ವೇದಿಕೆ ಮೇಲೆ ಗಳ-ಗಳನೆ ಅತ್ತ ನಟ ಸಿಂಬು
ತಮಿಳಿನ ನಟ ಸಿಲಂಬರಸನ್ ಅಲಿಯಾಸ್ ಸಿಂಬು ಬಹಳ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಒಂದೊಳ್ಳೆ ಅಭಿಮಾನಿ ವರ್ಗವನ್ನೂ ಸಂಪಾದಿಸಿದ್ದಾರೆ. ಜೊತೆಗೆ ಕೆಲವು ವಿವಾದಗಳಿಗೂ ಕಾರಣರಾಗಿದ್ದಾರೆ.
ನಟ ಸಿಂಬು ತಮ್ಮ ಖಾಸಗಿ ಜೀವನ ಹಾಗೂ ವೃತ್ತಿ ಜೀವನ ಎರಡರಲ್ಲೂ ಸಾಕಷ್ಟು ಏರು ಪೇರು ಕಂಡವರು. ತಮಿಳು ಸಿನಿಮಾ ನಿರ್ಮಾಪಕರ ಸಂಘವು ಸಿಂಬು ವಿರುದ್ಧ ನಿಷೇಧ ಸಹ ಹೇರಲು ಮುಂದಾಗಿ ನೊಟೀಸ್ ಜಾರಿ ಮಾಡಿತ್ತು. ಆ ನಂತರ ಅದನ್ನು ಹೇಗೋ ಸಂಧಾನ ಮಾಡಿ ಸರಿ ಮಾಡಿಕೊಂಡರು. ಇನ್ನು ವೈಯಕ್ತಿಕ ಜೀವನದಲ್ಲಿ ಸಿಂಬು ಸಹ ಸಾಕಷ್ಟು ಏಳು ಬೀಳುಗಳನ್ನು ಕಂಡವರು.
ಸಿಂಬು ನಟನೆಯ ಹೊಸ ತಮಿಳು ಸಿನಿಮಾ 'ಮಾನಾಡು'ವಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಬು ವೇದಿಕೆ ಮೇಲೆಯೇ ಕಣ್ಣೀರು ಸುರಿಸಿದರು. ''ನನಗೆ ಚಿತ್ರರಂಗದಲ್ಲಿ ಬಹಳ ಜನ ತೊಂದರೆ ಕೊಡುತ್ತಿದ್ದಾರೆ'' ಎಂದು ಆರೋಪಿಸಿದರು. ಆದರೆ ಯಾರೊಬ್ಬರ ಹೆಸರು ಹೇಳಲಿಲ್ಲ.
ಸಿನಿಮಾಕ್ಕೆ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತಾ ಬಂದ ಸಿಂಬು, ಕೊನೆಗೆ ಒಮ್ಮೆಲೆ ಅಳಲು ಆರಂಭಿಸಿದರು. ''ನನಗೆ ಚಿತ್ರರಂಗದಲ್ಲಿ ಸಾಕಷ್ಟು ಜನ ತೊಂದರೆ ಕೊಡುತ್ತಿದ್ದಾರೆ. ಆದರೆ ನಾನು ಎಲ್ಲ ಸಮಸ್ಯೆಗಳನ್ನು ಎದುರಿಸುತ್ತೀನಿ, ನನಗೆ ತೊಂದರೆ ಕೊಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೀನಿ. ನೀವು ನನ್ನನ್ನು ನೋಡಿಕೊಳ್ಳಿ, ನನ್ನನ್ನು ಹೀಗೆಯೇ ಪ್ರೀತಿಸಿ'' ಎಂದು ಅಭಿಮಾನಿಗಳ ಬಳಿ ಮನವಿ ಮಾಡಿದರು ಸಿಂಬು.

ಧನುಷ್ ವಿರುದ್ಧ ಜಗಳ ಮಾಡಿಕೊಂಡಿದ್ದ ಸಿಂಬು
ಸಿಂಬು ವೃತ್ತಿ ಜೀವನ ಗಮನಿಸಿದರೆ ಸಿಂಬುಗೆ ಜನ ತೊಂದರೆ ಕೊಡುವುದಕ್ಕಿಂತಲೂ ಸಿಂಬುವಿನಿಂದ ತೊಂದರೆ ಪಟ್ಟವರು ಹೆಚ್ಚಿನ ಜನ ಇದ್ದಾರೆ. ವೃತ್ತಿಯ ಆರಂಭದ ಸಮಯದಲ್ಲಿ ನಟ ಧನುಷ್ ವಿರುದ್ಧ ಬಹಳ ಜಿದ್ದು ಸಾಧಿಸಿದ ಸಿಂಬು, ಸಿನಿಮಾ ಡೈಲಾಗ್ಗಳ ಮೂಲಕ ಟಾಂಗ್ ನೀಡುತ್ತಾ ಬಂದರು. ಆದರೆ ಧನುಷ್ ಎಲ್ಲವನ್ನೂ ಮರೆತು ಮತ್ತೆ ಅವರೊಟ್ಟಿಗೆ ಗೆಳೆತನದ ಹಸ್ತ ಚಾಚಿದರು.

ಹಲವು ನಿರ್ಮಾಪಕರು ಪ್ರಕರಣ ದಾಖಲಿಸಿದ್ದಾರೆ
ಹಲವು ನಿರ್ಮಾಪಕರು ಸಿಂಬು ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಿರ್ಮಾಪಕರ ಸಂಘಕ್ಕೆ ದೂರುಗಳನ್ನು ನೀಡಿದ್ದಾರೆ. ಸರಿಯಾದ ಸಮಯಕ್ಕೆ ಚಿತ್ರೀಕರಣಕ್ಕೆ ಬಾರದೇ ಇರುವುದು, ನೀಡಿರುವ ಡೇಟ್ಸ್ಗಿಂತಲೂ ಕಡಿಮೆ ಅವಧಿಗೆ ಚಿತ್ರೀಕರಣಕ್ಕೆ ಬರುವುದು, ಸಹ ನಟ-ನಟಿಯರೊಟ್ಟಿಗೆ ಬಹಳ ಕೆಟ್ಟ ವರ್ತನೆ, ಸಿನಿಮಾ ಮುಗಿದ ಬಳಿಕ ಡಿಜಿಟಲ್ ಹಕ್ಕು, ಸ್ಯಾಟಲೈಟ್ಗೆ ಒತ್ತಾಯ ಮಾಡುವುದು ಹೀಗೆ ಹಲವು ಆರೋಪಗಳು ಸಿಂಬು ಮೇಲಿವೆ. ಒಮ್ಮೆಯಂತೂ ಪ್ರಕರಣ ಮದ್ರಾಸ್ ಹೈಕೋರ್ಟ್ಗೆ ಹೋಗಿ ಅಲ್ಲಿ ಪ್ರಕರಣ ಇತ್ಯರ್ಥವಾಗಿತ್ತು. ಒಮ್ಮೆಯಂತೂ ಮಧುರೈನಲ್ಲಿ ಬಿಸಿಲು ಹೆಚ್ಚೆಂದು ಚಿತ್ರೀಕರಣ ತಂಡವನ್ನು ಬೇರೆಡೆಗೆ ಕರೆಸಿಕೊಂಡಿದ್ದರಂತೆ ಸಿಂಬು.

'ಮಾನಾಡು' ಸಿನಿಮಾದಿಂದಲೂ ಹೊರಹಾಕಲಾಗಿತ್ತು
ಇದೀಗ ಬಿಡುಗಡೆಗೆ ಸಜ್ಜಾಗಿರುವ 'ಮಾನಾಡು' ಸಿನಿಮಾದಿಂದಲೂ ಸಿಂಬುವನ್ನು ಹೊರಗೆ ಹಾಕಿದ್ದರು ನಿರ್ಮಾಪಕ ಸುರೇಶ್ ಕಾಮಾಚಿ. ಸಿಂಬು ಹೇಳಿದ ಸಮಯಕ್ಕೆ ಚಿತ್ರೀಕರಣ ಪ್ರಾರಂಭ ಮಾಡಲಿಲ್ಲ. ಇದರಿಂದ ಬೇಸತ್ತ ನಿರ್ಮಾಪಕರು ಸಿಂಬುವನ್ನು ಹೊರ ಹಾಕಿ ಹೊಸ ನಾಯಕನಿಗಾಗಿ ಹುಡುಕಾಡುತ್ತಿರುವುದಾಗಿ ಘೋಷಿಸಿದರು. ಇದರ ಬೆನ್ನಲ್ಲೆ ನಟ ಸಿಂಬು 'ಮಹಾ ಮಾನಾಡು' ಎಂಬ ಸಿನಿಮಾ ಮಾಡುವುದಾಗಿ ಘೋಷಿಸಿದರು. ಆದರೆ ಕೆಲವು ವ್ಯಕ್ತಿಗಳ ಸಂಧಾನದಿಂದಾಗಿ ಸಿಂಬು ಮತ್ತೆ ಸಿನಿಮಾಕ್ಕೆ ಆಯ್ಕೆ ಆದರು. ಇದೀಗ ಸಿನಿಮಾ ಮುಗಿದಿದ್ದು ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.

ಹಲವು ನಟರೊಂದಿಗೆ ಸಿಂಬು ಜಗಳ
ಹಲವು ತಮಿಳು ನಟರೊಟ್ಟಿಗೆ ಸಿಂಬು ನೇರವಾಗಿ ಜಗಳವಾಡಿಕೊಂಡಿದ್ದಾರೆ. ತಮಿಳು ಚಿತ್ರರಂಗದ ಬ್ಯಾಡ್ ಬಾಯ್ ಎಂದೇ ಸಿಂಬು ಖ್ಯಾತರು. ಧನುಷ್ ಜೊತೆ ಬಳಿಕ ಕಮಿಡಿಯನ್ ಗುಂಡುಮಣಿ ಬಳಿ ಕಿತ್ತಾಡಿಕೊಂಡಿದ್ದರು. ನಂತರ ನಟಿ ರೀಮಾ ಸೇನ್ ಜೊತೆಯೂ ಜಗಳ ಮಾಡಿದ್ದರು. ರೀಮಾ ಸೇನ್, ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಸಿಂಬುಗೆ ಎಚ್ಚರಿಕೆ ನೀಡಿದ್ದರು. ನಾಯಕ ನಟ ಜೀವಾ ಬಗ್ಗೆ ಬಹಿರಂಗವಾಗಿ ಕೆಟ್ಟದಾಗಿ ಮಾತನಾಡಿದ್ದರು. ಜೀವ ಸಹ ತಕ್ಕ ಪ್ರತಿಕ್ರಿಯೆಯನ್ನೇ ನೀಡಿದ್ದರು. ಸಿಂಬುವನ್ನು ಬೆನ್ನಿಗೆ ಚೂರಿ ಇರಿಯುವವ ಎಂದು ಕರೆದಿದ್ದರು. ನಟ ಭರತ್ ಸಹ ಸಿಂಬು ಬಗ್ಗೆ ಹೇಳಿಕೆ ನೀಡಿದ್ದರು. ಸಿನಿಮಾ ಒಂದರಲ್ಲಿ ಒಟ್ಟಿಗೆ ನಟಿಸಿದ್ದ ಸಿಂಬು, ತನ್ನನ್ನು ಬಿಟ್ಟು ಬೇರೆ ನಟರಿಗೆ ಪ್ರಚಾರ ನೀಡದಂತೆ ನಿರ್ಮಾಪಕರಿಗೆ ಎಚ್ಚರಿಕೆ ನೀಡಿದ್ದರು ಎಂದು ಆರೋಪಿಸಿದ್ದರು.


Click it and Unblock the Notifications











