ಆಸ್ಪತ್ರೆಗೆ ಭೇಟಿ ನೀಡಿ ರಜನೀಕಾಂತ್ ಆರೋಗ್ಯ ವಿಚಾರಿಸಿದ ಸಿಎಂ ಸ್ಟಾಲಿನ್
ಇತ್ತ ಕರ್ನಾಟಕದಲ್ಲಿ ಪುನೀತ್ ಅಗಲಿಕೆಯಿಂದ ಕನ್ನಡಿಗರು ಶೋಕ ಸಾಗರದಲ್ಲಿ ಮುಳುಗಿದ್ದರೆ ಅತ್ತ ತಮಿಳುನಾಡಿನಲ್ಲಿ ರಜನೀಕಾಂತ್ ಅಭಿಮಾನಿಗಳು ತೀವ್ರ ಆತಂಕದಲ್ಲಿದ್ದಾರೆ. ನಟ ರಜನೀಕಾಂತ್ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ನಟ ರಜನೀಕಾಂತ್ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾದರು. ರಜನೀಕಾಂತ್ ಆಸ್ಪತ್ರೆಗೆ ದಾಖಲಾದಾಗ ಕೇವಲ ಆರೋಗ್ಯ ತಪಾಸಣೆಗೆ ದಾಖಲಾಗಿದ್ದಾರೆ ಎನ್ನಲಾಗಿತ್ತು. ಆದರೆ ಕಳೆದ ಮೂರು ದಿನದಿಂದಲೂ ಅವರು ಆಸ್ಪತ್ರೆಯಲ್ಲಿಯೇ ಇರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ನಟ ರಜನೀಕಾಂತ್ ಶೀಘ್ರ ಗುಣಮುಖರಾಗಲೆಂದು ಅವರ ಅಭಿಮಾನಿಗಳು ಇಂದಷ್ಟೆ ವಿಶೇಷ ಪೂಜೆಗಳನ್ನು ಮಾಡಿದ್ದಾರೆ. ಈ ನಡುವೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಇಂದು ರಜನೀಕಾಂತ್ ದಾಖಲಾಗಿರುವ ಚೆನ್ನೈನ ಕಾವೇರಿ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಬೇಗನೆ ಹುಷಾರಾಗುವಂತೆ ರಜನೀಕಾಂತ್ಗೆ ಹಾರೈಸಿದ್ದಾರೆ.

ಗುರುವಾರ ರಾತ್ರಿ ರಜನೀಕಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶುಕ್ರವಾರದಂದು ಅವರಿಗೆ ಕ್ಯಾರೊಟಿಡ್ ಆರ್ಕೆರಿ ರೀವ್ಯಾಸ್ಕುಲರೈಜೇಶನ್ ಎಂಬ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಮೆದುಳಿನಿಂದ ಸುಲಭವಾಗಿ ರಕ್ತ ಸಂಚಾರ ಆಗುವಂತೆ ಮಾಡಲು ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ರಜನೀಕಾಂತ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದ ಕಾವೇರಿ ಆಸ್ಪತ್ರೆ, ''ರಜನೀಕಾಂತ್ ಗುರುವಾರ ರಾತ್ರಿ ನಮ್ಮ ಆಸ್ಪತ್ರೆಗೆ ಆಗಮಿಸಿದ್ದರು. ಸುಸ್ತಾಗಿ ತಲೆ ಸುತ್ತು ಬಂದಂತಾಗಿದ್ದರಿಂದ ಅವರು ನಮ್ಮ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಶುಕ್ರವಾರದಂದು ಯಶಸ್ವಿಯಾಗಿ ಕ್ಯಾರೊಟಿಡ್ ಆರ್ಕೆರಿ ರೀವ್ಯಾಸ್ಕುಲರೈಜೇಶನ್ ಮಾಡಲಾಗಿದೆ. ಅವರು ಕೆಲವೇ ದಿನಗಳಲ್ಲಿ ಗುಣಮುಖರಾಗಿ ಮನೆಗೆ ಮರಳುತ್ತಾರೆ'' ಎಂದಿತ್ತು.
ಆದರೆ ಮೂರು ದಿನಗಳಾದರೂ ರಜನೀಕಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಲ್ಲ. ಹಾಗಾಗಿ ರಜನೀಕಾಂತ್ ಅಭಿಮಾನಿಗಳು ತಮಿಳುನಾಡಿನ ಹಲವೆಡೆ ಇಂದು ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ. ರಜನೀಕಾಂತ್ ಬೇಗನೆ ಹುಷಾರಾಗಬೇಕೆಂದು ಹಾಗೂ ಅವರ ನಟನೆಯ 'ಅಣ್ಣಾತೆ' ಸಿನಿಮಾ ಹಿಟ್ ಆಗಬೇಕೆಂದು ಅಭಿಮಾನಿ ಸಂಘಗಳು ಪ್ರಾರ್ಥಿಸಿವೆ.
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 'ಅಣ್ಣಾತೆ' ಸಿನಿಮಾದ ಚಿತ್ರೀಕರಣದ ವೇಳೆ ರಜನೀಕಾಂತ್ ಆರೋಗ್ಯದಲ್ಲಿ ವ್ಯತ್ಯಯವುಂಟಾದ ಕಾರಣ ಆಸ್ಪತ್ರೆ ಸೇರಿದ್ದರು. ಎರಡು ದಿನ ಹೈದರಾಬಾದ್ನ ಆಸ್ಪತ್ರೆಯಲ್ಲಿದ್ದ ರಜನೀಕಾಂತ್ ಆ ನಂತರ ಕೆಲ ತಿಂಗಳುಕಾಲ ವಿಶ್ರಾಂತಿ ಪಡೆದಿದ್ದರು. ರಾಜಕೀಯ ಪ್ರವೇಶಕ್ಕೆ ಮನಸ್ಸು ಮಾಡಿದ್ದ ರಜನೀಕಾಂತ್ ಆರೋಗ್ಯ ಸಮಸ್ಯೆಯಿಂದಾಗಿ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲವೆಂದು ಘೋಷಿಸಿದರು. ಇದರಿಂದಾಗಿ ರಜನೀಕಾಂತ್ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿ ಪ್ರತಿಭಟನೆಯನ್ನೂ ಮಾಡಿದ್ದರು.
ಆ ನಂತರ ಇದೇ ವರ್ಷದ ಜುಲೈ ತಿಂಗಳಲ್ಲಿ ಅಮೆರಿಕಕ್ಕೆ ತೆರಳಿ ಶಸ್ತ್ರ ಚಿಕಿತ್ಸೆ ಸೇರಿದಂತೆ ಕೆಲವು ಚಿಕಿತ್ಸೆಗಳನ್ನು ಪಡೆದು ವಾಪಸ್ಸಾಗಿದ್ದರು. ಅನಾರೋಗ್ಯ ಆಗಾಗ್ಗೆ ಕಾಡುತ್ತಿದ್ದರೂ 'ಅಣ್ಣಾತೆ' ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ ರಜನೀಕಾಂತ್ ಇದೀಗ ಬಿಡುಗಡೆಗೆ ಎದುರು ನೋಡುತ್ತಿರುವ ಸಂದರ್ಭದಲ್ಲಿಯೇ ಇದೀಗ ರಜನೀಕಾಂತ್ ಆಸ್ಪತ್ರೆಗೆ ದಾಖಲಾಗಿದ್ದಾರೆ.


Click it and Unblock the Notifications











