ಫೋಟೋ ವೈರಲ್: ಆಸ್ಪತ್ರೆಯಿಂದ ಮನೆಗೆ ಮರಳಿದ ರಜನಿಕಾಂತ್ ಅವರನ್ನು ಆರತಿಮಾಡಿ ಬರಮಾಡಿಕೊಂಡ ಪತ್ನಿ
ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಡಿಸೆಂಬರ್ 27ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಅಧಿಕ ರಕ್ತದೊತ್ತಡದಿಂದ ರಜನಿಕಾಂತ್ ಅವರನ್ನು ಶುಕ್ರವಾರ (ಡಿ.25) ಬೆಳಗ್ಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಲೈವ ಆಸ್ಪತ್ರೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಅಭಿಮಾನಿಗಳ ಆತಂಕ ಹೆಚ್ಚಾಗಿತ್ತು. ಸೂಪರ್ ಸೂಪರ್ ಸ್ಟಾರ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದರು. ಅಭಿಮಾನಿಗಳ ಪ್ರಾರ್ಥನೆಯಂತೆ ರಜನಿಕಾಂತ್ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಚೆನ್ನೈ ನಿವಾಸಕ್ಕೆ ವಾಪಸ್ ಆಗಿದ್ದಾರೆ.
ಮನೆಗೆ ಮರಳಿದ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಪತ್ನಿ ಲತಾ ಆರತಿ ಮಾಡಿ ಮನೆಯೊಳಗೆ ಬರಮಾಡಿಕೊಂಡಿದ್ದಾರೆ. ಪತ್ನಿ ಆರತಿ ಮಾಡಿ, ಪತಿಯ ಹಣೆಗೆ ತಿಲಕ ಇಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ಸೂಪರ್ ಸ್ಟಾರ್ ಆರೋಗ್ಯ ಸುಧಾರಿಸಿದೆ. ಆದರೆ ಇನ್ನೂ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಸುಮಾರು 1 ವಾರ ಸಂಪೂರ್ಣ ರೆಸ್ಟ್ ಮಾಡುವಂತೆ ವೈದ್ಯರು ತಿಳಿಸಿದ್ದಾರೆ. ರಜನಿಕಾಂತ್ ಸದ್ಯ ಅಣ್ಣಾತೆ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದರು. ಸತತ ಚಿತ್ರೀಕರಣದಿಂದ ರಜನಿಕಾಂತ್ ಅವರ ರಕ್ತದ ಒತ್ತಡದಲ್ಲಿ ಏರಿಳಿತ ಕಂಡು ಬಂದಿದೆ ಎಂದು ಹೇಳಲಾಗಿದೆ.
ಅಲ್ಲದೆ ಅಣ್ಣಾತೆ ಸಿನಿಮಾ ಸೆಟ್ನಲ್ಲಿ ಎಂಟು ಜನರಿಗೆ ಕೊರೊನಾ ವೈರಸ್ ತಗುಲಿದ್ದು, ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಸೆಟ್ನಲ್ಲಿ ಕೋವಿಡ್ ಪತ್ತೆಯಾದ ಕಾರಣ ರಜನಿಕಾಂತ್ ಅವರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ.
ಡಿಸೆಂಬರ್ 31 ರಂದು ರಾಜಕೀಯ ಪಕ್ಷದ ಹೆಸರನ್ನು ಘೋಷಿಸಲಿರುವ ಕಾರಣ, ಬೇಗ ಚಿತ್ರೀಕರಣ ಮುಗಿಸುವ ಸಲುವಾಗಿ ದಿನಕ್ಕೆ 14 ಗಂಟೆಗಳ ಕಾಲ ರಜನಿ ಕೆಲಸ ಮಾಡ್ತಿದ್ದರು ಎಂದು ಹೇಳಲಾಗಿದೆ. ಪಕ್ಷ ಘೋಷಣೆಗೆ ತಯಾರಿ ಸಹ ನಡೆಸಿದ್ದಾರೆ. ಆದರೀಗ ವೈದ್ಯರು ಸಂಪೂರ್ಣ ವಿಶ್ರಾಂತಿ ಮಾಡಬೇಕೆಂದು ಸೂಚಿಸಿದ್ದರಿಂದ ಪಕ್ಷ ಘೋಷಣೆ ಮಾಡುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications











