ಸೂರ್ಯ ಮೇಲೆ ಮುನಿಸಿಕೊಂಡ್ರಾ ನಿರ್ದೇಶಕ ಬಾಲ ? 'ವನಂಗಾನ್' ಚಿತ್ರದಿಂದ ಸೂರ್ಯ ಕೈಬಿಟ್ಟ ನಿರ್ದೇಶಕ ಬಾಲ!
'ಸೇತು', 'ನಂದಾ', 'ಪಿತಾಮಗನ್', 'ಅವನ್ ಇವನ್' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಕಟ್ಟಿಕೊಟ್ಟ ನಿರ್ದೇಶಕ ಬಾಲ. ನಡಿಪಿನ್ ನಾಯಗನ್ ಸೂರ್ಯ ಹಾಗೂ ಬಾಲ ಹ್ಯಾಟ್ರಿಕ್ ಚಿತ್ರಕ್ಕೆ ಕೈ ಜೋಡಿಸಿದ್ದರು. ಕೆಲ ಸನ್ನಿವೇಶಗಳ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ಈ ಪ್ರಾಜೆಕ್ಟ್ನಿಂದ ನಟ ಸೂರ್ಯ ಅವರನ್ನು ಬಾಲ ಕೈಬಿಟ್ಟಿದ್ದಾರೆ.
ಬಾಲ ನಿರ್ದೇಶನದ 'ನಂದಾ' ಹಾಗೂ 'ಪಿತಾಮಗನ್' ಸಿನಿಮಾಗಳಲ್ಲಿ ಸೂರ್ಯ ಮಿಂಚಿದ್ದರು. 3ನೇ ಚಿತ್ರಕ್ಕೆ ಕಳೆದ ವರ್ಷ ಚಾಲನೆ ಸಿಕ್ಕಿತ್ತು. ಈ ವರ್ಷ ಸೂರ್ಯ ಹುಟ್ಟುಹಬ್ಬಕ್ಕೆ 'ವನಂಗಾನ್' ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಒಂದಷ್ಟು ಸನ್ನಿವೇಶಗಳ ಚಿತ್ರೀಕರಣವೂ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ಸೂರ್ಯರಂತಹ ನಟನಿಗೆ ಈ ಕಥೆ ಒಪ್ಪುವುದಿಲ್ಲ. ಹಾಗಾಗಿ ಅವರನ್ನು ಈ ಚಿತ್ರದಿಂದ ಕೈ ಬಿಟ್ಟಿದ್ದೇನೆ ಎಂದು ನಿರ್ದೇಶಕ ಬಾಲ ಪತ್ರ ಬರೆದಿದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಸೂರ್ಯ ಜೊತೆ ಕೆಲಸ ಮಾಡುತ್ತೇನೆ ಎಂದು ಬಾಲ ತಿಳಿಸಿದ್ದಾರೆ.
2ಡಿ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಸ್ವತಃ ಸೂರ್ಯ ಹಾಗೂ ಜೋತಿಕಾ ದಂಪತಿ 'ವನಂಗಾನ್' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದರು. ಇತ್ತೀಚಿಗೆ ಈ ಚಿತ್ರದಲ್ಲಿ ಸೂರ್ಯ ಹೊರನಡೆದಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಹಾಗಾಗಿ ಪತ್ರ ಬರೆದು ಎಲ್ಲಾ ಊಹಾಪೋಹಗಳಿಗೆ ನಿರ್ದೇಶಕರು ಪೂರ್ಣ ವಿರಾಮ ಇಟ್ಟಿದ್ದಾರೆ.

ಪತ್ರ ಬರೆದು ನಿರ್ದೇಶಕ ಬಾಲ ಸ್ಪಷ್ಟನೆ
"ನಾನು ನನ್ನ ತಮ್ಮ ಸೂರ್ಯನೊಂದಿಗೆ 'ವನಂಗಾನ್' ಸಿನಿಮಾ ಮಾಡಲು ಬಯಸಿದ್ದೆ. ಆದರೆ ಕಥೆಯಲ್ಲಿ ಕೆಲವು ಬದಲಾವಣೆಗಳಾದ ಮೇಲೆ ಈ ಕಥೆ ಸೂರ್ಯನಂತಹ ನಟನಿಗೆ ಸರಿಹೊಂದುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ' ಎಂದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಾಲ ಪತ್ರದಲ್ಲಿ ಬರೆದಿದ್ದಾರೆ.

ಈ ನಿರ್ಧಾರ ಸೂರ್ಯಗೆ ಬೇಸರ ತಂದಿದೆ
"ಸೂರ್ಯ ನನ್ನ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದರು, ಆದರೆ ಅಣ್ಣನಾಗಿ ಅವರನ್ನು ಅಂತಹ ಸಂದಿಗ್ಧ ಪರಿಸ್ಥಿತಿಗೆ ಸಿಲುಕದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ. ಹಾಗಾಗಿ, ಸೂರ್ಯ ಮತ್ತು ನಾನು ಇಬ್ಬರೂ ಈ ಸಿನಿಮಾದಿಂದ ಹೊರಗುಳಿಯುವುದೇ ಪ್ರತಿಯೊಬ್ಬರ ಹಿತದೃಷ್ಟಿಯಿಂದ ಉತ್ತಮ ಎಂದು ನಿರ್ಧರಿಸಿದ್ದೇವೆ. ಸೂರ್ಯ ಈ ನಿರ್ಧಾರದಿಂದ ಬೇಸರಗೊಂಡಿದ್ದಾರೆ. ಆದರೆ ಇದು ನನ್ನ ಸಹೋದರನ ಹೆಚ್ಚಿನ ಒಳಿತಿಗಾಗಿ ಮಾಡಲಾಗಿದೆ." ಎಂದು ಬಾಲ ತಿಳಿಸಿದ್ದಾರೆ.

ಮತ್ತೆ ಒಟ್ಟಿಗೆ ಕೆಲಸ ಮಾಡುತ್ತೇವೆ
"'ನಂದ'ನಲ್ಲಿ ನಾನು ನೋಡಿದ ಸೂರ್ಯ, 'ಪಿತಾಮಗನ್'ನಲ್ಲಿ ನೀವು ನೋಡಿದ ಸೂರ್ಯ, ಸರಿಯಾದ ಸಮಯದಲ್ಲಿ ಖಂಡಿತ ನಾವಿಬ್ಬರು ಮತ್ತೆ ಒಟ್ಟಾಗಿ ಕೆಲಸ ಮಾಡುತ್ತೇವೆ." ಎಂದು ಬಾಲ ಸ್ಟಷ್ಟನೆ ಕೊಟ್ಟಿದ್ದಾರೆ. ಒಟ್ಟಾರೆ 'ವನಂಗಾನ್' ಚಿತ್ರದಿಂದ ಸೂರ್ಯ ಹೊರ ಬಂದಂತಾಗಿದೆ. ಹಾಗಾದರೆ ಈ ಚಿತ್ರದಲ್ಲಿ ಬೇರೆ ನಟ ನಟಿಸುತ್ತಾರಾ? ಸೂರ್ಯ, ಜ್ಯೋತಿಕಾ ಸಿನಿಮಾ ನಿರ್ಮಾಪಕರಾಗಿ ಮುಂದುವರೆಯುತ್ತಾರಾ? ಕಾದು ನೋಡಬೇಕು.

ಎರಡು ಚಿತ್ರಗಳಲ್ಲಿ ಸೂರ್ಯ ಬ್ಯುಸಿ
'ಸುರರೈ ಪೋಟ್ರು' ಹಾಗೂ 'ಜೈಭೀಮ್' ಸಿನಿಮಾಗಳ ನಂತರ ಸೂರ್ಯ ಕ್ರೇಜ್ ಡಬಲ್ ಆಗಿದೆ. ಸದ್ಯ 'ಸುರರೈ ಪೋಟ್ರು' ಚಿತ್ರ ಹಿಂದಿಗೆ ರೀಮೆಕ್ ಆಗ್ತಿದ್ದು ಅದರಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ಇನ್ನು ಶಿವ ನಿರ್ದೇಶನದ ಕಾಸ್ಟ್ಯೂಮ್ ಡ್ರಾಮಾ ಸಿನಿಮಾವೊಂದರಲ್ಲೂ ಸೂರ್ಯ ಬಣ್ಣ ಹಚ್ಚಿದ್ದಾರೆ. ಆದರೆ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ.


Click it and Unblock the Notifications











