"ವಾರಿಸು ಚಿತ್ರದಲ್ಲಿ ನನ್ನ ಪಾತ್ರಕ್ಕೆ ಸ್ಕೋಪ್ ಇರ್ಲಿಲ್ಲ, ಆದ್ರು ಯಾಕೆ ಒಪ್ಪಿಕೊಂಡೆ ಅಂದ್ರೆ..: ರಶ್ಮಿಕಾ ಮಂದಣ್ಣ
ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ವಾರಿಸು' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ರಿಲೀಸ್ ಆಗಿತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ ಹಿಂದಿ, ತೆಲುಗಿಗೂ ಡಬ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾ 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
ನಟನೆಗೆ ಅವಕಾಶ ಇರುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದು ಸಾಮಾನ್ಯವಾಗಿ ನಟ- ನಟಿಯರು ಹೇಳುತ್ತಿರುತ್ತಾರೆ. ಆದರೆ ರಶ್ಮಿಕಾ ಮಾತ್ರ 'ವಾರಿಸು' ಚಿತ್ರದಲ್ಲಿ ನಟನೆಗೆ ಅವಕಾಶ ಇಲ್ಲದೇ ಇದ್ದರೂ ಒಪ್ಪಿ ನಟಿಸಿದರಂತೆ. ಅದಕ್ಕೆ ಕಾರಣ ಏನು ಎನ್ನುವುದನ್ನು ಕೂಡ ಆಕೆ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ವಿಜಯ್ ದೊಡ್ಡ ಬ್ಯುಸಿನೆಸ್ಮನ್ ಮಗನಾಗಿ ಕಾಣಿಸಿಕೊಂಡಿದ್ದಾರೆ. ಆತನ ಪ್ರೇಯಸಿ ದಿವ್ಯಾ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಮಿಂಚಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾ ಮಂದಣ್ಣ ಚಿತ್ರದ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. "ಕಥೆ ಪೂರ್ತಿ ಕೇಳಿದ ಮೇಲೆ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಪ್ರಾಧಾನ್ಯತೆ ಇಲ್ಲ ಎನ್ನುವುದು ಅರ್ಥವಾಗಿತ್ತು. ಆದರೂ ನಾನು ಒಪ್ಪಿಕೊಂಡೆ. ಇದು ಸಂಪೂರ್ಣವಾಗಿ ನನ್ನ ಸ್ವಂತ ನಿರ್ಧಾರ. ದಳಪತಿ ವಿಜಯ್ ಜೊತೆ ನಟಿಸುವ ಆಸೆ ಇತ್ತು. ನಾನು ಅವರ ಅಭಿಮಾನಿ. ಹಾಗಾಗಿ ಸಿಕ್ಕಿದ ಅವಕಾಶ ಬಿಡಲಿಲ್ಲ. ಚಿತ್ರದಲ್ಲಿ ಎರಡು ಹಾಡಿಗೆ ಡ್ಯಾನ್ಸ್ ಮಾಡಬೇಕು ಎಂದಾಗ ಮಿಸ್ ಮಾಡದೇ ಕುಣಿದು ಕುಪ್ಪಳಿಸಿದೆ. ಶೂಟಿಂಗ್ ವೇಳೆ ಒಮ್ಮೆ ಸ್ವತಃ ವಿಜಯ್ ಸರ್ ಬಳಿ ಈ ಚಿತ್ರದಲ್ಲಿ ನನಗೆ 2 ಹಾಡು ಬಿಟ್ಟರೆ ಬೇರೆ ಏನು ಕೆಲಸ ಇಲ್ಲ ಎಂದು ಹೇಳಿದ್ದೆ. ಒಟ್ನಲ್ಲಿ ನಟಿಯಾಗಿ ಎಲ್ಲಾ ತರಹದ ಪಾತ್ರಗಳನ್ನು ಮಾಡಬೇಕು. ಅದರಲ್ಲಿ ಕಮರ್ಷಿಯಲ್ ಸಿನಿಮಾಗಳು ಕೂಡ ಇರುತ್ತವೆ" ಎಂದಿದ್ದಾರೆ.

'ವಾರಿಸು' ನಂತರ ರಶ್ಮಿಕಾ ನಟನೆಯ ಬಾಲಿವುಡ್ನ 'ಮಿಷನ್ ಮಜ್ನು' ಸಿನಿಮಾ ನೇರವಾಗಿ ಓಟಿಟಿಗೆ ಬಂದಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ. ಇನ್ನು ಬಾಲಿವುಡ್ನಲ್ಲಿ ರಣ್ಬೀರ್ ಕಪೂರ್ ಜೊತೆ 'ಅನಿಮಲ್' ಚಿತ್ರದಲ್ಲಿ ರಶ್ಮಿಕಾ ಬಣ್ಣ ಹಚ್ಚಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಶೂಟಿಂಗ್ ಶುರುವಾಗಿದೆ. ಒಟ್ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ರಶ್ಮಿಕಾ ಕೆಲಸ ಮಾಡುತ್ತಿದ್ಧಾರೆ.


Click it and Unblock the Notifications











