ವಿಜಯ್ ಸೇತುಪತಿ ಸಿನಿಮಾ ಶೂಟಿಂಗ್ ವೇಳೆ ಸ್ಟಂಟ್ಮನ್ ಸಾವು: ವೆಟ್ರಿಮಾರನ್ ವಿರುದ್ಧ ಪ್ರಕರಣ
ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವೆಟ್ರಿಮಾನ್ ಚಿತ್ರೀಕರಿಸುತ್ತಿದ್ದ ಸಿನಿಮಾ ಸೆಟ್ನಲ್ಲಿ ಅವಘಡ ಸಂಭವಿಸಿದ್ದು ಸ್ಟಂಟ್ಮ್ಯಾನ್ ಒಬ್ಬರು ಜೀವ ಕಳೆದುಕೊಂಡಿದ್ದಾರೆ.
'ವಿಡುದಲೈ' ಹೆಸರಿನ ಸಿನಿಮಾವನ್ನು ವೆಟ್ರಿಮಾರನ್ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಚಿತ್ರೀಕರಣ ಚೆನ್ನೈನ ವಂಧಲೂರ್ ನಲ್ಲಿ ಚಿತ್ರೀಕರಣ ನಡೆಯುತ್ತಿತ್ತು.
ಸಿನಿಮಾಕ್ಕಾಗಿ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ಮಾಡುವಾಗ ಸ್ಟಂಟ್ಮ್ಯಾನ್ ಸುರೇಶ್ ಎಂಬಾತ ಸ್ಟಂಟ್ ಮಾಡುವಾಗ ಬಿದ್ದು ಅಸುನೀಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ರೈಲು ಅಪಘಾತದ ದೃಶ್ಯವೊಂದರ ಚಿತ್ರೀಕರಣವನ್ನು ವೆಟ್ರಿಮಾರನ್ ಹಾಗೂ ತಂಡ ಚಿತ್ರೀಕರಣ ಮಾಡುತ್ತಿತ್ತು. ರೈಲೊಂದು ಸೇತುವೆಯ ಮೇಲೆ ಅಪಘಾತವಾದಾಗ ಅದರಲ್ಲಿನ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಯತ್ನಿಸುವ, ನಾಯಕ ನಟ ಕೆಲವರನ್ನು ಕಾಪಾಡುವ ದೃಶ್ಯದ ಚಿತ್ರೀಕರಣ ಮಾಡಲಾಗುತ್ತಿತ್ತು.
ಇದೀಗ ನಿಧನ ಹೊಂದಿರುವ ಸುರೇಶ್ ಸೇರಿದಂತೆ ಇನ್ನು ಕೆಲವರಿಗೆ ರೋಪ್ ಕಟ್ಟಿ ಆ ಹಗ್ಗದ ಮತ್ತೊಂದು ತುದಿಯನ್ನು ಕ್ರೈನ್ಗಳಿಗೆ ಕಟ್ಟಿ ಅಪಘಾತವಾದ ರೈಲಿನ ಮೇಲೆ ಓಡಿಸಲಾಗಿತ್ತು, ಹಾಗೆ ಓಡಿ ರೈಲಿನಿಂದ ಕೆಳಗೆ ಹಾರುವ ಸನ್ನಿವೇಶದ ಚಿತ್ರೀಕರಣ ಮಾಡಿಕೊಳ್ಳಲಾಗುತ್ತಿತ್ತು. ರೋಪ್ ಕಟ್ಟಿಕೊಂಡಿದ್ದ ಸುರೇಶ್ ರೈಲಿನ ಮೇಲೆ ಓಡಿ ಅಲ್ಲಿಂದ ಕೆಳಗೆ ಹಾರಿದಾಗ ಕಟ್ಟಿಕೊಂಡಿದ್ದ ಹಗ್ಗ ತುಂಡಾದ ಪರಿಣಾಮ ಸುಮಾರು 20 ಅಡಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.
ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಅವರನ್ನು ಪರೀಕ್ಷಿಸಿದ ವೈದ್ಯರು ಮೃತ ಎಂದು ಘೋಷಿಸಿದ್ದಾರೆ. ಈ ಘಟನೆ ಬಗ್ಗೆ ನಿರ್ದೇಶಕ ವೆಟ್ರಿಮಾರನ್ ಆಗಲಿ, ನಟರಾದ ವಿಜಯ್ ಸೇತುಪತಿ ಹಾಗೂ ಸೂರಿ ಆಗಲಿ ಯಾವುದೇ ಅಧಿಕೃತ ಹೇಳಿಕೆ ಈವರೆಗೆ ಬಿಡುಗಡೆ ಮಾಡಿಲ್ಲ. ಆದರೆ ಸ್ಥಳೀಯ ಪೊಲೀಸರು ನಿರ್ದೇಶಕ ವೆಟ್ರಿಮಾರ್ ಹಾಗೂ ಸ್ಟಂಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವೆಟ್ರಿಮಾರನ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಸೂರಿ, ವಿಜಯ್ ಸೇತುಪತಿ, ಪ್ರಕಾಶ್ ರೈ, ಗೌತಮ್ ವಾಸುದೇವ್ ಮೆನನ್ ಇನ್ನಿತರ ಪ್ರಮುಖ ನಟರು ನಟಿಸುತ್ತಿದ್ದಾರೆ. ಈ ಸಿನಿಮಾವು 'ತುನೈವನ್' ಹೆಸರಿನ ಸಣ್ಣ ಕತೆಯಾಧಾರಿತ ಸಿನಿಮಾ ಆಗಿದೆ. ವೆಟ್ರಿಮಾರನ್, 'ಅಸುರನ್', 'ವಡಾ ಚೆನ್ನೈ', 'ವಿಸಾರನೈ' ಅಂಥಹಾ ಸಿನಿಮಾಗಳಿಂದ ಖ್ಯಾತಿ ಗಳಿಸಿದ ನಿರ್ದೇಶಕ, ಇವರ 'ವಿಸಾರನೈ' ಸಿನಿಮಾ ಆಸ್ಕರ್ಗೆ ಅಧಿಕೃತವಾಗಿ ಆಯ್ಕೆ ಆಗಿತ್ತು. ಆದರೆ ಪ್ರಶಸ್ತಿ ಗಳಿಸುವಲ್ಲಿ ವಿಫಲವಾಗಿತ್ತು.


Click it and Unblock the Notifications











