ತಮಿಳಿನ ಹಿರಿಯ ನಿರ್ದೇಶಕ, ನಟ ಎಂ.ಆರ್. ವಿಶ್ವನಾಥನ್ ನಿಧನ
ತಮಿಳಿನ ಹಿರಿಯ ನಟ, ನಿರ್ದೇಶಕ ವಿಶು (74) ಚೆನ್ನೈನಲ್ಲಿ ನಿಧನರಾದರು. ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಮೂತ್ರಪಿಂಡ ವೈಫಲ್ಯದ ಕಾರಣ ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು.
ಎಂ.ಆರ್. ವಿಶ್ವನಾಥನ್ ಅವರ ಪೂರ್ಣ ಹೆಸರು. ವಿಶು ಎಂಬ ಹೆಸರಿನಿಂದ ಅವರು ಜನಪ್ರಿಯರಾಗಿದ್ದರು. ಕೌಟುಂಬಿಕ ಪ್ರಧಾನ ಸಿನಿಮಾಗಳಿಂದ ಅವರು ಹೆಸರು ಗಳಿಸಿದ್ದರು. ನಟನೆ ಮತ್ತು ನಿರ್ದೇಶನದ ಜತೆಗೆ ಬರಹಗಾರ, ನಿರ್ಮಾಪಕ, ನಾಟಕಕಾರ, ಕಾರ್ಯಕ್ರಮ ನಿರೂಪಕ ಹೀಗೆ ವಿವಿಧ ರಂಗಗಳಲ್ಲಿಯೂ ಅವರು ಗುರುತಿಸಿಕೊಂಡಿದ್ದರು.
ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ವೃತ್ತಿ ಬದುಕು ಆರಂಭಿಸಿದ ಅವರು, ಬಳಿಕ ತಮ್ಮದೇ ನೆಲೆ ಕಂಡುಕೊಂಡರು. ಕೆಲವು ಕಿರುತೆರೆ ಕಾರ್ಯಕ್ರಮಗಳನ್ನು ಸಹ ನಿರೂಪಣೆ ಮಾಡಿದ್ದರು.

'ಸಂಸಾರಮ್ ಅದು ಮಿನ್ಸಾರಮ್', 'ಮನಲ್ ಕಯಾರು', 'ಡೌರಿ ಕಲ್ಯಾಣಂ' ಮುಂತಾದ ಜಂಟಿ ಕುಟುಂಬ ವ್ಯವಸ್ಥೆ ಹಾಗೂ ಅದರಿಂದ ಅವುಗಳು ಎದುರಿಸುವ ಸಮಸ್ಯೆಗಳನ್ನು ಬಿಂಬಿಸುವ ಸಿನಿಮಾಗಳನ್ನು ನಿರ್ದೇಶಿಸಿದ್ದರು.
2016ರಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. 'ಅವರಿಗೆ ಸೀಮಿತ ಬಜೆಟ್ನಲ್ಲಿ ಸಿನಿಮಾಗಳನ್ನು ಮಾಡುವುದು ಹೇಗೆ ಎಂಬ ಕಲೆ ಸಿದ್ಧಿಸಿತ್ತು. ಅವರ ಕಥೆಗಳು ಯಾವಾಗಲೂ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಿದ್ದವು. ಅವರು ಬಹಳ ವರ್ಷಗಳ ಹಿಂದೆಯೇ ಈ ಟ್ರೆಂಡ್ ಹುಟ್ಟುಹಾಕಿದ್ದರು' ಎಂದು ನಟಿ ಖುಷ್ಬೂ ನೆನಪಿಸಿಕೊಂಡಿದ್ದಾರೆ.


Click it and Unblock the Notifications











