ವೇದಿಕೆ ಮೇಲೆ ಭಾವೋದ್ವೇಗ: ಯುವತಿಯ ಕಥೆ ಕೇಳಿ ಕಣ್ಣೀರು ಹಾಕಿದ 'ಸಿಂಗಂ' ಸೂರ್ಯ.!
Recommended Video
ತಮಿಳು ನಟ ಸೂರ್ಯ ತೆರೆ ಮೇಲೆ ಮಾತ್ರ ಹೀರೋ ಅಲ್ಲ... ನಿಜ ಜೀವನದಲ್ಲೂ 'ಹೀರೋ' ಅಂತ ಕರೆಯಿಸಿಕೊಳ್ಳುವ ಅದೆಷ್ಟೋ ಕೆಲಸಗಳನ್ನು ಮಾಡಿದ್ದಾರೆ. 'ಅಗರಂ ಫೌಂಡೇಶನ್' ಮೂಲಕ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸೂರ್ಯ ರಿಯಲ್ಲಾಗಿಯೂ ಹೀರೋನೇ.!
ಇತ್ತೀಚೆಗಷ್ಟೇ ಚೆನ್ನೈನಲ್ಲಿ 'ಅಗರಂ ಫೌಂಡೇಶನ್' ವತಿಯಿಂದ ಎರಡು ಕೃತಿಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ನಟ ಸೂರ್ಯ ಕೂಡ ಆಗಮಿಸಿದ್ದರು. ಇದೇ ವೇದಿಕೆ ಮೇಲೆ ನಟ ಸೂರ್ಯ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಹಾಕಿದ್ದಾರೆ. ಗಾಯತ್ರಿ ಎಂಬ ಬಡ ಯುವತಿಯ ಕಥೆ ಕೇಳಿ ನಟ ಸೂರ್ಯ ಕಣ್ಣೀರಿಟ್ಟಿದ್ದಾರೆ. ಮುಂದೆ ಓದಿರಿ...

ಕಷ್ಟದ ಕಥೆ ಹೇಳಿಕೊಂಡ ಯುವತಿ
''ನಾನು ತಂಜಾವೂರಿನವಳು. ಹತ್ತನೇ ತರಗತಿವರೆಗೂ ಊರಿನ ಸರ್ಕಾರಿ ಶಾಲೆಯಲ್ಲಿ ಓದಿದೆ. ಅಮ್ಮ ದಿನಗೂಲಿ ಕೆಲಸ ಮಾಡುತ್ತಾರೆ. ತಂದೆ ಕ್ಯಾನ್ಸರ್ ನಿಂದ ತೀರಿಕೊಂಡರು. ಹತ್ತನೇ ತರಗತಿ ಬಳಿಕ ನಾನೂ ಕೂಲಿ ಕೆಲಸ ಮಾಡುವೆ ಎಂದು ತಾಯಿಗೆ ಹೇಳಿದೆ. ಆದ್ರೆ, ನನ್ನಂತೆ ಕಷ್ಟ ಪಡಬೇಡ. ಭಿಕ್ಷೆ ಬೇಡಿಯಾದರೂ ನಿನ್ನನ್ನು ಓದಿಸುವೆ ಅಂತ ನನ್ನಮ್ಮ ಹೇಳಿದ್ದರು'' ಎಂದು ತನ್ನ ಕಷ್ಟದ ಕಥೆಯನ್ನ ಕಾರ್ಯಕ್ರಮದಲ್ಲಿ ಗಾಯತ್ರಿ ಹೇಳಿಕೊಳ್ಳಲು ಆರಂಭಿಸಿದರು.

ಸೂರ್ಯ ಅಣ್ಣನಿಗೆ ಕೃತಜ್ಞತೆ
''ನನಗೆ ಸಹಾಯ ಮಾಡಿದ್ದು ಅಗರಂ ಫೌಂಡೇಶನ್. ಈ ಅಗರಂ ಫೌಂಡೇಶನ್ ನಿಂದಲೇ ನಾನು ಕಾಲೇಜು ಶಿಕ್ಷಣ ಪಡೆದೆ. ಕ್ಯಾಂಪಸ್ ಪ್ಲೇಸ್ ಮೆಂಟ್ ಮೂಲಕ ಉದ್ಯೋಗ ಸಿಕ್ಕಿತ್ತು. ನನ್ನ ಜೀವನದಲ್ಲಿ ಬೆಳಕು ತುಂಬಿದ ಅಗರಂ ಫೌಂಡೇಶನ್ ಮತ್ತು ಸೂರ್ಯ ಅಣ್ಣನಿಗೆ ಕೃತಜ್ಞತೆಗಳನ್ನು ಅರ್ಪಿಸುವೆ'' ಎಂದು ಗಾಯತ್ರಿ ಹೇಳಿದರು.

ಮನೆ ಕೆಲಸ ಮಾಡುವ ತಾಯಿ
''ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನ್ನ ತಾಯಿಗೆ ಸಾಧ್ಯವಾಗಲಿಲ್ಲ. ಯಾಕಂದ್ರೆ, ಅವರು ಈಗಲೂ 200 ರೂಪಾಯಿಗೆ ಮನೆ ಕೆಲಸ ಮಾಡುತ್ತಾರೆ'' ಎನ್ನುತ್ತ ಗಾಯತ್ರಿ ಭಾವುಕರಾದರು.

ಕಣ್ಣೀರು ಹಾಕಿದ ಸೂರ್ಯ
ಗಾಯತ್ರಿ ತನ್ನ ಕಥೆಯನ್ನು ಹೇಳುತ್ತಿರುವಾಗಲೇ ಸೂರ್ಯ ಭಾವೋದ್ವೇಗಕ್ಕೆ ಒಳಗಾಗಿದ್ದರು. ಅವರ ಕಣ್ಣಾಲಿಗಳು ತುಂಬಿದ್ದವು. ವೇದಿಕೆ ಮೇಲೆ ಕಣ್ಣೀರು ಹಾಕಿದರು. ಬಳಿಕ ಗಾಯತ್ರಿ ಬಳಿ ಬಂದ ಸೂರ್ಯ ಆಕೆಯನ್ನು ಅಪ್ಪಿ ಸಮಾಧಾನ ಪಡಿಸಿದರು. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನಟ ಸೂರ್ಯ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











