಕ್ಷ ತೆರೆಗೆ ಬೇಡಿಕೆ ಪ್ರಶ್ನಿಸಿ ರಜನಿಕಾಂತ್ ಸಲ್ಲಿಸಿದ ಮನವಿಯನ್ನು ಮದ್ರಾಸ್ ಹೈ ಕೋರ್ಟ್ ಬುಧವಾರ ತಿರಸ್ಕರಿಸಿದೆ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗುವುದು ಎಂದು ರಜನಿಕಾಂತ್ ಪರ ವಕೀಲರಿಗೆ ಕೋರ್ಟ್ ಎಚ್ಚರಿಕೆ ನೀಡಿದೆ.
ಈ ಬಗ್ಗೆ ರಜನಿಕಾಂತ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ತಮಿಳಿನಲ್ಲಿ ಟ್ವೀಟ್ ಮಾಡಿರುವ ಸೂಪರ್ ಸ್ಟಾರ್, "ರಾಘವೇಂದ್ರ ಮದುವೆ ಹಾಲ್ ಆಸ್ತಿ ತೆರಿಗೆ. ನಾನು ಚೆನ್ನೈ ಕಾರ್ಪೊರೇಶನ್ ಗೆ ಮೊದಲೇ ಮನವಿ ಮಾಡಿಕೊಳ್ಳಬೇಕಿತ್ತು. ಈ ತಪ್ಪನ್ನು ತಪ್ಪಿಸಬಹುದಿತ್ತು. ಅನುಭವವು ಅತ್ಯುತ್ತಮ ಪಾಠ ಕಲಿಸುತ್ತೆ" ಎಂದು ಹೇಳಿದ್ದಾರೆ.

ಚೆನ್ನೈ ಕಾರ್ಪೋರೇಷನ್ ಏಪ್ರಿಲ್ ನಿಂದ ಸೆಪ್ಟಂಬರ್ ವರೆಗೆ ಅರ್ಧ ವರ್ಷ ಅವಧಿಗೆ ವಿಧಿಸಿದ್ದ ತೆರಿಗೆ ವಿರುದ್ಧ ರಜನಿಕಾಂತ್ ಮದ್ರಾಸ್ ಹೈ ಕೋರ್ಟ್ ಮೊರೆ ಹೋಗಿದ್ದರು. ಕೊರೊನಾ ವೈರಸ್ ಲಾಕ್ ಡೌನ್ ನಿಂದ ಮಾರ್ಚ್ 24ರಿಂದ ಮದುವೆ ಹಾಲ್ ಖಾಲಿಯಾಗಿದೆ. ಯಾವುದೇ ಆದಾಯವಿಲ್ಲ. ಇಷ್ಟು ತೆರೆಗೆ ಕಟ್ಟುವುದು ಹೇಗೆ ಎಂದು ರಜನಿಕಾಂತ್ ಪರ ವಕೀಲರು ಮನವಿಯಲ್ಲಿ ತಿಳಿಸಿದ್ದರು.
'ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದೇವೆ. ಕೊನೆಯದಾಗಿ ಫೆಬ್ರವರಿ 14ರಂದು ತೆರೆಗೆ ಪಾವತಿಸಲಾಗಿದೆ. ಲಾಕ್ ಡೌನ್ ಗೂ ಮೊದಲು ಹಾಲ್ ಬುಕ್ ಮಾಡಿದ್ದ ಜನರಿಗೆ ಸರ್ಕಾರದ ಆದೇಶದಂತೆ ಹಣ ಮರುಪಾವತಿಸಿದ್ದೇವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದರು. ಸೂಪರ್ ಸ್ಟಾರ್ ತಮ್ಮ ವಕೀಲ ವಿಜಯನ್ ಸುಬ್ರಮಣಿಯನ್ ಮೂಲಕ ಮನವಿ ಸಲ್ಲಿಸಿದ್ದರು. ಆದರೆ ಕೋರ್ಟ್ ರಜನಿಕಾಂತ್ ಮನವಿಯನ್ನು ತಿರಸ್ಕರಿಸಿ ಎಚ್ಚರಿಕೆ ನೀಡಿದೆ.


Click it and Unblock the Notifications











