ಒಂದೇ ಚಿತ್ರದಲ್ಲಿ ವಿಜಯ್ - ರಕ್ಷಿತ್ ಶೆಟ್ಟಿ ನಟನೆ? 'ವಿಕ್ರಮ್' ಲೋಕೇಶ್ ಕನಕರಾಜ್ ನಿರ್ದೇಶಕ!
ಪ್ಯಾನ್ ಇಂಡಿಯಾ ಟ್ರೆಂಡ್ ಅನ್ನು ಸದ್ಯ ಚಿತ್ರರಂಗದ ದಿಗ್ಗಜ ನಟರೇ ಅನುಸರಿಸುತ್ತಿದ್ದು, ಈ ಟ್ರೆಂಡ್ ಬಂದ ಬಳಿಕ ಇಂಡಸ್ಟ್ರಿಗಳ ನಡುವೆ ಇದ್ದ ಅಂತರ ಕಡಿಮೆಯಾಗಿಬಿಟ್ಟಿದೆ. ದಕ್ಷಿಣ ಭಾರತ ಚಿತ್ರರಂಗದ ನಟರು ಬಾಲಿವುಡ್ ಚಿತ್ರಗಳಲ್ಲಿ, ಬಾಲಿವುಡ್ ಕಲಾವಿದರು ಸೌತ್ ಇಂಡಸ್ಟ್ರಿಗಳಲ್ಲಿ ನಟಿಸುವುದು ಹೆಚ್ಚಾಗಿದೆ. ಇನ್ನು ದಕ್ಷಿಣ ಭಾರತದ ನಾಲ್ಕು ಪ್ರಮುಖ ಇಂಡಸ್ಟ್ರಿಗಳ ನಟರು ಪಕ್ಕದ ಇಂಡಸ್ಟ್ರಿಗಳಿಗೆ ತೆರಳಿ ಅಲ್ಲಿನ ಚಿತ್ರಗಳಲ್ಲಿ ನಟಿಸುವುದು ಕಾಮನ್ ಆಗುತ್ತಿದೆ.
ತಮಿಳಿನ ನಟ ವಿಜಯ್ ಸೇತುಪತಿ ತೆಲುಗು ಚಿತ್ರದಲ್ಲಿ ನಟಿಸಿದ್ದರು, ಕನ್ನಡದ ನಟ ಡಾಲಿ ಧನಂಜಯ್ ತೆಲುಗು ಚಿತ್ರದಲ್ಲಿ ನಟಿಸಿದ್ದರು, ಮಲಯಾಳಂ ನಟ ಫಾಹದ್ ಫಾಸಿಲ್ ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ನಟಿಸಿದ್ದರು. ಹೀಗೆ ಬೇರೆ ಇಂಡಸ್ಟ್ರಿ ಚಿತ್ರಗಳಲ್ಲಿ ಬಣ್ಣ ಹಚ್ಚುವುದು ಕಾಮನ್ ಆಗಿದ್ದು, ಟ್ಯಾಲೆಂಟ್ ಇರುವ ನಟರಿಗೆ ಬೇರೆ ಇಂಡಸ್ಟ್ರಿಗಳಿಂದ ಆಫರ್ಗಳು ಹುಡುಕಿಕೊಂಡು ಬರುತ್ತಿವೆ.
ಇನ್ನು ಶಿವ ರಾಜ್ಕುಮಾರ್ ರೀತಿಯ ದೊಡ್ಡ ನಟ ತಮಿಳಿನಲ್ಲಿ ರಜನಿಕಾಂತ್ ನಟನೆಯ ಜೈಲರ್ ಹಾಗೂ ಧನುಷ್ ನಟನೆಯ ಕ್ಯಾಪ್ಟನ್ ಮಿಲ್ಲರ್ ಎಂಬ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಸಹ ಕಾಲಿಟ್ಟಿದ್ದಾರೆ. ಹೀಗೆ ದೊಡ್ಡ ಸ್ಟಾರ್ ನಟರುಗಳೇ ಇಂಡಸ್ಟ್ರಿಯ ಬೇಲಿ ದಾಟಿ ಪಕ್ಕದ ಇಂಡಸ್ಟ್ರಿಗಳಿಗೆ ತೆರಳಿ ಕೆಲಸ ಮಾಡುತ್ತಿದ್ದು ಅಂತಹ ನಟರ ಫೇಮ್ ಸಹ ವಿಸ್ತರಿಸುತ್ತಿದೆ. ಇನ್ನು ಈ ಸಾಲಿಗೆ ಇದೀಗ ಕನ್ನಡದ ಪ್ರತಿಭಾವಂತ ಕಲಾವಿದ ರಕ್ಷಿತ್ ಶೆಟ್ಟಿ ಸಹ ಸೇರಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ತಮಿಳಿನ ಚಿತ್ರವೊಂದಕ್ಕಾಗಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಲೋಕೇಶ್ ಕನಕರಾಜ್ ಚಿತ್ರದಲ್ಲಿ ನಟನೆ!
ಮಾನಗರಂ, ಖೈದಿ, ಮಾಸ್ಟರ್ ಹಾಗೂ ವಿಕ್ರಮ್ ರೀತಿಯ ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಸ್ಟಾರ್ ನಿರ್ದೇಶಕನ ಪಟ್ಟ ಗಿಟ್ಟಿಸಿಕೊಂಡಿರುವ ನಂಬುಗೆಯ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ದಳಪತಿ ವಿಜಯ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಸುದ್ದಿಯನ್ನು ಸಿನಿಮಾ ಪರಿಣಿತರು ಹಂಚಿಕೊಂಡಿದ್ದು, ಚಿತ್ರತಂಡ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಚಿತ್ರದಲ್ಲಿ ಇರಲಿದ್ದಾರೆ ಬೇರೆ ಚಿತ್ರರಂಗದ ನಟರು
ಇನ್ನು ಮೊದಲೇ ಹೇಳಿದಂತೆ ಇಂಡಸ್ಟ್ರಿಯ ಬೇಲಿಯನ್ನು ದಾಟಿ ನಟರು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದು, ವಿಜಯ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಶನ್ನ ಈ ಚಿತ್ರದಲ್ಲೂ ಸಹ ವಿವಿಧ ಚಿತ್ರರಂಗದ ಸ್ಟಾರ್ ನಟರು ನಟಿಸಲಿದ್ದಾರೆ. ಕನ್ನಡದ ರಕ್ಷಿತ್ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಮಲಯಾಳಂನ ನಿವಿನ್ ಪೌಲಿ, ಪೃಥ್ವಿರಾಜ್ ಸುಕುಮಾರನ್ ಹಾಗೂ ಬಾಲಿವುಡ್ನ ಸಂಜಯ್ ದತ್ ಸಹ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ. ಇನ್ನು ನಾಯಕಿಯರಾಗಿ ತ್ರಿಶಾ ಕೃಷ್ಣನ್ ಹಾಗೂ ಕೀರ್ತಿ ಸುರೇಶ್ ನಟಿಸಲಿದ್ದಾರೆ.

ಜನವರಿ 22ರಂದು ಅಪ್ಡೇಟ್
ಇನ್ನು ಸಂದರ್ಶನವೊಂದರಲ್ಲಿ ಈ ಚಿತ್ರದ ಕುರಿತಾಗಿ ಮಾತನಾಡಿದ್ದ ನಿರ್ದೇಶಕ ಲೋಕೇಶ್ ಕನಕರಾಜ್ ಜನವರಿ 22ರಂದು ಚಿತ್ರದ ಅಪ್ಡೇಟ್ ಸಿಗಲಿವೆ ಎಂದಿದ್ದರು. ಚಿತ್ರವನ್ನು ಚೆನ್ನೈ ಹಾಗೂ ಕಾಶ್ಮೀರದಲ್ಲಿ ಹೆಚ್ಚಾಗಿ ಚಿತ್ರೀಕರಿಸಲಾಗುವುದು. ಕಳೆದ ವರ್ಷ ವಿಕ್ರಮ್ ಮೂಲಕ ಮೋಡಿ ಮಾಡಿದ್ದ ಲೋಕೇಶ್ ಕನಕರಾಜ್ ತಮ್ಮದೇ ಆದ ಸಿನಿಮಾ ಯೂನಿವರ್ಸ್ ಸೃಷ್ಟಿಸಲಿದ್ದು, ಯಾವ ಯಾವ ನಟರನ್ನು ಇದರಲ್ಲಿ ಸೇರಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಹಾಗೂ ಇನ್ನುಮುಂದೆ ತಾನು ಮಾಡುವ ಚಿತ್ರಗಳೆಲ್ಲಾ ಸಂಪೂರ್ಣವಾಗಿ ತನ್ನ ಶೈಲಿಯಲ್ಲೇ ಇರಲಿದೆ, ಯಾವುದಕ್ಕೂ ರಾಜಿಯಾಗುವುದಿಲ್ಲ ಎಂದು ಲೋಕೇಶ್ ತಿಳಿಸಿದ್ದರು. ಈ ಮೂಲಕ ಈ ಬಾರಿ ವಿಜಯ್ ಹೊಸ ರೀತಿಯ ಪಾತ್ರ ನಿಭಾಯಿಸುವುದಂತೂ ಪಕ್ಕಾ ಎನ್ನಬಹುದು.


Click it and Unblock the Notifications











